ಕಳೆದ ವಾರ ದಿಲ್ಲಿಗೆ ಹೋಗಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ.ಹೀಗೆ ಹೊರಟವರು ರಾಜ್ಯ ಕಾಂಗ್ರೆಸ್ ನ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
‘ಸಾರ್, ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಎರಡೂವರೆ ವರ್ಷ ಕಳೆದಿದೆ.ಈಗ ಒಪ್ಪಂದದಂತೆ ನನಗೆ ಸಿಎಂ ಹುದ್ದೆ ಸಿಗಬೇಕು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಒಪ್ಪಂದವೇ ಆಗಿಲ್ಲ ಅಂತ ಹೇಳುತ್ತಿದ್ದಾರೆ. ವಿಚಿತ್ರ ಎಂದರೆ ಒಪ್ಪಂದ ಆಗಿದೆಯೋ ಇಲ್ಲವೋ ಅಂತ ವರಿಷ್ಟರು ಕೂಡಾ ಬಾಯಿ ಬಿಡುತ್ತಿಲ್ಲ.
ಈಗ ಎಲ್ಲರ ಅನುಮಾನ ಎಂದರೆ, ಒಪ್ಪಂದವೇ ಅಗಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಯಾಕೆ ಸಿಎಂ ಹುದ್ದೆ ಬಿಟ್ಟುಕೊಡಬೇಕು ಅಂತ ಪಟ್ಟು ಹಿಡಿಯುತ್ತಾರೆ? ಅದೇ ರೀತಿ ಒಪ್ಪಂದ ಆಗಿಲ್ಲ ಎಂದಾದರೆ ಹೈಕಮಾಂಡ್ ಯಾಕೆ ಸ್ಪಷ್ಟನೆ ಕೊಡುತ್ತಿಲ್ಲ?
ಹೀಗಾಗಿ ಈ ವಿಷಯದಲ್ಲಿ ವರಿಷ್ಟರು ಸ್ಪಷ್ಟವಾಗಿ ಮಾತನಾಡಬೇಕು.ಇಲ್ಲದಿದ್ದರೆ ಅಧಿಕಾರ ಹಂಚಿಕೆಯ ಗೊಂದಲದಲ್ಲಿ ಮುಳುಗಿ ನಾವೆಲ್ಲ ಪರದಾಡಬೇಕಾಗುತ್ತದೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದಾಗ ಖರ್ಗೆಯವರು ಸ್ವಲ್ಪ ಹೊತ್ತು ಮೌನವಾಗಿದ್ದರಂತೆ.
ಆನಂತರ ಮೆಲ್ಲಗೆ,ಆದರೆ ಖಡಕ್ಕಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು:’ನೋಡಿ ಚಲುವರಾಯ ಸ್ವಾಮಿ, ರಾಜಕಾರಣದಲ್ಲಿ ಏನು ನಡೆಯಿತು,ಏನು ನಡೆದಿಲ್ಲ ಎಂಬುದಕ್ಕಿಂತ ತುಂಬ ತಾಳ್ಮೆಯಿಂದ ಹೆಜ್ಜೆ ಇಡುವುದು ಮುಖ್ಯ.
ಇವತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು?ಅಂತ ಶಾಸಕರ ಗುಂಪು ಬಂದಿತ್ತಲ್ಲ? ಅದರಿಂದ ತುಂಬ ಪ್ರಯೋಜನವಿಲ್ಲ. ಯಾಕೆಂ ದರೆ ರಾಹುಲ್ ಗಾಂಧಿಯವರು ಇಂತಹ ಒತ್ತಡಗಳಿಗೆಲ್ಲ ಬಗ್ಗುವುದಿಲ್ಲ.
ಈ ಹಿಂದೆ ರಾಜಸ್ತಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ಮಧ್ಯೆ ಇದೇ ರೀತಿಯ ಬಿಕ್ಕಟ್ಟು ಉದ್ಭವಿಸಿತ್ತಲ್ಲ? ಆಗ ಸಚಿನ್ ಪೈಲಟ್ ಅವರು ಕೂಡಾ ಇದೇ ರೀತಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದರು.
ಆದರೆ, ಸಚಿನ್ ಪೈಲಟ್ ಅವರ ಒತ್ತಡಗಳಿಗೆ ರಾಹುಲ್ ಗಾಂಧಿ ಮಣಿಯಲಿಲ್ಲ.ಇನ್ ಫ್ಯಾಕ್ಟ್,ಇಂತಹ ಒತ್ತಡಗಳಿಗೆ ಮಣಿಯುವ ಜಾಯಮಾನವೇ ರಾಹುಲ್ ಗಾಂಧಿ ಅವರದಲ್ಲ. ಇನ್ನು ಈ ಬೆಳವಣಿಗೆಗಳ ಬಗ್ಗೆ ಮೇಡಂ ಸೋನಿಯಾಗಾಂಧಿಯವರು ಮಧ್ಯ ಪ್ರವೇಶ ಮಾಡುವುದಿಲ್ಲ.ಈಗಾಗಲೇ ಇಂತಹ ಎಲ್ಲ ವ್ಯವಹಾರಗಳನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿರುವುದರಿಂದ ಅವರು ಹೆಚ್ಚು ಉತ್ಸುಕತೆಯನ್ನು ತೋರುವುದೂ ಇಲ್ಲ.
ಹೀಗಾಗಿ ನಾಳೆಯೇ ಸಿಎಂ ಆಗಬೇಕು ಅಂತ ಡಿ.ಕೆ.ಶಿವಕುಮಾರ್ ಅವರೇನು ಹೊರಟಿದ್ದಾರೆ? ಅದರ ಬದಲು ಸ್ವಲ್ಪ ದಿನ ಕಾಯಲಿ. ಇಂತಹ ವಿಷಯಗಳಲ್ಲಿ ಏನೇ ಹೆಜ್ಜೆ ಇಡಬೇಕೆಂದರೂ ಎಲ್ಲರ ಮನವೊಲಿಸಬೇಕು.
ಇಂತಹ ಮನವೊಲಿಕೆಯ ಕಾರ್ಯ ಮುಗಿಯುವವರೆಗೆ ಕಾಯಬೇಕು.ಈ ಕಾರ್ಯ ಹೊಸ ವರ್ಷದ ಹೊತ್ತಿಗಾದರೂ ಆಗಬಹುದು.ಬಜೆಟ್ ಮುಗಿದ ನಂತರವೂ ಆಗಬಹುದು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ದಿನ ತಾಳ್ಮೆಯಿಂದಿರಲಿ ಅಂತ ಚಲುವರಾಯಸ್ವಾಮಿ ಅವರಿಗೆ ವಿವರಿಸಿದ್ದಾರೆ.
ಅವರಾಡಿದ ಮಾತು ಕೇಳಿದ ಚಲುವರಾಯಸ್ವಾಮಿ ಅವರು:’ಏನೋ ಗೊತ್ತಿಲ್ಲ ಸಾರ್,ಆದರೆ ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಲಾಗಿ ಹೋದರೆ ಸಾಕು’ಅಂತ ನಿಟ್ಟುಸಿರು ಬಿಟ್ಟರಂತೆ.
ಡಿಕೆಸು ನೆತ್ತಿಗೆ ಸಿದ್ದು ಕೈ? (Political analysis)
ಕುತೂಹಲದ ಸಂಗತಿ ಎಂದರೆ ಚಲುವರಾಯಸ್ವಾಮಿ ಅವರ ಜತೆ ವಿಮಾನದಲ್ಲಿ ಮಾತನಾಡುತ್ತಾ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಬಳಿಯೂ ಇದೇ ಧಾಟಿಯಲ್ಲಿ ಮಾತನಾಡಿದ್ದರಂತೆ.
ಮೂಲಗಳ ಪ್ರಕಾರ ದಿಲ್ಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರು ನ್ಯಾಯ ಪಂಚಾಯ್ತಿಯ ಮಾತನಾಡಿದ ರಂತೆ ‘ಸಾರ್,ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಫೈಟು ನಡೆಯಿತಲ್ಲ? ಆಗ ನೀವು ಕೆ.ಸಿ.ವೇಣು ಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಏನು ಮಾತುಕತೆ ನಡೆಯಿತು?
ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ,ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ಅಮೈಕಬಲ್ ಸೆಟ್ಲ್ ಮೆಂಟ್ ಆಗಿರಲಿಲ್ವಾ?
ಈ ಮಾತುಕತೆಯ ನಂತರ ಸಿದ್ದರಾಮಯ್ಯ ಅವರು ನನ್ನ ನೆತ್ತಿಯ ಮೇಲೆ ಕೈ ಇಟ್ಟು ಏನು ಪ್ರಾಮಿಸ್ಸು ಮಾಡಿದ್ರು?’ಯೇ ,ಸುರೇಶ್ ಎರಡೂವರೆ ವರ್ಷ ಆದ ಕೂಡ್ಲೇ ಸಿಎಂ ಹುದ್ದೆ ಬಿಟ್ಟುಕೊಡ್ತೀನಿ.
ಬೇಕಿದ್ರೆ ಇನ್ನೂ ಒಂದು ವಾರ ಮುಂಚೆಯೇ ಬಿಟ್ಟು ಕೊಡ್ತೀನಿ ಅಂತ ಹೇಳಿರಲಿಲ್ವಾ? ಇದಾದ ನಂತರವೇ ತಾನೇ ನೀವು ಈ ಕುರಿತು ರಾಹುಲ್ ಗಾಂಧಿವರಿಗೆ ವಿವರಿಸಿದ್ದು? ಈ ವಿಷಯವನ್ನು ಇವತ್ತು ವರಿಷ್ಟರ್ಯಾರು ಮಾತನಾಡದಿದ್ದರೆ ನಾವೇನು ಮಾಡಬೇಕು? ಶಿವಕುಮಾರ್ ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ತಾನೇ? ಹೀಗಾಗಿ ಅವರಿಗೆ ನ್ಯಾಯ ಕೊಡಿಸಿ’ಎಂದು ಪಟ್ಟು ಹಿಡಿದಿದ್ದಾರೆ.
ಆಗೆಲ್ಲ ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು:’ರೀ ಸ್ವಲ್ಪ ದಿನ ಸುಮ್ಮನಿರ್ರೀ.ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ.ಆಗ ಬನ್ರಿ.ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ.ಆಗ ಸಿದ್ಧರಾಮಯ್ಯ ಅವರೂ ಬರಲಿ.ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ’ಎಂದಿದ್ದಾರೆ.
ಆದರೆ , ಅವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ಸಮಾಧಾನಗೊಳ್ಳದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕುದಿಯುತ್ತಾ ವಾಪಸ್ಸಾಗಿದ್ದಾರೆ. ಯಾವಾಗ ಅವರು ಕುದಿಯುತ್ತಾ ವಾಪಸ್ಸಾದರೋ? ಇದಾದ ನಂತರ ಅವರ ಬಣ ನಂಬರ್ ಗೇಮ್ ಆಟಕ್ಕಿಳಿದಿದೆ. ಇದರ ಭಾಗವಾಗಿ ಶಾಸಕರ ಒಂದು ತಂಡ ಮೊನ್ನೆ ದಿಲ್ಲಿಗೆ ಹೋಗಿ ಪೆರೇಡ್ ಮಾಡಿ ಬಂದಿದೆ.
ಸಿದ್ದು ಪಾಳಯದ ಲೇಟೆಸ್ಟು ಸುದ್ದಿ (Political analysis)
ಯಾವಾಗ ಡಿಕೆಶಿ ಬಣ ನಂಬರ್ ಗೇಮ್ ಆಟಕ್ಕಿಳಿಯಿತೋ? ಇದಾದ ನಂತರ ಸಿಎಂ ಸಿದ್ದರಾಮಯ್ಯ ಅವರ ಬಣ ಧಿಡೀರನೇ ಎಚ್ವೆತ್ತಿದೆ.ಅಷ್ಟೇ ಅಲ್ಲ,ಈ ನಂಬರ್ ಗೇಮ್ ಆಟದ ದ ವಿವರವನ್ನು ಗಮನಿಸುತ್ತಾ ಕುಳಿತಿದೆ. ಅದಕ್ಕಿರುವ ಸಧ್ಯದ ಮಾಹಿತಿಯ ಪ್ರಕಾರ ‘ಡಿಕೆಶಿ ಕ್ಯಾಂಪಿನಲ್ಲಿ ಇಪ್ಪತ್ತಾರು ಶಾಸಕರಿದ್ದಾರೆ.
ನಾಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಡಿಕೆಶಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದರೆ ಇಪ್ಪತ್ತಾರು ಶಾಸಕರ ಪೈಕಿ, ಹದಿಮೂರು ಮಂದಿ ಮಾತ್ರ ಡಿಕೆಶಿಯವರ ಹಿಂದೆ ಹೋಗುತ್ತಾರೆ.
ಹೀಗಾಗಿ ಡಿಕೆಶಿ ವಿಷಯದಲ್ಲಿ ಯಾವ ಆತಂಕದ ಅಗತ್ಯವೂ ಇಲ್ಲ.ನಾಳೆ ರಾಹುಲ್ ಗಾಂಧಿಯವರು ಕರೆಸಿ ಕೇಳಿದರೆ ಅವರಿಗೆ ಈ ಕುರಿತು ಸ್ಪಷ್ಟವಾಗಿ ಹೇಳಿದರಾಯಿತು.
ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವ ಬದಲಾವಣೆಯಂತಹ ವಿಷಯ ಪ್ರಸ್ತಾಪವಾದರೆ ಈ ಕುರಿತು ವಿವರಿಸಿದರಾಯಿತು .ಅನಂತರ ಡಿಕೆಶಿ ಮುಖ್ಯವೋ? ಸರ್ಕಾರ ಮುಖ್ಯವೋ? ಅಂತ ಅವರೇ ತೀರ್ಮಾನಿಸಲಿ ಎಂಬ ತೀರ್ಮಾನಕ್ಕೆ ಬಂದಿದೆ.
ಕಳೆದ ಶನಿವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಇದೇ ಧಾಟಿಯಲ್ಲಿ ತಮ್ಮ ಅಭಿಪ್ರಾಯ ಹೇಳಿದರಂತೆ. ಆಗೆಲ್ಲ ಖರ್ಗೆಯವರು:’ಈ ವಿಷಯದಲ್ಲಿ ಹೆಚ್ಚು ಯೋಚಿಸಿ ಮುಂದುವರಿಯೋಣ.ನೀವು ಮಾತ್ರ ಹೈಕಮಾಂಡ್ ಗಮನಕ್ಕೆ ತರದೆ ಯಾವ ನಿರ್ಧಾರನ್ನೂ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂಬುದು ಸಧ್ಯದ ಸುದ್ದಿ
ಪ್ರಧಾನಿ ಪಾಳಯಕ್ಕೆ ತಲುಪಿದ್ದೇನು? (Political analysis)
ಹೀಗೆ ಡಿಕೆಶಿ ಕ್ಯಾಂಪಿನ ನಂಬರ್ ಗೇಮ್ ಶುರುವಾದ ನಂತರ ಸಿದ್ದರಾಮಯ್ಯ ಅವರ ಪಾಳಯಕ್ಕೆ ಒಂದು ಮೆಸೇಜ್ ಹೋಗಿದ್ದರೆ, ಪ್ರಧಾನ ನರೇಂ ದ್ರ ಮೋದಿಯವರಿಗೆ ಮತ್ತೊಂದು ಮೆಸೇಜು ತಲುಪಿದೆ.
ಅದರ, ಪ್ರಕಾರ,ಸಿಎಂ ಹುದ್ದೆಗೆ ಪಟ್ಟು ಹಿಡಿದು ಕುಳಿತಿರುವ ಡಿ.ಕೆ.ಶಿವಕುಮಾರ್ ಅವರ ಜತೆ ಸಧ್ಯಕ್ಕೆ 32 ಶಾಸಕರಿದ್ದಾರೆ.ಅದೇ ರೀತಿ ಸಿಎಂ ಸಿದ್ಧರಾಮಯ್ಯ ಅವರ ಹಿಂದೆ 60 ಶಾಸಕರಿದ್ದಾರೆ. ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಾಳಯದಲ್ಲಿರುವ ಶಾಸಕರನ್ನು ಹೊರತುಪಡಿಸಿಯೂ ನಲವತ್ತು ಮಂದಿ ಶಾಸಕರಿದ್ದಾರಲ್ಲ?
ಈ ಪೈಕಿ ಹತ್ತು ಮಂದಿ ಶಾಸಕರನ್ನು ಡಿಕೆಶಿ ತಮ್ಮ ಕಡೆ ಸೆಳೆದುಕೊಂಡರಾಯಿತು. ಅಲ್ಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಮುಗಿಸಲು ಅಗತ್ಯವಾದ ಆಟ ಶುರುವಾಗುತ್ತದೆ. ಅರ್ಥಾತ್,ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ವರಿಷ್ಟರು ಒಪ್ಪದಿದ್ದರೆ ಡಿ.ಕೆ.ಶಿವಕುಮಾರ್ ಪಕ್ಷ ತೊರೆಯುತ್ತಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಕೊಡಲು ಕಾಂಗ್ರೆಸ್ ವರಿಷ್ಟರು ತೀರ್ಮಾನಿಸಿದರೆ ಸಿದ್ದರಾಮಯ್ಯ ಬೆಂಬಲಿಗರ ಪಡೆ ಪಕ್ಷ ತೊರೆಯುತ್ತದೆ.
ಹೀಗೆ ಡಿಕೆಶಿ ಕ್ಯಾಂಪೇ ಆಗಲೀ, ಸಿದ್ದರಾಮಯ್ಯ ಕ್ಯಾಂಪೇ ಆಗಲಿ ಹೊರಬಂದರೆ ಆಟ ಶುರುವಾಗುತ್ತದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕತೆ ಖಲಾಸ್ ಆಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲುಪಿರುವ ಸಂದೇಶ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ಕಾಂಗ್ರೆಸ್ ಪಾಳಯದಲ್ಲಿ ಅದಿಕಾರ ಹಂಚಿಕೆಗಾಗಿ ಕದನ ಆರಂಭವಾಗಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಕ್ಯಾಂಪಿನ ಕಣ್ಣು ‘ಜೀಸಿ-ಜಫ್ರು’ಜೋಡಿಯ ಮೇಲೆ ಬಿದ್ದಿದೆ.
ಅಂದ ಹಾಗೆ ಡಿಕೆಶಿ ಕ್ಯಾಂಪಿನಲ್ಲಿ ಇವತ್ತೇನು ನಡೆಯುತ್ತಿದೆ? ಇದಕ್ಕೆ ಹೈಫು ಕೊಡುತ್ತಿರುವುದೇ ದಿಲ್ಲಿಯಲ್ಲಿರುವ ‘ಜೀಸಿ-ಜಫ್ರು’ ಜೋಡಿ ಎಂಬುದು ಸಿದ್ದರಾಮಯ್ತ ಕ್ಯಾಂಪಿನ ಸಿಟ್ಟು.
ದಿಲ್ಲಿಯಲ್ಲೇನೇ ನಡೆಯಲಿ,ಈ ‘ಜೀಸಿ-ಜಫ್ರು’ ಜೋಡಿ ಡಿ.ಕೆ.ಶಿವಕುಮಾರ್ ಅವರಿಗೆ ಮೆಸೇಜು ಕೊಡುತ್ತಾ:ಅಣ್ಣಾ,ಇಲ್ಲಿ ದಿಲ್ಲಿಯಲ್ಲಿ ಎಲ್ಲ ಸೆಟ್ಲಾಗಿದೆ.ಪಕ್ಷದ ವರಿಷ್ಟರು ನಿಮ್ಮ ಪರವಾಗಿದ್ದಾರೆ.ಆದರೆ ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ಅಧಿಕಾರ ತ್ಯಾಗಕ್ಕೆ ಸಿದ್ದರಾಗಿ ಎಂದು ಹೇಳಲು ಟೈಮು ಕಾಯುತ್ತಿದ್ದಾರೆ.
Read also : Political analysis|ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್-ಜಮೀರ್?
ಹಾಗಂತ ನಾವು ಸುಮ್ಮನಿರಬಾರದಲ್ಲ?ಹೀಗಾಗಿ ಈಗಿನಿಂದಲೇ ಒತ್ತಡ ಬಿಲ್ಡ್ ಮಾಡೋಣ’ಅಂತ ಕುಮ್ಮಕ್ಕು ಕೊಡುತ್ತಿರುವುದೇ ಈ ಜೋಡಿ.ಇಲ್ಲಿ ಡಿಕೆಶಿ ಕ್ಯಾಂಪಿನ ಸುದ್ದಿ ಹೈಫಾಗಲೂ ಇದೇ ಜೋಡಿ ಕಾರಣ ಎಂಬುದು ಸಿಎಂ ಸಿದ್ದರಾಮಯ್ಯ ಕ್ಯಾಂಪಿನ ಅನುಮಾನ.
