ದಾವಣಗೆರೆ (Davanagere): ಯೋಗ ಬಲದಿಂದ ಆತ್ಮಬಲ ಹೆಚ್ಚಾಗುತ್ತದೆ. ಆತ್ಮ ಬಲದಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಯೋಗ ನಿರಂತರ ಅಭ್ಯಾಸದಿಂದ ಉತ್ತಮ ಆರೋಗ್ಯ ಜೊತೆಗೆ ಆಧ್ಯಾತ್ಮದ ಅನುಭವವಾಗುತ್ತದೆ ಎಂದು ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಹೇಳಿದರು.
ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯ ಸಂಜೀವಿನಿ ಅಂಜನೇಸ್ವಾಮಿ ದೇಗುಲದ ಆವರಣದಲ್ಲಿ ದಾವಣಗೆರೆ ಪತಾಂಜಲಿ ಯೋಗ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿದರು.
ಕರ್ನಾಟಕವನ್ನು ಯೋಗಮಯವನ್ನು ಮಾಡುವುದು ಬಾಬಾರಾಮ್ದೇವ್ ಗುರೂಜಿಯವರ ಆಶಯವಾಗಿದ್ದು, ರಾಜ್ಯದಲ್ಲಿ 1500 ಯೋಗಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ಇಡೀ ದಾವಣಗೆರೆಯನ್ನು ಯೋಗಮಯವಾಗಿ ಮಾಡುವದು ನನ್ನ ಅಶಯವಾಗಿದೆ. ಯೋಗ ಶಿಕ್ಷಕರ ತರಬೇತಿಯನ್ನು ದಾವಣಗೆರೆಯ ಈ ಶಕ್ತಿ ಕೇಂದ್ರದಿಂದ ಆರಂಭ ಮಾಡಲಾಗಿದ್ದು, ಸುಮಾರು 167 ಜನ ಯೋಗ ಶಿಕ್ಷಕರನ್ನು ತಯಾರು ಮಾಡಲಾಗಿದೆ. ದಾವಣಗೆರೆಯ 45 ವಾರ್ಡಗಳಲ್ಲಿ ಆಯಾ ವಾರ್ಡಗಳ ಕಾರ್ಪೋರೇಟರ್ಗಳ ಸಹಕಾರದೊಂದಿಗೆ ಪ್ರಾರಂಭ ಮಾಡಬೇಕು ಎಂದರು.
ಯೋಗ ಶಿಬಿರದ ಕುರಿತು ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಹ ಆಸಕ್ತಿಯನ್ನು ತೋರಿದ್ದು, ವಿರಾಟ್ ಯೋಗ ತರಬೇತಿಯ ಮೂಲಕ ಯಶಸ್ವಿಯಾಗಿ ನಡೆಯುವ ಭರವಸೆ ಇದೆ ಎಂದರು.
ಯೋಗ ಎನ್ನುವುದು ಒಂದು ತಪಸ್ಸು ಇದರಲ್ಲಿ ಯಾವುದೇ ಜಾತಿ, ಧರ್ಮಗಳು ಇಲ್ಲ. ಯೋಗವನ್ನು ಎಲ್ಲರೂ ಕಲಿಯಬಹುದಾಗಿದೆ. ಯೋಗ ಶಿಕ್ಷಕರು ನಾನು ನನ್ನಿಂದಲೇ ಎಂಬ ಅಹಂಕಾರವನ್ನು ಬದಿಗಿರಿಸಿ ತಾವು ಕಲಿತಿರುವ ಯೋಗವನ್ನು ಮತ್ತೊಬ್ಬರಿಗೆ ಕಲಿಸಿಕೊಡಬೇಕು. ಎಲ್ಲರಿಗೂ ಸಾಕಷ್ಟು ಒತ್ತಡದ ಜೀವನ ಇರುತ್ತದೆ ಅದರ ಜೊತೆಯಲ್ಲಿ ಸಮಾಜಕ್ಕೆ ನಮ್ಮ ಕೊಡುಗೆಯೇನು ಎನ್ನುವುದು ಸಹ ಅರಿಯಬೇಕು ಎಂದರು.
ಯೋಗ ಶಿಬಿರದ ಅಧ್ಯಕ್ಷರಾದ ಸುನೀಲ್ಕುಮಾರ್ ಮಾತನಾಡಿ, ಯೋಗಶಿಕ್ಷಕರ ತರಬೇತಿ ಶಿಬಿರವನ್ನು ಅಯೋಜನೆ ಮಾಡುವ ಸಂದರ್ಭದಲ್ಲಿ ಸಂಜೀವಿನಿ ಅಂಜನೇಯ ದೇಗುಲದ ಸಮಿತಿಯವರು ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಯೋಗ ಶಿಬಿರದ ಅನ್ಲೈನ್ನಲ್ಲಿ ಸಹ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದು ಪ್ರತಿದಿನವೂ ಉತ್ತಮವಾದ ತರಬೇತಿಯನ್ನು ಪಡೆದುಕೊಂಡಿದ್ದಾರೆ ಎಂದರು.
Read also : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಹಿರಿಯ ಯೋಗ ಶಿಕ್ಷಕರಾದ ರುದ್ರಮುನಿಯಪ್ಪ, ಜಿಲ್ಲಾ ಪ್ರಭಾರಿ ಬಿ.ಕೆ. ನರಸಿಂಹಮೂರ್ತಿ, ಮಂಡಲ ಪ್ರಭಾರಿಗಳಾದ ಎನ್ಎಸ್. ಷಣ್ಮುಖ, ದೇಗುಲ ಸಮಿತಿ ಸದಸ್ಯ ಟಿ.ಹನುಮಂತಪ್ಪ, ಚನ್ನಗಿರಿಯ ಯೋಗ ಶಿಕ್ಷಕ ವಸಂತ್, ಸುಜಾತ, ಹೊನ್ನಾಳಿಯ ರುದ್ರೇಶ್, ಶ್ರೀಕಾಂತ್, ಮಂಜುಳಾ ಪಾಟೀಲ್, ಗುಹೇಶ್ವರ್. ಕಲ್ಯಾಣಿ, ಇಂದ್ರ, ವಿನೋದ,ಸವಿತಾ, ಸುನೀಲ್ಕುಮರ್, ಪ್ರಭಾ, ಅಂಜಲಿ ಇತರರು ಹಾಜರಿದ್ದರು.