ದಾವಣಗೆರೆ: ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂಕೋಳ ಚಂದ್ರ ಶೇಖರ (56) ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ತಾಲ್ಲೂಕಿನ ಬಿಸ್ಲೇರಿ ಗ್ರಾಮದ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ಸಂಶಯವ್ಯಕ್ತವಾಗಿದೆ.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯದ ಆಧಾರದ ಮೇರೆಗೆ ಹದಡಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಾಲಿಕೆಯ 43 ನೇ ವಾರ್ಡ್ನ ಪಾಲಿಕೆ ಸದಸ್ಯ ಸಂಕೋಳ ಚಂದ್ರಶೇಖರ್ ವಿಪರೀತ ಸಾಲದ ಮಾಡಿದ ಹಿನ್ನಲೆ ಕೌಟುಂಬಿಕ ಕಲಹ ನಡೆದಿತ್ತು. ಮನನೊಂದ ಪುತ್ರ ನರೇಶ್ (22) ಹಾಗೂ ಪುತ್ರಿ ಪವಿತ್ರಾ (24) ಆತ್ಮಹತ್ಯೆಗೆ ಯತ್ನಿಸಿದ್ದರು. ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬಳಿಕ ಚಂದ್ರಶೇಖರ್ ಜಮೀನಿಗೆ ತೆರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Read also : ಜ.13, 14ರಂದು ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ : ವೀರೇಶ ಎಸ್.ಒಡೇನಪುರ
ತಂದೆಯ ಜೊತೆಗೆ ಮಕ್ಕಳು ಶನಿವಾರ ಸಂಜೆ ಗಲಾಟೆ ಮಾಡಿದ್ದಾರೆ. ಕರೆ ಮಾಡಿ ಮನೆಗೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಗಲಾಟೆ ಬಳಿಕ ಮಕ್ಕಳಿಬ್ಬರು ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪವಿತ್ರಾ ಪರಿಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿದು ಚಂದ್ರಶೇಖರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದ ಜೊತೆ ಮಾತನಾಡಿ, ಸಂಕೋಳ್ ಚಂದ್ರಶೇಖರ ಮೃತಪಟ್ಟಿರುವ ಅನುಮಾನದ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಯಲದ ಸಿಬ್ಬಂದಿ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆಯ ಬಳಿಕ ಮೃತರ ಗುರುತು ಪತ್ತೆಯಾಗಲಿದೆ ಎಂದು ಹೇಳಿದರು.


