Kannada News |Dinamaanada Hemme | Dinamaana.com | 30-06-2024
ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿಗೆ ಅಗ್ರಸ್ಥಾನವಿದೆ.ಇದರ ವಾಚಕರ ವಾಣಿ ವಿಭಾಗದ ಒಂದೊಂದು ಪತ್ರವೂ ಸಹ ಚಿಂತನಾರ್ಹ ಸಂಗತಿಗಳಿಂದ ಕೂಡಿರುತ್ತವೆ. ಹಾಗೆ ವಾಚಕರ ವಾಣಿಯ ಪತ್ರಗಳ ಓದಿನಿಂದ ಹುರಕಡ್ಲಿ ಶಿವಕುಮಾರರು ನನಗೆ ಪರಿಚಯವಾದರು.
ಸಮಕಾಲೀನ ವಿಷಯಗಳ ಪತ್ರಗಳಿಂದಲೇ ಪ್ರಸಿದ್ಧಿ…
ಹಾಗೆ ಕರ್ನಾಟಕಕ್ಕೂ ಇವರು ಬರೆದ ಸಮಕಾಲೀನ ವಿಷಯಗಳ ಪತ್ರಗಳಿಂದಲೇ ಪ್ರಸಿದ್ಧಿಗೆ ಬಂದಿರುವರೆಂದು ನನ್ನ ನಂಬಿಕೆ. ಕಳೆದ ಐದು ದಶಕಗಳಿಂದ ಕನ್ನಡ ಸಾಹಿತ್ಯಲೋಕವನ್ನು, ರಾಜಕೀಯವನ್ನೂ, ರೈತರ ಬದುಕನ್ನು ಸಮಚಿತ್ತದಿಂದ ನೋಡಿಕೊಂಡು ಬದುಕುತ್ತಿರುವ ಶಿವಕುಮಾರರು ಅಪ್ಪಟ ಭಾರತೀಯ ಪರಂಪರೆಯೊಂದರ ಪಳೆಯುಳಿಕೆಯಂತೆಯೂ ಕಾಣಿಸುತ್ತಾರೆ.
ಅದೊಂದು ದಿನ,ಯಾವುದೋ ಸಾಹಿತ್ಯಿಕ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸುವಂತೆ ಕರೆ ಮಾಡಿದೆ.ಅತ್ತಲಿಂದ, “ಹಲೋ…ಯಾರು?” “ನಮಸ್ಕಾರ ಸರ್, ನಾನು ದಾವಣಗೆರೆಯಿಂದ ಶ್ರೀನಿವಾಸ, ತಮ್ಮನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಬೇಕಾಗಿತ್ತು…..” ವಿವರಗಳನ್ನು ಹೇಳುವ ಮುಂಚೆಯೇ ತುಂಡರಿಸಿ, “ಅಲ್ಲಾ…ನನಗೆ, ಮೆಕ್ಕೆಜೋಳ ಹೊಕ್ಕಾದಿದೆ ,ಇಲ್ಲಾಂದ್ರೆ ಹಾಳಾಗುತ್ತದೆ ಎಂದರು.
ಮತ್ತೆ ಅವರೇ ಮಾತನಾಡಿದರು.ಕಾರ್ಯಕ್ರಮಕ್ಕಿಂತಲೂ ರೈತನ ಕಾಯಕವೇ ಕೈಲಾಸ ಎಂಬುದನ್ನೂ ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಹೋದರು.
ಹೊಸ ವಿಚಾರಗಳಿಗೆ ಮನದ ಕಿಟಕಿ ಬಾಗಿಲು ತೆರೆದವರು
ಸದಾ ಸಾಮಾಜಿಕ ಎಚ್ಚರದಿಂದ ಸಾಹಿತ್ಯಿಕ ವಾಗ್ವಾದಗಳಲ್ಲಿ ಭಾಗವಹಿಸುತ್ತ, ಕೆಲವೊಮ್ಮೆ ಸಭೆಯ ಹಿಂದಿನ ಸೀಟಿನಲ್ಲಿ ಅನಾಮಿಕರಂತೆ ಕೇಳಿಸಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ ಎಂದರೆ, ಅದು ಜಾನಪದವಿರಲಿ, ವಿಜ್ಞಾನದ ವಿಸ್ಮಯಗಳಿರಲಿ, ಕಾವ್ಯವೇ ಆಗಿರಲಿ ಎಲ್ಲಾ ಬಗೆಯ ಹೊಸ ವಿಚಾರಗಳಿಗೆ ತಮ್ಮ ಮನದ ಕಿಟಕಿ ಬಾಗಿಲು ತೆರೆದವರು.
ತೇಜಸ್ವಿ , ಲಂಕೇಶರನ್ನು ನೆನಪಿಸುವ ಹುರಕಡ್ಲಿ ಶಿವಕುಮಾರ್
ಯಾರಾದರೂ ತಮ್ಮದನ್ನು ತಾವೇ ಗೀಚಿಕೊಂಡಿದ್ದರೆ? ಅವರೂರು ಗೀಚಿಗೊಂಡನಹಳ್ಳಿ ಎಂದಾಗುತ್ತದೆ! ಮತ್ತೆ ಯಾರಾದರೂ ದೋಚಿಕೊಂಡಿದ್ದರೆ? ಅವರೂರು ದೋಚಿಗೊಂಡನಹಳ್ಳಿ ಎಂದಾಗುತ್ತದೆ ! ಅದೇ ಪ್ರೀತಿಯಿಂದ ಬಾಚಿಕೊಂಡರೆ ಬಾಚಿಗೊಂಡನಹಳ್ಳಿ ಎಂದಾಗುತ್ತದೆ! …..ಆಧುನಿಕತೆಯ ಸೋಂಕು ತಗುಲಿಯೂ ತಮ್ಮನ್ನು ತಾವು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಎಷ್ಟೋ ಊರು, ಕೇರಿಗಳ, ಜನರ ಪ್ರತಿನಿಧಿಯಂತೆ ಕಾಣುವ ಹುರಕಡ್ಲಿ ಶಿವಕುಮಾರ್ ಒಮ್ಮೊಮ್ಮೆ ಪೂರ್ಣಚಂದ್ರ ತೇಜಸ್ವಿಯನ್ನು, ಮಗದೊಮ್ಮೆ ಲಂಕೇಶರನ್ನು ನೆನಪಿಸುತ್ತಾರೆ.
ನಾವು ಹೀಗೇ ಮರವಾಗಬೇಕು! …
ಸ್ವತಃ ಕವಿಯಾಗಿರುವ ಶಿವಕುಮಾರರಿಗೆ, ಆಕ್ರಮಣಕಾರಿಯಾಗಿ ಆಡಳಿತಶಾಹಿ, ಬಳಸಿ ಎಸೆಯುವ ಆಸೆಬುರುಕ ಅರಮನೆ ನಾಗರಿಕತೆಗಳು, ಮರ, ಗಿಡ, ಹಕ್ಕಿ, ಹೊಲ, ಗದ್ದೆ, ಎತ್ತು, ಆಕಳು…ಎಲ್ಲರೊಂದಿಗೆ ಮಾತನಾಡುತ್ತಾ ಬದುಕುವ ಆಶಯವನ್ನು ಕವಿತೆಯ ಮೂಲಕ ವ್ಯಕ್ತಪಡಿಸುತ್ತಾರೆ.
ಮಣ್ಣುಗೂಡಿಸಿಬಿಟ್ಟ ಹಳ್ಳಿಗಾಡಿನ ಸಮುದಾಯಗಳ ನಡುವಿನ ನಿರಂತರ ಬದುಕು, ಆಕ್ರಮಣವೇ ಗೊತ್ತಿಲ್ಲದ ಹಳ್ಳಿಗರ ಮಂಡಲ ಮಧ್ಯದೊಳಗೆ ಕುಳಿತು ಮರೆತುಹೋದ ಮನುಷ್ಯ ಮೌಲ್ಯಗಳ ಬಗ್ಗೆ ತಪ್ಪಿತಸ್ಥ ಭಾವನೆಯಿಂದ ಬರೆಯಬಲ್ಲ ಛಾತಿಯಿದ್ದವರು.ಆದರೆ ಇವೆಲ್ಲವನ್ನೂ ಮೀರಿ, ತಣ್ಣಗೆ…
ನಾವು ಹೀಗೇ ಮರವಾಗಬೇಕು! ಈ ಹಾದಿ ಬೀದಿಯ ಉದ್ದಕ್ಕೂ ನೆರಳುಹಾಸಿ ನಗೆ ಹೂವ ಸೂಸಿ ಪರಿಮಳಿಸಬೇಕು! ನಿಂತಲ್ಲಿ ನಿಲ್ಲದೆ ಲಾಭಾಕಾಂಕ್ಷೆಯಿಂದ ಚಲಿಸಿ ಅವರಿವರಿಗೆ ಅಸಹ್ಯವಾಗುವುದಕ್ಕಿಂತ ಹೀಗೇ ಸ್ವಸ್ಥ ನಿಂತ ಮರವಾಗಬೇಕು ! ಎಂದು ಆಶಿಸುತ್ತಾರೆ.
ಕವಿ, ತನ್ನೂರಿನ ನೆನಪುಗಳನ್ನು ಮೊಗೆ ಮೊಗೆದು ತುಂಬಿಕೊಂಡು ಜೀವನದಲ್ಲಿ ಅರ್ಥ ಕಾಣುತ್ತಾರೆ.ಆದರೆ ನೆನಪುಗಳೇ ಹುಟ್ಟಲಾರದ ಹೊಸ ಜಗತ್ತಿನ ಮಕ್ಕಳ ಬದುಕಿನ ಕುರಿತು ನೆನೆದರೆ ಭಯವಾಗುತ್ತದೆ.
ಬಹುತೇಕ ಕನ್ನಡದ ಬರಹಗಾರರಿಗೆ ಎರಡು ಲೋಕಗಳ ಅನುಭವವಿರುತ್ತದೆ. ಒಂದು ತನ್ನ ಬಾಲ್ಯದ ಹಳ್ಳಿಯ ಲೋಕ, ಮತ್ತೊಂದು ಆನಂತರದ ನಗರದ ಅನುಭವ ಲೋಕ. ಇದು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು,…ಎಲ್ಲರಿಗೂ ದಕ್ಕಿದ ಲೋಕಗಳೆ. ಆದರೆ ತೇಜಸ್ವಿಯವರದು ರಿವರ್ಸ್ ಪ್ರಾಸೆಸ್!.
ಹುರಕಡ್ಲಿ ಶಿವಕುಮಾರರು ಹಳ್ಳಿ ಬಿಟ್ಟು ಕದಲಿಲ್ಲ. ಹಾಗಂತ ಅನುಭವ ಲೋಕ ವಿಸ್ತಾರಗೊಂಡಿಲ್ಲ ಅಂತಲ್ಲ.ಇರುವ ತಮ್ಮ ಬಂಡಿಜಾಡುಗಳಂತಹ ಕಿರುದಾರಿಗಳ ಮೂಲಕವೇ ಬದುಕಿನ ಚಿಕ್ಕ ಲಯಗಳನ್ನು ಸಮರ್ಥವಾಗಿ ಲೋಕವನ್ನು ನೋಡಿದವರು.
ಸಾಹಿತ್ಯಿಕ ಆತ್ಮ,ತಮ್ಮ ದೇಹದ ಆತ್ಮ ಎರಡೂ ಒಂದೇ…
ಲೇಖಕ ಸುಳ್ಳನ್ನು ಬಿಡಿಸಿ ಹೇಳದಿದ್ದರೆ ಅವನ ನರಮಂಡಲಕ್ಕೆ ಲಕ್ವ ಹೊಡೆದೀತು.ಭಾರತದ ಕೋಮುವಾದೀಕರಣ,ಜಾಗತೀಕರಣಗಳೆಂಬ ಜಂಜಡ,ಗೋಳು ಗಳಿಗೆ,ಕುರೂಪಗಳ ನರಮಂಡಲ ಇರುವ ಸಾಹಿತ್ಯಕ್ಕೆ ಆತ್ಮ ಕೂಡ ಇರಲಾರದು.ಆದರೆ ಹುರಕಡ್ಲಿಯವರಿಗೆ ಸಾಹಿತ್ಯಿಕ ಆತ್ಮ,ತಮ್ಮ ದೇಹದ ಆತ್ಮ ಎರಡೂ ಒಂದೇ ಆಗಿ ಕಂಡಿವೆ.ಕಾವ್ಯವೆಂದರೆ ಕೇವಲ ಶಬ್ದಗಳ ಚಮತ್ಕಾರ ಮಾತ್ರವಲ್ಲ. ಜೀವನ, ಸಮಾಜಗಳ ಹೆಣಿಗೆಯನ್ನಾಗಿ ಬದುಕಿನ ಸರಳ ರೂಪಕಗಳ ಮೂಲಕ ಹುರಕಡ್ಲಿಯವರು ಕಟ್ಟಿಕೊಡುತ್ತಾರೆ.
ಅಲ್ಲಾ ನಮ್ಮ ದೇವರಿಗೆ ಚಳಿಯಾಗ್ತದೆ. ಅಂತಾ ನಾನೇ ಮಸೀದಿ ಕಟ್ಟಿಸಿದ್ದೆ ಎಂದು ಅಳುತ್ತಿದ್ದ ಮಹ್ಮದ್ ಸಾಬು, ರಾಮ ರಾಮಾ ನಮ್ಮ ದೇವರಿಗೆ ಸೆಕೆಯಾಗ್ತದೆ ಅಂತಾ ನಾನೇ ಕಿಂಡಿ ಕೊರೆದೆ ಎಂದು ನಗುತ್ತಿದ್ದ ಅಧ್ವಾನ್ ಬಾಬು, ಕಿಂಡಿ ಕೊರೆವಾಗ ಮಸೀದಿ ಕುಸಿದು ದೇಶವೆಲ್ಲಾ ರಾಮಾರಕ್ತವಾಯ್ತು. ದೇವರಿಗೇ ಸೆಕೆ! ಚಳಿ! ಉಬ್ಬಸ! ಛೇ.. ಪುಂಡಾಟ ಮಾಡ್ತೀರಾ ಮುಠ್ಠಾಳರ? ಅಂತಾ ನಾನು ಉಗಿದೆ.
ಅವರು ನಾಸ್ತಿಕ! ನಾಸ್ತಿಕ! ಅಂತ ಉಗ್ಗಡಿಸುವ ಭರದಲ್ಲಿ ಢಿಕ್ಕಿ ಹೊಡೆದು ಹಣೆ ಹೊಡೆದುಕೊಂಡು ಏದುಸಿರು ಬಿಡತೊಡಗಿದರು. ಮತ್ತೆ ನಾನೇ ಗಾಳಿ ಬೀಸಿ ನೀರು ಕುಡಿಸ ‘ಈಗ ಬಾಯಾರಿಕೆ,ಸೆಕೆ ನಿಮಗೋ? ನಿಮ್ಮ ದೇವರಿಗೋ ?’ಎಂದೆ. ಉತ್ತರಕ್ಕಾಗಿ ಇಬ್ಬರೂ ಪೇಚಾಡಿ ಪೇಚಾಡ ನಾಸ್ತಿಕ! ನಾಸ್ತಿಕ! ಅಂತಾ ಬಡಬಡಿಸಿದರು.
(ಕಾವ್ಯೋತ್ತರ)
ಹುರಕಡ್ಲಿ, ಮೇಟಿ, ಮತ್ತು ವಟ್ಟಮ್ಮನಹಳ್ಳಿಯ ಪಂಪಣ್ಣ ನಂತಹ ಬರೆಹಗಾರರನ್ನು ಭಾರತೀಯ ಲೇಖಕ ವರ್ಗ ಇನ್ನೂ ಒಳಗೆ ಬಿಟ್ಟುಕೊಂಡಂತಿಲ್ಲ.ಇದೆಲ್ಲವನ್ನು ನೋಡುತ್ತಿದ್ದರೆ ಚಿಂತಕ ಶಿವವಿಶ್ವನಾಥನ್ -“ದೆಹಲಿಗೆ ಮೀಜೋರಾಮ್ ನ ಬಿದಿರು ಅರ್ಥವಾಗುವುದಿಲ್ಲವಾದ್ದರಿಂದ ಮೀಜೋರಾಮ್ ಕೂಡ ಅರ್ಥವಾಗುವುದಿಲ್ಲ. ಹೀಗಾಗಿ,ಮೀಜೋರಾಮ್ ದೆಹಲಿಯಿಂದ,ಭಾರತದಿಂದ ದೂರವಾಗುತ್ತಾ ಹೋಗುತ್ತದೆ. ತತ್ಪರಿಣಾಮವಾಗಿ ಭಾರತ ಕೂಡ ತುಂಡಾಗುತ್ತಾ ಹೋಗುತ್ತದೆ.”ಎಂದು ಹೇಳಿದ್ದ ಈ ಮಾತು ಬಸರಕೋಡು, ಹಂಪಾಪಟ್ಣ, ವಟ್ಟಮ್ಮನಹಳ್ಳಿ, ಬಾಚಿಗೊಂಡನಹಳ್ಳಿ ಊರುಗಳಿಗೂ, ಆ ಊರಿನಲ್ಲಿ ವಾಸಿಸುವ ಮನುಷ್ಯರಿಗೂ ಅನ್ವಯಿಸುವಂತೆ ತೋರುತ್ತಿರುವುದು ಅತಿಶಯೋಕ್ತಿಯೇನಲ್ಲ.
ಬಿ.ಶ್ರೀನಿವಾಸ