ಹರಿಹರ (Harihara): ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪ್ರಣಾಮಗಳು ಎನ್ನುತ್ತಾ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳಿಗೆ ಉತ್ತೇಜನ ನೀಡುವ ಹೊಸ ಢಾಂಬಿಕತೆ ದೇಶದಲ್ಲಿ ಬೆಳೆಯುತ್ತಿದೆ ಎಂದು ಡಿಎಸ್ಎಸ್ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆತಂಕ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏ.28 ರಂದು ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ರವರ 134ನೇ ಜಯಂತಿ ಹಾಗೂ ಸನ್ಮಾನ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನನ್ನು ಯಥಾವತ್ತಾಗಿ ಜಾರಿ ಮಾಡದೆ, ಅಂಬೇಡ್ಕರ್ರವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಅಧಿಕಾರಸ್ತರು ಸಂವಿಧಾನದ ಪ್ರತಿಯನ್ನು ಸುಟ್ಟಾಗಲು ಖಂಡಿಸುವುದಿಲ್ಲ, ನಾವು ಬಂದಿರುವುದೇ ಸಂವಿಧಾನ ಬದಲಿಸಲಿಕ್ಕೆ ಎಂದಾಗಲು ಮಾತನಾಡುವುದಿಲ್ಲ, ಕೊನೆಗೆ ನಾವು ಭಾರತಕ್ಕೆ ಬೇರೊಂದು ಸಂವಿಧಾನವನ್ನು ರಚಿಸಿದ್ದೇವೆ ಎಂದಾಗಲೂ ಮೌನವಾಗಿರುತ್ತಾರೆ. ಇದು ಅಂಬೇಡ್ಕರ್ ಭಕ್ತರಿಗೆ ಅರ್ಥವಾಗುವುದಿಲ್ಲ, ಎಲ್ಲಿಯವರೆಗೆ ಅಂಬೇಡ್ಕರ್ ಭಕ್ತರು ಅನುಯಾಯಿಗಳಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅಂಬೇಡ್ಕರ್ ವಿರೋಧಿಗಳು ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಲೇ ಇರುತ್ತಾರೆ ಎಂದರು.
ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ನೀಡಿ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಇಂತಹ ಸರ್ವ ಶ್ರೇಷ್ಠ ರಾಷ್ಟ್ರ ನಾಯಕನನ್ನ ಭಾರತೀಯರು ಕೇವಲ ದಲಿತ ನಾಯಕ ಎಂದು ಅವಮಾನಿಸಿದರು, ಈ ಮನಸ್ಥಿತಿಯನ್ನು ವಿರೋಧಿಸಬೇಕಿದ್ದ ದಲಿತರು ಸಹ ಅದನ್ನೇ ಒಪ್ಪಿಕೊಂಡು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ, ಅಂಬೇಡ್ಕರ್ ದಲಿತರಿಗಾಗಿ ಎಷ್ಟುದುಡಿದಿದ್ದಾರೋ ಅದರ ನೂರರ ಪಟ್ಟುದೇಶಕ್ಕಾಗಿ, ಪ್ರತಿಯೊಬ್ಬ ಪ್ರಜೆಗಾಗಿತಮ್ಮಇಡೀ ಬದುಕನ್ನೆ ಗಂಧದಂತೆ ತೇಯ್ದಿದ್ದಾರೆ ಎಂದರು.
ಅಂಬೇಡ್ಕರ್ರವರ ನಿಜವಾದ ಸಿದ್ಧಾಂತವನ್ನು ಪರಿಚಯಿಸಲು ಸಂಘಟನೆಯಿಂದ ಅವರ 134ನೇ ಜಯಂತಿ ನಿಮಿತ್ತ 134 ಸಾಧಕರಿಗೆ ಸನ್ಮಾನಮಾಡುವ ವಿಶಿಷ್ಠ ಸಮಾರಂಭವನ್ನು ಏ.28 ರಂದು ಬೆಳಿಗ್ಗೆ 10ಕ್ಕೆ, ನಗರದ ಬಸ್ ನಿಲ್ದಾಣ ಸಮೀಪದ ಗುರುಭವನದಲ್ಲಿ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದರು.
Read also : Davanagere : ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನ
ಆದಿಜಾಂಬವ ಕೋಡಿಹಳ್ಳಿ ಮಠದ ಷಡಕ್ಷರಮುನಿ ದೇಶೀಕೇಂದ್ರ ಶ್ರೀ ಸಾನಿಧ್ಯವಹಿಸುವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಶೋತ್ತಮ ಬಿಳಿಮಲೆ ಉದ್ಘಾಟಿಸುವರು, ಕದಸಂಸರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸುವರು. ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಪ್ರಶಸ್ತಿ ಪ್ರಧಾನ ಮಾಡುವರು, ಇನ್ಸೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ವಿನಯ್ಕುಮಾರ್ ಜಿ.ಬಿ. ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಕದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ.ವಿ.ಟಿ.ನಾಗರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಹರಳಹಳ್ಳಿ ಗ್ರಾಪಂ ಸದಸ್ಯ ಎಚ್.ಎಂ.ಹನುಮಂತಪ್ಪ, ಭಾನುವಳ್ಳಿ ಗ್ರಾಪಂ ಸದಸ್ಯ ಮಂಜಪ್ಪ ಎಂ., ಕಡ್ಲೆಗೊಂದಿ ತಿಮ್ಮಣ್ಣ, ಚೌಡಪ್ಪ ಸಿ.ಭಾನುವಳ್ಳಿ, ಮಂಜಪ್ಪ ಗುಳದಹಳ್ಳಿ, ಹನುಮಂತ ಎಚ್.ಯಲವಟ್ಟಿ, ಬೆಣ್ಣೆ ರಾಜಪ್ಪ, ಆಂಜನೇಯ, ಕೀರ್ತಿ ಟಿ., ಎಳೆಹೊಳೆ ಹನುಮಂತಪ್ಪ, ಜಿಗಳಿ ಚೌಡಪ್ಪ, ಸ್ವಾಮಿ ಲಿಂಗಪ್ಪ, ಪರಶುರಾಮ, ರಾಜಪ್ಪ, ಮಹಾಂತೇಶ, ರಾಜು, ಮಹೇಶ್, ಸೋಮಶೇಖರ್, ಯುವರಾಜ ಹೊಸಪಾಳ್ಯ ಹಾಗೂ ಇತರರಿದ್ದರು.