ಹರಿಹರ (DAVANAGERE) : ಹರ್ ಘರ್ ತಿರಂಗಾ-2024 ಅಭಿಯಾನವು ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಒಂದು ಉತ್ತಮ ಅವಕಾಶದ ಕಾರ್ಯಕ್ರಮವಾಗಿದೆ ಎಂದು ಪೌರಾಯುಕ್ತ ಪಿ.ಸುಬ್ರಮಣ್ಯ ಶ್ರೇಷ್ಟಿ ಅಭಿಪ್ರಾಯ ಪಟ್ಟರು.
ನಗರದ ನಗರಸಭೆ ಆವರಣದಲ್ಲಿ ಹರ್ ಘರ್ ತಿರಂಗಾ-2024 ಅಭಿಯಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಗುತ್ತಿದೆ.ಎಲ್ಲರೂ ಸಮರ್ಥವಾಗಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ.
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ಹಾರಿಸಬೇಕು ದಾವಣಗೆರೆ ಜಿಲ್ಲೆಯಾದ್ಯಂತ ಸ್ವಾತಂತ್ರ್ಯ ಸಂಭ್ರಮ ವೈವಿಧ್ಯಮಯ ಮತ್ತು ವರ್ಣರಂಜಿತ ಆಚರಣೆಯ ಭಾಗವಾಗಿ ಹರ್ ಘರ್ ತಿರಂಗಾ ಎಂಬ ಘೋಷವಾಕ್ಯ ದೊಂದಿಗೆ ಆ.13 ರ ಇಂದಿನಿಂದ 15 ರವರೆಗೆ ಮೂರು ದಿನಗಳ ಕಾಲ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಆರಿಸಿ, ದೇಶಭಕ್ತಿ ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮ ಅಭಿವ್ಯಕ್ತ ಗೊಳಿಸುವ ನಿರ್ಣಯ ಕೈಗೊಳ್ಳೋಣ ಎಂದು ತಿಳಿಸಿದರು.
ನಗರಸಭೆ ಸದಸ್ಯ ದಾದಾ ಕಲಂದರ್ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಅನೇಕ ಮಹಾನುಬಾವರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಅವರುಗಳ ನೆನಪು ಮಾಡಿಕೊಳ್ಳಲು ಭಾರತೀಯರಾದ ನಮಗೆಲ್ಲಾ ಒಂದು ಸುವರ್ಣ ಅವಕಾಶ ಆದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಆರಿಸುವ ಮೂಲಕ ನೂರು ದಿನಗಳ ಕಾಲ ಈ ಅಭಿಯಾನ ಯಶಸ್ವಿಗೊಳಿಸೋಣ ಎಂದು ಹೇಳಿದರು.
ನಗರಸಭೆ ಸದಸ್ಯ ಎಂ.ಎಸ್. ಬಾಬುಲಾಲ್ ಮಾತನಾಡಿ, ಭಾರತೀಯ ರಾದ ನಾವೆಲ್ಲ ನಮ್ಮ ದೇಶದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾದರೆ ಸ್ವಾತಂತ್ರೋತ್ಸವದ ಈ ಸುದಿನದ ಸಂದರ್ಭದಲ್ಲಿ ನಮ್ಮ ನಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಆರಿಸುವ ಮೂಲಕ ದೇಶದ ಐಕ್ಯತೆಗೆ ಸಹಕಾರ ನೀಡೋಣ ಜೊತೆಗೆ ಎಂತಹುದೇ ಅಹಿತಕರ ಘಟನೆ ನಡೆದರೆ ನಾವು ಸಹ ಅದರ ವಿರುದ್ಧ ಹೋರಾಟ ಮಾಡಲು ಹಿಂಜರಿಯುವುದು ಬೇಡ ಎಂಬ ಸಂದೇಶವನ್ನು ನೀಡಿದರು.
ಅಭಿಯಾನ ಆರಂಭಕ್ಕೂ ಮುನ್ನ ನಗರಸಭೆಯ ವ್ಯವಸ್ಥಾಪಕ ಕೆಆರ್ ಶಿವಕುಮಾರ್ ಕಂದಾಯ ಇಲಾಖೆಯ ರಾಜ್ಯಶ್ವ ನಿರೀಕ್ಷಕ ಸಮೀರ್, ಗ್ರಾಮ ಅಭಿವೃದ್ಧಿ ಅಧಿಕಾರಿ ಎಚ್.ಜಿ.ಹೇಮಂತ್ ಕುಮಾರ್ ಸೇರಿದಂತೆ ಹಲವರು ಸ್ವಾತಂತ್ರ್ಯೋತ್ಸವದ ಬಗ್ಗೆ ಹಾಗೂ ಅಭಿಯಾನದ ಬಗ್ಗೆ ತಮ್ಮ ಮೆಚ್ಚುಗೆಯ ನುಡಿಗಳನ್ನಾಡಿದರು.
ನಗರಸಭೆಯ ಕಂದಾಯ ಅಧಿಕಾರಿ ರಮೇಶ್, ಜಗದೀಶ್, ಕರಿಯಪ್ಪ, ರಮೇಶ್, ಅಣ್ಣಪ್ಪ, ರಾಮು, ರವಿಪ್ರಕಾಶ್, ಶಿವಮೂರ್ತಿ, ಜಗದೀಶ್ ಅಡ್ಡೆರ, ಆಮ್ಬ್ರಿನ್ ಖಾನ್, ಮಂಜುನಾಥ, ಬಸವರಾಜ್, ಸೌಜನ್ಯ, ಗಾಯತ್ರಿ, ಲಲಿತ, ವೀಣಾ, ಮಮತಾ, ಜಯಮ್ಮ, ಭಾಗ್ಯಮ್ಮ ಸೇರಿದಂತೆ ಹಲವು ನಗರಸಭಾ ಸಿಬ್ಬಂದಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದರು.