ದಾವಣಗೆರೆ : ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಹಾಗೂ ಮೌಲ್ಯಾಧಾರಿತ ಜೀವನ ಶೈಲಿ ಅತ್ಯಗತ್ಯವಾಗಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿವೆ ಎಂದು ಡಾ. ಬಿ.ಡಿ. ಮುರುಳಿಧರ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ತಡೆ ಸಮಿತಿ ಸಹಯೋಗದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮೂಲಕ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ 2025–26 ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಶ್ಚಟಗಳಿಂದ ದೂರವಿದ್ದು ಶಿಸ್ತಿನ ಜೀವನ ನಡೆಸುವ ಅಗತ್ಯವನ್ನು ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಲೋಕೇಶ್ ನಾಯಕ ಮಾತನಾಡಿ, ಯುವಜನರಲ್ಲಿ ಸೇವಾಭಾವನೆ, ನಾಯಕತ್ವ ಗುಣ ಮತ್ತು ಸಮಾಜದ ಬಗ್ಗೆ ಹೊಣೆಗಾರಿಕೆ ಬೆಳೆಸುವುದೇ ಮುಖ್ಯ ಗುರಿಯಾಗಿದೆ ಎಂದರು.
Read also : ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ
ಡಾ. ವೆಂಕಟೇಶ್ ಬಾಬು ಎಸ್. ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕೇವಲ ಆಚರಣೆ ಮಾತ್ರವಲ್ಲ, ಅದು ಯುವಜನರಲ್ಲಿ ಆತ್ಮಬಲ, ದೇಶಭಕ್ತಿ ಮತ್ತು ಗುರಿಸಾಧನೆಯ ಚೈತನ್ಯ ತುಂಬುವ ರಾಷ್ಟ್ರೀಯ ದಿನವಾಗಿದೆ ಎಂದು ತಿಳಿಸಿದರು. ಇಂದಿನ ಯುವಜನರು ಕೇವಲ ಉದ್ಯೋಗವಲ್ಲ, ರಾಷ್ಟ್ರ ನಿರ್ಮಾಣದ ಹೊಣೆ ಹೊತ್ತು ತಮ್ಮ ಶಕ್ತಿ ಮತ್ತು ಬುದ್ಧಿಯನ್ನು ದೇಶ ಸೇವೆಗೆ ಬಳಸಬೇಕು. ಯುವಜನರು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಅವರಿಂದಲೇ ಭಾರತದ ಭವಿಷ್ಯ ಕಟ್ಟಲ್ಪಡುತ್ತದೆ ಎಂದು ಅವರು ಪ್ರೇರಣಾದಾಯಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹೇಂದ್ರ, ಕಾಲೇಜಿನ ಬೋಧಕ ವೃಂದ, ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಭರ್ಜರಿ ಸ್ಪಂದನೆ ನೀಡಿದರು. ಯುವಜನರಲ್ಲಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಗುರಿ ಸಾಧನೆಗೆ ದಿಕ್ಕು ನೀಡಿದ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿತ್ತು ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಬಿ.ಸಿ. ತಹಶೀಲ್ದಾರ್ ವಹಿಸಿದ್ದರು.
ಎಂಬಿಎ ವಿದ್ಯಾರ್ಥಿನಿ ಕುಮಾರಿ ಅನುಷಾ ನಿರೂಪಿಸಿದರು. ಕುಮಾರಿ ಸ್ವಪ್ನ ಪ್ರಾರ್ಥಿಸಿದರು. ಕುಮಾರಿ ನಜ್ಮಾ ಬಾನು ಸ್ವಾಗತಿಸಿದರು.
