ದಾವಣಗೆರೆ (Davanagere): ನೂತನವಾಗಿ ನಿರ್ಮಿಸಿರುವ ಶ್ರೀಕ್ಷೇತ್ರ ಶಿಬಾರ ಮೈಲಾರಲಿಂಗೇಶ್ವರ ನೂತನ ಶಿಲಾ ದೇವಸ್ಥಾನವು ದೇವತಾ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಲ್ಲೇಶ್ ಖಂಡ್ರಳ್ಳಿ ತಿಳಿಸಿದರು.
ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ದೇವಸ್ಥಾನದ ಶ್ರೀಮೈಲಾರಲಿಂಗೇಶ್ವರ ಶ್ರೀ ಗಂಗಮಾಳಮ್ಮ ಶ್ರೀ ಸಂಪಿಗೆ ಸಿದ್ದೇಶ್ವರ ದೇವರುಗಳ ನೂತನ ಮೂರ್ತಿಗಳ ಮೆರವಣಿಗೆ ಭಾನುವಾರ ನಗರದ ರಾಜಬೀದಿಗಳಲ್ಲಿ ಮೆರವಣಿಗೆಯಾಗಿದೆ. ಧಾರ್ಮಿಕ ಕಾರ್ಯಗಳು ಮೇ7 ರಂದು ಬೆಳಿಗ್ಗೆ ಬುಧವಾರ ಬೆಳಗ್ಗೆ 8 ಕ್ಕೆ ಶುರುವಾಗಲಿದ್ದು ಮೇ 11 ರ ಭಾನುವಾರ ಬೆಳಿಗ್ಗೆ ವರೆಗೂ ಗಣಪತಿ ಹೋಮ, ಗುರುಪ್ರಾರ್ಥನೆ, ನವಗ್ರಹ ಪೂಜೆ , ನವಗ್ರಹಹೋಮ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಮುಂದುವರಿಯಲಿವೆ ಹಾಗೂ ಸಾರ್ವಜನಿಕರಿಗೆ ಪ್ರತಿದಿನ ಕೂಡ ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೇ 9 ರಂದು ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ದೇವತೆಗಳ ಪ್ರತಿಷ್ಠಾಪನೆ ಮೇ 10 ರ ಶನಿವಾರ ಬೆಳಗ್ಗೆ 8 ಗಂಟೆಗೆ ಕಳಶ ಪ್ರತಿಷ್ಠಾಪನೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಎಚ್ .ಜೆ ವೀರಪ್ಪ ಮಾತನಾಡಿ, “ಸುಮಾರು ಐದಾರು ತಲೆಮಾರುಗಳಿಂದಲೂ ಈ ದೇವಸ್ಥಾನವು ಸೀಬಾರವೆಂದು ಪ್ರಖ್ಯಾತಿಯನ್ನು ಹೊಂದಿದ್ದು, ಇತ್ತೀಚಿಗೆ ತಾನೇ ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದೆವು. ಸೀಬಾರ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಯಾವುದೇ ಜಾತಿ, ಮತ ಭೇದಗಳಿಲ್ಲದೆ ಸಾರ್ವಜನಿಕರು ಕೈಜೋಡಿಸಿ ದೇಣಿಗೆ ನೀಡಿದ್ದಾರೆ. ಎಲ್ಲಾ ಜಾತಿಯವರು ಕೂಡ ಭಕ್ತರಿದ್ದು, ಭಕ್ತಿಕಾಣಿಕೆ ಸಮರ್ಪಿಸಿದ್ದಾರೆ. ಮುಸ್ಲಿಂ ಧರ್ಮದ ಕೆಲ ಬಾಂಧವರು ಕೂಡ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಸಹಕರಿಸಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
Read also : Political analysis | ಯೋಗಿಯ ಯೋಗ ನೀರಿನಿಂದ ನೀರಾ ತನಕ
ಟ್ರಸ್ಟಿನ ಖಜಾಂಚಿ ಜಯಪ್ಪ ಬಳ್ಳಾರಿ ಮಾತನಾಡಿ, “ಹಿರಿಯ ಶಾಸಕರು, ಮುಖಂಡರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮುಖಂಡರು, ಜನಸಾಮಾನ್ಯರು ಭಕ್ತಿ ಸಮರ್ಪಿಸಿದ್ದಾರೆ. ಮೇ 7ರಿಂದ ಪ್ರತಿ ದಿನ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಕ ಪಕ್ಕದ ಜಿಲ್ಲೆಗಳ, ದಾವಣಗೆರೆ ಜಿಲ್ಲೆಯ ಎಲ್ಲಾ ಭಕ್ತರು, ಸಾರ್ವಜನಿಕರು ಆಹ್ವಾನ ಸ್ವೀಕರಿಸಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು” ಎಂದು ಆಹ್ವಾನ ನೀಡಿದರು.
ಈ ವೇಳೆ ಶ್ರೀಕ್ಷೇತ್ರ ಶಿಬಾರ ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ಉಪಾಧ್ಯಕ್ಷ ಪರಮೇಶ್ವರಪ್ಪ, ಸಹಕಾರ್ಯದರ್ಶಿ ಶ್ರೀ ಗೋಪಾಲರಾವ್ ಸಾವಂತ್, ಹಾಗೂ ಸದಸ್ಯರಾದ ಎಚ್ ಎಸ್ ಜಗದೀಶ್, ಜಿಕೆ ಪಂಚಾಣ್ಣ, ಮಾಲತೇಶರಾವ್ ಜಾದವ್, ಕೆ ಬಿ ಶಂಕರ್ ನಾರಾಯಣ್, ವೈ ಮಲ್ಲೇಶ್, ಜಯಪ್ರಕಾಶ್ ಭಾಗವಹಿಸಿದ್ದರು.