ದಾವಣಗೆರೆ: ನಗರದ ಶಕ್ತಿನಗರದಲ್ಲಿರುವ ದೇವಾಂಗ ಸಮಾಜದ ಶ್ರೀ ಬನಶಂಕರಿ ದೇವಿಯ ಪ್ರಥಮ ವರ್ಷದ ಬನದ ಹುಣ್ಣಿಯಮೆಯ ನೂತನ ಬ್ರಹ್ಮ ರಥೋತ್ಸವಕ್ಕೆ ಶುಕ್ರವಾರ ಬೆಳಗ್ಗೆ ಕಳಸಾರೋಹಣ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ದೇವಸ್ಥಾನ ಆರಣದ ನೂತನ ರಥೋತ್ಸವಕ್ಕೆ ಕಳಸಾರೋಹಣ ಮಾಡುವ ಮುನ್ನ ದೇವಿಗೆ ಶಾಖಾಂಬರಿ ಅಲಂಕಾರ ಪೂಜೆ, ಗಣಪತಿ ಪೂಜೆ, ಮಹಾ ಸಂಕಲ್ಪ, ಪುಣ್ಯನಾಂದಿ, ನವಗ್ರಹ ಛೇದನ, ರಕ್ಷಾ ಬಂಧನ, ನವಗ್ರಹ ಶಾಂತಿ, ಹೋಮ, ಬಲಿಹರಣ, ಕದಳೀ ಛೇದನ, ಪೂರ್ಣಾಹುತಿ,, ಮಹಾ ಮಂಗಳರಾತಿ ಮಾಡಲಾಯಿತು.
ನೂತನ ರಥೋತ್ಸವದ ಧಾರ್ಮಿಕ ಪೂಜಾ ವಿಧಿವಿಧಾನಗಳು ಶ್ರೀ ಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವ ಹಾಗೂ ಸಾನ್ನಧ್ಯದಲ್ಲಿ ನಡೆಯಿತು. ಪೂಜೆ, ಹವನದ ನಂತರ ಶ್ರೀಗಳು ನೂತನ ರಥಕ್ಕೆ ಸ್ವರ್ಣಪೂರಕ ಪಂಚಗವ್ಯ ಶಾಂತಿ ಮಾಡಿದರು. ನಂತರ ಕುಂಭ ಲಗ್ನದಲ್ಲಿ ನೂತನ ರಥಕ್ಕೆ ಕಳಸಾರೋಹಣ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಸಮಿತಿ ದೇವಾಂಗ ಸಮಾಜದ ಅಧ್ಯಕ್ಷರಾದ ಡಾ. ಎಸ್. ರಂಗನಾಥ್, ಗೌರವ ಸಲಹೆಗಾರರಾದ ಗೋವಿಂದಪ್ಪ ಎಂ.ಎಲ್., ಗೌರವ ಸಲಹೆಗಾರರಾದ ಹಿರೇಗಂಗೂರು ನಾಗಪ್ಪ, ಉಪಾಧ್ಯಕ್ಷರಾದ ಮುಕುಂದಪ್ಪ, ಆರ್. ನರಸಿಂಹಪ್ಪ, ಕಾರ್ಯದರ್ಶಿ ಕೆ. ಜಯಣ್ಣ, ಸಹ ಕಾರ್ಯದರ್ಶಿ ಟಿ. ಕೆಂಚಪ್ಪ, ಬಾಪು ಗೌಡ, ವಾರ್ತಾ ಇಲಾಖೆ ನಿವೃತ್ತ ನೌಕರ ಬಸವರಾಜ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
Read also : ಕಲೆ ವಾಸ್ತುಶಿಲ್ಪದ ಕಾಯಕದಿಂದಲೇ ವಿಶ್ವಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ:ಶಾಸಕ ಕೆ.ಎಸ್.ಬಸವಂತಪ್ಪ
ಜ.3ರ ಸಂಜೆ 5ಕ್ಕೆ ಬ್ರಹ್ಮ ರಥೋತ್ಸವ:
ಶಕ್ತಿನಗರ ನಗರದ ಮುಖ್ಯ ರಸ್ತೆಯಲ್ಲಿ ಶ್ರೀ ಬನಶಂಕರಿ ದೇವಿಯ ನೂತನ ಬ್ರಹ್ಮ ರಥೋತ್ಸವ ಜ.3ರಂದು ಸಂಜೆ 5ಕ್ಕೆ ನಡೆಯಲಿದೆ. ರಥೋತ್ಸವ ಉದ್ಘಾಟನೆಯನ್ನು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ನೇರವೇರಿಸುವರು. ರಥೋತ್ಸವವು ಡಿಸಿಎಂ ಬಡಾವಣೆಯ ಕಾಂಪೌಂಡ್ನಿಂದ ಶಕ್ತಿನಗರದ ಮುಖ್ಯ ರಸ್ತೆಯಲ್ಲಿ ಸಾಗಿ ನಂಗತರ ಭೀಷ್ಮ ವೃತ್ತ ತಲುಪಲಿದೆ. ನಂತರ ದೇವಸ್ಥಾನ ಆವರಣಕ್ಕೆ ರಥ ವಾಪಸು ಬರದಲಿದೆ.
ರಥೋತ್ಸವದ ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸುವರು. ಸಾಹಿತಿ ಡಾ. ಎ.ಬಿ. ರಾಮಚಂದ್ರಪ್ಪ ದೇವಾಂಗ ಸಮಾಜದ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಉಪನ್ಯಾಸ ನೀಡುವರು. ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಎಸ್. ರಂಗನಾಥ್ ಅಧ್ಯಕ್ಷತೆ ವಹಿಸುವರು.


