ಹಾವೇರಿ: ದೇಶದ ಅಭಿವೃದ್ಧಿಯಲ್ಲಿ, ವಿವಿಧ ಕ್ಷೇತ್ರಗಳ ಮುಂಚೂಣಿಗೆ ಸಾಗುವಲ್ಲಿ ಪತ್ರಕರ್ತರ ಕೊಡುಗೆ ಬಹುದೊಡ್ಡದು. ಒಂದರ್ಥದಲ್ಲಿ ಪತ್ರಕರ್ತರಿಲ್ಲದೇ ಸಮಾಜವನ್ನು ಮುನ್ನಡೆಸುವುದು ಕಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಮಾಜವನ್ನು ಮೊದಲಿಗೆ ಮನಃಪೂರ್ವಕವಾಗಿ ನಿಯಂತ್ರಣಕ್ಕೆ ತಂದವರು ಪತ್ರಕರ್ತರು ಎಂದರೆ ತಪ್ಪಾಗಲಾರದು. ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಕಾಪಾಡುವಲ್ಲಿ, ಸಮಾಜದ ಕಣ್ಣನ್ನು ತೆರೆಸುವಲ್ಲಿ ಪತ್ರಕರ್ತರ ಕಾರ್ಯ ಸ್ಮರಣೀಯ ಮತ್ತು ಶ್ಲಾಘನೀಯವಾಗಿದೆ. ಇನ್ನು ಪತ್ರಕರ್ತರು ಕೇವಲ ರಾಜಕಾರಣಿಗಳ ಬಗ್ಗೆ ಮಾತ್ರ ಬರೆಯದೇ ಸಂತರು, ಶರಣರು, ರೈತರು ಹೀಗೆ ಎಲ್ಲಾ ವಿಷಯಗಳ ಬಗೆಗೆ ಮತ್ತು ಒಳಿತು ಕೆಡುಕುಗಳ ವಿಮರ್ಶೇಯನ್ನು ಬರೆಯುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. ಭಾಷೆ, ಜಾತಿ, ಹೀಗೆ ಹಲವು ಕಟ್ಟುಪಾಡುಗಳನ್ನು ಮೀರಿ ಬರವಣಿಗೆ ಎಲ್ಲರನ್ನೂ ಒಂದಾಗಿಸುತ್ತದೆ ಎಂದರು.
ಪತ್ರಕರ್ತರಿಗೆ ಶಾಸನಬದ್ಧ ಅನುಮೋದನೆ ಇಲ್ಲದೇ ಹೋದಾಗ್ಯೂ ಅವರು ಸರ್ಕಾರದ ಅಥವಾ ಸಂವಿಧಾನದ ನಾಲ್ಕನೇ ಅಂಗ ಎಂಬ ಗೌರವಕ್ಕೆ ಅಥವಾ ಹೊಣೆಗಾರಿಕೆಗೆ ಜವಾಬ್ದಾರರಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಇನ್ನು ಪತ್ರಕರ್ತರ ಸಂಘಟನೆ ಎಂದೊಡನೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಮಾಜಿ ಸಿಎಂ ಡಿವಿಜಿ ಅವರನ್ನು ಸ್ಮರಣೆ ಮಾಡಿಕೊಳ್ಳುವುದು ಅವರ ಮಾಡಿದ ಕೆಲಸಕ್ಕೆ ಸಂದ ಗೌರವ ಎಂದು ಸ್ಮರಿಸಿದ ಅವರು, ಇನ್ನು ರಾಜ್ಯದ 175 ಪತ್ರಕರ್ತರಿಗೆ ಮಾತ್ರ ಮಾಸಿಕ ನಿವೃತ್ತಿ ವೇತನ ಬರುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಜನರಿಗೆ ಕೊಡಿಸಲು ಅಗತ್ಯ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದರು.
ಇನ್ನು ಇತ್ತೀಚಿನ ದಿನಗಳಲ್ಲಿ ಸುದ್ದಿ ನಿಖರತೆಯಲ್ಲಿ ಎಲ್ಲೋ ಒಂದು ಕಡೆ ಲೋಪವಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ವೇಗದ ಸುದ್ದಿ ಕೊಡುವ ನಿಟ್ಟಿನಲ್ಲಿ ತಪ್ಪು ಮಾಹಿತಿ ನೀಡುವುದು ಬೇಡ. ಸುದ್ದಿ ಅಥವಾ ಘಟನೆಯ ವೈಭವೀಕರಣದಿಂದ ಜಿಲ್ಲೆಯ ಘನತೆ ಮತ್ತು ಹೆಸರಿಗೆ ಧಕ್ಕೆ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸುದ್ದಿ ಮಾಡಿದಲ್ಲಿ ಉತ್ತಮ ಎಂದು ಪತ್ರಕರ್ತರಿಗೆ ಸಲಹೆ ಮಾಡಿದ ಅವರು, ಅಭಿವೃದ್ದಿ ದೃಷ್ಠಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ಈ ಕುರಿತು ಸಂಸದ ಬಸವರಾಜ ಬೊಮ್ಮಾಯಿ ಅವರೂ ಕೂಡ ಸಹಕಾರ ನೀಡುವ ಭರವಸೆ ನೀಡಿದ್ದು, ಉತ್ತಮ ಆಲೋಚನೆ ಮತ್ತು ಕೆಲಸಗಳನ್ನು ಮುನ್ನಡೆಸಿಕೊಂಡು ಹೋಗೋಣ ಎಂದು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ದೇಶದಲ್ಲೇ ಅತಿದೊಡ್ಡ ಪತ್ರಕರ್ತರ ಸಂಘಟನೆ ಎಂದರೆ ಅದು ನಮ್ಮದಾಗಿದೆ. ಇದರಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚಿನ ಸದಸ್ಯರಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ದೇಣಿಗೆಯಿಂದ, ಮಾಜಿ ಸಿಎಂ ದಿ.ಡಿ.ವಿ. ಗುಂಡಪ್ಪನವರಿಂದ ಆರಂಭಗೊಂಡಿದೆ. ಇನ್ನು ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನ ಇತ್ತೀಚೆಗೆ ವಿಜಯಪುರದಲ್ಲಿ ನಡೆದಾಗ ಸಚಿವ ಶಿವಾನಂದ ಪಾಟೀಲರು ಮತ್ತು ಕೋವಿಡ್ ಅವಧಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಕೋರೋನಾದಿಂದ ಮೃತಪಟ್ಟ 114 ಪತ್ರಕರ್ತರಿಗೆ ತಲಾ ರೂ.5ಲಕ್ಷ ಪರಿಹಾರ ನೀಡಿ ಆ ಕುಟುಂಬಗಳಿಗೆ ಆರ್ಥಿಕ ಮತ್ತು ಮಾನಸಿಕ ಧೈರ್ಯ ತುಂಬಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಹಕಾರವನ್ನು ಸ್ಮರಿಸಿದರು.
ಪ್ರಸ್ತುತ ನಮ್ಮ ರಾಜ್ಯ ಸಂಘಟನೆಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ಮಾಡಿದ ಮಕ್ಕಳಿಗೆ ರೂ.2500 ಮತ್ತು ಪಿಯುಸಿಯಲ್ಲಿ ಸಾಧನೆ ತೋರಿದವರಿಗೆ ರೂ.3000 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸ್ತುತ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಸಂಘಟನೆಯ ಸದಸ್ಯರಿಂದ ಸದಸ್ಯತ್ವ ಶುಲ್ಕ ಎಂದು ಪಡೆದ ಮೊತ್ತ ಸುಮಾರು 75ಲಕ್ಷ ಇದ್ದು, ಅದನ್ನು ಪತ್ರಕರ್ತರ ಮಕ್ಕಳಿಗೆ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿ ಮತ್ತು ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದೆ. ಈ ಮಧ್ಯೆ ಜೊಳ್ಳು ಪತ್ರಕರ್ತರ ಮಧ್ಯೆ ಉತ್ತಮ ಮತ್ತು ಪತ್ರಕರ್ತರನ್ನು ಗುರುತಿಸಿ ಅವರನ್ನು ಉಳಿಸಿಕೊಳ್ಳುವ ಕೆಲಸ ಪ್ರಯಾಸಕರವಾಗಿದೆ. ಉತ್ತಮ ಪತ್ರಕರ್ತನಾಗಲು ಸಾಕಷ್ಟು ಸಮಯಾವಕಾಶ ಹಾಗೂ ಜ್ಞಾನ ಬೇಕಾಗಿದ್ದು, ಬಳಸಬಾರದ ಶಬ್ಧಗಳ ಬಳಕೆಯ ಮೂಲಕ ಪತ್ರಿಕಾ ಮೌಲ್ಯಗಳ ಹರಣಗೊಳಿಸುವ ಕೆಲಸ ನಡೆದಿದೆ. ಈ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಸಮಾಜ ಪತ್ರಕರ್ತರ ಮೇಲೆ ಇಟ್ಟಿರುವ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಮುಂದುವರೆಯ ಬೇಕಾದ ಸಂದಿಗ್ಧತೆ ನಮ್ಮ ಮುಂದಿದೆ ಎಂದು ಎಚ್ಚರಿಸಿದರು.
ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದು ಹಲವು ಏಳು-ಬೀಳುಗಳನ್ನು ಕಾಣುವಂತಾಗಿದೆ. ಎಲೆಕ್ಟ್ರಾನಿಕ್ ಮತ್ತು ಯೂಟ್ಯೂಬ್ ಚಾಲನೆಗಳಿಂದ ಹಲವು ತಾಂತ್ರಿಕ ಸವಾಲುಗಳನ್ನು ಎದುರಿಸುವಂತಾಗಿದೆ. ತಾಂತ್ರಿಕತೆ ಬೆಳೆದಂತೆ, ಬದಲಾದಂತೆ ಆಯಾ ಕಾಲಘಟ್ಟದ ಬದಲಾವಣೆಗಳಿಗೆ ನಾವುಗಳು ಒಗ್ಗಿಕೊಳ್ಳಬೇಕಿದೆ. ಆದಾಗ್ಯೂ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಮುದ್ರಣ ಮಾದ್ಯಮ ಮುಂದುವರೆಯುತ್ತಿರುವುದು ಸ್ವಾಗತಾರ್ಹ ಎಂದರು.
ರಾಜಕಾರಣ ಮತ್ತು ಪತ್ರಿಕಾ ಮಧ್ಯಮಗಳು ಪರಸ್ಪರ ಒಂದನ್ನೊಂದು ಅವಲಂಭಿಸಿವೆ. ರಾಜಕಾರಣದ ಸುದ್ದಿಗಳಿಲ್ಲದೇ ಪತ್ರಿಕೆ ಮಾರಾಟವಾಗಲಾರದು, ಇನ್ನು ಪತ್ರಿಕೆಗಳಿಲ್ಲದೇ ರಾಜಕಾರಣದಲ್ಲಿ ಸಾಧನೆ, ಹೊಸತನ, ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಮುಟ್ಟಿಸಲುನಸ ಹಲವು ಸವಾಲುಗಳಿವೆ ಎಂದು ತಿಳಿಸಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ಸಾಧನೆ ತೋರಿದ 125 ಮಕ್ಕಳ ಪೈಕಿ 56 ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ. ನಗರಸಭೆಯ ಮಾಜಿ ಅಧ್ಯಕ್ಷ ಸಂಜೀವ ನೀರಲಗಿ, ಪತ್ರಕರ್ತರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಹುಡಾ ಅಧ್ಯಕ್ಷ ಎಸ್.ಎನ್. ಗಾಜಿಗೌಡ್ರ, ಜಿಲ್ಲಾಧ್ಯಕ್ಷ ನಾಗರಾಜ ಕುರುತ್ತೇರ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ ಮತ್ತಿತರರು ಇದ್ದರು.
ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ ಮಾತನಾಡಿ, ಪತ್ರಕರ್ತರ ಕೆಲಸ ಹುದ್ದೆಯಲ್ಲಿ ಅದೊಂದು ಸೇವೆ, ಅಲ್ಲಿ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇದೆ. ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ತಪ್ಪು ಒಪ್ಪುಗಳನ್ನು ತೋರಿಸಿಕೊಡುವ ಕೆಲಸವನ್ನು ಪತ್ರಕರ್ತರು ನಿರಂರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.
ಇದೇ ವೇಳೆ ಜಿಲ್ಲಾ ಪತ್ರಕರ್ತರ ಭವನದ ಅಭಿವೃದ್ದಿಗಾಗಿ ತಮ್ಮ ಅನುದಾನದಲ್ಲಿ ರೂ.5ಲಕ್ಷ ಹಣವನ್ನು ನೀಡುವುದಾಗಿ ಘೋಷಿಸಿದರು.