ದಾವಣಗೆರೆ (Davanagere) : ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಇಸ್ಪೀಟ್ ಜೂಜಾಟ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಡ್ರಗ್ಸ್, ಗಾಂಜಾ, ಮರಳು ದಂಧೆ ಕಾನೂನು ಬಾಹಿರ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನೋಡಿಕೊಳ್ಳಲೆಂದೇ ಒಬ್ಬ ಹಿಂಬಾಲಕನನ್ನು ಬೇರೆ ಬೇರೆ ಇಲಾಖೆಗೆ ಬಿಡುವ ಮೂಲಕ ಕಾಂಗ್ರೆಸ್ ಅಳ್ವಿಕೆಯಲ್ಲಿ ಲಂಚ ಬಾಕತನ ಮಿತಿ ಮೀರುತ್ತಿದ್ದು,ಸಚಿವರು, ಸಂಸದರು, ಉತ್ತರ- ದಕ್ಷಿಣ ಶಾಸಕರು ಯಾರೆಂಬುದೇ ಗೊಂದಲವಾಗುತ್ತಿದೆ ಎಂದು ದೂರಿದರು.
ಈಗ ಐಪಿಎಲ್ ಪಂದ್ಯಾವಳಿ ನಡೆದಿದ್ದು, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಹ ಸಾಗಿದೆ. ಕ್ರಿಕೆಟ್ ಬೆಟ್ಟಿಂಗ್ಗೆ ದುಡ್ಡುಕಟ್ಟಿ ಅನೇಕ ಕುಟುಂಬ ಬೀದಿ ಪಾಲಾಗಿವೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜಿಲ್ಲಾ ಸಚಿವರ ಆಳ್ವಿಕೆಯಲ್ಲಿ ಅತಿ ಸಚಿವರ ಹಿಂಬಾಲಕನೊಬ್ಬ ಜಿಲ್ಲೆಯ ಪೊಲೀಸ್ ಇಲಾಖೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಸಚಿವರು, ಸಂಸದರು, ಶಾಸಕರಿಗೂ ಸಿಗದಷ್ಟು ಬೆಲೆ ಹಿಂಬಾಲಕನಿಗೆ ಅಧಿಕಾರಿಗಳು ನೀಡುತ್ತಿದ್ದಾರೆ. ಬೇರೆ ಬೇರೆ ಇಲಾಖೆ ನೋಡಿಕೊಳ್ಳುವ ಸಚಿವರ ಹಿಂಬಾಲಕರಿಗೆ ಬೆಲೆ ಸಿಗುತ್ತಿದ್ದು, ಸಚಿವ, ಸಂಸದರು, ಶಾಸಕರು ಯಾರೆಂಬುದೇ ಗೊತ್ತಾಗದಂತಾಗಿದೆ ಎಂದರು.
ಆಪ್ತರಿಗೆ ಟೆಂಡರ್ ಧಿಕ್ಕರಿಸಿ ಮರಳುಗಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ. ಸಚಿವರ ಬಲಗೈ ಬಂಟನಾಗಿದ್ದ ವ್ಯಕ್ತಿ ದಾವಣಗೆರೆ ಇಸ್ಪೀಟ್ ಅಡ್ಡೆಯೊಂದರಲ್ಲಿ ಸೋಮವಾರ ಸಂಜೆ ಬರ್ಬರವಾಗಿ ಹತ್ಯೆಯಾಗಿದ್ದು, ಅಂತಹವರನ್ನು ಕಾಂಗ್ರೆಸ್ಸಿನ ನಾಯಕರು ಬೆಳೆಸಿದ್ದನ್ನು ನೋಡಿದರೆ ಜನರಿಗೆ ಏನು ಹೇಳಲು ಹೊರಟಿದ್ದಾರೆಂಬುದೇ ಅರ್ಥವಾಗದಾಗಿದೆ ಎಂದರು.
ಜಿಲ್ಲೆಯ ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಉಪಲೋಕಾಯುಕ್ತರಿಗೆ ರಾಜ್ಯದಲ್ಲೇ ದಾಖಲೆಯ 512 ಅರ್ಜಿ ದಾವಣಗೆರೆಯಲ್ಲಿ ಸಲ್ಲಿಕೆಯಾಗಿದೆಯೆಂದರೆ, ಇಲ್ಲಿ ಏನು ನಡೆಯುತ್ತಿದೆಯೆಂಬುದಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದರು.
Read also : Crime news | ರೌಡಿಶೀಟರ್ ಕಣುಮನ ಹಂತಕರು ಒಂದು ದಿನದ ನಂತರ ಅಂದರ್ !
ಮುಖಂಡರಾದ ಎನ್.ಎಚ್. ಹಾಲೇಶ, ರಾಜು ತೋಟಪ್ಪನವರ್,ವಾಟರ್ ಮಂಜು, ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.