ದಾವಣಗೆರೆ (Davanagere): ಕಳೆದ ಒಂದು ದಶಕದಲ್ಲಿ ದೇಶಕ್ಕೆ 1500 ಐಎಎಸ್ ಅಧಿಕಾರಿಗಳನ್ನು ನೀಡಿದ ಹೆಗ್ಗಳಿಕೆ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸಂಸ್ಥೆಯದ್ದು. ಈ ಸಣ್ಣ ಸಾಧನೆ ಮಾಡಲು ಕಾರಣೀಕರ್ತರಾಗಿದ್ದು ನನ್ನೂರು ಕಕ್ಕರಗೊಳ್ಳ ಗ್ರಾಮದ ಜನರು, ಶಿಕ್ಷಕರು, ಕುಟುಂಬದವರು ನೀಡಿದ ಪ್ರೋತ್ಸಾಹ, ಸಹಕಾರವೇ ಕಾರಣ ಎಂದು ಇನ್ ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದ ಉದ್ಘಾಟನೆ, ಆಂಜನೇಯಸ್ವಾಮಿ, ಶ್ರೀ ಅರಕೇರಮ್ಮ ದೇವಸ್ಥಾನದ ಗೋಪುರ ಕಳಸಾರೋಹಣ, ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವೇಶ್ವರರ ಜಯಂತ್ಯೋತ್ಸ ಹಾಗೂ ಸರ್ವ ಶರಣ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇವತ್ತು ನಾನು ಏನೇ ಆಗಿದ್ದರೂ ಊರು ಮರೆಯಲು ಸಾಧ್ಯವಿಲ್ಲ. ಕೇವಲ ಗಾಳಿ, ನೀರು ಮಾತ್ರವಲ್ಲ, ನಾವು ಕಷ್ಟದಲ್ಲಿದ್ದಾಗ ಅನೇಕರು ಸಹಾಯ ಮಾಡಿದ್ದಾರೆ. ಅವರೆಲ್ಲರನ್ನೂ ನೆನಪು ಮಾಡಿಕೊಳ್ಳಲೇಬೇಕು. ಊರಿನ ಶಾಲೆ, ಶಿಕ್ಷಕರು, ಜನರ ಸಹಕಾರದಿಂದ ಈ ಸಣ್ಣ ಸಾಧನೆ ಮಾಡಲು ಸಾಧ್ಯವಾಗಿದೆ. ಕಕ್ಕರಗೊಳ್ಳದ ಅಭಿವೃದ್ಧಿಗೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಚಿಕ್ಕವನಿದ್ದಾಗ ಕಕ್ಕರಗೊಳ್ಳ ಗ್ರಾಮದಲ್ಲಿ ಶ್ರೀ ಶಾರದಾ ವಿದ್ಯಾಪೀಠ ಇತ್ತು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಿತು. ನನ್ನ ಜೊತೆಗೆ ಮೂವರು ನವೋದಯ ಶಾಲೆಗೆ ಹೋದೆವು. ಆದರ್ಶ್ ಡಾಕ್ಟರ್ ಆಗಿದ್ದರೆ, ಪೂರ್ಣಚಂದ್ರ ತೇಜಸ್ವಿ ಎಂಜಿನಿಯರ್ ಆಗಿದ್ದಾರೆ. ಬೆಂಗಳೂರಿನಲ್ಲಿ ಉನ್ನತ ಮಟ್ಟದಲ್ಲಿ ಇದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ನಮಗೆ ಸಿಕ್ಕ ಉತ್ಕೃಾಷ್ಟ ಗುಣಮಟ್ಟದ ಶಿಕ್ಷಣ. ಇಂಥ ಶಿಕ್ಷಣ ಗ್ರಾಮದ ಎಲ್ಲಾ ಮಕ್ಕಳಿಗೆ ದೊರೆತರೆ ಭವಿಷ್ಯದಲ್ಲಿ ಅತ್ಯುನ್ನತ ಹುದ್ದೆ ಹೋಗುವ ಜೊತೆಗೆ ಗ್ರಾಮದ ಏಳಿಗೆಗೆ ಶ್ರಮಿಸುತ್ತಾರೆ ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.
ನಾನು ಬಿಎಸ್ಸಿ ಮುಗಿಸಿ ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದೆ. ಇದಕ್ಕಾಗಿ ಪ್ರಯತ್ನ ಪಟ್ಟೆ. ಸ್ವಲ್ಪದರಲ್ಲಿ ತಪ್ಪಿಹೋಯಿತು. ಆನಂತರ ಕೆಎಎಸ್ ಮಾಡಿದೆ. ಸರ್ಕಾರಿ ಅಧಿಕಾರಿಯೂ ಆದೆ. ಯಾಕೆ ತೃಪ್ತಿ ನೀಡಲಿಲ್ಲ. ಅದಾದ ನಂತರ ನನಗೆ ಹೊಳೆದದ್ದು ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಬೇಕು ಎಂದು. ಇನ್ ಸೈಟ್ಸ್ ಐಎಎಸ್ ಸಂಸ್ಥೆ ಹುಟ್ಟುಹಾಕಿದೆ. ಕಳೆದ ಹತ್ತು ವರ್ಷಗಳ ಹಿಂದೆ ಶುರುವಾದ ಸಂಸ್ಥೆಯು ಈಗ ದೇಶದ ಗಮನವನ್ನೇ ಸೆಳೆಯುತ್ತಿದೆ. ಜಮ್ಮುಕಾಶ್ಮೀರದ ಶ್ರೀನಗರ, ದೆಹಲಿ, ಬೆಂಗಳೂರು, ಹೈದರಾಬಾದ್, ಲಖ್ನೋ, ದಾವಣಗೆರೆಯಲ್ಲಿ ಇನ್ ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಲಾಗಿದೆ. ಕರ್ನಾಟಕದ ಟಾಪರ್ ರಂಗಮಂಜು ಭಾರತಕ್ಕೆ 24ನೇ ರ್ಯಾಂಕ್ ಪಡೆದಿದ್ದು, ಈತ ನನ್ನ ವಿದ್ಯಾರ್ಥಿ.ನನ್ನ ಸಂಸ್ಥೆಯಲ್ಲಿ ಓದಿದವರು ಎಂಬುದು ನನಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ನಮ್ಮೂರಿಗೆ ಪ್ರತಿ ಬಾರಿಯೂ ಬಂದಾಗ ಸಂತೋಷವಾಗುತ್ತದೆ. ಸುಂದರವಾದ ದೇವಸ್ಥಾನ ನಿರ್ಮಾಣವಾಗಿರುವುದು ಖುಷಿಯ ವಿಚಾರ. ನಮ್ಮೂರಿಗೆ ಕೊಡುಗೆ ನೀಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಯಾವ ರೀತಿ ನೀಡಬೇಕೆಂಬ ಗೊಂದಲವೂ ಇತ್ತು. ದೇವಸ್ಥಾನದ ಅಭಿವೃದ್ಧಿಗೆ ಕಕ್ಕರಗೊಳ್ಳ ಗ್ರಾಮಸ್ಥರು ಕೇಳಿದಾಗ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಿದ್ದು ತೃಪ್ತಿ ತಂದಿದೆ. ನಮ್ಮೂರಿನಿಂದ ಸಿಕ್ಕಂಥ ಶಿಕ್ಷಣ ಎಂದಿಗೂ ಮರೆಯಲಾಗದು. ತಂದೆ ಮತ್ತು ಮಾವ ಪುಸ್ತಕ ಖರೀದಿಸಿ ತರುತ್ತಿದ್ದರು. ಈ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಜ್ಞಾನವು ಸಿಕ್ಕಿತು. ಈ ಜ್ಞಾನವೇ ವನ ರೂಪಿಸಿಕೊಳ್ಳಲು ಮಾರ್ಗ ತೋರಿಸಿತು ಎಂದು ನೆನಪು ಮಾಡಿಕೊಂಡರು.
ಕಕ್ಕರಗೊಳ್ಳ ಗ್ರಾಮದ ಎಲ್ಲಾ ಮಕ್ಕಳಿಗೂ ಒಳ್ಳೆಯ ಶಿಕ್ಷಣ. ವ್ಯವಸ್ಥೆ ಸಿಗುವಂತಾಗಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಶಾಲೆಗಳಲ್ಲಿ ಮತ್ತಷ್ಟು ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆತರೆ ಪ್ರತಿಯೊಬ್ಬರೂ ಅತ್ಯುನ್ನತ ಹುದ್ದೆಗೆ ಹೋಗಲು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಅವರು ಸಲಹೆ ನೀಡಿದರು.
Read also : ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ : ಶಾಸಕ ಕೆ.ಎಸ್.ಬಸವಂತಪ್ಪ
ಕಾರ್ಯಕ್ರಮದಲ್ಲಿ ಜಿ. ಬಿ. ವಿನಯ್ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹೊಸದುರ್ಗ ಕನಕಗುರುಪೀಠ ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬೆಂಗಳೂರು ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಸಿದ್ದಪ್ಪ, ವಿಂಶ್ರಾಂತ ಪ್ರಾಚಾರ್ಯ ಎನ್. ಲೋಕೇಶ್ ಒಡೆಯರ್, ಗ್ರಾಮದ ಹಿರಿಯ ಮುಖಂಡರಾದ ಬಸವನಗೌಡ್ರು ಸೇರಿದಂತೆ ಗಣ್ಯರು, ಗ್ರಾಮದ ಮುಖಂಡರು ಹಾಜರಿದ್ದರು.