ದಾವಣಗೆರೆ (Davanagere) : ನ್ಯಾಮತಿ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸರುವ ದಾವಣಗೆರೆ ಪೊಲೀಸರು 13 ಕೋಟಿ ರೂ. ಮೌಲ್ಯದ 17.5 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ತಾಲೂಕಿನ ಸುರಹೊನ್ನೆಯಲ್ಲಿ ಸಿಹಿ ತಿಂಡಿ ವ್ಯಾಪಾರ ಮಾಡುತ್ತಿದ್ದ ಮೂಲತಃ ತಮಿಳುನಾಡು ಮಧುರೈನ ವಿಜಯಕುಮಾರ್(30), ಅಜಯ್ಕುಮಾರ್(28) ಇಬ್ಬರು ಸಹೋದರರಾಗಿದ್ದು, ಪರಮಾನಂದ (30) ತಂಗಿಯ ಗಂಡ, ಸುರಹೊನ್ನೆಯ ಅಭಿಷೇಕ(23), ಚಂದ್ರು (23), ಮಂಜುನಾಥ್ (32) ಬಂಧನಕ್ಕೆ ಒಳಗಾದ ಪ್ರಮುಖ ಆರೋಪಿಗಳು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗೀಸ್ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ತನಿಖೆಯಲ್ಲಿ ಸಹಕರಿಸಲು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಅವರನ್ನೊಳಗೊಂಡ ಐದು ತಂಡ ರಚಿಸಲಾಗಿತ್ತು.
ಮೊದಲ ದಿನದಿಂದ ಪ್ರತಿ ತಂಡಕ್ಕೂ ಪ್ರತ್ಯೇಕ ಕೆಲಸ ವಹಿಸಲಾಗಿತ್ತು. ಆರಂಭದಲ್ಲಿ ಎಲ್ಲಾ ರೀತಿಯ ತಾಂತ್ರಿಕ ಮತ್ತು ಭೌತಿಕ ಸಾಕ್ಷಾಧಾರ ಪರಿಶೀಲಿಸಿದರೂ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಲಿಲ್ಲ. ಈ ಹಿಂದೆ ಬ್ಯಾಂಕ್ ದರೋಡೆ, ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್ ವಿವರ ಪಡೆದು ಈ ಪ್ರಕರಣದೊಂದಿಗೆ ತಾಳೆ ಹಾಕಿ ಪೊಲೀಸ್ ಅಧಿಕಾರಿಗಳ ತಂಡ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಹಿಂದೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳ ತಾಳೆಯಿಂದ ಎಸ್ಬಿಐ ಬ್ಯಾಂಕ್ ಪ್ರಕರಣದ ಯುಪಿನ ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ಇರಬಹುದು ಎಂದು ಶಂಕಿಸಿ ತಂಡಗಳು ಯುಪಿಯ ಕಕ್ರಾಳಕ್ಕೆ ಹೋಗಿ 15ಕ್ಕೂ ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ವಿವರ ಪಡೆದಿದ್ದರು.
ನ್ಯಾಮತಿ ಪ್ರಕರಣಕ್ಕಿಂತ ಹಿಂದೆ 2024ರಲ್ಲಿ ನಡೆದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳ್ಳತನ, ದರೋಡೆ ಮತ್ತು ದರೋಡೆಗೆ ಪ್ರಯತ್ನ ಪ್ರಕರಣ ಪರಿಶೀಲಿಸಲಾಯಿತು. ಅಲ್ಲದೇ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಠಾಣೆ ವ್ಯಾಪ್ತಿಯ ಎಸ್ಬಿಐ ಬ್ಯಾಂಕ್ ಕಳ್ಳತನದ ಪ್ರಯತ್ನ ಪ್ರಕರಣ ಪರಿಶೀಲಿಸಿದಾಗ ನ್ಯಾಮತಿಗೆ 30 ಕಿ.ಮೀ. ಹತ್ತಿರವಿರುವುದು ಮತ್ತು ಬ್ಯಾಂಕ್ ಪ್ರಕರಣಕ್ಕೆ ಸಾಮ್ಯತೆ ಇತ್ತು. ಹೀಗಾಗಿ ಮತ್ತೆ ಯುಪಿಯ ಕಕ್ರಾಳ ಗ್ಯಾಂಗ್ ಕಡೆಗೆ ಹೋಯಿತು.
ಹೀಗೆ ಆರು ತಿಂಗಳ ಕಾಲ ಪರಿಶೀಲಿಸಿದಾಗ, ಸ್ಥಳೀಯರಿಂದಲೇ ಈ ಕೃತ್ಯ ನಡೆದಿದೆ ಅಂಶ ಕೊನೆಗೆ ಸಿಕ್ಕಿತು ಎಂದು ಪ್ರಕರಣದ ಇಡೀ ತನಿಖೆಯ ವಿವರವನ್ನು ಐಜಿಪಿ ರವಿಕಾಂತೇಗೌಡ ಬಿಚ್ಚಿಟ್ಟರು.
Read also : Harihara | ವಕ್ಫ್ ತಿದ್ದುಪಡಿ ಮಸೂದೆ-2024 ಹಿಂಪಡೆಯಿರಿ : ಎಸ್ಡಿಪಿಐ ಒತ್ತಾಯ
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ,ಬಿ.ಮಂಜುನಾಥ್, ತನಿಖಾಧಿಕಾರಿಗಳಾದ ಶ್ಯಾಮ್ ವರ್ಗೀಸ್, ಬಿ.ಎಸ್.ಬಸವರಾಜ್ ಸೇರಿದಂತೆ ಐದು ತಂಡ ಅಧಿಕಾರಿಗಳು, ಸಿಬ್ಬಂದಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.