Kannada News | Dinamaana.com | 30-09-2024
ಕಳೆದ ಗುರುವಾರ ಬಿಜೆಪಿಯ ಹಿರಿಯ ನಾಯಕ ಕಟ್ಟಾಸುಬ್ರಮಣ್ಯ ನಾಯ್ಡು ಅವರ ಸದಾಶಿವನಗರ ನಿವಾಸದಲ್ಲಿ ಒಂದುಸಭೆ ನಡೆದಿದೆ.ಈ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಪಕ್ಷದ ಭಿನ್ನಮತೀಯರ ವಿರುದ್ದ ಕಿಡಿ ಕಾರಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ರೇಣುಕಾಚಾರ್ಯ ಅವರು:ಅಲ್ರೀ ಇವತ್ತು ಯಾರೇ ಅಧ್ಯಕ್ಷರಾಗಲಿ,ಅವರ ಜತೆ ನಿಲ್ಲುವುದು ನಮ್ಮ ಕರ್ತವ್ಯ. ಆದರೆ , ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ ಹಲವರು ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಅವರು ತಿರುಗಿ ಬೀಳಲು ಏನೇ ಕಾರಣಗಳಿರಲಿ,ಆದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆ ಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ ಟೀಕೆ ಮಾಡುವುದಲ್ಲ.
ಅಂದ ಹಾಗೆ ನಮಗೂ ಲೋಕಸಭಾ ಚುನಾವಣೆಯ ಟಿಕೆಟ್ ಪಡೆಯುವ ಇಚ್ಚೆಯಿತ್ತು.ಆದರೆ ಸಿಗಲಿಲ್ಲ.ಹಾಗಂತ ನಮಗೆ ಟಿಕೆಟ್ ಸಿಗದೆ ಇರಲು ಯಡಿಯೂರಪ್ಪ ಕಾರಣ,ವಿಜಯೇಂದ್ರ ಕಾರಣ ಅಂತ ಉಲ್ಟಾ ಮಾತನಾಡಲು ಸಾಧ್ಯವೇ?
ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಕರ್ನಾಟಕದಲ್ಲಿ ಪಕ್ಷ ಮೇಲೆದ್ದು ನಿಲ್ಲಲು ಪೂರಕ ವಾತಾವರಣ ಇದೆ.ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಲವು ಸಮಸ್ಯೆಗಳಿಂದ ಬಳಲುತ್ತಿರುವಾಗ ಪರಿಸ್ಥಿತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ನಾವು ತಯಾರಾಗಿರಬೇಕೇ ಹೊರತು ನಾಯಕತ್ವದ ವಿರುದ್ಧ ಮಾತನಾಡುತ್ತಾ ಕೂರುವುದಲ್ಲ.
ಇವತ್ತು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಆರೋಪ ಹೊರಿಸುತ್ತಿರುವ ನಾಯಕರ ಪೈಕಿ ಎಷ್ಚು ಜನ ನಟ್ಟಗಿದ್ದಾರೆ.ಒಬ್ಬ ನಾಯಕರು ತಮ್ಮ ಹಿಡಿತದಲ್ಲಿದ್ದ ಶುಗರ್ ಫ್ಯಾಕ್ಟರಿಯನ್ನು ಹರಾಜು ಹಾಕಿ ನಕಲಿ ದಾಖಲೆಗಳ ಮೂಲಕ ಆಟ ಆಡುತ್ತಿದ್ದಾರೆ.
ಇದೇ ರೀತಿ ಹೇಳಲು ಹೋದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಕೂಗಾಡುತ್ತಿರುವ ಬಹುತೇಕ ನಾಯಕರ ಕತೆ ಇದು.ಹೋಗಲಿ,ಇವತ್ತು ವಿಜಯೇಂದ್ರ ಕೆಳಗಿಳಿಯಲು ಸಿ.ಟಿ.ರವಿ ಅಧ್ಯಕ್ಷರಾಗಲಿ ಎನ್ನುತ್ತಿರುವವರು,ಅಶೋಕ್ ಕೆಳಗಿಳಿದು ಯತ್ನಾಳ್ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಲಿ ಎನ್ನುತ್ತಿರುವವರು ಹಿಂದೆಲ್ಲ ಏನು ಮಾಡುತ್ತಿದ್ದರು?
ಯಡಿಯೂರಪ್ಪ ಅವರು 2013 ರಲ್ಲಿ ಪಕ್ಷ ತೊರೆದು ಹೋದಾಗ ಇಂತವರೇ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿತ್ತು.ಆದರೆ ಇವರೆಲ್ಲ ಇದ್ದೂ ಆಗ ಬಿಜೆಪಿಯೇಕೆ ಮರಳಿ ಅಧಿಕಾರ ಹಿಡಿಯಲಿಲ್ಲ?
ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಬೇರೊಬ್ಬರಿಗೆ ನಾಯಕತ್ವ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟ ಅಂತ ಹೈಕಮಾಂಡ್ ಗೂ ಗೊತ್ತಿದ್ದ ಕಾರಣಕ್ಕೆ ತಾನೇ ಪುನ: ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆ ತಂದಿದ್ದು?ಒಂದು ವೇಳೆ ಅವತ್ತು ಯಡಿಯೂರಪ್ಪ ಮರಳಿ ಪಕ್ಷಕ್ಕೆ ಬರದೇ ಹೋಗಿದ್ದರೆ 2019 ರಲ್ಲಿ ನಾವು ಮರಳಿ ಅಧಿಕಾರ ಹಿಡಿಯುತ್ತಿರಲಿಲ್ಲ.
ಇವತ್ತು ಯಡಿಯೂರಪ್ಪ ಅವರ ಬಗ್ಗೆ ಯಾರಿಗೇನೇ ಭಿನ್ನಾಭಿಪ್ರಾಯ ಇರಬಹುದು.ಆದರೆ ನಾವು ನೆನಪಿಡಬೇಕಾದ ಸಂಗತಿ ಎಂದರೆ ಅವರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದು ಮತ್ತು ಸ್ಥಾನಮಾನಗಳನ್ನು ಪಡೆದಿದ್ದು.ಈಗಲೂ ಅಷ್ಟೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಹೊರತುಪಡಿಸಿ ಬೇರೊಬ್ಬ ನಾಯಕರ ಕೈಗೆ ಪಕ್ಷ ಹೋದರೆ ವಿರೋಧ ಪಕ್ಷದ ಸ್ಥಾನ ಖಾಯಂ.
ಇವೆಲ್ಲ ಹೋಗಲಿ ಎಂದರೆ ಇತ್ತೀಚೆಗೆ ಪಕ್ಷದಿಂದ ಹೊರಗೆ ಹೋಗಿರುವ ನಾಯಕರ ಜತೆ ಸೇರಿ ಆರ್ಸಿಬಿ ಕಟ್ಟುತ್ತೇವೆ,ಎಸಿಬಿ ಕಟ್ಟುತ್ತೇವೆ ಅಂತ ಇವರು ಹೊರಟಿದ್ದಾರೆ. ಹೀಗಾಗಿ ನಾವು ಸುಮ್ಮನಿದ್ದಷ್ಟು ದಿನ ಇವರ ಆಟ ಮುಂದುವರಿಯುತ್ತದೆ.ಹೀಗಾಗಿ ಇನ್ನು ನಾವು ಸುಮ್ಮನಿರುವುದುಬೇಡ,ಮುಂದಿನ ವಾರ ದೊಡ್ಡ ಸಭೆ ನಡೆಸಿ ಭಿನ್ನಮತೀಯರನ್ನು ಪಕ್ಷದಿಂದ ಉಚ್ಚಾಟಿಸಲು ಬಿಜೆಪಿ ವರಿಷ್ಟರನ್ನು ಆಗಹಿಸೋಣ ಎಂಬ ತೀರ್ಮಾನಕ್ಕೆ ಬರುವುದರೊಂದಿಗೆ ಈ ಸಭೆ ಮುಗಿದಿದೆ.
ಅರ್ಥಾತ್,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದಿರುವ ಯತ್ನಾಳ್,ಸಿ.ಟಿ.ರವಿ,ರಮೇಶ್ ಜಾರಕಿಹೊಳಿ,ಅರವಿಂದ ಲಿಂಬಾವಳಿ,ಜಿ.ಎಂ.ಸಿದ್ದೇಶ್ವರ್,ಕುಮಾರ್ ಬಂಗಾರಪ್ಪ ಸೇರಿದಂತೆ ಪಕ್ಷದ ಭಿನ್ನಮತೀಯರ ಪಡೆ ಏನಿದೆ?ಅದರ ವಿರುದ್ಧ ಆಧ್ಯಕ್ಷ ನಿಷ್ಟರ ಪಡೆ ವಿದ್ಯುಕ್ತ ಹೋರಾಟಕ್ಕಿಳಿಯುವುದು ನಿಶ್ಚಿತವಾಗಿದೆ.
ಯಡಿಯೂರಪ್ಪ ಮೌನಕ್ಕೆ ಏನು ಕಾರಣ?(Political analysis)
ಅಂದ ಹಾಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ಭಿನ್ನಮತೀಯರ ವಿರುದ್ಧ ಪಕ್ಷ ನಿಷ್ಟರ ಹೆಸರಿನಲ್ಲಿ ಪ್ರತಿ ಹೋರಾಟಕ್ಕೆ ಸಿದ್ದತೆ ನಡೆದಿರುವುದೇನೋ ಸರಿ. ಆದರೆ ತಮ್ಮ ವಿರುದ್ದ ತಿರುಗಿ ಬಿದ್ದವರ ವಿರುದ್ಧ ಯಡಿಯೂರಪ್ಪ ಅವರೇಕೆ ಮೌನವಾಗಿದ್ದಾರೆ ಎಂಬುದೇ ಹಲವರಿಗೆ ಅರ್ಥವಾಗುತ್ತಿಲ್ಲ.
ಮೂಲಗಳ ಪ್ರಕಾರ,ಇಂತಹ ಭಿನ್ನಮತೀಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರಿಷ್ಟರ ಮೇಲೆ ಒತ್ತಡ ಹೇರಿ ಅಂತ ರೇಣುಕಾಚಾರ್ಯ ಸೇರಿದಂತೆ ಹಲ ನಾಯಕರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದಾರೆ.
ಇವತ್ತು ಯಾರು ವಿಜಯೇಂದ್ರ ಅವರ ವಿರುದ್ಧ,ನಿಮ್ಮ ವಿರುದ್ದ ಧ್ವನಿ ಎತ್ತುತ್ತಿದ್ದಾರೋ? ಅದರಲ್ಲಿ ಬಹುತೇಕ ಮಂದಿ ನಿಮ್ಮಿಂದಲೇ ರಾಜಕೀಯವಾಗಿ ಬೆಳೆದವರು.ಅಂತವರು ಯಾವುದೋ ಅಸಮಾಧಾನ ಇಟ್ಟುಕೊಂಡು ನಿಮ್ಮ ವಿರುದ್ಧ ಕೂಗಾಡುತ್ತಿದ್ದರೆ ಅದನ್ನು ನೋಡಿಕೊಂಡು ಏಕೆ ಸುಮ್ಮನಿರುತ್ತೀರಿ?ನಾಳೆ ಇದೇ ಅಂಶ ಪಕ್ಷದ ಬೆಳವಣಿಗೆಗೆ ಮಾರಕವಾಗುವುದಿಲ್ಲವೇ?ಅಂತ ಈ ನಾಯಕರು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಆದರೆ ಯಾರೆಷ್ಟೇ ಹೇಳಿದರೂ ಯಡಿಯೂರಪ್ಪ ಮಾತ್ರ ಮೌನ ಮುನಿಯಾಗಿ ಹೋಗಿದ್ದಾರೆ.ಅಷ್ಟೇ ಏಕೆ?ಭಿನ್ನರ ವಿರುದ್ದ ನಾವೇ ತಿರುಗಿ ಬೀಳುತ್ತೇವೆ ಎಂದರೂ ನಿರಾಸಕ್ತಿ ತೋರಿಸುತ್ತಿದ್ದಾರೆ.
ಇದ್ದುದರಲ್ಲಿ ವಿಜಯೇಂದ್ರ ಮಾತ್ರ ಭಿನ್ನರ ವಿರುದ್ದ ವರಿಷ್ಟರಿಗೆ ದೂರು ಕೊಡುತ್ತಾ ಬಂದಿದ್ದಾರಾದರೂ ಯಡಿಯೂರಪ್ಪ ಮಾತ್ರ ಮೌನಿಯಾಗಿ ಉಳಿದಿದ್ದಾರೆ.ಅವರ ಈ ಮೌನಕ್ಕೇನು ಕಾರಣ?ಎಂಬುದೇ ಅವರ ಆಪ್ತರಿಗೆ ಅರ್ಥವಾಗುತ್ತಿಲ್ಲ.ಅಂದ ಹಾಗೆ ಅವರ ಆಪ್ತರ ಚಿಂತೆ ಎಂದರೆ ಯಡಿಯೂರಪ್ಪ ಎಷ್ಟು ದಿನ ಮೌನವಾಗಿರುತ್ತಾರೋ?ಅಲ್ಲಿಯ ತನಕ ಭಿನ್ನರ ಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದು.ಹೀಗಾಗಿ ಅವರೇ ಒಂದು ನಿರ್ಧಾರಕ್ಕೆ ಬಂದು ಭಿನ್ನರ ವಿರುದ್ಧ ಕಾಳಗಕ್ಕೆ ಸಜ್ಜಾಗಿದ್ದಾರೆ.
ಕೈ ವರಿಷ್ಟರಿಗಿರುವ ಆತಂಕ ಏನು?(Political analysis)
ಇನ್ನು ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಲೋಕಾಯುಕ್ತ ಮೊಕದ್ದಮೆ ದಾಖಲಿಸಿತಲ್ಲ?ಇದಾದ ನಂತರ ಕಾಂಗ್ರೆಸ್ ವರಿಷ್ಟರು ಮತ್ತಷ್ಟು ಗಟ್ಟಿಯಾಗಿ ಸಿದ್ದು ಬೆನ್ನಿಗೆ ನಿಲ್ಲಲು ನಿರ್ಧರಿಸಿದ್ದಾರೆ. ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರು ಕೆಳಗಿಳಿದರೆ ರಾಜ್ಯ ಸರ್ಕಾರ ತುಂಬ ಕಾಲ ಉಳಿಯುವುದಿಲ್ಲ ಎಂಬ ಎಚ್ಚರಿಕೆಯೇ ಇದಕ್ಕೆ ಕಾರಣ.
ಅಂದ ಹಾಗೆ ಸಿದ್ದರಾಮಯ್ಯ ಕೆಳಗಿಳಿದರೆ ತಾವು ಸಿಎಂ ಆಗಬೇಕು ಅಂತ ಹಲ ನಾಯಕರು ಲೆಕ್ಕ ಹಾಕುತ್ತಿರುವುದೇನೋ ನಿಜ.ಆದರೆ ಅಂತಹ ಸನ್ನಿವೇಶ ಸೃಷ್ಟಿಯಾದರೆ ನಾಯಕತ್ವಕ್ಕಾಗಿ ಬಡಿದಾಟ ಆರಂಭವಾಗುತ್ತದೆ.ಈ ಬಡಿದಾಟದ ನಡುವೆ ಯಾರಿಗೇ ನಾಯಕತ್ವ ಸಿಕ್ಕರೂ ಅದನ್ನೊಪ್ಪದ ಉಳಿದ ನಾಯಕರು ಬಂಡಾಯ ಏಳುತ್ತಾರೆ.ಈ ಪೈಕಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರು ನಲವತ್ತು ಶಾಸಕರ ಸೂಸೈಡ್ ಸ್ಕ್ವ್ಯಾಡ್ ನೊಂದಿಗೆ ಸಜ್ಜಾಗಿ ನಿಂತಿದ್ದಾರೆ.
ಅವರ ಪ್ರಕಾರ,ಸಿದ್ಧರಾಮಯ್ಯ ಅವರು ಕೆಳಗಿಳಿಯುವುದೇ ಆದರೆ ನಾನು ಆ ಜಾಗಕ್ಕೆ ಬರಬೇಕು.ಅದನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೆ ಪಕ್ಷ ತೊರೆಯುವುದು ಗ್ಯಾರಂಟಿ. ಹೀಗೆ ಸ್ಪಷ್ಟ ತೀರ್ಮಾನಕ್ಕೆ ಬಂದಿರುವ ಈ ನಾಯಕರು ಅದಾಗಲೇ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎಂಬುದು ಕೈ ಪಾಳಯದ ವರಿಷ್ಟರಿಗೆ ಗೊತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಕಡೆ ಮುಖ ಮಾಡಿರುವ ಈ ನಾಯಕರ ಬೆನ್ನ ಹಿಂದಿರುವ ಪಡೆ ಪರ್ಯಾಯ ಸರ್ಕಾರ ರಚನೆಯ ಬಗ್ಗೆ ಯೋಚಿಸುತ್ತಿಲ್ಲ.ಬದಲಿಗೆ ಸಿಕ್ಕರೆ ಅಧಿಕಾರ,ಇಲ್ಲದಿದ್ದರೆ ಬೀಳಲಿ ಸರ್ಕಾರ ಎಂಬ ಲೆಕ್ಕಾಚಾರದಲ್ಲಿದೆ.
Read also : Siddaramaiah | ಸಿದ್ಧು ಇಳಿಯಲ್ಲ,ಇಳಿದ್ರೆ ಸರ್ಕಾರ ಉಳಿಯಲ್ಲ
ಇದು ಗೊತ್ತಿರುವುದರಿಂದಲೇ ಕಾಂಗ್ರೆಸ್ ವರಿಷ್ಟರು ಸಿದ್ಧು ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ.ಅಷ್ಟೇ ಅಲ್ಲ,ಸರ್ಕಾರದ ವಿರುದ್ದ ತಿರುಗಿ ಬಿದ್ದಿರುವ ಬಿಜೆಪಿ ಮಿತ್ರಕೂಟದ ವಿರುದ್ಧ ಟಿಟ್ ಫಾರ್ ಟ್ಯಾಟ್ ಮಾರ್ಗ ಅನುಸರಿಸಲು ರಾಜ್ಯ ನಾಯಕರಿಗೆ ಸಿಗ್ನಲ್ಲು ನೀಡಿದ್ದಾರೆ. ಇದೇ ಕಾರಣಕ್ಕಾಗಿ ಬಿಜೆಪಿ ಮಿತ್ರಕೂಟದ ನಾಯಕರ ಮೇಲೆ ಒಂದಾದ ಮೇಲೆ ಒಂದರಂತೆ ಕೇಸು ಜಡಿಯಲಾಗುತ್ತಿದೆ. ಸೂಕ್ಷ್ಮವಾಗಿ ನೋಡಿದರೆ ಇವತ್ತು ಕರ್ನಾಟಕದಲ್ಲಿ ನಡೆಯುತ್ತಿರುವುದು ಪಶ್ಚಿಮಬಂಗಾಳ ಮತ್ತು ಕೇರಳ ಮಾದರಿಯ ಯುದ್ಧ.
ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿಯುತ್ತಿದೆ.ಕೇರಳದಲ್ಲೂ ಬಿಜೆಪಿ ವಿರುದ್ದ ಎಡರಂಗ ಮತ್ತು ಕಾಂಗ್ರೆಸ್ ಮುಗಿಬೀಳುತ್ತಿವೆ. ಅರ್ಥಾತ್,ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಯಾವುದೇ ಬಗೆಯ ಹೋರಾಟಕ್ಕೆ ಸಜ್ಜಾಗುತ್ತಿದೆ.ಚುನಾವಣಾ ಬಾಂಡ್ ವಿಷಯದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್,ನಡ್ಡಾ ವಿರುದ್ದ ಮುಗಿಬಿದ್ದಿರುವ ರೀತಿ ಇದಕ್ಕೆ ಸಾಕ್ಷಿ.
ಸಿದ್ದು ಗೂಢಚಾರರ ರಹಸ್ಯ ಸಂದೇಶ (Political analysis)
ಇನ್ನು ಮೂಡಾ ಪ್ರಕರಣವನ್ನು ತಾರಕಕ್ಕೇರಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರ ಆಪ್ತರು ರಹಸ್ಯ ಸಂದೇಶ ತಂದಿದ್ದಾರಂತೆ. ಅವರ ಪ್ರಕಾರ,ಮೂಡಾ ಪ್ರಕರಣ ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರದಲ್ಲಿರುವ ರಾಜ್ಯದ ಬಿಜೆಪಿ ನಾಯಕರೊಬ್ಬರು ಕಾರಣ.
ಮೇಲ್ನೋಟಕ್ಕೆ ಜೆಡಿಎಸ್ ನಕುಮಾರಸ್ವಾಮಿ ಕಣ್ಣಿಗೆ ಕಾಣುತ್ತಿದ್ದರೂ ಆಳದಲ್ಲಿ ಅವರಿಗಿಂತ ಪವರ್ ಫುಲ್ಲಾಗಿ ಕೆಲಸ ಮಾಡುತ್ತಿರುವುದು ಈ ನಾಯಕ. ಇವತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸವಾಲು ಅಂತಿದ್ದರೆ ಅದು ಸಿದ್ಧರಾಮಯ್ಯ.ಅವರು ಕೆಳಗಿಳಿಯುವವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಲುಗಾಡುವುದಿಲ್ಲ.
ಹೀಗಾಗಿ ಶತಾಯಗತಾಯ ಹೋರಾಡಿ ಅವರನ್ನು ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಮಿತ್ರಕೂಟ ಕರ್ನಾಟಕದ ಅಧಿಕಾರ ಹಿಡಿಯುವುದು ನಿಶ್ಚಿತ.ಹೀಗಾಗಿ ಮೂಡಾ ಪ್ರಕರಣ ಸಿಬಿಐ ತನಿಖೆಗೆ ಹೋಗುವಂತೆ ಮಾಡೋಣ ಅಂತ ಬಿಜೆಪಿಯ ಈ ಕೇಂದ್ರ ಸಚಿವರು ಆಪ್ತರಿಗೆ ಹೇಳಿದ್ದಾರೆಂಬುದು ಸಿದ್ದು ಗೂಢಚಾರರ ರಹಸ್ಯ ಸಂದೇಶ.
ಪರಿಣಾಮ?ಕುದಿಯುತ್ತಿರುವ ಸಿದ್ಧರಾಮಯ್ಯ ಸರ್ಕಾರ ಈಗ ಬಿಜೆಪಿಯ ಆ ನಾಯಕರನ್ನು ಟಾರ್ಗೆಟ್ ಮಾಡಲು ನಿರ್ಧರಿಸಿದೆ.ಈ ದಿಸೆಯಲ್ಲಿ ಅದರ ಕಣ್ಣಿಗೆ ಕಾಣುತ್ತಿರುವುದು ಭೂಹಗರಣ.ಇದನ್ನು ಬಳಸಿ ಆ ನಾಯಕರನ್ನು ಚಕ್ರಸುಳಿಯಲ್ಲಿ ಸಿಲುಕಿಸುವುದು ಸಿದ್ಧು ಟೀಮಿನ ಲೆಕ್ಕಾಚಾರ. ಅದರ ಪ್ರಕಾರ,ಮುಂದಿನ ಕೆಲವೇ ದಿನಗಳಲ್ಲಿ ಕೇಂದ್ರ ಸಂಪುಟದಲ್ಲಿರುವ ಆ ಬಿಜೆಪಿ ನಾಯಕರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಲಿದೆ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ವಿವಿಧ ಆರೋಪಗಳಡಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ನಾಡಿನ ಹಿರಿಯ ಸ್ವಾಮೀಜಿಯೊಬ್ಬರಿಂದ ಸಂದೇಶ ರವಾನೆಯಾಗಿದೆಯಂತೆ. ಇವತ್ತು ನೀವು ಅನುಭವಿಸುತ್ತಿರುವ ಕಷ್ಟಗಳಿಂದ ಪಾರಾಗಲು ಒಂದು ಮಾರ್ಗವಿದೆ.ಅದೆಂದರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು.ಇವತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವುದೇ ನಿಮ್ಮ ಸಮಸ್ಯೆಗಳ ಮೂಲ.
ಹೀಗಾಗಿ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನೀವು ಜೈಲಿನಿಂದ ಹೊರಬರುತ್ತೀರಿ.ಅದೇ ರೀತಿ ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳೆಲ್ಲ ಶಕ್ತಿ ಕಳೆದುಕೊಂಡು ಮಂಕಾಗುತ್ತವೆ ಎಂಬುದು ಈ ಸ್ವಾಮೀಜಿಗಳ ಸಂದೇಶ. ಆದರೆ ತಮಗೆ ಬಂದ ಈ ಸಂದೇಶವನ್ನು ಮುನಿರತ್ನ ಅವರು ಒಪ್ಪಿಲ್ಲ ಎಂಬುದು ಲೇಟೆಸ್ಟು ಸುದ್ದಿ.
ಆರ್.ಟಿ.ವಿಠ್ಠಲಮೂರ್ತಿ