Kannada News | Dinamaana.com | 05-08-2024
ಕರ್ನಾಟಕದ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ.ಇಂತಹ ಬಿರುಗಾಳಿಗೆ ಮೂಲವಾದವರು ರಾಜ್ಯಪಾಲ ಥ್ಯಾವರಚಂದ್ ಗೆಹ್ಲೋಟ್ (Thavarachand Gehlot). ಮೂಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)
ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ ಅವರು,ನಿಮ್ಮ ವಿರುದ್ದ ಏಕೆ ವಿಚಾರಣೆಗೆ ಅನುಮತಿ ನೀಡಬಾರದು ಎಂಬುದಕ್ಕೆ ಒಂದು ವಾರದಲ್ಲಿ ಕಾರಣ ಕೊಡಿ ಎಂದಿದ್ದರು.
ಟಿ.ಜೆ.ಅಬ್ರಹಾಂ ಅವರು ನೀಡಿದ ದೂರಿಗೆ ಪ್ರತಿಯಾಗಿ ರಾಜ್ಯಪಾಲರು ಕಾರಣ ಕೇಳುವುದು ಸಹಜ ಸಂಪ್ರದಾಯ. ಆದರೆ ಅವರು ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟೀಸ್ ಜಾರಿ ಮಾಡಿದ್ದಲ್ಲದೆ, ನಿಮ್ಮ ವಿರುದ್ದದ ದೂರು ಗಂಭೀರವೂ, ಮೇಲ್ನೋಟಕ್ಕೆ ಸಾಬೀತಾಗುವಂತಿದೆ ಎಂಬರ್ಥದಲ್ಲಿ ಆಡಿದ ಮಾತು ಸಹಜವಾಗಿಯೇ ಕಾಂಗ್ರೆಸ್ ಪಾಳಯದ ಅನುಮಾನಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ದ ವಿಚಾರಣೆಗೆ ಅನುಮತಿ ನೀಡಲು ಅವರು ಸಜ್ಜಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ.
ಹಾಗಂತಲೇ ಸಿದ್ದರಾಮಯ್ಯ ಅವರ ಅನುಪಸ್ಥಿಯಲ್ಲಿ ಆಗಸ್ಟ್ 1 ರಂದು ನಡೆದ ಸಂಪುಟ ಸಭೆ,ಈ ಷೋಕಾಸ್ ನೋಟೀಸನ್ನು ಹಿಂಪಡೆಯಲು ರಾಜ್ಯಪಾಲ (Governor) ರಿಗೆ ಸಲಹೆ ನೀಡಿದೆ.
ಆದರೆ , ಸಂಪುಟದ ಸಲಹೆಯನ್ನು ರಾಜ್ಯಪಾಲರು ಒಪ್ಪುತ್ತಾರಾ? ಗೊತ್ತಿಲ್ಲ. ಒಂದು ವೇಳೆ ಒಪ್ಪಿದರೆ ಪ್ರಕರಣ ಮುಕ್ತಾಯವಾಯಿತು ಅಂತಲೇ ಅರ್ಥ. ಆದರೆ, ಭಾನುವಾರ ಸಂಜೆಯ ವೇಳೆಗೆ ಬಂದ ವರ್ತಮಾನ, ಪ್ರಕರಣ ಇಲ್ಲಿಗೆ ಮುಗಿಯುತ್ತದೆ ಎಂಬ ನಂಬಿಕೆಯನ್ನು ಹುಟ್ಟಿಸುತ್ತಿಲ್ಲ. ಕಾರಣ?ಕಾಂಗ್ರೆಸ್ ಪಾಳಯಕ್ಕೆ ತಲುಪುತ್ತಿರುವ ಮಾಹಿತಿಗಳ ಪ್ರಕಾರ, ರಾಜ್ಯಪಾಲ ಥ್ಯಾವರಚಂದ್ ಗೆಹ್ಲೋಟ್ ಅವರು ಸಿಬಿಐನ ಪ್ರಭಾವಿ ನ್ಯಾಯವಾದಿಯೊಬ್ಬರನ್ನು ಸಂಪರ್ಕಿಸಿದ್ದರಂತೆ.
ಹೀಗೆ ಸಂಪರ್ಕಿಸಿದವರು, ಮುಖ್ಯಮಂತ್ರಿಗಳ ವಿರುದ್ದ ವಿಚಾರಣೆಗೆ ಅನುಮತಿ ನೀಡುವ ಕಾಲಕ್ಕೆ, ಇದನ್ನು ಸಿಬಿಐ ತನಿಖೆಗೆ ಒಳಪಡಿಸಲು ಆದೇಶ ನೀಡುವ ಪವರ್ ತಮಗಿದೆಯೇ?ಎಂದು ಕೇಳಿದ್ದಾರೆ.
ಆದರೆ , ರಾಜ್ಯಪಾಲರ ಈ ಮಾತಿಗೆ ಉತ್ತರಿಸಿದ ಆ ಪ್ರಭಾವಿ ನ್ಯಾಯವಾದಿ: ಇಲ್ಲ,ಹಾಗೆ ಆದೇಶ ನೀಡಲು ಸಾಧ್ಯವಿಲ್ಲ.ಆದರೆ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಕಾಲಕ್ಕೆ ಯಾರಾದರೂ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಇದು ಸಾಧ್ಯವಾಗಬಹುದು.
ಕಾರಣ? ಮುಖ್ಯಮಂತ್ರಿಗಳ ವಿರುದ್ದ ವಿಚಾರಣೆಗೆ ಅನುಮತಿ ನೀಡಿದರೆ, ತನಿಖೆ ಮಾಡಿ ವರದಿ ಸಲ್ಲಿಸಬೇಕಾದವರು ಪೋಲೀಸರು. ಆದರೆ, ಅವರು ಮುಖ್ಯಮಂತ್ರಿಗಳ ಅಧೀನದಲ್ಲಿ ಇರುವುದರಿಂದ ಪ್ರಾಮಾಣಿಕವಾಗಿ ತನಿಖೆ ಮಾಡುವುದು ಕಷ್ಟ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ನ್ಯಾಯಾಲಯವನ್ನು ಕೋರಬಹುದು. ಒಂದು ವೇಳೆ ನ್ಯಾಯಾಲಯ ಅದನ್ನು ಪುರಸ್ಕರಿಸೊದರೆ ಸಿಬಿಐ ರಂಗ ಪ್ರವೇಶಿಸಬಹುದು ಎಂದರಂತೆ.
ಯಾವಾಗ ಇಂತಹ ವರ್ತಮಾನಗಳು ಕಿವಿಗೆ ಬೀಳತೊಡಗಿದವೋ? ಇದಾದ ನಂತರ ಕಾಂಗ್ರೆಸ್ ಪಾಳಯಕ್ಕೆ ಒಂದು ಸಂಗತಿ ಖಚಿತವಾಗಿದೆ.ಅರ್ಥಾತ್,ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿ.ಜೆ.ಅಬ್ರಹಾಂ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ವಿರುದ್ಧದ ವಿಚಾರಣೆಗೆ ಅನುಮತಿ ನೀಡಲಿದ್ದಾರೆ ಎಂಬುದು ಕೈ ಪಾಳಯಕ್ಕೆ ಖಚಿತವಾಗಿದೆ.ಹೀಗಾಗಿ ಅದು ಕಾನೂನು ಸಮರಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡಿಕೊಳ್ಳುತ್ತಿದೆ.
ಅಂದ ಹಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ದ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೂ,ನ್ಯಾಯ ತಮ್ಮ ಪರವಾಗಿದೆ ಎಂಬುದು ಕೈ ಪಾಳಯದ ವಿಶ್ವಾಸ.
ಯಾಕೆಂದರೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿದ ಷೋಕಾಸ್ ನೋಟೀಸಿನಲ್ಲಿ,ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಬರುತ್ತದೆ ಅಂತ ಹೇಳಲಾಗಿದೆ.ಆದರೆ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದೆಲ್ಲಿ? ಈ ಹಿಂದೆ ಯಡಿಯೂರಪ್ಪ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಪ್ರಸ್ತಾಪ ಬಂದಾಗ ಕಾರಣವಾದರೂ ಇತ್ತು.
ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ,ಮತ್ತೊಂದು ಕಡೆ ಚೆಕ್ ರೂಪದಲ್ಲಿ ಹಣ ಪಡೆದ ಆರೋಪವಿತ್ತು.ಆದರೆ ಇಲ್ಲಿ ಸಿದ್ದರಾಮಯ್ಯ ಯಾರಿಂದ ಹಣ ಪಡೆದಿದ್ದಾರೆ?ಅಥವಾ ಯಾರಿಗೆ ಹಣ ಕೊಟ್ಟಿದ್ದಾರೆ? ಹೆಚ್ಚು ಎಂದರೆ ಅವರ ವಿರುದ್ದ ಸ್ವಜನಪಕ್ಷಪಾತದ ಆರೋಪ ಹೊರಿಸಬಹುದು.ಆದರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಭೂಮಿಗೆ ಪ್ರತಿಯಾಗಿ ನಿವೇಶನ ಪಡೆದಿರುವುದು ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ.ಹೀಗಾಗಿ ಸ್ವಜನಪಕ್ಷಪಾತದ ಆರೋಪವೂ ಕ್ಷೀಣವಾಗುತ್ತದೆ.
ಹೀಗಾಗಿ ಟಿ.ಜೆ.ಅಬ್ರಹಾಂ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ಹೈಕೋರ್ಟ್ ಅದನ್ನು ತಿರಸ್ಕರಿಸುತ್ತದೆ.
ಇದೇ ರೀತಿ ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿರುವ ಚಂದ್ರಚೂಡ್ ಅವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆಗಳನ್ನು ಇಷ್ಟಪಡದವರು.ಹೀಗಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರೆ ರಾಜ್ಯಪಾಲರ ಕ್ರಮವನ್ನು ಅವರು ತಿರಸ್ಕರಿಸುವುದು ಸ್ಪಷ್ಟ.ಆದ್ದರಿಂದ ರಾಜ್ಯಪಾಲರು ಮೇಲಿನ ಪ್ರಭಾವಕ್ಕೊಳಗಾಗಿ ತನಿಖೆಗೆ ಅನುಮತಿ ನೀಡಿದರೂ ಅಂತಿಮವಾಗಿ ನ್ಯಾಯ ಸಿದ್ದರಾಮಯ್ಯ ಅವರ ಪರವಾಗಿರಲಿದೆ ಎಂಬುದು ಅವರ ಆಪ್ತರ ಮಾತು.
ದಲಿತ ಮುಖ್ಯಮಂತ್ರಿ ಬರುತ್ತಾರಾ? (Dalit Chief Minister)
ಇಷ್ಟಾದರೂ ಕಾಂಗ್ರೆಸ್ ಪಾಳಯದ ಮತ್ತೊಂದು ತುದಿಯಲ್ಲಿ ಬೇರೆ ಅಭಿಪ್ರಾಯ ಕೇಳುತ್ತಿದೆ.ಅದರ ಪ್ರಕಾರ,ಸಿದ್ದರಾಮಯ್ಯ ಎಪಿಸೋಡು ವಿಕೋಪಕ್ಕೆ ಹೋದರೆ ಪಕ್ಷದ ಹೈಕಮಾಂಡ್ ಅವರ ರಾಜೀನಾಮೆಯನ್ನು ಬಯಸಬಹುದು.
ಹಾಗೇನಾದರೂ ಆದರೆ ಪರ್ಯಾಯ ನಾಯಕನ ಸ್ಥಾನಕ್ಕೆ ರೇಸು ಆರಂಭವಾಗುತ್ತದೆ.ಇಂತಹ ರೇಸಿನಲ್ಲಿ ಸಹಜವಾಗಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿರುತ್ತಾರೆ.
ಆದರೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರುವ ವಿಷಯದಲ್ಲಿ ಏನಾದರೂ ತೊಡಕುಗಳಿವೆಯೇ ಅಂತ ವರಿಷ್ಟರು ಗಮನಿಸುತ್ತಾರೆ.ಇವತ್ತು ಸಿದ್ದರಾಮಯ್ಯ ಅವರನ್ನು ಇಕ್ಕಳಕ್ಕೆ ಸಿಲುಕಿಸಲು ಹೊರಟವರು ನಾಳೆ ಡಿ.ಕೆ.ಶಿವಕುಮಾರ್ ಅವರನ್ನು ಬಿಡುತ್ತಾರಾ?ಅಂತ ಅವರು ಯೋಚಿಸುವುದು ಸಹಜ.ಇಲ್ಲ,ಯಾವ ತೊಂದರೆಯೂ ಇಲ್ಲ ಎಂಬುದು ಖಚಿತವಾದರೆ ಬೇರೆ ಮಾತು.
ಒಂದು ವೇಳೆ ಅಡಚಣೆ ನಿಶ್ಚಿತ ಅನ್ನಿಸಿದರೆ ಸೇಫ್ಟಿ ದೃಷ್ಟಿಯಿಂದ ದಲಿತ ನಾಯಕರೊಬ್ಬರನ್ನು ಅದು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬಹುದು. ಇಂತಹ ಸನ್ನಿವೇಶದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಹೆಸರು ಮುಂದೆ ಬರಬಹುದು.
ಅಂದ ಹಾಗೆ ಪಕ್ಷ ಅಧಿಕಾರಕ್ಕೆ ಬಂದ ಕಾಲದಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಷಯವಾಗಿ ಮುಸುಕಿನ ಗುದ್ದಾಟ ಪ್ರಾರಂಭವಾಗಿತ್ತಲ್ಲ? ಈ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಟರಲ್ಲೊಬ್ಬರಾದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಪರಮೇಶ್ವರ್ ಮಾತನಾಡಿದ್ದಾರೆ.’ಏನ್ಸಾರ್,ಮುಖ್ಯಮಂತ್ರಿ ಪಟ್ಟವನ್ನು ನೀವು ಇಬ್ಬರಿಗೆ ಹಂಚಿದ್ದೀರಾ?’ ಅಂತ ಪರಮೇಶ್ವರ್ ಕೇಳಿದಾಗ ಅಪ್ರತಿಭರಾದ ಕೆ.ಸಿ.ವೇಣುಗೋಪಾಲ್,’ಓ ಅದೆಲ್ಲ ಈಗೇಕೆ ಪರಮೇಶ್ವರ್ ಜೀ.ಅದೆಲ್ಲ ಮುಂದಿನ ಮಾತು’ ಎಂದಿದ್ದಾರೆ.
ಆದರೆ ಪಟ್ಟು ಬಿಡದ ಪರಮೇಶ್ವರ್:’ಅಂತದೇನಾದರೂ ಇದ್ದರೆ ಈಗಲೇ ಹೇಳಿ ಬಿಡಿ ಸಾರ್.ಯಾಕೆಂದರೆ ನಾನು ಕೂಡಾ ಪಕ್ಷಕ್ಕಾಗಿ ದುಡಿದವನು.ಒಂದು ಸಲ ನನ್ನ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬಂದಿತ್ತು.ಹೀಗೆ ದುಡಿದು ದುಡಿದು ಒಂದು ಹಂತಕ್ಕೆ ಬಂದಿದ್ದೇನೆ.
ಒಂದು ವೇಳೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಯುವುದೇ ಆದರೆ,ಆ ಜಾಗಕ್ಕೆ ನಾನು ಒಬ್ಬ ಸ್ಪರ್ಧಿ.ಬೇಕಿದ್ದರೆ ಶಾಸಕಾಂಗ ಪಕ್ಷದಲ್ಲೇ ನಾಯಕನ ಆಯ್ಕೆಯಾಗಲಿ’ ಎಂದಿದ್ದಾರೆ.
ಪರಮೇಶ್ವರ್ ಅವರ ಖಡಕ್ಕು ಮಾತುಗಳನ್ನು ಕೇಳಿದ ಕೆ.ಸಿ.ವೇಣುಗೋಪಾಲ್,’ಓ ಅದರ ಬಗ್ಗೆ ಮುಂದೆ ನೋಡೋಣ ಪರಮೇಶ್ವರ್ ಜೀ’ ಅಂತ ಹೇಳಿದ್ದರಂತೆ.
ಹೀಗೆ ಅವತ್ತೇ ಸಿಎಂ ಹುದ್ದೆಗೆ ನಾನು ಕಂಟೆಂಡರ್ ಎಂದ ಪರಮೇಶ್ವರ್ ಈಗ ಸುಮ್ಮನಿರುತ್ತಾರೆಯೇ? ನಿಶ್ಚಿತವಾಗಿಯೂ ರೇಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರೇಸಿನಲ್ಲಿ ಕಾಣಿಸುವುದು ಗ್ಯಾರಂಟಿ.
Read also : Davanagere Viraktamatha : ಬಸವಣ್ಣನವರು ಇಂದಿಗೂ ನಮ್ಮ ನಡುವೆ ಜೀವಂತ :ಬಸವಪ್ರಭು ಸ್ವಾಮೀಜಿ
ಆದರೆ ಸಿಎಂ ಹುದ್ದೆಯ ವಿಷಯದಲ್ಲಿ ಪೈಪೋಟಿ ಅತಿಯಾದರೆ,ಈ ಎಲ್ಲರನ್ನು ಮೀರಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದು ಕೂರಿಸಲು ವರಿಷ್ಟರು ಮುಂದಾಗಬಹುದು.
ಯಾಕೆಂದರೆ ಮಲ್ಲಿಕಾರ್ಜುನ ಖರ್ಗೆ ಹಿರಿಯರು.ಅವರು ಬರುತ್ತಾರೆ ಎಂದರೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ.ಅಂತವರನ್ನು ಪದಚ್ಯುತಗೊಳಿಸಲು ನಾಳೆ ಬಿಜೆಪಿ ವರಿಷ್ಟರೂ ಹಿಂಜರಿಯುತ್ತಾರೆ ಎಂಬುದು ಕೈ ಪಾಳಯದಿಂದಲೇ ಕೇಳಿ ಬರುತ್ತಿರುವ ಮಾತು.
ಡಿಸಿಎಂ ಆಗುತ್ತಾರೆ ಪ್ರಿಯಾಂಕ್ ಖರ್ಗೆ (Priyank Kharge)
ಆದರೆ ಇಂತಹ ಮಾತುಗಳನ್ನು ತಳ್ಳಿ ಹಾಕುವ ಸಿದ್ದರಾಮಯ್ಯ ಆಪ್ತರು,ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಸಂಭವ.ಆದರೆ ದಲಿತರ ಕೋಟಾದಿಂದ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಬಹುದು ಎನ್ನುತ್ತಾರೆ.
ಅವರಿಗಿರುವ ಮಾಹಿತಿಯ ಪ್ರಕಾರ,ಕರ್ನಾಟಕದ ಮುಖ್ಯಮಂತ್ರಿಯಾಗಲು ಮಲ್ಲಿಕಾರ್ಜುನ ಖರ್ಗೆ ಈಗ ತಯಾರಿಲ್ಲ.ಇದಕ್ಕಿರುವ ಮುಖ್ಯ ಕಾರಣ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ.
ಇವತ್ತಲ್ಲ ನಾಳೆ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗುತ್ತದೆ.ನೀವು ಇದಕ್ಕಿಂತ ಉನ್ನತ ಸ್ಥಾನಕ್ಕೆ ಹೋಗುವುದು ನಮ್ಮಿಚ್ಚೆ ಅಂತ ಅವರು ಹೇಳಿರುವುದರಿಂದ ಖರ್ಗೆ ಕರ್ನಾಟಕಕ್ಕೆ ಬರುವ ಲೆಕ್ಕಾಚಾರದಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ಕರ್ನಾಟಕದಲ್ಲಿ ಪರಿಸ್ಥಿತಿ ತಿಳಿಯಾದ ನಂತರ ಅವರ ಪುತ್ರ ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಲಿದ್ದಾರೆ ಎಂಬುದು ಸಿದ್ದು ಕ್ಯಾಂಪಿನ ಮಾತು.
ಸಿದ್ದು ಜತೆ ನಿಲ್ಲದಿದ್ದರೆ ಕೈ ಕಟ್
ಈ ಮಧ್ಯೆ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿ, ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡದೆ ಹೋದರೆ ಕಾಂಗ್ರೆಸ್ ವರಿಷ್ಟರು ಪರ್ಯಾಯ ನಾಯಕನ ಆಯ್ಕೆಗೆ ಸಜ್ಜಾಗುವುದಿಲ್ಲವೇ?
ಹಾಗಂತ ಕೇಳಿದರೆ ಸಿದ್ಧು ಪಾಳಯದಿಂದ,ನೋ ಚಾನ್ದ್ ಎಂಬ ಉತ್ತರ ಸಿಗುತ್ತದೆ.
ಅದರ ಪ್ರಕಾರ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ಧರಾಮಯ್ಯ ಪ್ರಮುಖ ಕಾರಣ. ಹೀಗಾಗಿ ಅವರನ್ನಿಳಿಸಲು ವರಿಷ್ಟರು ಮುಂದಾದರೆ ಕಾಂಗ್ರೆಸ್ ಪಾಲಿಗೆ ಅದು ಬೂಮ್ ರಾಂಗ್ ಆಗುತ್ತದೆ.
1980 ರಲ್ಲಿ ಹಿಂದುಳಿದ ವರ್ಗದ ದೇವರಾಜ ಅರಸರನ್ನು ಪದಚ್ಯುತಗೊಳಿಸಿದ ಪರಿಣಾಮವಾಗಿ 1983 ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ಇದೇ ರೀತಿ ಕ್ಲಾಸಿಕ್ ಕಂಪ್ಯೂಟರ್ ಹಗರಣದ ಹೆಸರಿನಲ್ಲಿ ಹಿಂದುಳಿದ ವರ್ಗದ ಎಸ್.ಬಂಗಾರಪ್ಪ ಅವರನ್ನು ಕೆಳಗಿಳಿಸಿದ ಪರಿಣಾಮವಾಗಿ 1994 ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿತು.
ಈಗ ಸಿದ್ದರಾಮಯ್ಯ ಅವರ ವಿಷಯದಲ್ಲಿ ವರಿಷ್ಟರು ಹೀಗೇ ನಡೆದುಕೊಂಡರೆ ಕಾಂಗ್ರೆಸ್ ಪಕ್ಷ ಶೋಚನೀಯ ಸ್ಥಿತಿಗೆ ತಲುಪುತ್ತದೆ.ಯಾಕೆಂದರೆ ದೇವರಾಜ ಅರಸು ಮತ್ತು ಎಸ್.ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಿದ ಸಂದರ್ಭದಲ್ಲಿ ಶೋಷಿತ ವರ್ಗಗಳ ರಾಜಕೀಯ ಪ್ರಜ್ಞೆ ಪವರ್ ಫುಲ್ ಆಗಿರಲಿಲ್ಲ.ಆದರೆ ಈಗ ಅದರ ರಾಜಕೀಯ ಪ್ರಜ್ಞೆ ಡೆಡ್ಲಿಯಾಗಿದೆ.ಇದೇ ರೀತಿ ಸಿದ್ದರಾಮಯ್ಯ ಕೂಡಾ ದೇವರಾಜ ಅರಸು ಮತ್ತು ಬಂಗಾರಪ್ಪ ಅವರಂತೆ ದುರಂತ ನಾಯಕರಾಗಲು ತಯಾರಿಲ್ಲ.
ಹೀಗಾಗಿ ಈಗ ಸಿದ್ದರಾಮಯ್ಯ ಅವರನ್ನಿಳಿಸುವ ಪ್ರಯತ್ನ ಕಾಂಗ್ರೆಸ್ ಗೆ ದುಬಾರಿಯಾಗಲಿದೆ.ಆದ್ದರಿಂದ ಅದು ಸಧ್ಯದ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರ ಜತೆ ನಿಂತು ಎದುರಿಸಬೇಕೇ ವಿನ: ಬೇರೆ ದಾರಿಯಿಲ್ಲ.
ಆರ್.ಟಿ.ವಿಠ್ಠಲಮೂರ್ತಿ (R.T.Vithalamurthy)