ದಾವಣಗೆರೆ (Davanagere) : ಕನ್ನಡ ಸಾಹಿತ್ಯ ಪರಿಷತ್ನ ಆರ್ಥಿಕ ಅಶಿಸ್ತು ಹದಗೆಡಿಸಿರುವ ಹಾಗೂ ಸರ್ವಾಧಿಕಾರಿ ಧೋರಣೆ ಅನುಸರಿತ್ತಿರುವ ಅಧ್ಯಕ್ಷ ಮಹೇಶ ಜೋಶಿ ವಿರುದ್ದ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿ ಪ್ರೋ.ಎಸ್.ಜಿ. ಸಿದ್ದರಾಮಯ್ಯ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪದಲ್ಲಿನ ಆರ್ಥಿಕ ಅಶಿಸ್ತು ಪರಿಶೀಲನಾ ಸಮಿತಿ ನೀಡುವ ತನಿಖಾ ವರದಿ ಒಂದು ವೇಳೆ ಅಧ್ಯಕ್ಷರ ಪರವಾಗಿದ್ದರೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲಿ. ಇಲ್ಲದಿದ್ದರೆ ಕೂಡಲೇ ಚುನಾವಣೆ ನಡೆಸಲು ಕ್ರಮವಹಿಸಲಿ.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಾಹಿತ್ಯ ಸಮ್ಮೇಳನಗಳು ಒಂದು ಥರದ ಜಾತ್ರೆಯಾದರೂ ಅವು ಉಳಿದ ಮೆರವಣಿಗೆಯ ಜಾತ್ರೆಗಳಂತಲ್ಲ; ರಾಜಕೀಯ ಕಾರ್ಯಕ್ರಮವೂ ಅಲ್ಲ. ಅವು ಅಪ್ಪಟ ಅರಿವಿನ ಜಾತ್ರೆಗಳು. ಹಾಗಾಗಿ ಅವುಗಳಿಗಾಗಿ ಸರ್ಕಾರಗಳು ಕೋಟ್ಯಂತರ ರೂ. ದುಂದುವೆಚ್ಚ ಮಾಡುವ ಬದಲಿಗೆ, ಎಷ್ಟು ಬೇಕೋ ಅಷ್ಟೇ ನೀಡಬೇಕು. ಉಳಿದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ, ಸಬಲೀಕರಣಕ್ಕೆ ಬಳಕೆ ಮಾಡಬೇಕು. ಕನ್ನಡ ಶಾಲೆಗಳು ಉಳಿದಾಗ ಮಾತ್ರ ಕನ್ನಡ ಭಾಷೆ , ಕನ್ನಡ ಸಾಹಿತ್ಯ ಪರಿಷತ್ ಉಳಿಯಲು ಸಾಧ್ಯ ಎಂದರು.
ಕಸಾಪ ರಾಜ್ಯಾಧ್ಯಕ್ಷರ ಸರ್ವಾದಿಕಾರಿ ಧೋರಣೆಯಿಂದ ಕಸಾಪದ ಒಳಗಡೆ ಅಭಿವ್ಯಕ್ತಿ ಸ್ವಾತಂತ್ರ್ಯ ನಾಶವಾಗಿದೆ. ಭಯದ ವಾತಾವರಣ ನಿರ್ಮಾಣ ಮಾಡಿ ಆಡಳಿತ ನಡೆಸಲಾಗುತ್ತಿದೆ. ಇದರಿಂದ ಕಸಾಪ ಹುಟ್ಟುಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಧಕ್ಕೆ ಬಂದಿದೆ. ಈಗಿರುವ ಅಧ್ಯಕ್ಷರಿಂದ ಸಾಹಿತ್ಯ ಚಟುವಟಿಕೆ ಬಿಟ್ಟು ಕೆಟ್ಟ ಚಟುವಟಿಕೆಯೇ ಹೆಚ್ಚು ನಡೆಯುತ್ತಿದೆ ಎಂದು ಆರೋಪಿಸಿದರು.
Read also : ನಗರದ ಪ್ರಮುಖ ಸರ್ಕಲ್ ಗೆ ಮಡಿವಾಳ ಮಾಚಿದೇವರ ಹೆಸರಿಡಲು ಒತ್ತಾಯ : ಸಿಎಂಗೆ ಮನವಿ
ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಈಗಿನ ಅಧ್ಯಕ್ಷರು ಸಂಡೂರಿನ ಒಂದು ಮೂಲೆಯಲ್ಲಿ ಸರ್ವಸದಸ್ಯರ ಸಭೆಯನ್ನು ಜೂ. 29ರಂದು ನಡೆಸಲು ನಿರ್ಧರಿಸಿದ್ದಾರೆ. ಅಲ್ಲಿ ಕೆಲವೇ ಸದಸ್ಯರು ಸೇರಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಸಂಡೂರಿನಲ್ಲಿ ಸಭೆ ನಡೆಸುವುದನ್ನು ನಾವು ವಿರೋದಿಸುತ್ತೇವೆ ಹಾಗೂ ತಡೆಯುತ್ತೇವೆ ಎಂದರು.
ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, ಕಸಾಪ ಸಾಹಿತ್ಯ ಪರಿಷತ್ ಪ್ರಕಟಿಸುವ ಪುಸ್ತಕಗಳಲ್ಲಿ ಮೊದಲು ರಾಜ್ಯಾಧ್ಯಕ್ಷರ ಭಾವಚಿತ್ರ ಇರುತ್ತಿರಲಿಲ್ಲ. ಈಗ ಮುಖಪುಟದಲ್ಲಿ ಅವರ ಪೋಟೋ ಹಾಕುವ ಮೂಲಕ ಲೇಖಕರಿಗೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದರು.
ಲೇಖಕಿ ಡಾ. ವಸುಂಧರಾ ಭೂಪತಿ ಮಾನಾಡಿ, ಕಸಾಪದ ಬಲಾ ಪ್ರತಿ ಮೊದಲು ಎಲ್ಲರಿಗೂ ಸುಲಭವಾಗಿ ಸಿಗುತ್ತಿತ್ತು. ಅಗತ್ಯವಿದ್ದವರಿಗೆ ಡಿಜಿಟಲ್ ಪ್ರತಿ ಸಿಗುವಂತೆ ಮಾಡಬಹುದಿತ್ತು.ಆದರೆ, ಈಗ ಅದಕ್ಕೆ ಶುಲ್ಕ ನಿಗದಿ ಮಾಡಿದ್ದಲ್ಲದೇ 10ಸಾವಿರ ಪ್ರತಿ ಮುದ್ರಿಸಿ ದಾಸ್ತಾನು ಮಾಡುವ ಮೂಲಕ ಕಸಾಪದ ಹಣ ಪೆÇೀಲು ಮಾಡಿದ್ದಾರೆ ಎಂದರು.
ರಾಜಕೀಯ ಮುಖಂಡ ಮಹಿಮಾ ಪಟೇಲ್ ಮಾತನಾಡಿ, ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಅದನ್ನು ಸರಿಪಡಿಸುವ ಹಾಗೂ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ವಿಚಾರವಾಗಿ ಧ್ವನಿ ಎತ್ತಿರುವ ಸಾಹಿತಿಗಳಿಗೆ ತಮ್ಮ ಬೆಂಬಲವಿದೆ ಎಂದರು.
ಸಾಹಿತಿಗಳಾದ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸುಕನ್ಯಾ, ಬಿ.ಎನ್.ಮಲ್ಲೇಶ್ ಸುದ್ದಿಗೋಷ್ಠಿಯಲ್ಲಿದ್ದರು.