ನವದೆಹಲಿ/ದಾವಣಗೆರೆ (Davanagere) : ನವದೆಹಲಿಯ ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ. ನೀತಿ ಆಯೋಗದ ಸಚಿವಾಲಯ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯಗಳಿಂದ ಮಾನ್ಯತೆ ಪಡೆದ ‘ಲೆಜೆಂಡರಿ ಪೀಸ್ ಅವಾರ್ಡ್ ಕೌನ್ಸಿಲ್’ ವತಿಯಿಂದ ಪ್ರತಿವರ್ಷವೂ ಜೀವಮಾನ ಸಾಧನೆಗಾಗಿ ಕೊಡ ಮಾಡುವ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರವಾದ ‘ಪಿನಾಕಲ್ ಅವಾರ್ಡ್-2025’ರ ಸಾಲಿನ ಗೌರವ ಪುರಸ್ಕಾರವನ್ನು ಆದರ್ಶ ಯೋಗ ಪ್ರತಿಷ್ಠಾನ (ರಿ), ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಯೋಗಗುರು, ಯೋಗ ತಜ್ಞ ಡಾ|| ಯೋಗಾಚಾರ್ಯ ಶ್ರೀ ರಾಘವೇಂದ್ರ ಗುರೂಜಿಯವರಿಗೆ ಪ್ರದಾನ ಮಾಡಲಾಗಿದೆ.
ನವದೆಹಲಿಯ ಸಂಸತ್ ಮಾರ್ಗದಲ್ಲಿರುವ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡೈನಾಮಿಕ್ ಎಕ್ಸಲೆನ್ಸ್ ಪದವಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಲಾಂಛನ, ಬಂಗಾರದ ಲೇಪನವಿರುವ ಪದಕ, ಪರಿಷತ್ನ ಖಾಯಂ ಸದಸ್ಯತ್ವ, ಗುರುತಿನ ಚೀಟಿಯನ್ನು ನೀಡಿ ಶಾಲು ಹೊದಿಸಿ ಗೌರವಿಸಿ, ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಅಂಜನ ಪನ್ವಾರ್, ಪಟೇಲ್ ಲೋಕ್ ಸಾಂಸ್ಕøತಿಕ ಸಂಸ್ಥಾನ ನವದೆಹಲಿಯ ಬ್ರಹ್ಮಪಾಲ್ ನಗರ್, ಪೂರ್ವಾಂಚಲ ಮೋರ್ಚಾದ ರಾಜ್ಯಾಧ್ಯಕ್ಷ ಸಂತೋಷ್ ಓಜಾ, ಪರಿಷತ್ನ ಮುಖ್ಯಸ್ಥರಾದ ತರ್ವಿಂದರ್ ಸಿಂಗ್ ಮತ್ತು ಸೋನಿಯಾವಾಲಿಯಾ ಮತ್ತಿತರ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಡಾ|| ರಾಘವೇಂದ್ರ ಗುರೂಜಜಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ|| ರಾಘವೇಂದ್ರ ಗುರೂಜಿಯವರು ಕಳೆದ ಸುಮಾರು 47 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸಾಧನೆ ಮತ್ತು ಸೇವೆಯನ್ನು ನಾಡಿನ ಹೊರಗೂ, ಒಳಗೂ 1250 ಕ್ಕೂ ಹೆಚ್ಚು ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿ 2536 ಕ್ಕೂ ಹೆಚ್ಚು ಜನರಿಗೆ ಯೋಗ ಚಿಕಿತ್ಸೆಯ ಮೂಲಕ ಔಷಧಿ ರಹಿತ ಚಿಕಿತ್ಸೆ ನೀಡಿರುತ್ತಾರೆ. ಸಾವಿರಾರು ಯೋಗ ಲೇಖನಗಳನ್ನು ಬರೆದು, ಹಲವು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿ, ಹಲವು ಯೋಗ ಕೃತಿಗಳನ್ನು ರಚಿಸಿ ಪ್ರಕಟಿಸಿರುತ್ತಾರೆ.
ಅಲ್ಲದೇ ಯೋಗ ಡಿ.ವಿ.ಡಿ., ಸಿ.ಡಿ., ಕ್ಯಾಸೆಟ್ಗಳನ್ನು ಬಿಡುಗಡೆಗೊಳಿಸಿರುತ್ತಾರೆ. ಇವರು ಮಂಡಿಸಿದ ಮಹಾಪ್ರಬಂಧಕ್ಕಾಗಿ ಪಿ.ಹೆಚ್.ಡಿ. ಡಾಕ್ಟರೇಟ್ ಪದವಿಯೊಂದಿಗೆ ಬಂಗಾರದ ಪದಕವು ಲಭಿಸಿರುತ್ತದೆ.
ಯು.ಎಸ್.ಎ.ಯ ಎಫ್.ಡಬ್ಲ್ಯೂ.ಎಸ್.ಐ.ಎಂ. ಫೆಲೋಶಿಪ್, ರಾಷ್ಟ್ರೀಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಪುರಸ್ಕಾರ, ಪತಂಜಲಿ ಪುರಸ್ಕಾರ, ಬಸವಜ್ಯೋತಿ, ಯೋಗ ಚೇತನ, ಯೋಗರತ್ನ, ಕರ್ನಾಟಕ ಯೋಗ ಶಿಕ್ಷಣ ರತ್ನ, ಯೋಗ ಪ್ರಭಾಕರ, ಯೋಗಾಚಾರ್ಯ ಶ್ರೀ ಹೀಗೆ ಹತ್ತು ಹಲವು ಬಿರುದು, ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ|| ರಾಘವೇಂದ್ರ ಗುರೂಜಿಯವರು ಪ್ರಸ್ತುತ ದಾವಣಗೆರೆಯ ದೇವರಾಜ ಅರಸು ಲೇಔಟ್ ‘ಸಿ’ ಬ್ಲಾಕ್ನಲ್ಲಿ ನಿತ್ಯವೂ ಜನಸಾಮಾನ್ಯರಿಗೆ ಆರೋಗ್ಯಕ್ಕಾಗಿ, ಯೋಗ ತರಗತಿ, ತರಬೇತಿ ಮತ್ತು ಎಲ್ಲಾ ದೀರ್ಘತರವಾದ ಖಾಯಿಲೆಗಳಿಗೆ ಔಷಧಿ ರಹಿತ ಯೋಗ ಚಿಕಿತ್ಸೆಯನ್ನು ಕಳೆದ ಹಲವಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
Read also : Political analysis | ಇತಿಹಾಸ ಮರೆಯದ ಕೌತುಕದ ಕ್ಷಣಗಳು..
ಗುರೂಜಿಯವರ ಉನ್ನತ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ತಮ್ಮ ಮೂಲ ಗುರುಗಳಾದ ಮಲ್ಲಾಡಿಹಳ್ಳಿಯ ಪರಮ ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರಿಗೆ ಶ್ರದ್ಧೆಯಿಂದ ಸಮರ್ಪಿಸಲಾಗಿದೆ ಎಂದು ತಮ್ಮ ಸಂತೋಷವನ್ನು ಈ ಮೂಲಕ ಹಂಚಿಕೊಂಡಿರುತ್ತಾರೆ.