ದಾವಣಗೆರೆ (Davanagere): ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಕೋಮುವಾದಿ ಬಜರಂಗದಳ ಸಂಘಟನೆಯನ್ನು ಕಾಂಗ್ರೆಸ್ ಸರ್ಕಾರ ರದ್ಧುಪಡಿಸಬೇಕೆಂದು ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ಮನವಿ ಸಲ್ಲಿಸಿದ ವೇಳೆ ಸಿಎಂ ಸಿದ್ಧರಾಮಯ್ಯ ಅವರು ಬಜರಂಗದಳ ನಿಷೇಧಿಸುವುದಾಗಿ ನಾವು ಹೇಳಿಯೇ ಇಲ್ಲ ಎಂದಿದ್ದಾರೆ ಎಂದು ಒಕ್ಕೂಟದ ಸಂಚಾಲಕ ಟಿ. ಅಸ್ಗರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ 2 ಬಿ ಅಡಿಯಲ್ಲಿ ಮುಸಲ್ಮಾನರಿಗೆ ಇದ್ದ ಶೇ.4 ರಷ್ಟು ಮೀಸಲಾತಿ ಪುನರ್ ಜಾರಿಗೆ ತರುವುದಾಗಿ ಮತ್ತು ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೋಷಿಸಿತ್ತು. ಆದರೆ, ಸೋಮವಾರ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ವೇಳೆ ಅವರು ನಾವು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿಯ ಬಸವರಾಜ್ ಬೊಮ್ಮಾಯಿ ಸರ್ಕಾರ ಪ್ರವರ್ಗ 2ಬಿಯಲ್ಲಿ ಮುಸಲ್ಮಾನರಿಗಿದ್ದ 4% ಮೀಸಲಾತಿಯನ್ನು ರದ್ದು ಪಡಿಸಿತ್ತು. ಇದನ್ನು ಪುನರ್ ಜಾರಿಗೆ ತರುತ್ತೆವೆ ಹಾಗೂ ಕೋಮುವಾದಿ ಸಂಘಟನೆಯಾದ ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಇದುವರೆಗೂ ಜಾರಿಗೊಳಿಸಿಲ್ಲ ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
Read also : ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿಲ್ಲ : ಸಿಎಂ
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನಂಬಿ ಶೇ. 98 ಮುಸ್ಲಿಂರು ಬೆಂಬಲಿಸಿದ ಕಾರಣ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ಹಿಡಿದಿದೆ. ದೇಶ ಮತ್ತು ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಇತ್ತೀಚೆಗೆ ಹಲ್ಲೆ ನಡೆಯುತ್ತಿವೆ. ಸಣ್ಣ ಪ್ರಮಾಣದ ಗಲಾಟೆ ನಡೆದರು ಮುಸಲ್ಮಾನರಿಗೆ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ಅಂತಹ ಗಂಭೀರ ಸ್ವರೂಪದ ಪ್ರಕರಣಗಳು ದಾಖಲು ಮಾಡುವ ಮೂಲಕ ಮುಸಲ್ಮಾನರಿಗೆ ಸೂಕ್ತ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಮುಸ್ಲಿಂ ಸಮುದಾಯದ ರಕ್ಷಣೆಗೆ “ಅಲ್ಪಸಂಖ್ಯಾತರ ಸಂರಕ್ಷಣಾ ಕಾಯ್ದೆ” ಜಾರಿಗೆ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಮದ್ ಅಲಿ, ಶೋಯೆಬ್, ಸಾಜಿದ್ ಅಹ್ಮದ್, ಅದಿಲ್ ಖಾನ್, ಅಜ್ಮತ್ ಬಾಯಿ, ಅಫೀಜ್ ಜವೀದ್, ಉಸ್ಮಾನ್ ಇತರರು ಉಪಸ್ಥಿತರಿದ್ದರು.