ದಾವಣಗೆರೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಅತಿಥಿ ಗೃಹ ಪಕ್ಕದಲ್ಲಿ ಒಂದು ಎಕರೆ ಜಾಗವನ್ನು ಡಾ; ಬಿ.ಅರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಕುಂದುಕೊರತೆಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ ದಲಿತ ಮುಖಂಡರು, ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ನಂತರ ಮಾತನಾಡಿದರು.
ದಲಿತ ಮುಖಂಡರು ಒಕ್ಕೋರಲಿನಿಂದ ಜಿಲ್ಲಾ ಕೇಂದ್ರದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ನಗರದ ಮಧ್ಯ ಭಾಗದಲ್ಲಿ ಜಾಗವನ್ನು ನೀಡಬೇಕೆಂದು ಒತ್ತಾಯ ಮಾಡುವ ಜೊತೆಗೆ ಭವನ ನಿರ್ಮಾಣ ಮಾಡಿದ್ದಲ್ಲಿ ಹೋರಾಟ ಮಾಡಲು ಹಿಂದೆ ಬೀಳುವುದಿಲ್ಲ ಎಂದು ಮುಖಂಡರು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಈ ವೇಳೆ ಜಿಲ್ಲಾಧಿಕಾರಿಯವರು ನಗರದ ಒಳಗೆ ಒಂದು ಎಕರೆ ಸರ್ಕಾರಿ ಜಾಗ ಸಿಗದ ಕಾರಣ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಮಾಡಿದರೆ ವಾಹನಗಳ ಸಂಚಾರಕ್ಕೆ ಮತ್ತು ನಗರ ಬೆಳೆಯುತ್ತಿರುವುದರಿಂದ ಸಕ್ರ್ಯೂಟ್ ಹೌಸ್ ಪಕ್ಕದ ಜಾಗ ಸೂಕ್ತವಾಗಿದ್ದು ಅಲ್ಲಿ ಒಂದು ಎಕರೆ ಜಾಗವನ್ನು ಮೀಸಲಿಡಲಾಗುತ್ತದೆ ಎಂದಾಗ ಬಹುತೇಕ ಮುಖಂಡರು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಭಾನುವಳ್ಳಿಯಲ್ಲಿ ಪ್ರತಿಮೆ ತೆರವು ಮಾಡಿದ ಬಗ್ಗೆ ತಮ್ಮ ಸ್ಪಷ್ಟನೆ ಬೇಕೆಂದು ಮುಖಂಡರು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧಿಕಾರಿಯವರು ಮಾತನಾಡಿ, ಈ ವಿಷಯದಲ್ಲಿ ಕಾನೂನು ಪಾಲನೆ ಮಾಡಲಾಗಿದೆ ಎಂದ ಅವರು ಅಧಿಕಾರಿಗಳು ಸಮಸ್ಯೆಯನ್ನು ಇತ್ಯಾರ್ಥ ಮಾಡುವಾಗ ಸಂವೇದನಾಶೀಲತೆಯಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಹಾಸ್ಟೆಲ್ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ಇಲಾಖೆಗಳಿಂದ 15 ಹಾಸ್ಟೆಲ್ಗಳಿಗೆ ನಿವೇಶನ ಮಂಜೂರು ಮಾಡಿ ಪಹಣಿಯನ್ನು ಮಾಡಲಾಗಿದೆ. ಸಮಾಜದ ಬದಲಾವಣೆಗೆ ಶಿಕ್ಷಣ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಬಂದಾಗ ನಿರಾಕರಣೆ ಮಾಡದೆ ಪ್ರವೇಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮದಲ್ಲಿಯು ಸ್ಮಶಾನ ಇದ್ದು ಇದನ್ನು ಅಭಿವೃದ್ದಿ ಮಾಡುವ ಮೂಲಕ ಲ್ಯಾಂಡ್ ಬೀಟ್ ಮಾಡಲಾಗುತ್ತದೆ ಎಂದರು.
ಕೆಚ್ಚೇನಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ ಆಚರಣೆ ಇದೆ
ಜಗಳೂರು ತಾ; ಕೆಚ್ಚೇನಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆಆಚರಣೆ ಇದೆ ಎಂದು ದಲಿತ ಮುಖಂಡರು ಹೇಳುತ್ತಿದ್ದು ಈಗಲೂ ಇದು ಆಚರಣೆಯಲ್ಲಿದ್ದರೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದ್ದು ಉಪವಿಭಾಗಾಧಿಕಾರಿ ಹಾಗೂ ಪೊಲೀಸ್ಉಪಾಧೀಕ್ಷಕರನ್ನು ಗ್ರಾಮಕ್ಕೆ ಕಳುಹಿಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಗರಹುಕಂ ಜಮೀನು ಮಂಜೂರಾತಿ, ಇ-ಸ್ವತ್ತು, ನಕಾಶೆ ರಸ್ತೆ ಒತ್ತುವರಿ, ಸಿಜಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯನ್ನು ನೇರಪಾವತಿ ಮೂಲಕ ಸಿಬ್ಬಂದಿ ನೇಮಕ ಸೇರಿದಂತೆ ಅನೇಕ ಕುಂದುಕೊರತೆಗಳ ಬಗ್ಗೆ ಅನೇಕ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.
ಕುಡಿಯುವ ನೀರಿನ ಪೂರೈಕೆ ಬಗ್ಗೆ ತುರ್ತು ಕ್ರಮ
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಗ್ರಾಮಗಳಲ್ಲಿ ಆಗಬೇಕಾದ ಕಾಮಗಾರಿಗಳು, ಅಂಗನವಾಡಿ ಕಳಪೆ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಕರ್ತವ್ಯ ಲೋಪದ ಬಗ್ಗೆ ತಿಳಿಸಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ಕೆಲವು ಗ್ರಾಮಗಳಲ್ಲಿ ನಿವೇಶನ, ಕುಡಿಯುವ ನೀರಿನ ಪೂರೈಕೆ ಬಗ್ಗೆ ತುರ್ತು ಕ್ರಮ ಜರುಗಿಸಲಾಗುತ್ತದೆ ಎಂದರು.
ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್ ಮಾತನಾಡಿ ಜಾತ್ರೆ ಸಂದರ್ಭದಲ್ಲಿ ಅಲೆಮಾರಿಗಳು ಮಕ್ಕಳಿಗೆ ಆಟಗಳನ್ನು ಆಡಿಸುವರು.
ಈ ವೇಳೆ ಪೊಲೀಸ್ಸಿಬ್ಬಂದಿ ಅನುಮತಿ ನೀಡಲು ಹಣ ಕೇಳುತ್ತಾರೆ ಮತ್ತು ದೌರ್ಜನ್ಯ ಪ್ರಕರಣಗಳ ಬಗ್ಗೆ ಜನರು ಪ್ರಸ್ತಾಪಿಸಿದ್ದು ಯಾವುದೇ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು ಮತ್ತು ಜಾತ್ರೆಗಳಲ್ಲಿ ಮನರಂಜನ ಆಟವಾಡಿಸಲು ಹಣ ಕೇಳಿದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
ಸಿಪಿಓ ಮಲ್ಲನಾಯ್ಕ್, ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಶ್ರೀ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ 2020 ರಲ್ಲಿ ನಡೆದ ಕುಂದುಕೊರತೆ ಸಭೆಯ ನಡಾವಳಿಯನ್ನು ಸಭೆಯ ಗಮನಕ್ಕೆ ತಂದರು.