ದಾವಣಗೆರೆ ಜ.14: ಮಕರ ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ ಎಲ್ಲವನ್ನು ಬೆರಸಿ ಸಿಹಿ ಹಂಚಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಹೊಸ ವರ್ಷದ ಮೊದಲನೇ ಹಬ್ಬ ಇದಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಹಿರಿಯ ಯೋಗ ಗುರು ಡಾ|| ರಾಘವೇಂದ್ರ ಗುರೂಜಿಯವರು ಅಭಿಪ್ರಾಯಪಟ್ಟರು.
ಬುಧವಾರ ಮಕರ ಸಂಕ್ರಾಂತಿಯ ನಿಮಿತ್ತ ನಗರದ ದೇವರಾಜ ಅರಸ್ ಬಡಾವಣೆ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸುಗ್ಗಿಯ ಹಾಡುಗಳು ಸಂಗೀತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿ ದೇವಿಯು ಸಂಕರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ದಿನವಾದ್ದರಿಂದ ಸಂಕ್ರಾಂತಿ ಎಂಬ ಹೆಸರು ಪ್ರತೀತಿಯಲ್ಲಿದೆ. ಸಂಕ್ರಾಂತಿಯು ಹೊಸ ಪರ್ವವನ್ನು ಸೂಚಿಸುವ ದಿನವಾಗಿದ್ದು, ಸೂರ್ಯನು ತನ್ನ ದಿಕ್ಕನ್ನು ಬದಲಾಯಿಸುವ ದಿನವೇ ಮಕರ ಸಂಕ್ರಾಂತಿ, ಈ ದಿನವು ಸೂರ್ಯನ ಶಕ್ತಿಯು ಸಾವಿರ ಪಟ್ಟು ಹೆಚ್ಚಾಗಿದ್ದು, ಶ್ರದ್ಧಾಭಕ್ತಿಯಿಂದ ಯಾರು ಪ್ರಾರ್ಥನೆ ಸಲ್ಲಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಪೂಜಿಸಿ ಗೋಮಾತೆಯನ್ನು ಧನ್ಯತಾ ಭಾವನೆಯಿಂದ ಪೂಜಿಸಿ ಧನ್ಯರಾಗುವ ದಿನವಿಂದು ಎಂದು ಸಂಕ್ರಾಂತಿ ಹಬ್ಬದ ಸಂಕ್ಷಿಪ್ತ ಮಾಹಿತಿಯನ್ನು ಡಾ|| ಗುರೂಜಿಯವರು ತಿಳಿಸಿದರು.
ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮವನ್ನು ಮಾಡಿ ಸೂರ್ಯದೇವನಿಗೆ ಅಘ್ರ್ಯವನ್ನು ಅರ್ಪಿಸಲಾಯಿತು.
ನಂತರ ನಾಡಿನ ಉದಯೋನ್ಮುಖ ಗಾಯಕ ನಾಗೇಶ್ ಬಿ.ಎನ್. ರವರಿಂದ ಸಂಕ್ರಾಂತಿ ಸುಗ್ಗಿಯ ಹಾಡುಗಳು ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾನದ ವತಿಯಿಂದ ಕಲಾವಿದ ನಾಗೇಶ್ರವರಿಗೆ ಆತ್ಮೀಯವಾಗಿ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಫಲಪುಷ್ಪ ತಾಂಬೂಲದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಯೋಗ ಶಿಕ್ಷಕ ಲಲಿತ್ಕುಮಾರ್ ವಿ. ಜೈನ್ ಗಾಯಕ ನಾಗೇಶ್ರವರ ಪರಿಚಯ ಮಾಡಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಗೌರಮ್ಮ ಮತ್ತು ರೇಖಾ ಕಲ್ಲೇಶ್ ಬಹು ಸುಂದರವಾಗಿ ಬಿಡಿಸಿದ ರಂಗೋಲಿಗಳು ಆಕರ್ಷಣೀಯವಾಗಿತ್ತು.
Read also : ವಿಬಿಜಿ ರಾಮಜಿ ಕಾಯ್ದೆ ಕೂಡಲೇ ರದ್ದುಪಡಿಸಿ:ಆವರಗೆರೆ ರಂಗನಾಥ್
ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಕೆ.ಎಂ., ಪತ್ರಕರ್ತ ಪ್ರಕಾಶ್ ಹೆಚ್.ಎನ್., ವೃಷಭ್ ಮೆಡಿಕಲ್ಸ್ನ ಸುನೀಲ್, ಅರುಣೋದಯ ಬಟ್ಟೆ ಅಂಗಡಿ ಮಾಲೀಕರಾದ ಅಜಯ್ ಸೋಲಂಕಿ, ಪೂಜಾ ಸೋಲಂಕಿ, ಅಕ್ಷತಾ ಸೋಲಂಕಿ, ಸಮಾಜ ಕಲ್ಯಾಣ ಇಲಾಖೆಯ ಸಂತೋಷ್ ಹೆಚ್., ಛಾಯಾಗ್ರಾಹಕ ರುಶೀರಾ ಹೆಚ್., ಭರತ್ ವದೋನಿ, ಯೋಗ ಶಿಕ್ಷಕ ಮಹಂತೇಶ್ ಮತ್ತು ಶಿಷ್ಯವೃಂದ ಇನ್ನಿತರರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಜ್ಯೋತಿಲಕ್ಷ್ಮೀ ವಾಸುದೇವ್, ಶ್ರೀಮತಿ ಸಂಧ್ಯಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಗುರೂಜಿಯವರು ಎಲ್ಲರಿಗೂ ಎಳ್ಳು ಬೆಲ್ಲ ಹಂಚಿದರು.
ದೇಶೀಯ ಪಾನೀಯ ಸೇವನೆಯೊಂದಿಗೆ ಮಕರ ಸಂಕ್ರಾಂತಿ ಕಾರ್ಯಕ್ರಮ ಸಂಪನ್ನಗೊಂಡಿತು.
