ದಾವಣಗೆರೆ, ಮಾ. 7-
ಮಹಾಶಿವರಾತ್ರಿ ಹಬ್ಬವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವಿಶಿಷ್ಟವಾಗಿ ಆಚರಿಸುತ್ತಿದೆ. ಈಶ್ವರೀಯ ವಿಶ್ವವಿದ್ಯಾಲಯವು ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿರುವ ಸುಮಾರು 60ಕ್ಕೂ ಹೆಚ್ಚು ಗೀತಾ ಪಾಠಶಾಲೆಗಳಲ್ಲಿ ಪ್ರತೀ ದಿನವೂ ಒಂದೊಂದು ಕಡೆಯಂತೆ ಒಂದೂವರೆ ತಿಂಗಳುಗಳ ಕಾಲ ಶಿವರಾತ್ರಿ ಹಬ್ಬವನ್ನು ನಡೆಸುವುದರ ಮೂಲಕ ಅದರ ಆಧ್ಯಾತ್ಮಿಕ ರಹಸ್ಯವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ.
ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ವೃಷ್ಟಿ
ಮಾ 8ರ ಶುಕ್ರವಾರ ದಾವಣಗೆರೆಯಲ್ಲಿ ಶಿವಲಿಂಗಗಳೊಂದಿಗೆ ವಿಶ್ವ ಸದ್ಭಾವನಾ ಶಾಂತಿ ಯಾತ್ರೆಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ನಗರದೆಲ್ಲೆಡೆ ಹಾರಾಟ ಮಾಡುವ ಹೆಲಿಕ್ಯಾಪ್ಟರ್ ಮೂಲಕ ಶಿವರಾತ್ರಿ ಅರ್ಥಾತ್ ಪರಮಾತ್ಮನ ಸಂದೇಶವಿರುವ ಕರ ಪತ್ರಗಳ ವಿತರಣೆ ಮತ್ತು ಪುಷ್ಪ ವೃಷ್ಟಿ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಮೋತಿ ವೀರಪ್ಪ ಪದವಿ ಪೂರ್ವ ಸರ್ಕಾರಿ ಕಾಲೇಜಿನ ಮೈದಾನದಿಂದ ಆರಂಭಗೊಳ್ಳುವ ಶಾಂತಿಯಾತ್ರೆಯು ರಾಜಬೀದಿಗಳಲ್ಲಿ ಸಂಚರಿಸಲಿದೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದ್ದಾರೆ.
ಜಗತ್ತಿನಲ್ಲಿರುವ ದುಃಖ – ಅಶಾಂತಿ ಮತ್ತು ಅಧರ್ಮವನ್ನು ತೊಡೆದು ಹಾಕಿ ಸದ್ಧರ್ಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಂಜ್ಯೋತಿ ಸ್ವರೂಪನಾದ ಪರಮಾತ್ಮ ಶಿವತಂದೆ ಪುನಃ ಅವತರಿತನಾಗಿದ್ದಾನೆ. ಮನುಷ್ಯಾತ್ಮರೆಲ್ಲರೂ ಪ್ರೀತಿಯಿಂದ ಅವನನ್ನು ನೆನಪು ಮಾಡಿದಾಗಲೇ ಸುಖ-ಶಾಂತಿಯನ್ನು ಅವನಿಂದ ಪಡೆಯಲು ಸಾಧ್ಯ. ಇದೇ ಸಹಜ ರಾಜಯೋಗವಾಗಿದೆ. ಈ ಸಂದೇಶವನ್ನು ಸಾರುವ ಸದುದ್ದೇಶದಿಂದ ಬ್ರಹ್ಮಾಕುಮಾರಿ ಸಂಸ್ಥೆಯು ಮಹಾಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಲೀಲಾಜಿ ಹೇಳಿದ್ದಾರೆ.
50 ವರ್ಷಗಳ ಸಂಭ್ರಮಾಚರಣೆ
ವಿಶ್ವವನ್ನು ಪರಿವರ್ತಿಸುವ ನಿಟ್ಟಿನಲ್ಲಿ 87 ವರ್ಷಗಳ ಹಿಂದೆ ಜ್ಯೋತಿರ್ಬಿಂದು ಸ್ವರೂಪನಾಗಿರುವ ಶಿವಪರಮಾತ್ಮನೇ ಸ್ವಯಂ ಸ್ಥಾಪಿಸಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯು ದಾವಣಗೆರೆಯಲ್ಲಿ 1974ರಲ್ಲಿ ಸ್ಥಾಪಿತಗೊಂಡಿದ್ದು, ಇದೀಗ 50 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಇದನ್ನು ವಿಶಿಷ್ಠವನ್ನಾಗಿಸುವ ದಿಸೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪರಮಾತ್ಮನ ಸಂದೇಶವಿರುವ ಕರಪತ್ರವನ್ನು ಹಂಚಲಾಗುವುದು ಎಂದು ವಿವರಿಸಿದರು.
ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರ ಸಹಕಾರದಿಂದ ಹೆಲಿಕ್ಯಾಪ್ಟರ್ ಸೇವೆ ನಡೆಯುತ್ತಿದೆ ಎಂದು ತಿಳಿಸಿದರು.