ದಾವಣಗೆರೆ (Davanagere): ನೀವು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದರೆ ದಾದಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಎಸಗುವ ದ್ರೋಹ ಹಾಗೂ ಅಪಮಾನ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷರೂ ಆದ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಮಾಯಕೊಂಡ ಪಟ್ಟಣದ ಎ. ಕೆ. ಕಾಲೋನಿಯಲ್ಲಿ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂರವರ ಜಯಂತ್ಯೋತ್ಸವ ಹಾಗೂ ಡಿಎಸ್ ಎಸ್ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಡಾ. ಬಿ. ಆರ್. ಅಂಬೇಡ್ಕರ್ ಅವರು ಉತ್ತಮ ಶಿಕ್ಷಣ ಪಡೆದರೆ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದ್ದರು. ಅವರ ಬಳಿ ಲೆಕ್ಕವಿಲ್ಲದಷ್ಟು ಪುಸ್ತಕ ಇತ್ತು. ಜ್ಞಾನ ಸಂಪಾದನೆಯಿಂದ ಅಂಬೇಡ್ಕರ್ ಅವರು ವಿಶ್ವವೇ ತಿರುಗಿ ನೋಡುವಂತ ಸಾಧನೆ ಮಾಡಿದರು ಎಂದು ಬಣ್ಣಿಸಿದರು.
ಅಂಬೇಡ್ಕರ್ ಜಯಂತಿ ಮಾಡುವ ಉದ್ದೇಶ ಕೇವಲ ಭಾಷಣ ಮಾಡುವುದಲ್ಲ. ಕನಿಷ್ಠ ಎಂದರೂ ಪದವಿ ಪಡೆದು ದಾವಣಗೆರೆ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಿರಿ. ನಿಮ್ಮ ಮಕ್ಕಳು ಐಎಎಸ್, ಕೆಎಎಸ್ ಮಾಡುತ್ತಾರೆ ಎಂದರೆ ನಮ್ಮ ಬಳಿಗೆ ಕಳುಹಿಸಿ. ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತೇವೆ ಎಂದು ಹೇಳಿದರು.
ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ. ಕನಿಷ್ಠ ಎಂದರೂ 20ರಿಂದ 30 ಪುಸ್ತಕಗಳನ್ನು ಕೊಡಿ. ಓದಲು ಹೇಳಿ. ಮನೆ, ವಾಹನ, ಹೊಲ, ಕೆಲಸ ಇಲ್ಲವೆಂದರೂ ಪರವಾಗಿಲ್ಲ ದೊಡ್ಡ ಕನಸು ಕಾಣಬೇಕು. ಮುಂದೊಂದು ದಿನ ಎಂಪಿ, ಶಾಸಕ, ಸಚಿವರಾಗುತ್ತೆಂಬ ಕನಸು ಕಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ಸಾಧಿಸುತ್ತೀರಿ. ಶಿಕ್ಷಣ ಮತ್ತು ಜ್ಞಾನದಿಂದ ಮಾತ್ರ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಬಹುದು. ಇದು ಡಿಜಿಟಲ್ ಯುಗ. ಎಲ್ಲವೂ ಕೈಬೆರಳಲ್ಲೇ ಸಿಗುತ್ತದೆ. ಸತತ ಪರಿಶ್ರಮ, ಕಠಿಣ ಅಭ್ಯಾಸದಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Read also : ಕಾಣೆಯಾಗಿದ್ದ ಮಗುವನ್ನು ಪತ್ತೆ ಹಚ್ಚಿದ 112 ಹೊಯ್ಸಳ ಅಧಿಕಾರಿಗಳು
ಮಾಯಕೊಂಡ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿನಿಂದ ವೈದ್ಯರೇ ಇಲ್ಲವಂತೆ. ವಿದ್ಯುತ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ನಾವು ಯಾವ ಶತಮಾನದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಎದ್ದಿದೆ. 24 ಗಂಟೆ ವಿದ್ಯುತ್ ಜನರಿಗೆ ಕೊಡಿಸುವ ಹಾಗೂ ವೈದ್ಯರನ್ನು ಕರೆತರುವ ಶಕ್ತಿ ನಮ್ಮಲ್ಲಿ ಇಲ್ಲದಂತಾಗಿದೆ. ಇದು ಬೇಸರದ ಸಂಗತಿ ಎಂದು ಹೇಳಿದರು.
ಶಾಸಕರು ಏನು ಮಾಡಲು ಆಗುತ್ತದೆ ಎಂದು ಜನರು ಹೇಳುತ್ತಾರೆ. ನಾವು ಅಸಹಾಯಕವಾಗಿ ಬದುಕುವಂಥ ಸ್ಥಿತಿಯಲ್ಲಿದ್ದೇವೆ. ನೀವು ಆರಿಸಿ ಕಳುಹಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಇದ್ದಾರೆ. ಎಲ್ಲಾ ಬೇಡಿಕೆ ಈಡೇರಿಸುತ್ತೇವೆ, ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ ಎಂದು ಹೇಳಿದ್ದರು. ಆದ್ರೆ. ನಿಮ್ಮ ಸಮಸ್ಯೆಗಳು ಪರಿಹಾರ ಆಗಿವೆಯಾ? ಒಮ್ಮೆಯಾದರೂ ಇಲ್ಲಿಗೆ ಬಂದು ನಿಮ್ಮ ಸಂಕಷ್ಟ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರಾದ ಪ್ರತಾಪ್ ಗೌಡ್ರು, ಅಶೋಕ್, ಹಿಂಡಸಗಟ್ಟೆ ಹನುಮಂತಪ್ಪ, ಟಿ. ರವಿಕುಮಾರ್, ಮಧುಕುಮಾರ್, ಕಲ್ಲೇಶ್, ರಾಘವೇಂದ್ರ ಮತ್ತಿತರರು ಹಾಜರಿದ್ದರು.