ದಾವಣಗೆರೆ: ಜಿಲ್ಲೆಯಲ್ಲಿ ಆಡಳಿತಯಂತ್ರ ಸತ್ತು ಹೋಗಿದೆ. ಕಾನೂನುವ್ಯವಸ್ಥೆಯೇ ಇಲ್ಲವಾಗಿದೆ. ಅಧಿಕಾರಸ್ಥರ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಜ್ಜಿ ಫಾಮ್ರ್ನಿಂದ 5000ಕ್ಕೂ ಅಧಿಕ ಲಾರಿಗಳಷ್ಟು ಮಣ್ಣನ್ನು ಅಕ್ರಮವಾಗಿ ಸಾಗಿಸಿದ್ದರೂ ಯಾವುದೇ ಒಬ್ಬ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಇಡೀ ಅಧಿಕಾರಿ ವರ್ಗ ಮಂತ್ರಿಗಳ ಮನೆಯ ಕೆಲಸಗಾರರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರು ಎಂದು ತಮ್ಮ ಮನಬಂದತೆ ಮಾಡಲು ಅಧಿಕಾರವಿಲ್ಲ. ಎಲ್ಲದಕ್ಕೂ ಕಾನೂನು, ನಿಯಮಗಳಿದ್ದು ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಮಂತ್ರಿಗಳಿಂದಲೇ ಕಾನೂನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಿವೆ. ಮಣ್ಣು ಅಕ್ರಮ ಸಾಗಾಟ ವಿಚಾರದಲ್ಲಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಹರಿಹರ ತಾಲೂಕಿನ ಬಾತಿ ಹಾಗೂ ಕಾಡಜ್ಜಿಯಲ್ಲಿ ನಡೆದಿರುವ ಮಣ್ಣು ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.
Read also : ಸಂವಿಧಾನದ ಆಶಯಗಳ ಬಗ್ಗೆ ತಿಳಿವಳಿಕೆ ತುಂಬಾ ಅವಶ್ಯ : ಇಮ್ಮಡಿ ಶ್ರೀ
ಹರಿಹರದ ಶಾಸಕ ಬಿ.ಪಿ. ಹರೀಶ್ ಅವರನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ಅವರ ವಿರುದ್ಧ ಪರಿಶಿಷ್ಟ ವ್ಯಕ್ತಿಯೋರ್ವರ ಮೂಲಕ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾ ಗಿದೆ. ಇದನ್ನು ತಾವು ಬಲವಾಗಿ ಖಂಡಿಸುತ್ತೇವೆ. ಈ ವಿಚಾರವಾಗಿ ಬಿಜೆಪಿಯವರು ಹೋರಾಟ ಮಾಡಿದರೆ ಅದಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ ಶಿವಶಂಕರ್, ಪರಿಶಿಷ್ಟರು ಸಹ ತಮ್ಮ ರಕ್ಷಣೆಗೆ ಇರುವ ಕಾನೂನನ್ನು ಯಾವುದೇ ಕಾರಣಕ್ಕೂ ಯಾರದ್ದೋ ಕುಕ್ಕಮ್ಮಕ್ಕಿಗೊಳಗಾಗಿ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ಮುಖಂಡ ಟಿ. ಅಸ್ಗರ್ ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಡ್ರಗ್್ಸ ಪ್ರಕರಣದಲ್ಲಿ ಮೂರು ವರ್ಷವಾದ ಮೇಲೆ ಒಂದಿಬ್ಬರನ್ನು ಬಂಧಿಸಿದ್ದು ಅದರ ಹಿಂದಿರುವ ದೊಡ್ಡವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಪೊಲೀಸರು ಈ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮೂರು ತಿಂಗಳಿಗೊಮ್ಮೆ ರೌಡಿಗಳ ಪರೇಡ್ ಮಾಡಬೇಕು ಎಂದರು.
ಜೆಡಿಎಸ್ ಮುಂಡರಾದ ಅಮಾನುಲ್ಲಾ ಖಾನ್, ಕಡತಿ ಅಂಜಿನಪ್ಪ, ಟಿ. ಅಸ್ಗರ್, ಬಾತಿ ಶಂಕರ್, ಎ. ಶ್ರೀನಿವಾಸ್ ಇನ್ನಿತರರು ಇದ್ದರು.
