ದಾವಣಗೆರೆ (Davangere) : ಮಾದಕ ದ್ರವ್ಯಗಳು ಮತ್ತು ಮನೋವಿಕೃತ ಪದಾರ್ಥಗಳ ಅಕ್ರಮ ಸ್ವಾದೀನ, ಮಾರಾಟ, ಸಾಗಾಣೆ ಮತ್ತು ಸೇವನೆಯ ನಿಯಂತ್ರಣ, ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ಕಠಿಣ ನಿಬಂಧನೆಗಳನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985ರಲ್ಲಿ ಸ್ಥಾಪಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ್ ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆ (ರಿ.), ಆರ್.ಎಲ್. ಕಾನೂನು ಕಾಲೇಜು, ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದೊಂದಿಗೆ ಇಂದು ಆರ್.ಎಲ್. ಲಾ ಕಾಲೇಜಿನಲ್ಲಿ “ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985” ರ ಕುರಿತು ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಹಲುವ ಪೀಡೆಗಳ ಸಮಾಧಿಯ ಮೇಲೆ ಸದೃಢ ಸಮೃದ್ಧ ಭಾರತವನ್ನು ಕಟ್ಟಬೇಕಾಗಿದೆ. ಸಾರ್ವಜನಿಕರು ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಒಟ್ಟಾಗಿ ಈ ಪಿಡುಗಿನ ವಿರುದ್ಧ ಕೈಜೋಡಿಸಬೇಕೆಂದು ತಿಳಿಸಿದರು.
ಈ ಕಾಯ್ದೆಗೆ ಇನ್ನೂ ಹೆಚ್ಚಿನ ಬಲ ನೀಡಲು ಹಲವಾರು ತಿದ್ದುಪಡಿಗಳನ್ನು ತರಲಾಗಿದೆ ಎಂದರು. ಎನ್ಡಿಪಿಎಸ್ ಕಾಯ್ದೆ ಅತ್ಯಂತ ಪ್ರಬಲ ಕಾಯ್ದೆಯಾಗಿದ್ದು, ದೇಶದ ಪ್ರಮುಖ ತನಿಖಾ ಸಂಸ್ಥೆಗಳು ಇದರಲ್ಲಿ ಒಳಗೊಂಡಿವೆ ಈ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ಸಾಬೀತಾದರೆ ಆರೋಪಿಗೆ ಕನಿಷ್ಟ 1 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣಕುಮಾರ್ ಮಾತನಾಡಿ, ಭಾರತದ ಯುವಸಮೂಹವನ್ನು ಕಂಡು ಬೇರೆ ದೇಶಗಳು ಬೆರಗಾಗಿವೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತೀಯ ಯುವಕರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸುಭದ್ರ ಸದೃಢ ರಾಷ್ಟ್ರವನ್ನು ಕಟ್ಟಲು ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಯಾವ ಯುವಶಕ್ತಿ ದೇಶವನ್ನಾಳಬೇಕೋ, ದೇಶದ ಆಸ್ತಿಯಾಗಬೇಕೋ ಅದೇ ಯುವಜನತೆ ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿರುವುದು ವಿಷಾದನೀಯ ಎಂದರು.
ವರದಿಯೊಂದರ ಪ್ರಕಾರ ಮಾದಕ ವ್ಯಸನಿಗಳಲ್ಲಿ ಶೇ. 50ಕ್ಕೂ ಹೆಚ್ಚು 10 ರಿಂದ 20 ವರ್ಷಗಳ ವಿದ್ಯಾರ್ಥಿಗಳು ಇದ್ದಾರೆ ಎನ್ನುವುದು ದುರಂತದ ವಿಷಯವಾಗಿದೆ. ಯುವಜನತೆ ಹಲವಾರು ಕ್ಷೇತ್ರಗಳಲ್ಲಿ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಈಗಿನ ದಿನಗಳಲ್ಲಿ ದುಶ್ಚಟಗಳು ಅವರನ್ನು ಅವನತಿಯ ಹಂತಕ್ಕೆ ತಲುಪಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
Read also : Ranebennur | ರಷ್ಯಾದಲ್ಲಿ ಡಾ. ನಾಗರಾಜ ಎಸ್. ಕೆ ಅವರಿಗೆ ಗ್ಲೋಬಲ್ ಅಚಿವರ್ಸ್ ಪ್ರಶಸ್ತಿ
ಸಹಾಯಕ ಕಾನೂನು ನೆರವು ಅಭಿರಕ್ಷಕರದಾ ಮಹಾದೇವಿ ಸಿ. ಹಿರೇಮಠ ಮಾತನಾಡಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸತೀಶ್ ಕಲಹಾಲ್ರವರು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಕೆ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರ
ಆರ್.ಎಲ್. ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪವನ್ ಹೆಚ್.ಆರ್. ಹಾಗೂ ಸಹಾಯಕ ಪ್ರಾಧ್ಯಾಪಕ ವಿದ್ಯಾಧರ ವೇದವರ್ಮ ಟಿ. ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.