ದಾವಣಗೆರೆ (Davanagere) : ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬುಧವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿ, ಪರಿಶೀಲಿಸಿದರು.ಮೊದಲಿಗೆ ಆಸ್ಪತ್ರೆಯ ಹೊರ ರೋಗಿಗಳ ನೊಂದಣಿ ವಿಭಾಗಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ರೋಗಿಗಳು ಹಾಗೂ ಸಾರ್ವಜನಿಕರದಿಂದ ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ವೇಳೆ ಸಾರ್ವಜನಿಕರು ಸ್ಕ್ಯಾನಿಂಗ್ ಸೆಂಟರ್ ಎದುರಿನ ಮಿನಿ ಆಪರೇಷನ್ ಥೇಯಟರ್ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ವೈದ್ಯಾಧಿಕಾರಿಗಳು ಸ್ಪಂದಿಸಿತ್ತಿಲ್ಲ ಎಂದು ಅಹವಾಲು ಹೇಳಿದರು.
ತಕ್ಷಣವೇ ನ್ಯಾ.ಬಿ.ವೀರಪ್ಪ ಸ್ಕ್ಯಾನಿಂಗ್ ಸೆಂಟರ್ ಹಾಗೂ ಮಿನಿ ಆಪರೇಷನ್ ಥೇಯಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೃದ್ರೋಗ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಓಬಿಜಿ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಪರಿಶೀಲಿಸಿದರು.ವಿವಿಧ ವಾರ್ಡ್ಗಳಿಗೆ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಗಳಿಗೆ ಗುಣಮಟ್ಟ ಸೇವೆ ನೀಡಬೇಕು ಎಂದು ಅಲ್ಲಿನ ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂತರ ಶವಾಗಾರ ಹಾಗೂ ಜೀವ ವೈದ್ಯಕೀಯ ತ್ಯಾಜ್ಯ ಶೇಖರಣಾ ಘಟಕಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅವರು, ವೈದ್ಯಕೀಯ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಲಾಗುತ್ತಿದೆಯೇ? ಶವಾಗಾರದ ತ್ಯಾಜ್ಯ ಸಮೀಪದ ನಾಲೆಗೆ ಸೇರುತ್ತಿದೆ? ಎನ್ನುವುದರ ಬಗ್ಗೆ ಪರಿಶೀಲಿಸಿ ಮಹಾನಗರ ಪಾಲಿಕೆ ಹಾಗೂ ಪರಿಸರ ಅಧಿಕಾರಿಗಳು ವರದಿ ನೀಡುವಂತೆ ಸೂಚಿಸಿದರು. ಇದೇ ವೇಳೆ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಔಷಧ ಉಗ್ರಾಣಕ್ಕೆ ಭೇಟಿ:
ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮತದ ಜಿಲ್ಲಾ ಔಷಧ ಉಗ್ರಾಣಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಯಾವುದೇ ಆಸ್ಪತ್ರೆಗಳಗೂ ಅವಧಿ ಮೀರಿದ ಔಷಧಿ, ಶಸ್ತ್ರಚಿಕಿತ್ಸೆಕ ವಸ್ತುಗಳನ್ನು ಯಾವುದೇ ಕಾರಣಕ್ಕೂ ವಿತರಿಸುವಂತಿಲ್ಲ ಎಚ್ಚರಿಕೆ ನೀಡಿದರು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಔಷಧಗಳನ್ನು ಖರೀದಿಸುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ಹಂಚಿ, ರೋಗಿಗಳಿಗೆ ವಿತರಿಸದೇ, ಔಷಧಗಳ ಅವಧಿ ಮುಗಿದು ಹೊದರೆ ಏನು ಅರ್ಥ? ಉಗ್ರಾಣದಲ್ಲಿ ಅವಧಿ ಮೀರಿದ ಔಷಧಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಹಾಗೇ ಏಕೆ ಇಟ್ಟುಕೊಂಡಿದ್ದೀರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.2022 ರ ಡಿಸೆಂಬರ್ ಮಾಹೆಯಿಂದ ಇಲ್ಲಿಯವರೆಗೆ ಅವಧಿ ಮೀರಿದ ಔಷಧಗಳ ಮೌಲ್ಯ ಎಷ್ಟು ಎಂಬುದನ್ನು ಲೋಕಾಯುಕ್ತಕ್ಕೆ ವಿವರವಾಗಿ ವರದಿ ನೀಡುವಂತೆ ಔಷಧ ಉಗ್ರಾಣಾದ ವೈದ್ಯಾಧಿಕಾರಿಗೆ ನ್ಯಾಯಮೂರ್ತಿ ಬಿ.ವಿರಪ್ಪ ಸೂಚಿಸಿದರು.
Read also : ಉಪಲೋಕಾಯುಕ್ತ ಬಿ.ವೀರಪ್ಪ ಅವರಿಂದ ನಗರದಲ್ಲಿ ಸಂಚಾರ, ಪರಿಶೀಲನೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಮಂಜುನಾಥ್,
ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ, ಉಪವಿಭಾಗಾಧಿಕಾರಿ ಸೋತೋಷ್, ಜಿಲ್ಲಾ ಶಸ್ತ್ರಚಿಕಿತ್ಸೆಕ ಡಾ.ನಾಗೇಂದ್ರಪ್ಪ ಸೇರಿದಂತೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಮತ್ತಿತರರು ಹಾಜರಿದ್ದರು.