ನಮಗೆ ಅನ್ನಿಸಿದಂತೆ ಬದುಕು ನಡೆದುಬಿಟ್ಟರೆ ಬದುಕಿಗೆ ಅರ್ಥವೆಲ್ಲಿ? ಬದುಕೆಂದರೆ ತಿರುವುಗಳ ದಾರಿ!!.. ಸಾಗಲೇಬೇಕು ತಿರುವುಗಳು,ಕಲ್ಲು, ಮುಳ್ಳುಗಳು ಎಲ್ಲವನ್ನು ದಾಟಿ ಬದುಕಿನ ಸಾರ್ಥಕತೆಯ ಗುರಿ ತಲುಪಲು ಬದುಕನ್ನು ಬದುಕಿಗಾಗಿ ಪ್ರೀತಿಸಬೇಕಿದೆ.
ಬದುಕು ಒಂದು ಕನಸಿನ ಮೂಟೆ ಇದ್ದಂತೆ.ಕಟ್ಟುವುದು ಸುಲಭ, ಹೊತ್ತು ಜೀವನ ಸಾಗಿಸುವುದು ಕಷ್ಟ.ಮುಂದಿನ ಜೀವನದ ಬಗ್ಗೆ ಅರಿವಿನಿಂದ ಬದುಕಬೇಕು. ಅದು ಹೇಗೆಂದರೆ ನೋಡಿ ನಕ್ಕವರು ಮತ್ತೆ ನಮ್ಮ ಬಗ್ಗೆ ಮಾತಾಡುವವರು ಮುಂದೆ ಯಾರಿಗೂ ನೆನಪಿರುವುದಿಲ್ಲ. ಆದರೆ ಜೀವನದಲ್ಲಿ ಗೆದ್ದವರು ಮತ್ತು ಸೋತವರು ಮಾತ್ರ ನೆನಪಿರುತ್ತಾರೆ….. ಬದುಕನ್ನು ಪ್ರೀತಿಸದೆ ಇದ್ದರೆ ನಾವು ಯಾರಿಗೂ ನೆನಪಿರುವುದಿಲ್ಲ.
ಬದುಕಿನ ದೊಡ್ಡ ಕರಾರು ಏನೆಂದರೆ,ಇಲ್ಲಿ ಎಲ್ಲಾ ಕೆಟ್ಟ ಮತ್ತು ಒಳ್ಳೆಯ ಕೃತ್ಯಕ್ಕೆ ಬೆಲೆ ತೆರಬೇಕಾಗುತ್ತದೆ. ಯಾವ ಪ್ರಶ್ನೆಗಳಿಗೂ ಬದುಕು ಅಷ್ಟು ಸುಲಭವಾಗಿ ಉತ್ತರ ಕೊಡುವುದಿಲ್ಲ.
“ಜೀವ ಚಿಕ್ಕದು, ಜೀವನ ದೊಡ್ಡದು” ಎಂಬ ಪರಿಪಾಠವನ್ನು ಕಲಿಸುತ್ತಲೇ ನಮ್ಮನ್ನು ಕಾಲವಾಗಿಸುತ್ತದೆ. ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆದಿದ್ದರೂ, ಸಾವಿರಾರು ಅವಕಾಶಗಳನ್ನು ನಮ್ಮೆದುರು ತೆರೆದಿರುತ್ತದೆ. ಆದರೆ ಆಯ್ಕೆಗಳು ನಮ್ಮ ಪಾಲಿನದಾಗಿರುತ್ತದೆ. ನೂರು ಹಾದಿಯನ್ನು ಹಾಸಿದೆ,ಎದ್ದು ನಡೆಯಬೇಕಷ್ಟೆ.ವೇಗದ ಬದುಕಿನ ಆತಂಕಗಳು, ಬದಲಾದ ಜೀವನ ಮೌಲ್ಯಗಳು,ಯಶಸ್ಸಿನ ತುತ್ತ ತುದಿಯನ್ನು ಮುಟ್ಟುವ ಆತುರ ಇವೆಲ್ಲವೂ ನಮ್ಮನ್ನು ಇಂದು ಕೃತಕತೆಗೆ ತಳ್ಳಿದೆ.
ಬದುಕು ಪಕ್ಷಪಾತಿಯಾಗಿದೆ ಎಂದು ಸದಾ ದೂರುತ್ತಲೇ ಬದುಕುವವರನ್ನು ನಮ್ಮ ಸುತ್ತಮುತ್ತಲು ಕಾಣುತ್ತೇವೆ. ಬದುಕು ಕೊಟ್ಟ ವರಗಳನ್ನು ನಾವು ಎಣಿಸುವುದು ಕಡಿಮೆ ಮತ್ತು ಬದುಕಿಗೆ ಕೃತಜ್ಞತೆ ವ್ಯಕ್ತಪಡಿಸುವುದೂ ಕಡಿಮೆಯೇ. ಬದುಕು ಕೊಟ್ಟಿಲ್ಲದಿರುವ ಅನೇಕ ಪರಿಸ್ಥಿತಿಗಳನ್ನು ತಾವಾಗಿಯೇ ತಮ್ಮ ಬಳಿ ಕರೆದುಕೊಂಡು ಸದಾ ಎದೆಯಲ್ಲಿ ಹಬೆಯಾಡುವ ಅಸಮಾಧಾನದ ಅಗ್ನಿ ಪರ್ವತವನ್ನು ಹೊತ್ತು ಬಸುಗುಟ್ಟುತ್ತಿರುತ್ತಾರೆ.
ಹಿಂದಿನ ಕಾಲದಲ್ಲಿ ಬದುಕು ಏನೇ ತಿರುವುಗಳನ್ನು ನೀಡಿದರೂ ನಾಲ್ಕು ಗೋಡೆಗಳ ಮಧ್ಯೆ ವಿಷಯ ಮಂಥನವಾಗಿ ಅಲ್ಲಿಯೇ ಮನದ ಮೂಲೆಯಲ್ಲಿ ಸದ್ದಡಗುತ್ತಿತ್ತು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನೇ ತಾವು ಹರಾಜು ಹಾಕಿಕೊಳ್ಳುವವರಿದ್ದಾರೆ.
Read also : ಸಿರಿಧಾನ್ಯ ಪಾಕಗಳು ಬಾಯಲ್ಲಿ ನೀರೂರಿಸಿದವು:ಗಿತ್ತೆ ಮಾಧವ ವಿಠ್ಠಲ್ರಾವ್
ಮನೆಯ ಮತ್ತು ಮನದ ಒಳಗಡೆ ಇರಬೇಕಾದ ವಿಷಯಗಳನ್ನು ಜನರ ಬಾಯಿಗೆ ಆಹಾರವಾಗುವಂತೆ ಮಾತನಾಡುತ್ತಿರುವುದನ್ನು ಗಮನಿಸಿದರೆ ಬದುಕು ಅನ್ನುವುದು ಅಂತಹವರ ಪಾಲಿಗೆ ‘ಹಳಸಿದ ಅನ್ನವಿದ್ದಂತೆ ‘ಎಂದು ತೋಚುತ್ತದೆ.
ಕುಟುಂಬದ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕಾದ “ಗರತಿಯರ ಗಮ್ಮತ್ತು” ಇಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನೇ ತಾವು ಹರಾಜಿಗೆ ಇಟ್ಟುಕೊಂಡು ಇಡೀ ಮನೆತನದ ಮೌಲ್ಯಗಳನ್ನೇ ಮಾರಾಟಕ್ಕಿಟ್ಟು subscriber, followers, posts ಅಂತ ತಮ್ಮನ್ನೇ ತಾವು ಮೇಧಾವಿಗಳಂತೆ,ಚಿಂತಕರಂತೆ,ಮಾರ್ಗದರ್ಶಿಗಳಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ನೋವಿನ ಕ್ಷಣಗಳು ನಮಗೆ ನಮ್ಮೊಳಕ್ಕೆ ಇಳಿಯಲು ಪ್ರೇರೇಪಿಸುತ್ತವೆ. ಇವು ನಮ್ಮೊಳಗಿನ ಆಂತರ್ಯದ ಶಕ್ತಿಯ ಪರಿಚಯವನ್ನು ನಮಗೆ ಮಾಡಿಕೊಡುತ್ತವೆ. ಬದುಕು ನಿಜಕ್ಕೂ ‘ನಮಗೇನಾಯಿತು ‘ ಎಂಬುದಲ್ಲ.
‘ನಮಗಾದದ್ದಕ್ಕೆ ‘ನಾವು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದೆವು, ಹೇಗೆ ಎದುರಿಸಿದವು, ಹೇಗೆ ಸ್ವೀಕರಿಸಿದೆವು ಎಂಬುದಾಗಿದೆ.
ಬದುಕು ಪ್ರತಿಕ್ಷಣವೂ ಹೊಸ ಸವಾಲುಗಳಿಗೆ ನಮ್ಮನ್ನು ಅಣಿಗೊಳಿಸುತ್ತಿರುತ್ತದೆ. ಮನುಷ್ಯನಿಗೆ ಸ್ವಾಭಿಮಾನವಿರಬೇಕು, ಅಭಿಮಾನವಿರಬೇಕು ಆದರೆ ಒಣ ಪ್ರತಿಷ್ಠೆ, ಒಣ ಅಭಿಮಾನಗಳಿಂದ ಬದುಕನ್ನು ಬಂಜರಾಗಿಸಿಕೊಳ್ಳಬಾರದು.
ಆಧುನಿಕತೆಯಿಂದ, ದುರಾಭಿಮಾನದಿಂದ ನಾನೇ, ನನ್ನಿಂದಲೇ, ಎನ್ನುವ ಅಹಂಗಳಿಂದ ಅನುಮಾನಗಳಿಂದ ತಮ್ಮ ಬದುಕನ್ನು ತಾವೇ ಕಮರಿಸಿಕೊಳ್ಳದಿರಿ.
“ಬದುಕು ಸ್ವೀಕಾರಕ್ಕಿದೆಯೇ ಹೊರತು, ತಿರಸ್ಕಾರಕ್ಕಲ್ಲ “
ಲೇಖಕರು
ಗೀತಾ ಭರಮಸಾಗರ
ಚಿತ್ರದುರ್ಗ
Ph :-9113694200


