ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಬಿ.ಆರ್ ಅಂಬೇಡ್ಕರ್ ವಾದ) ವತಿಯಿಂದ ಭೀಮಾ ಕೋರೆಗಾಂವ ಯುದ್ಧದಲ್ಲಿ ಹುತಾತ್ಮ ವೀರಯೋಧರ ವಿಜಯೋತ್ಸವ ಪ್ರಯುಕ್ತ ಗುರುವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಇದೇ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಹೆಚ್.ಮಲ್ಲೇಶ್, ಭಾರತದಲ್ಲಿ ನಡೆದಿರುವ ಸಾವಿರಾರು ಯುದ್ಧಗಳ ಪೈಕಿ 1818 ರ ಜನವರಿ 1 ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಒಕ್ಕೂಟದ ಪೇಶ್ವೆ ನಡುವೆ ನಡೆದ ಭೀಮಾ ಕೋರೆಗಾಂವ ಯುದ್ಧದ ವಿಜಯವು ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿದ್ದಲ್ಲದೇ,ಆ ಯುದ್ಧ ಮುಂದಿನ ತಲೆಮಾರುಗಳಿಗೆ ಸ್ವಾಭಿಮಾನದ ಆತ್ಮಗೌರವದ ಸಂಕೇತವಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಕೇವಲ 500 ಮಹಾರ್ ರೆಜಿಮೆಂಟ್ ಸೈನಿಕರು 28,,000 ಸೈನಿಕರನ್ನು ಪರಾಭವಗೊಳಿಸಿ, ಭಾರತದ ಸ್ವಾಭಿಮಾನದ ಇತಿಹಾಸವನ್ನು ಸಾರಿ ಹೇಳಿರುವ ಯುದ್ಧ ಇದಾಗಿದೆ. ಹೀಗಾಗಿ 1818 ಜನವರಿ 1 ರಂದು ನಡೆದ ಭೀಮಾ ಕೊರೆಗಾಂವ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಹಾಗೂ ನಮನ ಸಲ್ಲಿಸದೇ ಹೋದರೆ ಚರಿತ್ರೆ ಕ್ಷಮಿಸದು. ಜಾತಿವಾದ ಅಸ್ಪೃಶ್ಯತೆಯ ಮತ್ತು ಸಕಲ ತಾರತಮ್ಯದ ವಿರುದ್ಧ ನಡೆದ ಯುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಿತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದರು.
Read also : POEM|ಹೊಸ ಹರುಷ -ರಚನೆ : ಮಂಜುನಾಥ.ಜಿ
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಸಮಾದಪ್ಪ ಡಿ ಶ್ಯಾಮನೂರು, ಮಹಾಂತೇಶ್ ನವಿಲೇಹಾಳ್, ಶಿವಾನಂದ್ ಹೆಚ್ ಕೆಆರ್ ನಗರ, ಹೆಚ್. ಬಿ. ಮಂಜುನಾಥ್ ಕಬ್ಬೂರು, ಆರ್. ಗಿರೀಶ್ ಆವರಗೆರೆ, ಎಂ. ಚಂದ್ರಪ್ಪ ಅವರಗೆರೆ, ಜಿ.ಎಸದ. ಲೋಕೇಶ್ ಹಾಲೇಕಲ್ಲು, ಹೆಚ್. ಸುಜಾತ ಆವರಗೆರೆ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ದಸಂಸ ಸಮಿತಿ ಅಧ್ಯಕ್ಷ ಎನ್. ಡಿ ಮೈಲಾರಪ್ಪ ಇದ್ದರು.


