ದಾವಣಗೆರೆ :
ಮುಂದಿನ ಮೂರು ದಿನದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ನಾಯಕರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಸಭೆ ನಡೆಸಿದ ಬಿಜೆಪಿ ಬಂಡಾಯ ನಾಯಕರು, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿಗೆ ನೀಡಿರುವ ಟಿಕೆಟ್ ವಾಪಾಸ್ಸು ಪಡೆದು ಸಾಮಾನ್ಯ ಕಾರ್ಯಕರ್ತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ದುಗ್ಗಮ್ಮನ ಜಾತ್ರೆ ಬಳಿಕ ಅಭ್ಯರ್ಥಿ ಬದಲಿಸಬೇಕು
ಮಾಜಿ ಸಚಿವ ಎಸ್ ಎ.ರವೀಂದ್ರನಾಥ ರವೀಂದ್ರನಾಥ ಮಾತನಾಡಿ, ಸಂಸದ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದು ಬಿಜೆಪಿ ಸೋಲಿಗೆ ದಾರಿ ಮಾಡಿಕೊಟ್ಟಂತಾಗಿದೆ.
ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಿಸೋದು ನಮ್ಮ ಗುರಿಯಾಗಿದೆ. ಬಿಜೆಪಿ ಸೋಲಬಾರದು ಎಂದರೆ ಪಕ್ಷದಲ್ಲಿ ಬೇರೆಯವರಿಗೆ ಟಿಕೆಟ್ ನೀಡಬೇಕು. ನಾವು ಬಿಎಸ್ ವೈ ಸೇರಿದಂತೆ ಯಾರ ಬಳಿಯೂ ಹೋಗಲ್ಲ. ದುಗ್ಗಮ್ಮನ ಜಾತ್ರೆ ಬಳಿಕ ಅಭ್ಯರ್ಥಿ ಬದಲಿಸಬೇಕು. ಇಲ್ಲದಿದ್ದರೆ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿದ್ದೇಶ್ವರ್ ಅವರ ಕುಟುಂಬದವರು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕೆ ಇಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾವ್ಯಾರು ಸಿದ್ದೇಶ್ವರ್ ಗೆ ಬೆಂಬಲ ಕೋಡೊ ಪ್ರಶ್ನೆ ಇಲ್ಲ
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ ಮನುಷ್ಯ ಜಿಎಂ ಸಿದ್ದೇಶ್ವರ್. ಹೀಗಾಗಿ ನಾವ್ಯಾರು ಸಿದ್ದೇಶ್ವರ್ ಗೆ ಬೆಂಬಲ ಕೋಡೊ ಪ್ರಶ್ನೆ ಇಲ್ಲ. ಇಷ್ಟು ದಿನ ಅವರಿಗೆ ಗೌರವ ಕೊಟ್ಟಿದ್ದೇವೆ. ಮತ್ತೆ ಗೌರವ ಕೊಡೊ ಪ್ರಶ್ನೆ. ಇಲ್ಲ, ಬದಲಾವಣೆ ಒಂದೇ ನಮ್ಮ ಬೇಡಿಕೆ ಎಂದು ಹೇಳಿದರು.
ಏಳು ವಿಧಾನಸಭೆಗಳಲ್ಲಿ ಬಿಜೆಪಿ ಸೋಲಲು ಅವರೇ ಕಾರಣ
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಕಟ್ಟಿ ಬೆಳೆಸಿದವರು ನಾವೇ ಎಂದು ಸಂಸದರು ಹೇಳುತ್ತಿದ್ದಾರೆ. ಹಾಗಾದರೆ ಕಳೆದ ಬಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ವಿಧಾನಸಭೆಗಳಲ್ಲಿ ಬಿಜೆಪಿ ಸೋಲಲು ಅವರೇ ಕಾರಣವೇ? ಈ ನೈತಿಕ ಹೊಣೆ ಹೊತ್ತುಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ಮಹಿಳೆಯೊಬ್ಬರಿಗೆ ಈ ಬಾರಿ ಟಿಕೆಟ್ ನೀಡಬೇಕು ಎನ್ನುವುದಾದರೆ, ಸಾಮಾನ್ಯ ಕಾರ್ಯಕರ್ತೆಗೆ ನೀಡಲಿ. ಯಾವುದೇ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ನಾವು ತನು, ಮನ, ಧನ ನೀಡಿ ಅವರ ಗೆಲುವಿಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವ ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಸವರಾಜ ನಾಯ್ಕ್, ಲೋಕಿಕೆರೆ ನಾಗರಾಜ, ಪಾಲಿಕೆ ಸದಸ್ಯ ಅಜಯಕುಮಾರ್, ಮಾಡಾಳ ಮಲ್ಲಿಕಾರ್ಜುನ್, ಡಾ.ರವಿಕುಮಾರ್ ಸೇರಿದಂತೆ ಇತರರು ಇದ್ದರು.