ಯಾವದ್ ಭೂಮಂಡಲಂ ಧತ್ತೆ ಸಶೈಲ ವನಕಾನನಂ|
ತಾವತ್ ತಿಷ್ಠತಿ ಮೇದಿನ್ಯಾಂ ಸಂತತಿಪುತ್ರ ಪೌತ್ರಕೀ||
ಸಂಸ್ಕøತದಲ್ಲಿರುವ ಈ ಶ್ಲೋಕದ ಅರ್ಥ “ಈ ಭೂಮಂಡಲದಲ್ಲಿ ಕಾಡುಮೇಡುಗಳು ಇರುವವರೆಗೆ ಮಾನವ ಸಂತತಿ, ಪ್ರಾಣಿ, ಪಶುಪಕ್ಷಿಗಳು ಇರುತ್ತವೆ”. ಎಂಬುದಾಗಿದೆ. ಪರಿಸರದ ಗಿಡಮರಗಳು, ಸಸ್ಯಗಳನಾಶ ನಮ್ಮ ನಾಶ. ಅನೇಕ ನಾಗರಿಕತೆಗಳು, ನಮ್ಮ ಸಿಂಧೂ ಬಯಲಿನ ನಾಗರಿಕತೆ ಕೂಡ ಸಸ್ಯನಾಶದಿಂದ ಉಂಟಾಗಿದೆ ಎಂಬುದಾಗಿ ವಿಜ್ಞಾನಿಗಳು, ವಿಜ್ಞಾನ ಹೇಳುತ್ತದೆ. ಹೀಗಾಗಿ ಹಸಿರಿಲ್ಲವಾದಾಗ ಉಸಿರಿಲ್ಲ. ಆಗ ಬದುಕೂ ಇಲ್ಲ.
ಸಂಸ್ಕøತಿಯೂ ಇಲ್ಲ. ನಾಗರಿಕತೆಯೂ ಇಲ್ಲ. ನಮ್ಮ ಉತ್ತಮ ಆರೋಗ್ಯಕ್ಕೆ ನಿರ್ಮಲ ಅಥವಾ ಪರಿಶುದ್ಧ ಪರಿಸರ, ಶುದ್ಧಗಾಳಿ, ಶುದ್ಧನೀರು, ಬೆಳಕು ಅತ್ಯವಶ್ಯಕ. ಇದನ್ನು ಅರಿತು ನಾವು ವಾಸಿಸುತ್ತಿರುವ ಮನೆ, ಕಲಿಯುವ ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ಕೆಲಸ ಮಾಡುವ ಕಛೇರಿ, ಆಸ್ಪತ್ರೆ, ಬ್ಯಾಂಕ್ ಮೊದಲಾದವುಗಳ ಪರಿಸರವನ್ನು ನಾವಿಂದು ಎಷ್ಟು ಸ್ವಚ್ಛವಾಗಿಟ್ಟು ಕೊಂಡಿದ್ದೇವೆ? ನಮ್ಮಲ್ಲಿ ಎಷ್ಟು ಪ್ರಮಾಣದ ಸ್ವಚ್ಛತಾ ಕಾಳಜಿ ಇದೆ? ಎಂಬುದು ನಮ್ಮ ಆತ್ಮಾವಲೋಕನದ ಸಂಗತಿಯಾಗಿದೆ.
ವಿಶ್ವಪರಿಸರ ದಿನಾಚರಣೆ
ವಿಶ್ವಪರಿಸರ ದಿನವನ್ನು ಜೂನ್ 5ರಂದು ಆಚರಿಸಲಾಗುತ್ತಿದೆ. ಸಮುದ್ರದ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ, ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕ ವೇದಿಕೆಯಾಗಿದ್ದು. 143 ದೇಶಗಳು ಈ ದಿನಾಚರಣೆಯಲ್ಲಿ ಭಾಗವಹಿಸುತ್ತವೆ. ವಿಶ್ವಪರಿಸರ ದಿನವನ್ನು ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ 1972 ಜೂನ್ 5ರಂದು ಸ್ಥಾಪಿಸಿತು.
ಮೊದಲಬಾರಿಗೆ ಜೂನ್ 5-1973 ರಂದು 51 ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದಲ್ಲಿ ಆಚರಿಸಲಾಯಿತು. ವಿಶ್ವಪರಿಸರ ದಿನದ ಥೀಮ್ ಪ್ರತಿವರ್ಷ ಬದಲಾಗುತ್ತಾ ಬಂದಿದೆ. 2023ರ ಥೀಮ್ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವಾದರೆ. 2024 ‘ನಮ್ಮ ಭೂಮಿ’ ಎಂಬ ಘೋಷಣೆಯಾಗಿದೆ.
ಪರಿಸರ ಪ್ರಜ್ಞೆ ಇದ್ದಲ್ಲಿ ಸುಂದರ ಪರಿಸರ
ಪರಿಸರ ಪ್ರಜ್ಞೆ, ಆರೋಗ್ಯಕರ ಪರಿಸರ ನಿರ್ಮಾಣ ಎಲ್ಲರ ಆಶಯವಾಗಬೇಕು. ನಮ್ಮ ಭೌಗೋಳಿಕ ಪರಿಸರವು ಸುಂದರ ಪರಿಸರ ಎಂಬ ಹೆಗ್ಗಳಿಕೆ ಪಡೆದಿರುವಂತೆ ನಮ್ಮ ಪೂರ್ವಜರು ಸೂಕ್ತ ಆಲೋಚನೆವುಳ್ಳವರಾಗಿ ಸಸ್ಯ ಸಂಪತ್ತಿಗೆ ಮಹತ್ವ ನೀಡಿದ್ದರು. ಗರಿಕೆಯಿಂದ ಬೃಹತ್ ಮರದವರೆಗೆ ಎಲ್ಲವೂ ಉಪಯುಕ್ತವೆನಿಸಿದ್ದವು. ಗಿಡಮರಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಸಸ್ಯಗಳಲ್ಲಿಯ ಔಷಧೀಯಗುಣ ಅರಿತಿದ್ದರು. ಶಮಿ, ಶ್ರೀಗಂಧ, ಬನ್ನಿ, ಆಲ, ಅರಳಿ, ಬಿಲ್ವ, ತುಳಸಿ, ಬೇವು, ತೆಂಗು, ಬಾಳೆ, ಗರಿಕೆ, ತುಂಬೆ ಮೊದಲಾದವುಗಳು ಶ್ರೇಷ್ಠವಾಗಿದ್ದವು. ಮಾನವ ಬದುಕಿನಲ್ಲಿ ಸಸ್ಯಸಂಕುಲ ಹಾಸುಹೊಕ್ಕಾಗಿ ಸೇರಿದೆ. ಆದರೆ ಇಂದು ನಮ್ಮ ಭೌಗೋಳಿಕ ಪರಿಸರವನ್ನು ವಿರೂಪಗೊಳಿಸಲಾಗಿದೆ.
ಜಾಗತಿಕ ಸಮಸ್ಯೆಯಾಗಿರುವ ಪರಿಸರ ಮಾಲಿನ್ಯ
ಪರಿಸರ ಮಾಲಿನ್ಯವು ಕೇವಲ ಭಾರತ ದೇಶಕ್ಕೆ ಮಾತ್ರ ಸಮಸ್ಯೆಯಾಗಿರದೆ ಇಡೀ ವಿಶ್ವವನ್ನೇ ಬಹಳವಾಗಿ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದೆ. ನಮ್ಮ ಸುತ್ತ ಮುತ್ತಲಿನ ಪರಿಸರವು ಶುದ್ಧವಾಗಿರದೆ ಮಲಿನತೆಯನ್ನು ಹೊಂದಿರುವುದಾದರೆ ಅದು ‘ಪರಿಸರ ಮಾಲಿನ್ಯ’ ಎನಿಸಿಕೊಳ್ಳುತ್ತದೆ. ಮಾಲಿನ್ಯ ಎಂದರೆ ಮಲಿನತೆ, ಕಲ್ಮಶ, ಕೊಳೆ, ದೋಷ ಎಂಬುದಾಗಿದೆ.
ಸಾಮಾನ್ಯವಾಗಿ ಜೀವಿಯ ಮೇಲೆ ಹಾನಿಕಾರಕ ಪರಿಣಾಮ ಬೀರುವ ಇಲ್ಲವೇ ಯಾವುದೇ ಜೀವಿಯ ಆರೋಗ್ಯಕ್ಕೆ ಸಂಭವನೀಯ ಅಪಾಯ ತರುವ ಪರಿಸರದ ನೆಲ, ಜಲ, ಶಬ್ದ, ವಾಯು ಮೊದಲಾದವುಗಳೆಲ್ಲಾಗುವ ಯಾವುದೇ ಬಗೆಯ ಭೌತಿಕ, ರಾಸಾಯನಿಕ, ಇಲ್ಲವೇ ಜೈವಿಕ ಗುಣಗಳಲ್ಲಿನ ಅಹಿತಕರ ಬದಲಾವಣೆಗಳಿಗೆ ಪರಿಸರ ಮಾಲಿನ್ಯ ಎನ್ನುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆ ತಿಳಿಸುವಂತೆ “ಜೀವ ಮಂಡಲದ ಯಾವುದೇ ಘಟಕದಲ್ಲಿ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಬದಲಾವಣೆಯಾಗಿ ಅಲ್ಲಿನ ಜೀವಿಗಳಿಗೆ ವಿಶೇಷವಾಗಿ ಮಾನವ ಜನಾಂಗಕ್ಕೆ ಹಾನಿ ಉಂಟುಮಾಡುವ ಅಹಿತಕರ ಪರಿಸ್ಥಿತಿಯನ್ನು ಪರಿಸರ ಮಾಲಿನ್ಯ ಎನ್ನಲಾಗಿದೆ.
ಪರಿಸರದ ಪರಿಸ್ಥಿತಿ ಅಶುದ್ಧತೆಯೇ ಆಗಿದೆ
ಪ್ರಸ್ತುತ ಸನ್ನಿವೇಶದಲ್ಲಿ ಶುದ್ಧ ಪರಿಸರದ ಮಹತ್ವದ ಅರಿವು ನಮಗೆ ಅಗತ್ಯವಾಗಿದೆ. ಇಂದು ಪರಿಸರದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬಗೆ ಬಗೆಯ ರೋಗ-ರುಜಿನಗಳನ್ನು ಹರಡಬಲ್ಲ ವಿವಿಧ ಬಗೆಯ ವಿಷಾಯುಕ್ತ ರಾಸಾಯನಿಕಗಳು ಅಧಿಕಗೊಳ್ಳುತ್ತಿವೆ. ಕುಡಿಯುವ ಶುದ್ಧ ನೀರು, ಗಾಳಿ, ಆಹಾರ ದುರ್ಲಭವಾಗುತ್ತಿದೆ. ಭೂಮಿಯು ಕಾವೇರುತ್ತಿದೆ. ಹವಾಮಾನದಲ್ಲಿ ಅನಿರೀಕ್ಷಿತ ಸ್ಥಿತ್ಯಂತರಗಳಾಗುತ್ತಿವೆ. ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಇದರ ಜೊತೆಗೆ ಅರಣ್ಯನಾಶ, ವಾಹನ ಉಗುಳುವ ಹೊಗೆ, ಕಾರ್ಖಾನೆಗಳು ಹೊರಹಾಕುವ ತ್ಯಾಜ್ಯಗಳು ಜೀವಸಂಕುಲದ ನೆಮ್ಮದಿಯ ಬದುಕಿಗೆ ಕುತ್ತುತಂದಿವೆ. ಕಲುಷಿತ ಕುಡಿಯುವ ನೀರು, ಚರ್ಮರೋಗ, ಅಲರ್ಜಿ, ಕರಳುಬೇನೆ, ಶ್ವಾಸಕೋಶದ ತೊಂದರೆ, ಯಕೃತ್ ರೋಗ, ಕೈಕಾಲು ಊತಕ್ಕೂ ಕಾರಣವಾಗಿದೆ. ಹೀಗಾಗಿ ಹಲವು ಬಗೆಯ ಕಾಯಿಲೆಗಳು, ರೋಗರುಜಿನಗಳು ನಮ್ಮನ್ನು ಕಾಡುತ್ತಿವೆ ಇದಕ್ಕೆ ಕಾರಣ ಪರಿಸರದ ಅಶುದ್ಧತೆಯೇ ಆಗಿದೆ.
ಪರಿಸರ ಸಂರಕ್ಷಣೆ ಮತ್ತು ಚಳುವಳಿಗಳು
ಪ್ರಸ್ತುತ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಸುಲಭಸಾಧ್ಯವಾದ ಕಾರ್ಯವಲ್ಲ. ಅದಕ್ಕೆ ಸೂಕ್ತ ಪರಿಸರ ಶಿಕ್ಷಣ, ಜಾಗೃತಿ, ನಿರಂತರ ಕಟ್ಟೆಚ್ಛರ ಹಾಗೂ ನಮ್ಮ ಬದ್ಧತೆ ಅಗತ್ಯವಾಗಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಭೌಗೋಳಿಕ ಸಮಾಜ, ಮಲೇಶಿಯಾದ ಭೂ ಗೆಳೆಯರು, ಯುರೋಪಿನ ಗ್ರೀನ್ಪೀಸ್ ಸಂಘಟನೆ, ಕ್ಲಬ್ ಆಫ್ ರೋಮ್ ಮೊದಲಾದ ಸಂಘ-ಸಂಸ್ಥೆಗಳು ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿವೆ. ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುತ್ತಿವೆ. ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆಗಾಗಿ ಅಪಾರವಾಗಿ ದುಡಿಯುತ್ತಿರುವ ಸಂಘ-ಸಂಸ್ಥೆಗಳೆಂದರೆ ದೆಹಲಿಯಲ್ಲಿರುವ ವಿಜ್ಞಾನ ಮತ್ತು ಪರಿಸರ ಕೇಂದ್ರ, ಮುಂಬಯಲ್ಲಿರುವ ಪ್ರಕೃತಿ ವಿಜ್ಞಾನ ಸಮಾಜ, ಕೇರಳದ ಕೇರಳಶಾಸ್ತ್ರ ಸಾಹಿತ್ಯ ಪರಿಷತ್ತು, ಉತ್ತರ ಪ್ರದೇಶದ ಚಿಪ್ಕೊ ಚಳುವಳಿ, ನಮ್ಮ ಕರ್ನಾಟಕದ ಅಪ್ಪಿಕೋಚಳುವಳಿ, ಮುಂತಾದವುಗಳಿವೆ.
ಹಸಿರು ಬಳಗಗಳಿಂದ ಪರಿಸರ ರಕ್ಷಣೆ
ಆಧುನಿಕತೆ, ಕೈಗಾರಿಕೀರಣ, ನಗರೀಕರಣ ಮತ್ತು ಜನಸಂಖ್ಯೆ ಬೆಳೆದಂತೆ ಪರಿಸರ ಸಂರಕ್ಷಣೆ ಒಂದು ಬೃಹತ್ ಸಮಸ್ಯೆಯಾಗಿದೆ. ನಾಗರಿಕತೆಯ ಹೆಸರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಪ್ರಕೃತಿದತ್ತ, ನಿಸರ್ಗಜನ್ಯ ಸಂಪನ್ಮೂಲಗಳ ಬಳಕೆ ಹೆಚ್ಚುತ್ತಿದೆ. ಮುಂದಿನ ಪೀಳಿಗೆಗೆ ನಿಸರ್ಗದ ಒಡಲು ಬರಿದಾಗ ಬಹುದಾದ ಸಾಧ್ಯತೆ ಇದೆ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.
ಶಾಸನಗಳ ಮೂಲಕ ಪರಿಸರ ಸಂರಕ್ಷಣೆ ಸಾಧ್ಯವೆ? ಜನತೆ ತಮ್ಮ ಅತಿ ಬಳಕೆಗೆ ಕಡಿವಾಣ ಅವಶ್ಯ. ಅಮೇರಿಕಾ ಮತ್ತು ಐರೋಪ್ಯ ರಾಷ್ಟ್ರಗಲ್ಲಿ ‘ಹಸಿರುಬಳಗ’, ‘ಹಸಿರುಸಂಕುಲ’ ಅಥವಾ ಗ್ರೀನ್ ಕಮ್ಯೂನ್ ಎಂಬ ಹೆಸರಿನಲ್ಲಿ ಪರಿಸರವಾದಿಗಳು ಸಂಘಟಿತರಾಗಿ ಕಾರ್ಯೋನ್ಮುಖರಾಗಿದ್ದಾರೆ. ಈ ಚಿಂತನೆಯತ್ತ ಪರಿಸರ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಭಾರತವೂ ಗಮನಹರಿಸುವುದು ಸೂಕ್ತವಾಗಿದೆ.
Read also : ಖಾಸಗಿ ಕಾರ್ಯಕ್ರಮಕ್ಕೆ ಬಿ.ವಾಮದೇವಪ್ಪ ಅಧ್ಯಕ್ಷತೆ : ದಾವಣಗೆರೆ ಸಾಹಿತ್ಯ ವಲಯದಲ್ಲಿ ಅಸಮಾಧಾನ
ಔದ್ಯೋಗಿಕರಣದ ನಂತರ ಬಂಡವಾಳ ಶಾಹಿಗಳು ಹುಟ್ಟುಹಾಕಿರುವ ಪ್ರವೃತ್ತಿಗಳನ್ನು ವಿರೋಧಿಸುತ್ತಾ ಸ್ವಾವಲಂಬನೆಯನ್ನು ಪ್ರತಿಪಾದಿಸುವುದು, ಎಲ್ಲಾ ಕ್ಷೇತ್ರಗಳಲ್ಲೂ ಸಹಕಾರ, ಸ್ವಾವಲಂಬನೆ, ಅನ್ಯೋನ್ಯ ಮಾನವೀಯ ಸಂಬಂಧಗಳು, ಪ್ರಜಾಸತ್ತಾತ್ಮಕ ನಿರ್ಧಾರಗಳು, ಹಸಿರು ಬಳಗಗಳ ಪ್ರಮುಖ ರೂಪುರೇಷೆಗಳು. ಈ ಬಳಗದ ಜೀವನಸೂತ್ರ ಸರಳತೆ, ನೈಸರ್ಗಿಕ ಆಹಾರ ಸೇವನೆ, ಹಸಿತಿಂಡಿ, ತಿನುಸುಗಳ 40 ಬಗೆಯ ವಿಶೇಷ ಮೆನು ಇವರಲ್ಲಿದೆ.
ಗಿಡಬಳ್ಳಿಗಳನ್ನು ಬೆಳೆಸುವುದು. ನೀರು ಶುದ್ಧೀಕರಿಸುವ ಮಣ್ಣಿನ ತಪ್ಪಲೆಗಳ ಬಳಕೆ, ಪೆಟ್ರೂಲ್, ಡೀಸೆಲ್, ಗ್ಯಾಸ್, ವಿದ್ಯುಚ್ಛಕ್ತಿ, ಇಂಧನಗಳಿಗೆ ಬದಲಾಗಿ ಸೌರಶಕ್ತಿ, ಜೈವಿಕ ವಸ್ತುಗಳ ಉಪಯೋಗ, ಆರೋಗ್ಯ ಸಂರಕ್ಷಣೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ ಮುಂತಾದವುಗಳಿಗೆ ಆದ್ಯತೆ. ಅನಿವಾರ್ಯಸಂದರ್ಭಗಳಲ್ಲಿ ಮಾತ್ರ ಅಲೋಪತಿ ಔಷಧಿ ಮತ್ತು ಚಿಕಿತ್ಸೆಗಳಿಗೆ ಮೊರೆ ಹೋಗುತ್ತಿದ್ದಾರೆ.
ಸಸ್ಯಹಾರಿಗಳ ಕ್ಲಬ್, ಹಸಿತಿಂಡಿ ತಿನಿಸುಗಳ ಕ್ಲಬ್ಗಳು ಹೆಚ್ಚು ಪ್ರಚಲಿತವಾಗಿವೆ. ಹಸಿರು ಬಳಗಗಳು ಬಹುತೇಕ ನೈಸರ್ಗಿಕ ಆಹಾರ ಸೇವೆನೆಯನ್ನು ಪ್ರತಿಪಾದಿಸುತ್ತದೆ. ಸೌರಬಸ್ಸುಗಳು, ವಾಹನಗಳು, ಕಾರುಗಳ ಬಳಕೆ ಹೆಚ್ಚಾಗುತ್ತಿದೆ. ಉಡುಗೆ-ತೊಡುಗೆಗಳು ನೈಸರ್ಗಿಕವಾಗಿ ಉತ್ಪಾದಿಸಲ್ಪಟ್ಟವುಗಳಿಗೆ ಒತ್ತು ನೀಡಲಾಗುತ್ತಿದೆ.
ಪರಿಸರ ಶಿಕ್ಷಣ ಮತ್ತು ಉದ್ಯೋಗ ಅವಕಾಶ
ಕೈಗಾರಿಕೀಕರಣ ಮತ್ತು ಪರಿಸರ ಈ ಎರಡನ್ನು ಪ್ರಸ್ತುತ ಸರಿದೂಗಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಿದ್ದು, ಈ ಸವಾಲನ್ನು ಎದುರಿಸಲು ಪರಿಸರ ತಜ್ಞರ ಸಹಾಯ, ಸಹಕಾರ, ನೆರವು, ಮಾರ್ಗದರ್ಶನ ಅತ್ಯಗತ್ಯ. ಪರಿಸರ ಶಿಕ್ಷಣ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಶಿಕ್ಷಣದ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು ಎಂಬುದು ಕೊಠಾರಿ ಶಿಕ್ಷಣ ಆಯೋಗದ ಆಶಯ.
ನಮ್ಮ ದೇಶದ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪರಿಸರ ಶಿಕ್ಷಣ ನೀಡಲಾಗುತ್ತಿದೆ. 1986ರ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯದಲ್ಲಿ ಪರಿಸರ ಶಿಕ್ಷಣಕ್ಕೆ ಆದ್ಯತೆನೀಡಿ ಅಧ್ಯಾಪಕರಿಗೆ ತರಬೇತಿ ನೀಡಲಾಯಿತು. ಪರಿಸರ ವಿಜ್ಞಾನದಲ್ಲಿ ಬಿ.ಎಸ್.ಸಿ, ಎಂ.ಎಸ್.ಸಿ., ಪಿಎಚ್.ಡಿ ಮಾಡಬಹುದಾಗಿದೆ. ಹಾಗೆಯೇ ಫಾರೆಸ್ಟ್ ಮ್ಯಾನೇಜಮೆಂಟ್ನಲ್ಲಿ ಎಂ.ಬಿ.ಎ., ಐ.ಎಫ್.ಎಸ್. ಪರೀಕ್ಷೆ, ಪರಿಸರ ಇಂಜನೀಯರಿಂಗ್ ಕೋರ್ಸಗಳಿವೆ. ಪರಿಸರಕ್ಕೆ ಸಂಬಂಧಿಸಿದ ಸಂಶೋಧನೆ ಮಾಡಲು ವಿಪುಲ ಅವಕಾಶಗಳಿವೆ.
ಪರಿಸರ ಕಾನೂನು ಕುರಿತು ಡಿಪ್ಲೋಮಾಗಳಿವೆ. ಪರಿಸರಕ್ಕೆ ಕಾಳಜಿ ವಹಿಸುವವರಿಗೆ, ಪರಿಸರ ತಜ್ಞರಿಗೆ ಹೆಚ್ಚಿನ ಬೇಡಿಕೆಗಳಿವೆ. ಸರ್ಕಾರಗಳು ಹಾಗೂ ಕಂಪನಿಗಳು ಪರಿಸರ ಸಂರಕ್ಷಣೆ ಯೋಜನೆಗಳಿಗೆ ಸಾಕಷ್ಟು ಬಂಡವಾಳ ಹೂಡುತ್ತಿವೆ. ‘ನಡೆ ಹಸಿರಿಗೆ (ಗೋಗ್ರೀನ್)’ ಹೆಚ್ಚು ಜನಪ್ರಿಯವಾಗಿರುವ ಘೋಷಣೆ. ಪರಿಸರ ವಿಜ್ಞಾನ, ಪರಿಸರ ಇಂಜನೀಯರಿಂಗ್, ಪರಿಸರ ಅರ್ಥಶಾಸ್ತ್ರಜ್ಞರಿಗೆ ಉದ್ಯೋಗಾವಕಾಶಗಳು ವಿಪುಲವಾಗಿವೆ. ಒಟ್ಟಾರೆ ಪರಿಸರ ಶಿಕ್ಷಣದಿಂದ ಪರಿಸರ ಸಂರಕ್ಷಣೆ ಸಾಧ್ಯವೆನ್ನಬಹುದು.
ಪರಿಸರ ಮಾಲಿನ್ಯಕ್ಕೆ ಕಾರಣವಾದ ಅಂಶಗಳು
ಅರಣ್ಯಗಳ ನಾಶ , ರಸಾಯನಿಕ ಪದಾರ್ಥಗಳ ಬಳಕೆ, ವಿಪರೀತ ವಾಹನಗಳ ಓಡಾಟ ಕೈಗಾರಿಕೀಕರಣ, ನಗರೀಕರಣ, ಜನಸಂಖ್ಯಾ ಹೆಚ್ಚಳ , ಪರಿಸರ ಪ್ರಜ್ಞೆಯ ಅಭಾವ , ಆಡಳಿತ ನಿರ್ವಹಣೆಯ ಕೊರತೆ , ಅಣುವಿಕಿರಣ ಸ್ಥಾವರಗಳು , ಆರ್ಥಿಕ ಅಸಮಾನತೆಗಳು.
ಪರಿಸರ ಮಾಲಿನ್ಯದ ದುಷ್ಪರಿಣಾಮಗಳು
ಮಾನವ ಸಂಪತ್ತಿನ ಅಪಾರ ನಷ್ಟ , ಪಶು, ಪ್ರಾಣಿ, ಪಕ್ಷಿಗಳಿಗೆ ಗಂಡಾಂತರ ,ಕೃಷಿ ಅಭಿವೃದ್ಧಿ ಕುಂಠಿತ , ಜಲಸಂಪತ್ತಿನ ನಾಶ ,ವಿಚಿತ್ರ ರೋಗ ರುಜಿನಗಳು , ಜನರ ನೆಮ್ಮದಿಗೆ ಭಂಗ , ಸಂಸ್ಕøತಿಯ ನಾಶ , ಪ್ರಗತಿಪರ ಕಾರ್ಯಗಳಿಗೆ ಕಡಿವಾಣ ,ಸಾಮಾಜಿಕ ವೈಷಮ್ಯ.
ಪರಿಸರ ಮಾಲಿನ್ಯದ ವಿವಿಧ ಬಗೆಗಳು
ವಾಯು ಮಾಲಿನ್ಯ , ಜಲ ಮಾಲಿನ್ಯ , ನೆಲ ಮಾಲಿನ್ಯ, ಶಬ್ದ ಮಾಲಿನ್ಯ , ಅಣುವಿಕಿರಣ ಮಾಲಿನ್ಯ , ನಗರ ಮಾಲಿನ್ಯ.
ವಾಯು ಜೀವನಾಧಾರವಾದ ವಸ್ತು. ಅದು ಶುದ್ಧವಾಗಿದ್ದರೆ, ಸಾಕಷ್ಟು ಆಮ್ಲಜನಕದಿಂದ ಕೂಡಿರುತ್ತದೆ. ವಾಯು ಮಾಲಿನ್ಯವಾದರೆ ಶಾರೀರಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯ ಹೃದಯ ಹಾಗೂ ಶ್ವಾಸಕೋಶದ ಮೇಲೆ ಕೆಟ್ಟಪರಿಣಾಮ ಬೀರಿ, ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ವಾಹನಗಳು, ಕಾರ್ಖಾನೆಗಳು, ದುರ್ವಾಸನೆ ವಾಯು ಮಾಲಿನ್ಯಕ್ಕೆ ಪೂರಕವಾಗಿವೆ. ನೀರು ಸಮಸ್ತ ಜೀವಿಗಳ ಮೂಲ ಜೀವಾಳ. ಜೀವಿಗಳ ಬದುಕು, ವಿಕಾಸಕ್ಕಾಗಿ ನೀರು ಅಗತ್ಯ.
ಭೂಮಿಯ ಮೇಲೆ ಮುಕ್ಕಾಲು ಭಾಗನೀರಿದ್ದರೂ ಅವು ಕುಡಿಯಲು ಯೋಗ್ಯವಲ್ಲ. ಭೂಮಿಯ ಮೇಲೆ ಲಭ್ಯವಿರುವ ಸಿಹಿ ನೀರು ಅತ್ಯಲ್ಪ ಇಂದು ಶುದ್ಧ ನೀರಿನ ಕೊರತೆ. ದುಸ್ತರವಾಗಿ ಜಲವು ಮಾಲಿನ್ಯ ಉಂಟಾಗುತ್ತಿದೆ. ನದಿಗಳು ಮಲಿನವಾಗಿವೆ. ನೀರಿನ ಅಶುದ್ಧತೆಯು ಹಲವು ರೋಗಗಳಿಗೆ ಕಾರಣವಾಗಿದೆ. ಹಾಗೆಯೇ ಶಬ್ಧ ಮಾಲಿನ್ಯವು ಮೋಟಾರು, ಕಾರು, ಕಾರ್ಖಾನೆಗಳು, ಸೈರನ್ನಗಳು, ಪಟಾಕಿಗಳು, ಸಿಡಿಮುದ್ದುಗಳು ಡೈನಮಂಟ್ಗಳು, ಬಾಂಬ್ಗಳು, ಧ್ವನಿವರ್ಧಕಗಳು ಇವುಗಳಿಂದಾಗಿ ಜನರಲ್ಲಿ ಶಬ್ದದ ತೀವ್ರತೆಯಿಂದ ಕಿವುಡುತನ, ನಿದ್ರಾಭಂಗ, ರಕ್ತದೊತ್ತಡ, ಹೃದಯರೋಗ, ಮುಂತಾದ ರೋಗಗಳಿಗೆ ಕಾರಣವಾಗಿದೆ. ಅಣುವಿಕಿರಣ ಮಾಲಿನ್ಯವು ಅನೇಕ ಸಾವು-ನೋವುಗಳಿಗೆ, ಅಂಗವಿಕಲತೆಗೆ, ಆರೋಗ್ಯ ಸಮಸ್ಯೆಗೆ ಎಡೆಮಾಡಿಕೊಟ್ಟರೆ.
ನಗರ ಮಾಲಿನ್ಯವು ಕೊಳಚೆ ಪ್ರದೇಶಗಳಿಂದ ದುರ್ಬಲ ಒಳಚರಂಡಿ ವ್ಯವಸ್ಥೆಗಳು. ಕಾರ್ಖಾನೆಗಳು, ಜನಸಾಂದ್ರತೆಯಿಂದ ಜನತೆಯಲ್ಲಿ ಅನೇಕ ಬಗೆಯ ರೋಗ-ರುಜಿಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಶುದ್ಧ ಪರಿಸರವೇ ನಮ್ಮ ರಕ್ಷಣೆ ನಮ್ಮ ಉತ್ತಮ ಬದುಕು. ಮಲಿನತೆಯೇ ನಮ್ಮಗಳ ವಿನಾಶ ಎಂಬ ಮಾತು ಗೊತ್ತಿರಲಿ.
ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613