ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಉಚ್ಚಾಟಿತರಾದ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷದ ವರಿಷ್ಟರಿಗೆ ಒಂದು ಸಂದೇಶ ರವಾನಿಸಿದರು.ಇನ್ನು ಪಕ್ಷದ ಶಿಸ್ತು ಉಲ್ಲಂಘನೆ ನಾಡುವುದಿಲ್ಲ ಎಂಬುದು ಈ ಸಂದೇಶ. ಅರ್ಥಾತ್, ಪಕ್ಷದಿಂದ ಉಚ್ಚಾಟಿತರಾದ ಯತ್ನಾಳ್ ಅವರು ಮರಳಿ ಬಿಜೆಪಿ ಪಾಳಯಕ್ಕೆ ಮರಳಲು ಉತ್ಸುಕರಾಗಿದ್ದಾರೆ.ಆದರೆ ಯಡಿಯೂರಪ್ಪ ಗ್ಯಾಂಗನ್ನು ಕಂಡರೆ ಕುದಿಯುವ , ಎಗಾದಿಗಾ ಮಾತನಾಡುವ ಯತ್ನಾಳ್ ಹೀಗೆ ಇದ್ದಕ್ಕಿದ್ದಂತೆ ಧ್ವನಿ ಬದಲಿಸಿದ್ದೇಕೆ?
ಹಾಗೆ ನೋಡಿದರೆ ಬಿಜೆಪಿಯಿಂದ ಉಚ್ಚಾಟಿತರಾದ ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರೆ.ಕಟ್ಟಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ದ ಎರಗುತ್ತಾರೆ ಅಂತ ಕೆಲವರು ನಿರೀಕ್ಷಿಸಿದ್ದರು. ಎಷ್ಟೇ ಆದರೂ ಲಿಂಗಾಯತ ಒಳಪಂಗಡಗಳಲ್ಲಿ ತುಂಬ ಬಲಿಷ್ಟರಾದ ಪಂಚಮಸಾಲಿ ಸಮುದಾಯ,ಯತ್ನಾಳ್ ಅವರಿಗಾದ ಈ ಅವಮಾನವನ್ನು ಸಹಿಸುವುದಿಲ್ಲ. ಮತ್ತು ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲಿರುವ ಯತ್ನಾಳ್ ತಮ್ಮ ಪವರ್ರನ್ನು ತೋರಿಸುತ್ತಾರೆ ಎಂಬುದು ಇಂತವರ ಲೆಕ್ಕಾಚಾರ ಆಗಿತ್ತು.
ಆದರೆ, ಇಂತಹ ಲೆಕ್ಕಾಚಾರಗಳನ್ನು ಹುಸಿಗೊಳಿಸಿದ ಯತ್ನಾಳ್ ಮರಳಿ ಬಿಜೆಪಿ ಪಾಳಯ ಸೇರಲು ಉತ್ಸುಕರಾಗಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟ ಎಂಬುದು ನಿಜವಾದರೂ ಭವಿಷ್ಯದಲ್ಲಿ ಅದನ್ನು ನಿಜ ಮಾಡಲು ಒಬ್ಬ ನಾಯಕರು ಅಣಿಯಾಗಿದ್ದಾರೆ.ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ- ದೇವೇಂದ್ರ ಫಡ್ನವೀಸ್. ಹೀಗೆ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಮರಳಿ ಬಿಜೆಪಿ ಪಾಳಯಕ್ಕೆ ಸೇರಿಸಲು ದೇವೇಂದ್ರ ಫಡ್ನವೀಸ್ ಯಾಕೆ ಉತ್ಸುಕರಾಗಿದ್ದಾರೆ ? ಹಾಗೆಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಕಣ್ಣಿಗೆ ಕಾಣುವ ಮತ್ತೊಬ್ಬ ನಾಯಕ,ಮಾಜಿ ಸಚಿವ ರಮೇಶ್ ಜಾರಕಿಹೊಳಿ.
ಅಂದ ಹಾಗೆ ಯಡಿಯೂರಪ್ಪ-ವಿಜಯೇಂದ್ರ ಅವರ ವಿರುದ್ಧದ ಹೋರಾಟದಲ್ಲಿ ಬಸವನಗೌಡ ಪಾಟೀಲ್ ಯತ್ನಾಳರಂತೆ ಮುಂಚೂಣಿಯಲ್ಲಿದ್ದವರು ರಮೇಶ್ ಜಾರಕಿಹೊಳಿ.ಆದರೆ ಜಿಹ್ವಾಸ್ತ್ರ ಪ್ರಯೋಗದಲ್ಲಿ ಜಾರಕಿಹೊಳಿ ಅವರು ಯತ್ನಾಳರಷ್ಟು ನಿಷ್ಣಾತರಲ್ಲ. ಕೆಲವು ಸಂದರ್ಭಗಳಲ್ಲಿ ಯತ್ನಾಳ್ ಮೌನವಾಗಿರುವ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತಲ್ಲ ? ಆಗೆಲ್ಲ ಜಾರಕಿಹೊಳಿ ರಣೋತ್ಸಾಹ ತೋರಿಸುತ್ತಿದ್ದರು.ಇನ್ನು ಮುಂದೆ ವಿಜಯೇಂದ್ರ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎನ್ನುತ್ತಿದ್ದರು.
Read also : Political analysis | ಯೋಗಿಯ ಯೋಗ ನೀರಿನಿಂದ ನೀರಾ ತನಕ
ಆದರೆ ಅದೇನೇ ಮಾಡಿದರೂ ಯತ್ನಾಳ್ ಅವರಷ್ಟು ಪರಿಣಾಮಕಾರಿಯಾಗಿ ಜಿಹ್ವಾಸ್ತ್ರ ಪ್ರಯೋಗಿಸಲು ಅವರಿಗೆ ಆಗುತ್ತಿರಲಿಲ್ಲ. ಹೀಗಾಗಿ ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟಿತರಾದ ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮೌನಕ್ಕೆ ಜಾರಿದ್ದಾರೆ. ಹಾಗಂತ ಪರ್ಮನೆಂಟಾಗಿ ಮೌನ ಧರಿಸಲು ಸಾಧ್ಯವಿಲ್ಲವಲ್ಲ? ಹೀಗಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಅವರು, ಪಕ್ಷ ನಿಷ್ಟರಾದ ಯತ್ನಾಳ್ ಪ್ರಾಮಾಣಿಕವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಗಿದೆ. ಹೀಗಾಗಿ ಉಚ್ಚಾಟಿತರಾಗಿರುವ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ವರಿಷ್ಟರಿಗೆ ಹೇಳಿ ಅಂತ ಮನವಿ ಮಾಡಿಕೊಂಡಿದ್ದಾರೆ. ಹಾಗೆ, ನೋಡಿದರೆ ಮೋದಿ-ಅಮಿತ್ ಷಾ ಮಾತ್ರವಲ್ಲದೆ ಸಂಘ ಪರಿವಾರದ ನಾಯಕರಿಗೂ ಫಡ್ನವೀಸ್ ಅತ್ಯಾಪ್ತರು.
ಇಂತಹ ಫಡ್ನವೀಸ್ ಅವರಿಗೆ ಕರ್ನಾಟಕದ ಗಡಿಭಾಗದ ಜಿಲ್ಲೆಗಳ ರಾಜಕೀಯದಲ್ಲಿ ಆಸಕ್ತಿ ಹೆಚ್ಚು. ಅದರಲ್ಲೂ ಮುಂಬಯಿ-ಕರ್ನಾಟಕ ಭಾಗದ ರಾಜಕೀಯದಲ್ಲಿ ತುಸು ಹೆಚ್ಚೇ ಅನ್ನಿಸುವಷ್ಟು ಆಸಕ್ತಿ ಹೊಂದಿರುವ ಫಡ್ನವೀಸ್ ಅವರು ಸಹಜವಾಗಿಯೇ ಆ ಭಾಗದ ಬಿಜೆಪಿ ನಾಯಕರ ಜತೆ ಆತ್ಮೀಯತೆ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ತಮ್ಮನ್ನು ಭೇಟಿಯಾಗಿ ಯತ್ನಾಳ್ ಪರವಾಗಿ ವಾದಿಸಿದ ನಂತರ ಫಡ್ನವೀಸ್ ಒಂದು ಉಪಾಯ ಹೇಳಿದ್ದಾರೆ.
ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ ಅಂತ ಯತ್ನಾಳ್ ವರಿಷ್ಟರಿಗೆ ಸಂದೇಶ ಕಳಿಸಲಿ.ಮುಂದೆ ಅವರನ್ನು ಮರಳಿ ಬಿಜೆಪಿಗೆ ಸೇರಿಸುವ ಜವಾಬ್ದಾರಿ ನನಗಿರಲಿ ಎಂಬುದು ಅವರು ಹೇಳಿದ ಉಪಾಯ. ಈಗ ಅವರು ಹೇಳಿದ ಉಪಾಯದಂತೆ ಪಾನು ಉರುಳಿದೆ. ಭಾರತ-ಪಾಕಿಸ್ತಾನದ ನಡುವಣ ಸಂಘರ್ಷಕ್ಕೆ ಬ್ರೇಕ್ ಬಿದ್ದ ನಂತರ ಪುನ: ಯತ್ನಾಳ್ ಎಪಿಸೋಡಿಗೆ ಚಾಲನೆ ಸಿಗಲಿದೆ.
ಬಿಜೆಪಿಯಲ್ಲಿ ಅಸಹಕಾರ ಚಳವಳಿ (Political analysis)
ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಅಸಹಕಾರ ಚಳವಳಿ ಆರಂಭವಾಗಿದೆ.ಇಂತಹ ಚಳವಳಿಗೆ ಗ್ರೇಟರ್ ಬೆಂಗಳೂರು ವಿಷಯವೇ ಕಾರಣ. ಬಿಬಿಎಂಪಿಯನ್ನು ಐದು ಹೋಳುಗಳನ್ನಾಗಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪರಿಣಾಮಕಾರಿಯಾಗಿ ವಿರೋಧಿಸುತ್ತಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆ ಅವರಿಗಿರುವ ಆತ್ಮೀಯತೆಯೇ ಕಾರಣ ಎಂಬುದು ಬಹುತೇಕ ಬಿಜೆಪಿ ಕಾರ್ಯಕರ್ತರ ಸಿಟ್ಟು.
ಇವತ್ತು ಇವರಿಗಿರುವ ಆಪ್ತತೆಯ ಕಾರಣಕ್ಕಾಗಿ ಬಿಬಿಎಂಪಿಯನ್ನು ಹೋಳು ಮಾಡಲು ಬಿಟ್ಟರೆ,ಅದು ಪುರಸಭೆ, ನಗರಸಭೆಗಳ ಲೆವೆಲ್ಲಿಗೆ ಇಳಿಯುತ್ತದೆ. ಹಾಗಾದ ಮೇಲೆ ಅದನ್ನು ಬಿಬಿಎಂಪಿ ಅಂತ ಕರೆಯುವುದಾದರೂ ಏಕೆ ? ಎಂಬುದು ಈ ಕಾರ್ಯಕರ್ತರ ಪ್ರಶ್ನೆ. ಹಾಗಂತಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪತ್ರ ಬರೆದಿದ್ದಾರಲ್ಲದೆ, ನಾಯಕತ್ವದ ಈ ವೈಫಲ್ಯವನ್ನು ಸರಿಪಡಿಸದಿದ್ದರೆ ಪಕ್ಷ ರೂಪಿಸುವ ಹೋರಾಟಗಳಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಅಂತ ನೇರವಾಗಿಯೇ ಎಚ್ಚರಿಸಿದ್ದಾರೆ.
ಅವರ ಈ ಎಚ್ಚರಿಕೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ತಕ್ಷಣ ಪರಿಗಣಿಸುವುದು ಕಷ್ಟವಾಗಬಹುದು.ಯಾಕೆಂದರೆ ಕೇಂದ್ರ ಸರ್ಕಾರ ಪಾಕಿಸ್ತಾನದ ಜತೆಗಿನ ಸಂಘರ್ಷದಲ್ಲಿ ಮುಳುಗಿರುವಾಗ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಎಚ್ಚರಿಕೆಯನ್ನು ಅದ್ಯತೆಯ ಮೇಲೆ ಎತ್ತಿಕೊಳ್ಳುವುದು ಕಷ್ಟವಾಗಬಹುದು.ಆದರೆ ಅದನ್ನು ಧೀರ್ಘಕಾಲ ನಿರ್ಲಕ್ಷಿಸಲು ಮಾತ್ರ ಸಾಧ್ಯವಿಲ್ಲ.
ಕರ್ನಾಟಕದ ಮೇಲೆ ವಾರ್ ಎಫೆಕ್ಟ್ (Political analysis)
ಇನ್ನು ಭಾರತ-ಪಾಕಿಸ್ತಾನದ ಮಧ್ಯೆ ನಡೆದ ಸಂಘರ್ಷ ಕರ್ನಾಟಕದ ಮೇಲೆ ಬೀರುವ ಪರಿಣಾಮವೇನು? ಇಂತಹದೊಂದು ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವುದು ಅಸಾಧ್ಯವಾದರೂ,ಯುದ್ಧದಂತಹ ವಿಷಯ ಆಳವಾದ ಪರಿಣಾಮ ಬೀರುವುದು ಮಾತ್ರ ಗ್ಯಾರಂಟಿ. 1971 ರಲ್ಲಿ ಪಾಕಿಸ್ತಾನದ ವಿರುದ್ಧ ಮುಗಿಬಿದ್ದ ಭಾರತ ಅದನ್ನು ಹೀನಾಯವಾಗಿ ಸದೆ ಬಡಿದಿದ್ದಷ್ಟೇ ಅಲ್ಲ.ಅದನ್ನು ವಿಭಜಿಸಿ ಬಾಂಗ್ಲಾ ದೇಶ ಸೃಷ್ಟಿಯಾಗಲು ಕಾರಣವಾಗಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಪ್ರಧಾನಿ ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಹೊಗಳಿದ್ದು ಒಂದು ಕಡೆಗಾದರೆ,ಮತ್ತೊಂದು ಕಡೆ ಇಂದಿರಾ ವರ್ಚಸ್ಸು ಮುಗಿಲೆತ್ತರಕ್ಕೆ ಏರಿತು. ಹೀಗಾಗಿ ಆ ಸಂದರ್ಭದಲ್ಲಿ ನಡೆದ ಚುನಾವಣೆಗಳಲ್ಲಿ ಇಂದಿರಾ ನೇತೃತ್ವದ ಕಾಂಗ್ರೆಸ್ ಜಯಭೇರಿ ಬಾರಿಸುತ್ತಾ ಹೋಯಿತು.
1972 ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಇಂದಿರಾ ನೇತೃತ್ವದ ಕಾಂಗ್ರೆಸ್ ಅದ್ದೂರಿ ಜಯಗಳಿಸಿತ್ತಲ್ಲದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿ ಪ್ರತಿಷ್ಟಾಪಿತರಾಗಿದ್ದರು. ಹಾಗೆ ನೋಡಿದರೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿಧನದ ನಂತರ ಪ್ರಧಾನಿಯಾದ ಇಂದಿರಾ ವಿರುದ್ದ ಪಕ್ಷದ ಅತಿರಥ-ಮಹಾರಥರೆಲ್ಲ ತಿರುಗಿ ಬಿದ್ದಿದ್ದರಲ್ಲದೆ,ಪಕ್ಷವನ್ನು ಹೋಳು ಮಾಡಿ ನಿಂತಿದ್ದರು. ಇಂತಹ ಸಂದರ್ಭದಲ್ಲಿ ಇಂದಿರಾ ಜತೆಗಿದ್ದವರು ಎರಡನೇ ಪಂಕ್ತಿ ನಾಯಕರು. ಇಂತವರನ್ನು ಜತೆಗಿಟ್ಟುಕೊಂಡು ಅವರು ಚುನಾವಣಾ ರಣರಂಗಕ್ಕಿಳಿದಿದ್ದರೆ ಯಶಸ್ಸು ಸಿಗುವುದು ಸುಲಭವಿರಲಿಲ್ಲ. ಆದರೆ ಚಾಣಾಕ್ಷಮತಿ ಇಂದಿರಾ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದ್ದಲ್ಲದೆ, ಬಾಂಗ್ಲಾ ಪ್ರತ್ಯೇಕತೆಯ ಹೋರಾಟಗಾರರು ನೆರವು ಕೋರಿದ ಕೂಡಲೇ ಆ ಅವಕಾಶವನ್ನು ಬಳಸಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ದ ಘೋಷಿಸಿದರು.
ಹೀಗೆ ಯುದ್ದ ಘೋಷಿಸಿ ಪಾಕಿಸ್ತಾನವನ್ನು ಭಾರತ ಸದೆಬಡಿದಿದ್ದರಿಂದ ಇಂದಿರಾ ವಿರೋಧಿ ನಾಯಕರು ಸುಸ್ತಾಗಿ ಹೋದರು. ಪರಿಣಾಮ ? ಇಂದಿರಾಗಾಂಧಿ ತಕ್ಷಣದ ಆಪತ್ತಿನಿಂದ ಪಾರಾಗಿದ್ದಲ್ಲದೆ, ತಮ್ಮ ನೇತೃತ್ವದ ಪಕ್ಷ ಬಲಿಷ್ಟವಾಗುವಂತೆ ನೋಡಿಕೊಂಡರು. ಮುಂದೆ ಇಂದಿರಾಗಾಂಧಿಯವರ ಈ ಬಲ ದೇವರಾಜ ಅರಸರಂತಹ ನಾಯಕ ನೆಲೆ ನಿಲ್ಲಲು,ಸಾಮಾಜಿಕ ಕ್ರಾಂತಿಯ ಹರಿಕಾರ ಎನ್ನಿಸಿಕೊಳ್ಳಲು ಮೂಲವಾಯಿತು. ಇವತ್ತು ಪಾಕಿಸ್ತಾನದ ವಿರುದ್ದ ಭಾರತ ಮುಗಿಬಿದ್ದಿರುವ ಕಾಲದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಸ್ಥಿತಿಯೂ ಸ್ವಲ್ಪ ಹಾಗೇ ಇದೆ.
ಅವರೀಗ ಎಪ್ಪತ್ತೈದರ ಗಡಿಯಲ್ಲಿರುವುದರಿಂದ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ ಯೋಗಿ ಆದಿತ್ಯನಾಥ್ ಅವರನ್ನು ತಂದು ಕೂರಿಸುವ ಲೆಕ್ಕಾಚಾರ ಸಂಘಪರಿವಾರದಲ್ಲಿದೆ.ಇದೇ ಕಾರಣಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮೋದಿ-ಅಮಿತ್ ಶಾ ಹೇಳಿದವರನ್ನು ತಂದು ಕೂರಿಸಲೂ ಪರಿವಾರ ತಯಾರಿಲ್ಲ. ಇಂತಹ ಐನ್ ಟೈಮಿನಲ್ಲೇ ಪೆಹಲ್ಗಾಂವ್ ಎಪಿಸೋಡಿನ ನಂತರ ಮೋದಿ ಪಾಕಿಸ್ತಾನದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಈ ಸಂಘರ್ಷದಲ್ಲಿ ಭಾರತದ ಸೈನ್ಯ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದರೆ ನೋ ಡೌಟ್,ಮೋದಿಯವರ ಗ್ರಾಫು ಮೇಲೇರುತ್ತಿತ್ತು.ಮತ್ತು ಅವರನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿತ್ತು.ಆದರೆ ಈಗ ಕದನ ವಿರಾಮದ ಮಾತು ಕೇಳಿ ಬಂದಿರುವುದರಿಂದ ಬಿಗ್ ಇಂಪ್ಯಾಕ್ಟ್ ಅಗದೇ ಹೋಗಬಹುದು.ಇಷ್ಟಾದರೂ ಭಾರತದ ಸೈನ್ಯ ಪಾಕಿಸ್ತಾನವನ್ನು ಬೆದರಿಸುವಲ್ಲಿ ಸಫಲವಾಗಿರುವುದರಿಂದ ಮೋದಿ ಪವರ್ ಮುಂಚಿಗಿಂತ ಹೆಚ್ಚಾಗಿರುವುದು ನಿಜ.ಮತ್ತು ಇದನ್ನು ಎನ್ ಕ್ಯಾಶ್ ಮಾಡಿಕೊಂಡರೆ ಅವರು ಬಲಿಷ್ಟರಾಗುವುದೂ ನಿಜ.
ಹೀಗೆ ಮೋದಿ ಬಲಿಷ್ಟ ನೆಲೆಯ ಮೇಲೆ ನಿಂತರೆ ಕರ್ನಾಟಕದ ರಾಜಕಾರಣದ ಮೇಲೆ ಯಾವ ಪರಿಣಾಮವಾಗುತ್ತದೆ ಅಂತ ಈಗಲೇ ಹೇಳುವುದು ಕಷ್ಟ.ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅದನ್ನು ಅಲುಗಾಡಿಸುವ ಯತ್ನ ನಡೆದಿತ್ತಲ್ಲ?ಅಂತಹ ಯತ್ನಕ್ಕೆ ಮರುಚಾಲನೆ ದೊರೆಯುವುದು ಅಸಂಭವವಲ್ಲ.
ಲಾಸ್ಟ್ ಸಿಪ್ (Political analysis)
ಇನ್ನು ಭಾರತ-ಪಾಕಿಸ್ತಾನದ ನಡುವಣ ಸಂಘರ್ಷ ಪ್ರಧಾನಿ ಮೋದಿಯವರ ಬಲವನ್ನು ಹೆಚ್ಚಿಸಿದರೆ,ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗಟ್ಟಿಗೊಳಿಸಲಿದೆ ಎಂಬುದು ರಾಜಕೀಯ ವಲಯಗಳ ಮಾತು. ಕಾರಣ ? ದಿಲ್ಲಿಯಲ್ಲಿ ಮೋದಿ ಪವರ್ ಹೆಚ್ಚಿದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಕಿರಿಕಿರಿ ಗ್ಯಾರಂಟಿ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಅಲುಗಾಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ವರಿಷ್ಟರಿಗೆ ಸವಾಲು.
ಇಂತಹ ಸವಾಲಿನ ಸಂದರ್ಭದಲ್ಲಿ ಅವರು ಸಿಎಂ ಸಿದ್ಧರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಲ್ಲುವುದಷ್ಟೇ ಅಲ್ಲ. ನಾಯಕತ್ವ ಬದಲಾವಣೆಯಂತಹ ಕೂಗಿಗೆ ತಪ್ಪಿಯೂ ಕಿವಿ ಕೊಡುವುದಿಲ್ಲ. ಆ ದೃಷ್ಟಿಯಿಂದ ಸಧ್ಯದ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷ ಕೂಡಾ ಸಿದ್ದುಗೆ ಟಾನಿಕ್ ಎಂಬುದು ರಾಜಕೀಯ ವಲಯಗಳ ಮಾತು.
ಆರ್.ಟಿ.ವಿಠ್ಠಲಮೂರ್ತಿ