ದಾವಣಗೆರೆ (Davanagere): ಸರ್ಕಾರದ ಆರ್ಥಿಕ ಸಹಭಾಗಿತ್ವ ಮತ್ತು ನಿರಂತರ ಕಾರ್ಯಕ್ರಮಗಳ ಆಯೋಜನೆಗಳ ಜೊತೆಗೆ ಶಾಲಾ ಮಟ್ಟದಿಂದಲೇ ಪಠ್ಯ ಕ್ರಮದಲ್ಲಿ ಜಾನಪದ ಕಲೆಗಳನ್ನು ಕಡ್ಡಾಯಗೊಳಿಸುವ ಮೂಲಕ ಅಳಿವಿನ ಅಂಚಿಗೆ ಸರಿಯುತ್ತಿರುವ ಜಾನಪದ ಕಲೆಗಳನ್ನು ರಕ್ಷಿಸಲು ಸಾಧ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಅಕಾಡೆಮಿ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ‘ಗೆಜ್ಜೆ ಮಾತಾಡತಾವೆ’ ಮಹಿಳಾ ಕಲಾವಿದರ ಪ್ರದರ್ಶನ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಸಂಸ್ಥೆಗಳು ಮತ್ತು ಜಾನಪದ ಕಲಾವಿದರ ನಡುವಿನ ಸಹಯೋಗವು ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಲು ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ. ಕಲಾ ಪ್ರದರ್ಶನಗಳಲ್ಲಿ ಯುವಜನರನ್ನು ಒಳಗೊಳ್ಳುವಂತೆ ಮಾಡುವ ಮೂಲಕ ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಪೋಷಿಸಿ, ಮುಂದಿನ ಪೀಳಿಗೆಗೆ ಒಯ್ಯಬಹುದು ಎಂದು ತಿಳಿಸಿದರು.
ಶಾಲಾ ಪಠ್ಯಕ್ರಮದಲ್ಲಿ ಜಾನಪದ ಪ್ರದರ್ಶನ ಕಲೆಗಳನ್ನು ಸೇರಿಸುವುದು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು ಯುವ ಪೀಳಿಗೆಯಲ್ಲಿ ಜಾಗೃತಿ ಮತ್ತು ಆಸಕ್ತಿಯನ್ನು ಬೆಳೆಸಬಹುದು. ಸಾರ್ವಜನಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಅಂತರರಾಷ್ಟ್ರೀಯ ಸಹಯೋಗಗಳು ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಜಾನಪದ ಕಲಾವಿದರಿಗೆ ಮಾನ್ಯತೆ ನೀಡಲು ಸಹಾಯ ಮಾಡುತ್ತದೆ ಎಂದು ನುಡಿದರು.
ಇತ್ತೀಚಿನ ವರ್ಷಗಳಲ್ಲಿ, ಮಹಿಳೆಯರು ಯಕ್ಷಗಾನ ಮತ್ತು ಡೊಳ್ಳು ಕುಣಿತದಂತಹ ಕಲಾ ಪ್ರಕಾರಗಳಲ್ಲಿ ಅಡೆತಡೆಗಳನ್ನು ಮುರಿಯಲು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಮಾರ್ಗದರ್ಶನದ ಕೊರತೆ, ಅಸಮಾನ ವೇತನ ಮತ್ತು ಸೀಮಿತ ಅವಕಾಶಗಳಂತಹ ವ್ಯವಸ್ಥಿತ ಸವಾಲುಗಳು ಮುಂದುವರಿಯುತ್ತವೆ. ಇವುಗಳ ನಿವಾರಣೆಯತ್ತ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಜಾನಪದ ಕಲೆಗಳು ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ವ್ಯವಸ್ಥಿತ ಸಮಸ್ಯೆಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಸಂಪ್ರದಾಯ ಮತ್ತು ನಾವೀನ್ಯತೆಯ ನಡುವೆ ಸಮತೋಲನವನ್ನು ಸಾಧಿಸುವ ಮೂಲಕ, ಜಾನಪದ ಪ್ರದರ್ಶನ ಕಲೆಗಳು ಸಮಕಾಲೀನ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ನುಡಿದರು.
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಆಧುನೀಕರಣ ಮತ್ತು ಜಾಗತೀಕರಣವು ಜಾನಪದ ಕಲೆಗಳಿಗೆ ಗಮನಾರ್ಹ ಆತಂಕವನ್ನು ಸೃಷ್ಟಿಸಿದೆ. ಅದಾಗ್ಯೂ ವಿಭಿನ್ನ ರೀತಿಯಲ್ಲಿ ಅವು ರೂಪಾಂತರ ಪಡೆದು ಪುನರುಜ್ಜೀವನಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತೆ. ಕಲಾವಿದರ ಆರ್ಥಿಕ ಸಂಕಷ್ಟ, ಯುವಜನರ ನಿರಾಸಕ್ತಿ ಸಮಸ್ಯೆಗಳನ್ನು ಪರಿಹರಿಸುವುದು, ಲಿಂಗ ತಾರತಮ್ಯ ನಿವಾರಿಸಿ ಎಲ್ಲರಿಗೂ ಉತ್ತೇಜನ ನೀಡುವ ಮತ್ತು ಸಕಾಲಿಕ ಶಿಕ್ಷಣದ ಮೂಲಕ ಈ ಸಂಪ್ರದಾಯಗಳನ್ನು ಸಂರಕ್ಷಿಸುವುದು ಅಗತ್ಯವಾದ ಕ್ರಮಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಕಲಾವಿದರಿಗೆ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಡಿಜಿಟಲ್ ಮಾಧ್ಯಮವು ಅವಕಾಶಗಳನ್ನು ನೀಡುತ್ತದೆ. ಯೂಟ್ಯೂಬ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ವೇದಿಕೆಗಳು ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಮನ್ನಣೆ ಪಡೆಯಲು ಅವಕಾಶ ಮಾಡಿಕೊಟ್ಟಿವೆ ಎಂದು ನುಡಿದರು.
ಆರ್ಥಿಕ ಉತ್ತೇಜನ, ಸಾಮಾಜಿಕ ಗೌರವ ಮತ್ತು ಬೆಳವಣಿಗೆಗೆ ಅವಕಾಶಗಳ ಕೊರತೆಯಿಂದಾಗಿ ಯುವ ಪೀಳಿಗೆಯು ಜಾನಪದ ಕಲೆಗಳನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿಲ್ಲ. ಔಪಚಾರಿಕ ಶಿಕ್ಷಣ ಮತ್ತು ನಗರ ಉದ್ಯೋಗಗಳ ಆದ್ಯತೆಯು ಅವರನ್ನು ಈ ಸಂಪ್ರದಾಯಗಳಿAದ ದೂರವಿಡುತ್ತದೆ ಎಂದು ತಿಳಿಸಿದರು.
ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ಜಾನಪದ ಪ್ರದರ್ಶನ ಕಲೆಗಳು ಮೌಖಿಕ ಸಂಪ್ರದಾಯಗಳ ಮೇಲೆ ಅವಲಂಬಿತವಾಗಿದೆ. ಪುರುಷ ಪ್ರಧಾನ ಕಲೆಗಳಲ್ಲಿ ಮಹಿಳೆಯರಿಗೆ ಆದ್ಯತೆ ಇಲ್ಲದೆ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಕಲಾ ಸಂಪ್ರದಾಯ ಬೆಳೆಸಲು ಪ್ರದರ್ಶನ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದರು.
ಜಾನಪದ ಕಲೆಗಳು ಮತ್ತು ಕಲಾಪ್ರದರ್ಶನಗಳನ್ನು ವಿಶ್ವವಿದ್ಯಾನಿಲಯಗಳು ಕಾಲೇಜು ಪಠ್ಯಕ್ರಮಗಳಲ್ಲಿ ಕಡ್ಡಾಯ ಕಲಿಕೆಗೆ ಗಮನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕುಲಪತಿಗಳು ವಿಶೇಷ ಗಮನ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ವಿವಿಧ ಮಹಿಳಾ ಕಲಾ ತಂಡಗಳು ಜಾನಪದ ಕಲೆಗಳನ್ನು ಪ್ರದರ್ಶಿಸಿದವು.
ಸಿಂಡಿಕೇಟ್ ಸದಸ್ಯೆ ಡಾ.ಜಿ.ಕೆ.ಪ್ರೇಮಾ ಅವರು ಮಹಿಳಾ ಜಾನಪದದ ಮುನ್ನೋಟಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ್ರ, ಅಕಾಡೆಮಿ ರಿಜಿಸ್ಟಾçರ್ ಎನ್.ನಮ್ರತ, ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ, ದೇವಾನಂದ ಉಪಸ್ಥಿತರಿದ್ದರು. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ವಿ.ಜಯರಾಮಯ್ಯ ಸ್ವಾಗತಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು, ಮಂಜುಳಾ ವಂದಿಸಿದರು.