ಹರಿಹರ (Harihara): ಮುಂಬರುವ ಮಾ.18 ರಿಂದ 22ರವರೆಗೆ ನಡೆಯುವ ಹರಿಹರದ ಗ್ರಾಮದೇವತೆ (ಊರಮ್ಮ) ಉತ್ಸವವನ್ನು ಮೌಢ್ಯಾಚರಣೆ ರಹಿತವಾಗಿ ಆಚರಿಸಲು ಕ್ರಮಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ತಾಲ್ಲೂಕು ಘಟಕದಿಂದ ಇಲ್ಲಿನ ತಹಶೀಲ್ದಾರ್ ಗ್ರೇಡ್-2 ಪುಷ್ಪಾವತಿ ಇವರಿಗೆ ಮನವಿ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಈ ಐದು ದಿನಗಳ ಕಾಲ ಉತ್ಸವದ ಹೆಸರಲ್ಲಿ ನೂರಾರು ಅಮಾಯಕ ನಾಗರೀಕರು ಮೌಢ್ಯಾಚರಣೆಗಳನ್ನು ಆಚರಿಸುತ್ತಾರೆ, ಇನ್ನು ಕೆಲವರು ಈ ಮೌಢ್ಯಾಚರಣೆಗಳನ್ನು ನಡೆಸಲು ಪ್ರೇರಣೆ ನೀಡುತ್ತಾರೆ.
ಅರೆ ಬೆತ್ತಲೆ ಅಥವಾ ಬೇವಿನ ಉಡುಗೆ ಆಚರಣೆ: ಉತ್ಸವದ ನಿಮಿತ್ತ ನಗರದ ದೇವಸ್ಥಾನ ರಸ್ತೆಯಲ್ಲಿ ರಚಿಸಲಾಗುವ ಚೌಕಿಮನೆ ಎದುರು ಹಾಗೂ ಇತರೆಡೆ ನೂರಾರು ಪುರುಷ, ಮಹಿಳೆಯರು ಭಕ್ತಿ, ಹರಕೆಯ ಹೆಸರಲ್ಲಿ ಅರೆಬೆತ್ತಲೆ, ಬೇವಿನ ಉಡುಗೆ ಸೇವೆಯೆಂಬ ಮೌಢ್ಯವನ್ನು ಆಚರಿಸುತ್ತಾರೆ. ಬೇವಿನ ಸೇವೆ ಮಾಡುವುದು ಅನಿವಾರ್ಯವಾದರೆ ಪುರುಷರು, ಮಹಿಳೆಯರು ದೇಹದ ಮೇಲಿನ ಬಟ್ಟೆಯನ್ನು ತೆರವುಗೊಳಿಸದೆ ಬಟ್ಟೆಗಳ ಮೇಲೆಯೆ ಬೇವನ್ನು ಲಗತ್ತಿಸಿಕೊಂಡು ಹರಕೆಯ ಪ್ರಕ್ರಿಯೆಯನ್ನು ನೆರೆವೇರಿಸಬೇಕು. ಯಾವುದೆ ಕಾರಣಕ್ಕೂ ಮಹಿಳೆಯರು ನಿವಸ್ತ್ರರಾಗಿ ಬೇವಿನ ಉಡುಗೆ ಆಚರಿಸಬಾರದು.
ಕೋಣಗಳ ಬಲಿ ನಿಷೇಧ : ಕಾನೂನು, ನಿಬಂಧನೆಗಳ ಅನ್ವಯ ದೇವ, ದೇವಿಯ ಹೆಸರಲ್ಲಿ ಕೋಣನ ಬಲಿ ನೀಡುವಂತಿಲ್ಲ. ಹೀಗಾಗಿ ಈ ಉತ್ಸವದಲ್ಲಿ ಕೋಣಗಳ ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕಾಗಿದೆ. ಆರ್ಥಿಕ ಹೊರೆ ತಗ್ಗಿಸುವುದು: ಉತ್ಸವ, ಆಚರಣೆಯ ಹೆಸರಲ್ಲಿ ಶ್ರೀಮಂತರ ಅನುಕರಣೆ ಮಾಡುತ್ತಾ ಬಡವರೂ ಕೂಡ ಅದರಲ್ಲೂ ದಲಿತರು, ಹಿಂದುಳಿದ ವರ್ಗದವರು ಕುರಿಗಳ ಬಲಿ ನೀಡುತ್ತಾ ಸಾಲದ ಸುಳಿಗೆ ಸಿಲುಕುತ್ತಾರೆ, ಆ ಸಾಲ ಮತ್ತು ಬಡ್ಡಿಯ ತೀರುವಳಿ ಮಾಡಲು ಕುಟುಂಬದ ಸದಸ್ಯರೆಲ್ಲರೂ ಹಲವು ವರ್ಷಗಳವರೆಗೆ ದುಡಿಯಬೇಕಾಗುತ್ತದೆ. ದೇವ, ದೇವತೆಗಳಿಗೆ ಮನುಷ್ಯನ ಭಕ್ತಿ, ಭಾವ ಮುಖ್ಯವೇ ಹೊರತು ಪ್ರಾಣಿಗಳ ಬಲಿ ನೀಡುವುದಲ್ಲ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ದೇಶದ ಸಂವಿಧಾನದಲ್ಲೂ ಕೂಡ ದೇಶದ ನಾಗರೀಕರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಲು ಆಧ್ಯತೆ ನೀಡುವ ಆಶಯವನ್ನು ವ್ಯಕ್ತಪಡಿಸಲಾಗಿದೆ.
ಈ ಕಾರಣದಿಂದಾಗಿ ಹರಿಹರದ ಗ್ರಾಮದೇವತೆ ಉತ್ಸವದಲ್ಲಿ ಭಕ್ತಿ, ಭಾವದ ಪರಾಕಾಷ್ಠೆ ಇರಲಿ, ಮೌಢ್ಯಾಚರಣೆಗಳು ತೊಲಗುವಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತವು ಬೀದಿ ನಾಟಕ, ಕರಪತ್ರ ವಿತರಣೆ, ಧ್ವನಿವರ್ಧಕದ ಮೂಲಕ ವ್ಯಾಪಕ ಪ್ರಚಾರ ಕಾರ್ಯ ನಡೆಸುವ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಬೇಕಾಗಿ ನಮ್ಮ ಸಂಘಟನೆಯು ಆಗ್ರಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕದಸಂಸ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಸಂಜೀವ್, ಅಚಿಜನಪ್ಪ, ಪರಶುರಾಮ್, ಧನು ಕುಮಾರ್, ಬಸವರಾಜ್ ಇದ್ದರು.
Read also : SC-ST ಜನಾಂಗದವರ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸಿದವರಿಂದ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ