ದಾವಣಗೆರೆ (Davanagere): ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ನಗರದ ನೂರಾನಿ ಶಾದಿಮಹಲ್ನಲ್ಲಿ ಖಂಡನಾ ಸಭೆ ನಡೆಸಲಾಯಿತು.
ಖಂಡನಾ ಸಭೆಯಲ್ಲಿ ಒಕ್ಕೂಟದ ಸಂಚಾಲಕ ಟಿ.ಅಸ್ಗರ್ ಮಾತನಾಡಿ, ಈ ಕಾಯ್ದೆಯು ಸಂವಿಧಾನ ಪರ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಮುಸ್ಲಿಂ ಸಮುದಾಯವನ್ನು ಗುರಿಪಡಿಸುವುದೇ ಇದರ ಉದ್ದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪೂರ್ವಜರು ಅಲ್ಲಾಹನನ್ನು ಸಂತೃಪ್ತ ಪಡೆಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನು ವಕ್ಫ್ ಆಸ್ತಿಯಲ್ಲಿದೆ. ವಕ್ಫ್ಗೆ ಸೇರಿರುವ ಜವೀನುಗಳು ಯಾರಿಂದಲೋ ಕಬಳಿಸಿದ ಜಮೀನಲ್ಲ. ಧರ್ಮ ಗೋಡೆಯನ್ನು ಬದಿಯಲಿಟ್ಟು ಎಲ್ಲಾ ಭಾರತೀಯರು ನಮ್ಮ ಜೊತೆ ಕೈ ಜೋಡಿಸಬೇಕೆಂದು ನಾವು ಕೇಳುತ್ತೇವೆ ಎಂದರು.
ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಯಾಗಿ ಗುರಿಯಾಗುತ್ತವೆ. ನಮ್ಮ ಹೋರಾಟ ಹಿಂದೂ- ಮುಸ್ಲಿಮ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಕಾಯ್ದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಳಿಸುವ ಯತ್ನವಾಗಿದೆ. ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ಇದು ವಿರುದ್ದವಾಗಿದೆ ಎಂದು ಆಕ್ಷೇಪಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ದಾವಣಗೆರೆಯಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ನಜೀರ್ ಅಹ್ಮದ್, ಮಹಮ್ಮದ್ ಅಲಿ ಶೋಯೇಬ್, ಮಹಮ್ಮದ್ ಅಲ್ತಾಫ್, ರಜ್ವಿ ರಿಯಾಜ್ ಸಾಬ್, ಇಸ್ಮಾಯಿಲ್ ಕಾಟ, ಆದಿಲ್, ಜಾಫರ್, ಕೋಳಿ ಇಬ್ರಾಹಿಂ ಸಾಬ್, ಶೇರಯಾರ ಜಂಗ ಸಾಬ್, ಸುಭಾನಿ, ಲಿಯಾಕತ್ ಅಲಿ, ಮುಜಾಹೀದ್, ಮುಜಾಮಿಲ್, ತಾಹೀರ್, ಇಮ್ರಾನ್, ನಿಜಾಮ, ರಫೀಕ್, ಸರ್ಫರಜ್, ಸದ್ಧಾಂ ಇತರರು ಉಪಸ್ಥಿತರಿದ್ದರು.