ದಾವಣಗೆರೆ (Davanagere) : ಭಾರತ ಬಹು ಸಂಸ್ಕೃತಿಗಳ ನಾಡು. ವಿವಿಧತೆಯಲ್ಲಿ ಏಕತೆ ಕಾಣುವ ನೆಲ ನಮ್ಮದು. ಇಲ್ಲಿನ ಪಾರಂಪರಿಕ ದಿವ್ಯ ಸಂಸ್ಕೃತಿ ಆಧುನಿಕ ಜೀವನದ ಭರಾಟೆಯಲ್ಲಿ ರೂಪಾಂತರಗೊಳ್ಳುತ್ತಿದೆ. ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮಹತ್ವದಾಗಿದೆ ಎಂದು ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲ ಸೊಪ್ಪಿನ್ ಹೇಳಿದರು.
ನಗರದ ಎ.ವಿ.ಕೆ ಮಹಿಳಾ ಕಾಲೇಜ್ ನಲ್ಲಿ ಪಾರಂಪರಿಕ ಸಾಂಸ್ಕೃತಿಕ ದಿನಾಚರಣೆಯ ಪ್ರತಿರೂಪದ ಬಿಂಬವಾಗಿ ದೇಸಿ ಕಲರವ-2025 ನ್ನು ಹಮ್ಮಿಕೊಳ್ಳಲಾಗಿತ್ತು. ದೇಸಿ ಕಲರವ-2025 ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಕಮಲ ಸೊಪ್ಪಿನ್ ಅವರು, ನಮ್ಮ ನಾಡು ಹಲವಾರು ಧರ್ಮ, ಮತ, ಪಥ, ಭಾಷೆ, ಸಂಸ್ಕೃತಿ ಹೊಂದಿದೆ. ಅದರ ಪ್ರತಿರೂಪದ ಬಿಂಬವನ್ನು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ರಂಗು – ರಂಗಿನ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಆ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ ಅರಿತಿದ್ದಾರೆಂದು ಹೇಳಿದರು.
ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಈ ದೇಸಿ ಕಲರವ ಕಾರ್ಯಕ್ರಮ ನೋಡಲು ಎರಡು ಕಣ್ಣು ಸಾಲದಾಗಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿನಿಯರು ವಿವಿಧ ಸಂಸ್ಕೃತಿಗಳ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಂಡರು. ಕೊಡವ, ಕೂರ್ಗಿಸ್, ಲಂಬಾಣಿ, ಮರಾಠಿ, ಉತ್ತರ ಕರ್ನಾಟಕ, ಹೀಗೆ ವಿವಿಧ ವೇಷಭೂಷಣಗಳಲ್ಲಿ ಮಿಂಚಿದರು.
ಈ ಸಡಗರದ ಜೊತೆಗೆ ಹಳ್ಳಿಯ ಜನಜೀವನದ ಬಿಂಬಿಸುವ ಗುಡಿಸಲು, ಎತ್ತಿನ ಬಂಡಿ, ಜೋಕಾಲಿ, ದನದ ಕೊಟ್ಟಿಗೆ ಹೀಗೆ ವಿಧವಿಧವಾದ ಪ್ರತಿಕೃತಿಗಳನ್ನು ಅನಾವರಣಗೊಳಿಸಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ದೇಸಿ ಸೊಗಡಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿನಿಯರು ಮಾಡಿ ನೋಡುಗರನ್ನು ಸೂರೆಗೊಂಡರು. ಅವರಿಗೆ ಕೈ ಜೋಡಿಸಿದ ಬೋಧಕ ಮತ್ತು ಬೋಧಕೇತರ ವರ್ಗದವರು ಜಾನಪದ ಗೀತೆ, ಜನಪದ ನೃತ್ಯ ಮಾಡಿ ವಿದ್ಯಾರ್ಥಿನಿಯರಿಗೆ ಮನರಂಜನೆ ನೀಡಿದರು.
ಎವಿಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿ ಬಣಕಾರ ಅವರು, ನಿಮ್ಮಲ್ಲರ ಸಡಗರ ಸಂಭ್ರಮದಿಂದ ನಮ್ಮ ಸಂಸ್ಕೃತಿ ನಾಶ ಹೊಂದಿಲ್ಲ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ. ಪೂಜಿತಾ ಬಿ.ಎಸ್ ಡಾ. ದೀಪಾ ಕೆ.ಎನ್. ಆಗಮಿಸಿದ್ದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು IQAC ಕೋ ಆರ್ಡಿನೇಟರ್ ಆದ ಡಾ. ರುದ್ರೇಶ್ ಬಿ.ಜೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಆರ್.ಸಿ. ಗೌಡ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಭಾವತಿ ಎಸ್ ಹೊರಡಿ, ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಸುರೇಶ್ ಈ., ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಅಂಕಿತಾ,(ಕಲಾ ವಿಭಾಗ) ಪೂಜಾ ಪಾಟೀಲ್ (ವಿಜ್ಞಾನ ವಿಭಾಗ), ನಂದಿತಾ (ವಾಣಿಜ್ಯ ವಿಭಾಗ) ಉಪಸ್ಥಿತರಿದ್ದರು.
ಪ್ರಾರ್ಥನಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗುರುರಾಜ ಕೆ. ಸ್ವಾಗತಿಸಿದರು. ಅನ್ವರ್ ಅಹಮ್ಮದ್ ಬೆಟಗೇರಿ ಪ್ರಾಸ್ತಾವಿಕ ನುಡಿಗಳಾಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕವಿತಾ ಆರ್ ಜಿ ವಂದಿಸಿದರು. ಕು|| ಅಂಕಿತಾ ಮತ್ತು ಪೂಜಾ ಪಾಟೀಲ್. ನಿರೂಪಿಸಿದರು.
ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.