ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನದಾಸ್ ಅಗರ್ವಾಲ್ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಪಕ್ಷದ ರಾಜ್ಯ ನಾಯಕರ ವಿರುದ್ದ ಕಂಪ್ಲೇಂಟುಗಳ ಪಟ್ಟಿ ಹಿಡಿದುಕೊಂಡು ಬಂದಿದ್ದರು. ಅಂದ ಹಾಗೆ ಇದಕ್ಕೂ ಮುಂಚೆ ತಿರಂಗಾ ಯಾತ್ರೆಗೆ ಅಂತ ಕರ್ನಾಟಕಕ್ಕೆ ಬಂದಿದ್ದ ರಾಧಾ ಮೋಹನ ದಾಸ್ ಅಗರ್ವಾಲ್,ಅವತ್ತೇ ಪಕ್ಷದ ರಾಜ್ಯ ಘಟಕ ಫೋರ್ಸ್ ಆಗಿ ಕೆಲಸ ಮಾಡುತ್ತಿಲ್ಲ ಅಂತ ಚುಚ್ಚಿ ಹೋಗಿದ್ದರು.
ಆದರೆ, ಇದಾದ ನಂತರವೂ ಕರ್ನಾಟಕ ಬಿಜೆಪಿಯಲ್ಲಿ ಹೋರಾಟದ ಗುಣ ಕಾಣದೆ ಹೋಗಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಗರ್ವಾಲ್ ಅವರನ್ನು ಕರೆಸಿ ಕಿರಿ ಕಿರಿ ಮಾಡಿದ್ದರಂತೆ. ‘ನಿಮಗೆ ಮುಂಚೆಯೇ ಹೇಳಿದ್ದೇನೆ ಅಗರ್ವಾಲ್ ಜೀ. ಕರ್ನಾಟಕದಲ್ಲಿ ಪಕ್ಷದ ಶಕ್ತಿ ಕಡಿಮೆಯಾಗುತ್ತಿದೆ.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ನಮ್ಮವರ ಹೋರಾಟ ಪರಿಣಾಮಕಾರಿಯಾಗಿಲ್ಲ.ಮಾತೆತ್ತಿದರೆ ರಾಜಭವನಕ್ಕೆ ಹೋಗಿ ಕಂಪ್ಲೇಂಟು ಕೊಡುವ ಕೆಲಸ ಮಾಡುತ್ತಿದ್ದಾರಾದರೂ ಸರ್ಕಾರದ ಹಗರಣಗಳ ಬಗ್ಗೆ ಪರಿಣಾಮಕಾರಿಯಾಗಿ ಹೋರಾಡುತ್ತಿಲ್ಲ. ಹೋಗಲಿ,ಸರ್ಕಾರದ ವಿರುದ್ದ ಹಗರಣಗಳ ಆರೋಪ ಇಲ್ಲವಾ? ಅಂದರೆ ಒಂದರ ಹಿಂದೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಇಂತಹ ಹಗರಣಗಳ ಬಗ್ಗೆ ರಾಜ್ಯದ ಬಿಜೆಪಿ ಕಾರ್ಯಕರ್ತರು ನಮಗೆ ಮಾಹಿತಿ ಕಳಿಸುತ್ತಲೇ ಇದ್ದಾರೆ.ಇವತ್ತು ಇದನ್ನು ಮುಂದಿಟ್ಟುಕೊಂಡು ರಾಜ್ಯದ ನಾಯಕರು ಹೋರಾಡಬೇಕೇ ಹೊರತು ಸರ್ಕಾರದ ನಡವಳಿಕೆಗಳ ಬಗ್ಗೆ ಟೀಕಿಸುತ್ತಾ ಕೂತರೆ ಸಾಲುವುದಿಲ್ಲ. ಹೀಗಾಗಿ ಸರ್ಕಾರದ ಹಗರಣಗಳನ್ನು ಬಯಲು ಮಾಡಬೇಕು,ಹೋರಾಡಬೇಕು ಅಂತ ನೀವು ಅವರಿಗೆ ಹೇಳದಿದ್ದರೆ ಪಕ್ಷಕ್ಕೆ ರಾಜಕೀಯ ಲಾಭವಾಗುವುದಾದರೂ ಹೇಗೆ? ‘ಅಂತ ಅಮಿತ್ ಶಾ ಹೇಳಿದ ನಂತರ ಅಗರ್ವಾಲ್ ರಪ್ಪಂತ ಬೆಂಗಳೂರಿಗೆ ಹೊರಟು ಬಂದಿದ್ದಾರೆ.
ಹೀಗೆ ಬಂದವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲರನ್ನು ಒಗ್ಗೂಡಿಸಿ ಸತತ ಸಭೆಗಳನ್ನು ಮಾಡಿದ್ದಾರೆ. ‘ಎಲ್ರಿ ನಮ್ಮ ಪಕ್ಷದ ಮೋರ್ಚಾಗಳು ಯಾಕೆ ಆ್ಯಕ್ಟೀವ್ ಆಗಿಲ್ಲ ಅಂತ ಕೇಳುವುದರಿಂದ ಹಿಡಿದು ಪ್ರತಿಯೊಂದು ವಿಷಯದ ಬಗ್ಗೆ ಕ್ಲಾಸು ತೆಗೆದುಕೊಂಡಿದ್ದಾರೆ. ಈ ಮಧ್ಯೆ ರಾಧಾಮೋಹನದಾಸ್ ಅಗರ್ವಾಲ್ ಅವರಿಗೆ ಪಕ್ಷ ನಡೆಸಿದ ಜನಾಕ್ರೋಶ ಯಾತ್ರೆಯ ವಿವರ ನೀಡಿದ ಪಕ್ಷಾಧ್ಯಕ್ಷ ವಿಜಯೇಂದ್ರ ಅವರು: ಸಾರ್ ರಾಜ್ಯ ಸರ್ಕಾರದ ವಿರುದ್ದ ನಾವು ನಡೆಸಿದ ಜನಾಕ್ರೋಶ ಯಾತ್ರೆಗೆ ಒಳ್ಳೆ ರೆಸ್ಪಾನ್ಸ್ ಇದೆ. ಆದರೆ, ಈ ಯಾತ್ರೆಯನ್ನು ಬೆಂಗಳೂರಿನಲ್ಲಿ ನಡೆಸಲು ನಮಗೆ ಸಹಕಾರ ಸಿಕ್ಕಿಲ್ಲ ಅಂತ ಪರೋಕ್ಷವಾಗಿ ಆರ್.ಅಶೋಕ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
ಯಾವಾಗ ವಿಜಯೇಂದ್ರ ಅವರು ಈ ಮಾತು ಹೇಳಿದರೋ? ಇದಾದ ನಂತರ ಶುಕ್ರವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ರಾಧಾಮೋಹನ್ ದಾಸ್ ಅಗರ್ವಾಲ್ ಅವರು: ಸರ್ಕಾರದ ವಿರುದ್ದ ಪರಿಣಾಮಕಾರಿ ಹೋರಾಟ ನಡೆಯಬೇಕು.ಅದರ ಹಗರಣಗಳನ್ನು ಹಿಡಿದುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಬೇಕು.ಹೀಗೆ ಪ್ರವಾಸ ಮಾಡಲು ಎರಡು ತಂಡಗಳನ್ನು ರಚಿಸಿಕೊಳ್ಳಿ. ಒಂದು ತಂಡ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೊರಡಲಿ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಮತ್ತೊಂದು ತಂಡ ಹೊರಡಲಿ ಎಂದಿದ್ದಾರೆ.
ಯಾವಾಗ ಅಗರ್ವಾಲ್ ಎರಡು ತಂಡಗಳ ರಚನೆ ಬಗ್ಗೆ ಮಾತನಾಡಿದರೋ? ಅಗ ಕೋರ್ ಕಮಿಟಿ ಸಭೆಯಲ್ಲಿದ್ದವರು ಮಂಕಾದರಂತೆ. ಕಾರಣ? ರಾಜ್ಯ ಸರ್ಕಾರದ ವಿರುದ್ದ ಪಕ್ಷ ನಡೆಸುವ ಹೋರಾಟ ಸಂಘಟಿತವಾಗಿರಬೇಕು.ಅದನ್ನು ಬಿಟ್ಟು ಅವರನ್ನು ಕಂಡರೆ ಇವರಿಗೆ,ಇವರನ್ನು ಕಂಡರೆ ಅವರಿಗೆ ಆಗುವುದಿಲ್ಲ ಅಂತ ಎರಡು ತಂಡ ರಚನೆ ಮಾಡಿದರೆ ಪಕ್ಚವನ್ನು ಅಧಿಕೃತವಾಗಿ ಒಡೆದಂತಾಗುತ್ತದೆ ಎಂಬುದು ಕೋರ್ ಕಮಿಟಿಯ ಬಹುತೇಕರ ಅಭಿಪ್ರಾಯ. ಹೀಗಾಗಿ ರಾಧಾಮೋಹನದಾಸ್ ಅವರು ಪಕ್ಷಕ್ಕೆ ಟಾನಿಕ್ ನೀಡಿ ಹೋದ ನಂತರವೂ ರಾಜ್ಯ ಬಿಜೆಪಿ ಪಾಳಯದಲ್ಲಿ ತಲ್ಲಣ ಉಳಿದೇ ಇದೆ.
ಅಮಿತ್ ಶಾ ಆತುರಕ್ಕೇನು ಕಾರಣ? (Political analysis)
ಅಂದ ಹಾಗೆ ರಾಜ್ಯ ಬಿಜೆಪಿಯ ವಿಷಯದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಚಿಂತಿತರಾಗಿರುವುದು ಏಕೆ ? ಬಿಜೆಪಿ ಮೂಲಗಳ ಪ್ರಕಾರ,ಕರ್ನಾಟಕದ ರಾಜಕಾರಣದ ಬಗ್ಗೆ ಅವರಿಗೆ ತಲುಪುತ್ತಿರುವ ಸಂದೇಶಗಳೇ ಇದಕ್ಕೆ ಕಾರಣ. ಅದರ ಪ್ರಕಾರ,ಮುಂದಿನ ಕೆಲವೇ ದಿನಗಳಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಣ ಸಂಘರ್ಷ ತೀವ್ರ ರೂಪ ಪಡೆಯಲಿದೆ.ಮತ್ತು ಈ ಸಂಘರ್ಷವನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಲಿದೆ.
ಯಾಕೆಂದರೆ ಸಂಘರ್ಷಕ್ಕೆ ಸಜ್ಜಾಗಿರುವ ಸಿದ್ದರಾಮಯ್ಯ ಅವರೇ ಆಗಲೀ,ಡಿ.ಕೆ.ಶಿವಕುಮಾರ್ ಅವರೇ ಆಗಲಿ.ತಮ್ಮ ತಮ್ಮ ಹೆಜ್ಜೆಗಳನ್ನು ಹಿಂದೆ ಸರಿಸಲು ತಯಾರಿಲ್ಲ. ಈ ಪೈಕಿ ಡಿಕೆಶಿ ಕ್ಯಾಂಪಿನ ಪ್ರಕಾರ: 2023 ರ ಮೇ ಮೂರನೇ ವಾರ ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಸಿದೆ.ಸೋನಿಯಾಗಾಂಧಿ,ರಾಹುಲ್ ಗಾಂಧಿ,ಮಲ್ಲಿಕಾರ್ಜುನ ಖರ್ಗೆ,ಸುರ್ಜೇವಾಲ,ಕೆ.ಸಿ.ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ಆದ ಈ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಮೂವತ್ತು ತಿಂಗಳು ಸಿಎಂ ಆಗಿರಬೇಕು. ಆನಂತರದ ಮೂವತ್ತು ತಿಂಗಳು ಡಿಕೆಶಿ ಸಿಎಂ ಆಗಬೇಕು. ಹೀಗೆ ಅವತ್ತು ಆಗಿರುವ ಒಪ್ಪಂದ ಜಾರಿಯಾಗಲೇಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಇದ್ದರೆ ಡಿಕೆಶಿ ನೇತೃತ್ವದ ಗುಂಪು ಕೈ ಪಾಳಯ ತೊರೆಯುವುದು ನಿಶ್ಚಿತ.
ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಸಿದ್ಧರಾಮಯ್ಯ ಕ್ಯಾಂಪು: ಅಧಿಕಾರ ಹಂಚಿಕೆಯ ವಿಷಯದಲ್ಲಿ ಇಂತಹ ಒಪ್ಪಂದವೇ ಆಗಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಸಿದ್ಧರಾಮಯ್ಯ ಅವರೇನಾದರೂ ಕೆಳಗಿಳಿಯುವ ಸನ್ನಿವೇಶ ಸೃಷ್ಟಿಯಾದರೆ ಶಾಸಕರ ದೊಡ್ಡ ಗುಂಪು ಪಕ್ಷ ತೊರೆಯುವುದು ಗ್ಯಾರಂಟಿ.ಈ ಪೈಕಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಐವತ್ತೇಳು ಮಂದಿಯ ತಂಡ ಸಜ್ಜಾಗಿದ್ದರೆ, ಕೈ ಪಾಳಯದಲ್ಲಿರುವ ಮೂವತ್ತೈದರಷ್ಟು ಶಾಸಕರು ನಮಗೆ ಡಿಕೆಶಿ ಸಿಎಂ ಅಗುವುದು ಬೇಡ ಅಂತ ಔಟ್ ರೈಟಾಗಿ ಹೇಳಲು ನಿರ್ಧರಿಸಿದ್ದಾರೆ ಎನ್ನುತ್ತಿದೆ.
ಅಂದ ಹಾಗೆ ಈ ರೀತಿ ಕಾಂಗ್ರೆಸ್ಸಿನ ಎರಡು ಬಣಗಳಿಂದ ತಲುಪುತ್ತಿರುವ ವರ್ತಮಾನ ಸಹಜವಾಗಿಯೇ ಅಮಿತ್ ಶಾ ಅವರಿಗೆ ಖುಷಿ ಕೊಟ್ಟಿದೆ. ಇದೇ ರೀತಿ ಇಂತಹ ಮಾಹಿತಿಗೆ ಪೂರಕವಾಗಿ ಸನ್ನಿವೇಶವನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಒಂದು ಟೀಮು, ಕೇಂದ್ರ ಸಚಿವರಾದ ನಿತೀನ್ ಗಡ್ಕರಿ, ರಾಜನಾಥ್ ಸಿಂಗ್ ನೇತೃತ್ವದ ಮತ್ತೊಂದು ಟೀಮು ರೆಡಿಯಾಗಿವೆ.
Read also : Political analysis | ಗಡ್ಕರಿ, ಸಿಂಗ್ ಬಿಜೆಪಿಯ ಹೊಸ ವಿಂಗ್
ಈ ಪೈಕಿ ಒಂದು ಟೀಮು ಸಿದ್ಧು ಕ್ಯಾಂಪಿನ ಮೇಲೆ ಕಣ್ಣಿಟ್ಟಿದ್ದರೆ,ಮತ್ತೊಂದು ಟೀಮು ಡಿಕೆಶಿ ಕ್ಯಾಂಪಿನ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಯಾವ ಟೀಮು ಹೊರಬಂದರೂ ತಮ್ಮಿಚ್ವೆಯಂತೆ ದಾಳ ಉರುಳುತ್ತದೆ. ಆದರೆ, ಹೀಗೆ ಉರುಳುವ ದಾಳ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಯನ್ನು ಅನಿವಾರ್ಯಗೊಳಿಸಿದರೆ ರಾಜ್ಯ ಬಿಜೆಪಿ ಅದಕ್ಕೆ ಅಣಿಯಾಗಿರಬೇಕಲ್ಲ? ಇವತ್ತು ಅಮಿತ್ ಶಾ ಅವರ ಚಿಂತೆಗೆ ಕಾರಣವಾಗಿರುವುದೇ ಈ ಅಂಶ. ಹೀಗಾಗಿ ಇವತ್ತು ಕರ್ನಾಟಕದಿಂದ ಪಕ್ಷದ ನಾಯಕರ ಬಗ್ಗೆ ಕಂಪ್ಲೇಂಟು ಹೋದರೆ ಸಾಕು, ಅವರು ಅಗರ್ವಾಲ್ ಅವರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಅದೇ ರೀತಿ ಅವರು ಕಿರಿಕಿರಿ ಮಾಡಿದಾಗಲೆಲ್ಲ ಅಗರ್ವಾಲ್ ಕರ್ನಾಟಕಕ್ಕೆ ಓಡಿ ಬಂದು ಸ್ಥಳೀಯ ನಾಯಕರೊಗೆ ಪಾಠ ಮಾಡಿ ಹೋಗುತ್ತಿದ್ದಾರೆ.
ಕೋರ್ ಕಮಿಟಿಯಲ್ಲಿ ಇವರಿಗೆ ಜಾಗವಿಲ್ಲ (Political analysis)
ಈ ಮಧ್ಯೆ ಬಿಜೆಪಿಯ ಹಿಂದುಳಿದ ವರ್ಗಗಳ ನಾಯಕರು ಕೋಪ ಮಾಡಿಕೊಂಡಿದ್ದಾರೆ.ಕೋರ್ ಕಮಿಟಿಯ ರಚನೆ ಸಂದರ್ಭದಲ್ಲಿ ತಮ್ಮನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬುದು ಅವರ ಕೋಪಕ್ಕೆ ಕಾರಣ. ಅಂದ ಹಾಗೆ ಪುನರ್ರಚಿತ ಕೋರ್ ಕಮಿಟಿಯಲ್ಲಿ ಲಿಂಗಾಯತ ಸಮುದಾಯದ ಬಿ.ಎಸ್.ಯಡಿ ಯೂರಪ್ಪ, ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಅವರುಗಳಿದ್ದರೆ,ಒಕ್ಕಲಿಗರ ಕೋಟಾ ದಲ್ಲಿ ಡಿ.ವಿ.ಸದಾನಂದಗೌಡ, ಡಾ.ಅಶ್ವಥ್ತ ನಾರಾಯಣ,ಸಿ.ಟಿ.ರವಿ ಇದ್ದಾರೆ.
ಇದೇ ರೀತಿ ಪರಿಶಿಷ್ಟ ಜಾತಿಯ ಕೋಟಾದಲ್ಲಿ ಎಡಗೈ ಸಮುದಾಯದ ಗೋವಿಂದ ಕಾರಜೋಳ, ಬಲಗೈನ ಛಲವಾದಿ ನಾರಾಯಣಸ್ವಾಮಿ ಅವರುಗಳಿದ್ದರೆ,ಪರಿಶಿಷ್ಟ ಪಂಗಡದ ಕೋಟಾದಲ್ಲಿ ಬಿ.ಶ್ರೀ ರಾಮುಲು ಅವರಿದ್ದಾರೆ. ಉಳಿ ದಂತೆ ಬಂಟ ಸನುದಾಯಕ್ಕೆ ಸೇರಿದ ನಳೀನ್ ಕುಮಾರ್ ಕಟೀಲ್, ಜೈನ ಸಮುದಾಯಕ್ಕೆ ಸೇರಿದ ನಿರ್ಮಲ್ ಕುಮಾರ್ ಸುರಾನಾ ಮತ್ತು ರೆಡ್ಡಿ ಸಮುದಾಯದ ನಂದೀಶ್ ರೆಡ್ಡಿ ಕೋರ್ ಕಮಿಟಿಯಲ್ಲಿ ಜಾಗ ಪಡೆದಿದ್ದಾರೆ. ಹೀಗೆ ನೋಡುತ್ತಾ ಹೋದರೆ ರಾಜ್ಯ ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕರಿಗೆ ಅವಕಾಶವೇ ಸಿಗುತ್ತಿಲ್ಲ.
ಹಾಗೆ ನೋಡಿದರೆ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಕಟ್ಟಿದ ಹಿಂದುಳಿದ ವರ್ಗಗಳ ಕೋಟೆಯ ಮೇಲೆ ಲಗ್ಗೆ ಹಾಕುವುದು ಬಿಜೆಪಿಗೆ ಆದ್ಯತೆಯಾಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಹಿಂದುಳಿದ ವರ್ಗಗಳನ್ನು ಪಕ್ಷ ನಿರ್ಲಕ್ಷಿಸುತ್ತಿದೆ ಎಂಬುದು ಈ ನಾಯಕರ ಆಕ್ರೋಶ.ಹಾಗಂತಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಳ್ಳಲು ಈ ನಾಯಕರು ಮುಂದಾಗಿದ್ದಾರಂತೆ.
ಕುಮಾರಣ್ಣ ಯಶಸ್ವಿ ಆಗುತ್ತಿರುವುದು ಹೇಗೆ? (Political analysis)
ಇನ್ನು ಕೇಂದ್ರ ಸಂಪುಟದಲ್ಲಿ ಉಕ್ಕು ಮತ್ತು ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖುಷಿಯಾಗಿದ್ದಾರೆ. ಕಾರಣ? ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ್ ಅಡಿ ತಾವು ಕೊಟ್ಟ ಟಾರ್ಗೆಟ್ ಮುಟ್ಟಲು ಕುಮಾರಸ್ವಾಮಿ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂಬುದು. ಅಂದ ಹಾಗೆ 2020-30 ರ ಅವಧಿಯಲ್ಲಿ ದೇಶದಲ್ಲಿ 300 ದಶಲಕ್ಷ ಟನ್ ಗಳಷ್ಟು ಉಕ್ಕು ಉತ್ಫಾದಿಸಬೇಕು ಅಂತ ಈ ಹಿಂದೆ ಮೋದಿ ಟಾರ್ಗೆಟ್ ಫಿಕ್ಸ್ ಮಾಡಿದ್ದರು.
ಇದಕ್ಕೆ ಪೂರಕವಾಗಿ ಉಕ್ಕು ಉತ್ಪಾದನೆ ನಡೆಯುತ್ತಿತ್ತಾದರೂ ಕುಮಾರಸ್ವಾಮಿ ಉಕ್ಕು ಸಚಿವರಾದ ನಂತರ ಅದಕ್ಕೆ ವೇಗ ಬಂದಿದೆ. ಉದಾಹರಣೆಗೆ ಆಂಧ್ರದ ವೈಜಾಗ್ ಕಾರ್ಖಾನೆಯನ್ನೇ ತೆಗೆದುಕೊಳ್ಳಿ. ಸಂಕಷ್ಟದಲ್ಲಿದ್ದ ಈ ಕಾರ್ಖಾನೆ ಕುಮಾರಸ್ವಾಮಿ ಅವರು ಮಂತ್ರಿಯಾದ ನಂತರ ಪುನರ್ಜೀವ ಪಡೆದಿದೆ. ಈ ಕಾರ್ಖಾನೆಯ ಪುನರುಜ್ಜೀವಕ್ಕಾಗಿ ಸತತ ಪ್ರಯತ್ನ ನಡೆಸಿದ ಕುಮಾರಸ್ವಾಮಿ ಕೇಂದ್ರದಿಂದ ಸುಮಾರು 11500 ಕೋಟಿ ರೂಗಳ ಪ್ಯಾಕೇಜ್ ಕೊಡಿಸಿದ್ದಲ್ಲದೆ,ಉಕ್ಕು ಉತ್ಪಾದನೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ಕೊಡಿಸಿದ್ದಾರೆ.
ಇದೇ ರೀತಿ ಬೊಕಾರೋ,ಭಿಲಾಯ್,ನಗರ್ ನಾರ್,ಸೇಲಂ ಸೇರಿದಂತೆ ದೇಶದ ಪ್ರಮುಖ ಘಟಕಗಳು ಹಿಂದೆಂದಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಂಡಿದ್ದಾರೆ. ಈ ಮಧ್ಯೆ ಕರ್ನಾಟಕದ ಭದ್ರಾವತಿಯಲ್ಲಿರುವ ವಿ.ಐ.ಎಸ್.ಎಲ್ ಕಾರ್ಖಾನೆಗೆ ಬಂಪರ್ ಪ್ಯಾಕೇಜ್ ಕೊಡಿಸಲು ಹೊರಟಿರುವ ಕುಮಾರಸ್ವಾಮಿ,ಈ ಕಾರ್ಖಾನೆಗೆ ಶಕ್ತಿ ತುಂಬುವ ಕ್ರಿಯಾ ಯೋಜನೆಗೆ ಸೂಚಿಸಿದ್ದಾರೆ.
ಮೂಲಗಳ ಪ್ರಕಾರ ವಿ.ಐ.ಎಸ್.ಎಲ್ ಫ್ಯಾಕ್ಟರಿಗೆ ಹದಿನೈದರಿಂದ ಹದಿನೆಂಟು ಸಾವಿರ ಕೋಟಿ ರೂಗಳ ಪ್ಯಾಕೇಜ್ ಕೊಡಿಸುವುದು ಕುಮಾರಸ್ವಾಮಿ ಯೋಚನೆ. ಹೀಗೆ ದೇಶಾದ್ಯಂತ ಸಂಕಷ್ಟದಲ್ಲಿರುವ ಕಾರ್ಖಾನೆಗಳಿಗೆ ಶಕ್ತಿ ತುಂಬಿ ಉತ್ಪಾದನೆಯ ಕಾರ್ಯವನ್ನು ಚುರುಕುಗೊಳಿಸಿದರೆ ಉಕ್ಕು ಉತ್ಪಾದನೆಯ ವಿಷಯದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ನಿಗದಿ ಮಾಡಿದ ಟಾರ್ಗೆಟ್ ಏನಿದೆ? ಅದನ್ನು ಮೂರು ವರ್ಷ ಮುಂಚಿತವಾಗಿಯೇ ರೀಚ್ ಆಗಬಹುದು ಎಂಬುದು ಕುಮಾರಸ್ವಾಮಿಯವರ ಯೋಚನೆ. ಅವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಖುಷಿಯಾಗಿರುವುದು ಇದೇ ಕಾರಣಕ್ಕಾಗಿ.
ಆರ್.ಟಿ.ವಿಠ್ಠಲಮೂರ್ತಿ