ಹರಿಹರ (Harihara) : ರಾಜ್ಯದ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದ ಕೀರ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರಿಗೆ ಸಲ್ಲುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ್ ಹೇಳಿದರು.
ನಗರದ ಬೈಪಾಸ್ ಬಳಿಯ ಮೈತ್ರಿವನದಲ್ಲಿರುವ ಕರ್ನಾಟಕದಲಿತ ಸಂಘರ್ಷ ಸಮಿತಿಯ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಲ್ಲಿ ಕದಸಂಸ ತಾಲ್ಲೂಕು ಘಟಕದಿಂದ ಸೋಮವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪರ 87ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ರವರು ಸಂವಿಧಾನ ರಚಿಸಿ ದೇಸದಲ್ಲಿ ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಟ್ಟರು. ಆ ಸಂವಿಧಾನದಿಂದ ಪ್ರೇರಣೆಗೊಂಡ ಕೃಷ್ಣಪ್ಪನವರು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸುತ್ತಲೆ ರಾಜ್ಯಾದ್ಯಂತ ಸಂಚರಿಸಿ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದರು ಎಂದರು.
Read also : Davanagere | ಜೂನ್ 10 ರಂದು ವಿದ್ಯುತ್ ವ್ಯತ್ಯಯ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಮಲ್ಲಾ ನಾಯ್ಕ ಮಾತನಾಡಿ, ಪ್ರೊ.ಕೃಷ್ಣಪ್ಪನವರ ಶ್ರಮದಿಂದಾಗಿ ರಾಜ್ಯದಲ್ಲಿ ದಲಿತದೊಡ್ಡ ಚಳವಳಿ ನಡೆಯಲು ಸಾಧ್ಯವಾಯಿತು, ಆಚಳವಳಿಯ ಪರಿಣಾಮವಾಗಿ ಹಲವು ದಲಿತ ಪರ ಕಾನೂನುಗಳು, ಯೋಜನೆಗಳು ರಚನೆಯಾದಂತೆಯೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹಲವು ದಲಿತ ಮುಖಂಡರ ಉಗಮವೂ ಆಯಿತೆಂದರು.
ಅಧ್ಯಕ್ಷತೆವಹಿಸಿದ್ದ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಒಬ್ಬ ಪ್ರೊ.ಬಿ.ಕೃಷ್ಣಪ್ಪರಂತಹ ವಿದ್ಯಾವಂತ, ಪ್ರಮಾಣಿಕ ವ್ಯಕ್ತಿ ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬದಿಗೊತ್ತಿ ಸಾವಿರಾರು ಕಿ.ಮೀ. ರಾಜ್ಯದಲ್ಲಿ ಹಗಲು, ರಾತ್ರಿಯೆನ್ನದೆ ಸಂಚರಿಸಿದ ಪರಿಣಾಮವಾಗಿ ರಾಜ್ಯದಲ್ಲಿ ದಲಿತ ಸಮುದಾಯಗಳಿಗೆ ಧ್ವನಿ ಬಂದಿತು. ಇಂತಹ ಹೋರಾಟದ ಕಿಚ್ಚು ಇಂದಿನ ದಲಿತ ಸಮುದಾಯದ ಯುವಕರಲ್ಲಿ ಮೂಡಬೇಕಿದೆ ಎಂದರು.
ಕದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ಚಂದ್ರಗುತ್ತಿ ಬೆತ್ತಲೆ ಸೇವೆ ಹಾಗೂ ಧರ್ಮದ ಆಸರೆಯಲ್ಲಿ ನಡೆಯುತ್ತಿದ್ದ ಹತ್ತಾರು ಮೌಢ್ಯತೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಮುರಾರ್ಜಿ ವಸತಿ ಶಾಲೆ ಯೋಜನೆ ಆರಂಭಕ್ಕೆ ಇವರ ಒತ್ತಾಸೆಯೆ ಕಾರಣವಾಗಿದೆ ಎಂದರು.
ಬಂಡಾಯ ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಮಾತನಾಡಿ, ಅಂಬೇಡ್ಕರ್ರವರು ಹಾಗೂ ಪ್ರೊ.ಬಿ.ಕೃಷ್ಣಪ್ಪನವರು ವಿದ್ಯಾವಂತರಾಗಿದ್ದರಿಂದಲೆ ದಲಿತ ಹಕ್ಕನ್ನು ಕೇಳಲು, ಪಡೆಯಲು ಸಾಧ್ಯವಾಯಿತು, ವಿದ್ಯೆಗೆ ಇಂತಹ ಶಕ್ತಿ ಇದ್ದು ದಲಿತ ಹಾಗೂ ಶೋಷಣೆಗೀಡಾವದರು ಹಬ್ಬ, ಹರಿದಿನ, ಜಾತ್ರೆಗಳಿಗೆ ವೆಚ್ಚ ಮಾಡುವ ಬದಲು ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗ ಮಾಡಲಿ ಎಂದರು.
ಕದಸಂಸ ಪದಾಧಿಕಾರಿ ಸಿದ್ದರಾಮಣ್ಣ ಬುಳ್ಳಸಾಗರ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪರೊಂದಿಗೆ ಸೇರಿ 70ರ ದಶಕದಲ್ಲಿ ನಡೆದ ಹಲವು ಹೋರಾಟಗಳಲ್ಲಿ ನಾನೂ ಕೂಡ ಭಾಗವಹಿ ಸಿದ್ದೆ , ಕೃಷ್ಣಪ್ಪರಲ್ಲಿದ್ದ ಪ್ರಮಾಣಿಕತೆ, ಸಮುದಾಯದ ಕಾಳಜಿಯಿಂದಾಗಿ ಸರ್ಕಾರಗಳು ಅವರ ಮಾತಿಗೆತಲೆ ಬಾಗುತ್ತಿದ್ದವು ಎಂದರು.
ವಿಜಯಲಕ್ಷ್ಮಿ, ಕಡ್ಲೆಗೊಂದಿ ಗ್ರಾಮ ಪಂಚಾಯ್ತಿ ಸದಸ್ಯೆ ಮಾತೆಂಗೆಮ್ಮ ಕೋಂ ತಿಮ್ಮಣ್ಣ, ಹನುಮಂತಪ್ಪ ನಂದಿಗಾವಿ, ಮಂಜಪ್ಪ ಗುಳದಹಳ್ಳಿ, ಯಲವಟ್ಟಿಯ ಹನುಮಂತರಾಜ್ಎಚ್., ಕೀರ್ತಿಕುಮಾರ್ ಟಿ., ಹರೀಶ್, ಜಿಗಳಿ ಚೌಡಪ್ಪ, ಭಾನುವಳ್ಳಿಯ ಹರೀಶ್ಎಸ್.ಕೆ., ಮಂಜುನಾಥ್ ಸಿ.ಕಿಎ., ಪ್ರಕಾಶ್ ವಿ., ಹರೀಶ್ ಎಂ., ಸ್ವಾಮಿಲಿಂಗಪ್ಪ ಕೆ., ದಿವಾಕರ, ಸಿ.ಚೌಡಪ್ಪ, ಕುಂದವಾಡ ಹಾಲೇಶ್, ಚಿತ್ತನಹಳ್ಳಿ ನಾಗರಾಜ್, ಎಲೆಕ್ಟ್ರಿಕಲ್ ಮಂಜುನಾಥ್, ಹಾಲಮ್ಮ, ಪವಿತ್ರ, ಸಿದ್ದಮ್ಮ, ಆನಂದಪ್ಪ, ಪರಮೇಶ್, ನಾಗರಾಜ್, ಸಂಜೀವ್ ಹಾಗೂ ಇತರರಿದ್ದರು.