ಕಳೆದ ವಾರ ಕರ್ನಾಟಕಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ದುಗುಡದಲ್ಲಿದ್ದರಂತೆ. ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಭವಿಷ್ಯದ ಬಗೆಗಿನ ಚಿಂತೆಯೇ ಈ ದುಗುಡಕ್ಕೆ ಕಾರಣ. ಅಂದ ಹಾಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಪಕ್ಷದ ಹಿರಿಯ ನಾಯಕರ ವಿಶ್ವಾಸ ಗಳಿಸಲು ಅವರಿಗೆ ಸಾಧ್ಯವಾಗಿಲ್ಲ.ಅವರ ಮಹತ್ವಾಕಾಂಕ್ಷೆಯೇ ಇದಕ್ಕೆ ಕಾರಣ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಪಕ್ಷ ತಮ್ಮ ನೇತೃತ್ವದಲ್ಲಿ ಎದುರಿಸಬೇಕು.ಗೆದ್ದು ಅಧಿಕಾರಕ್ಕೆ ಬಂದರೆ ತಾವೇ ಸಿಎಂ ಆಗಬೇಕು ಎಂಬ ಅವರ ಮಹತ್ವಾಕಾಂಕ್ಷೆ ಪಕ್ಷದ ಹಿರಿಯ ನಾಯಕರಿಗೆ ಪಥ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.ಅದೆಂದರೆ ಇಂತಹ ನಾಯಕರ ಪೈಕಿ ಕೆಲವರಿಗೆ ಸ್ವತ: ತಾವೇ ಮುಖ್ಯಮಂತ್ರಿಯಾಗುವ ಕನಸಿದೆ.ಇನ್ನು ಹಲವರಿಗೆ ಪಕ್ಷದಲ್ಲಿ ಬಲಿಷ್ಟರಾಗಿ ಬೆಳೆಯುವ ಕನಸಿದೆ.
ಆದರೆ, ತಮ್ಮ ಮಹತ್ವಾಕಾಂಕ್ಷೆಗೆ ಅಂಟಿಕೊಂಡಿರುವ ವಿಜಯೇಂದ್ರ,ಇದಕ್ಕೆ ಶಕ್ತಿ ತುಂಬುವವರನ್ನು ಮಾತ್ರ ತಮ್ಮ ವರ್ತುಲಕ್ಕೆ ಬಿಟ್ಟುಕೊಳ್ಳುತ್ತಾರೆ.ಯಾರು ತಮ್ಮ ಮಹತ್ವಾಕಾಂಕ್ಷೆಗೆ ಅಡ್ಡಿ ಅನ್ನಿಸುತ್ತಾರೋ? ಇಲ್ಲವೇ ಅನುಪಯುಕ್ತ ಅನ್ನಿಸುತ್ತಾರೋ? ಅಂತವರನ್ನು ಮುಲಾಜಿಲ್ಲದೆ ದೂರವಿಡುತ್ತಾರೆ. ಅವರ ಈ ವರ್ತನೆ ಪಕ್ಷದ ಬಹುತೇಕ ನಾಯಕರಿಗೆ ಒಗಟಾಗಿದೆಯಷ್ಟೇ ಅಲ್ಲ, ವಿಜಯೇಂದ್ರ ಅವರ ತಂದೆ ಯಡಿಯೂರಪ್ಪ ಅವರ ಜತೆ ದುಡಿದ ತಮಗೇ ಈ ಗತಿ ಬಂದಿದೆ ಅನ್ನಿಸಿ ವಿಷಾದವೂ ಆಗುತ್ತಿದೆ.
ಪರಿಣಾಮ? ಇತ್ತೀಚಿನ ದಿನಗಳಲ್ಲಿ ವಿಜಯೇಂದ್ರ ಅವರಿಂದ ಘಾಸಿಗೊಳಗಾದವರು ಸೇರಿದಂತೆ ಹಲವು ನಾಯಕರು ವಿಜಯೇಂದ್ರ ಹಟಾವೋ ಯೋಜನೆಯನ್ನು ಜೀವಂತವಾಗಿಟ್ಟಿದ್ದಾರೆ.
ನೋಡುತ್ತಾ ಹೋದರೆ ವಿಜಯೇಂದ್ರ ಅವರ ಬಗ್ಗೆ ಒಬ್ಬೊಬ್ಬ ನಾಯಕರಿಗೆ ಒಂದೊಂದು ಬಗೆಯ ಸಿಟ್ಟಿದೆ. ಒಂದು ಕಾಲದ ಆಪ್ತರಾದ ಬಸವರಾಜ ಬೊಮ್ಮಾಯಿ ಅವರನ್ನೇ ತೆಗೆದುಕೊಳ್ಳಿ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ವಿಜಯೇಂದ್ರ ಸುಪಾರಿ ಕೊಟ್ಟಿದ್ದರು ಎಂಬುದರಿಂದ ಹಿಡಿದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಲಿಂಗಾಯತ ಮತಗಳನ್ನು ಒಡೆದು ತಮ್ಮ ಪುತ್ರ ಭರತ್ ಅವರನ್ನು ಸೋಲಿಸಿದರು ಎಂಬಲ್ಲಿಯ ತನಕ ಬೊಮ್ಮಾಯಿ ಸಿಟ್ಟು ಹರಡಿಕೊಂಡಿದೆ.
ಇನ್ನು ತಮ್ಮನ್ನು ದುರ್ಬಲಗೊಳಿಸಲು ವಿಜಯೇಂದ್ರ ಯಾವ ರೀತಿ ಪ್ರಯತ್ನಿಸುತ್ತಿದ್ದಾರೆ ಅಂತ ಹೇಳಲು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಬಳಿ ಹಲವು ಕಂಪ್ಲೇಂಟುಗಳಿವೆ.
ಈಗ ಕೇಂದ್ರ ಸಚಿವರಾಗಿರುವ ವಿ.ಸೋಮಣ್ಣ ಅವರ ವಿಷಯಕ್ಕೆ ಬಂದರೂ ಅಷ್ಟೇ.ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ದುಡಿದ ಯಡಿಯೂರಪ್ಪ-ವಿಜಯೇಂದ್ರ ಅವರ ಚಿತ್ರ ಸೋಮಣ್ಣ ಅವರ ಕಣ್ಣಂಚಿನಿಂದ ಮರೆಯಾಗುತ್ತಿಲ್ಲ.
ಹೀಗೆ ನೋಡುತ್ತಾ ಹೋದರೆ ಅರವಿಂದ ಲಿಂಬಾವಳಿ,ಕುಮಾರ್ ಬಂಗಾರಪ್ಪ,ರಮೇಶ್ ಜಾರಕಿಹೊಳಿ,ಕುಮಾರ್ ಬಂಗಾರಪ್ಪ,ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಹಲವು ನಾಯಕರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ವಿರುದ್ದ ಕುದಿಯುತ್ತಲೇ ಇದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ವಿಜಯೇಂದ್ರ ಅವರನ್ನು ಕೆಳಗಿಳಿಸದೆ ಪಕ್ಷಕ್ಕೆ ಭವಿಷ್ಯವಿಲ್ಲ,ಎರಡು ವರ್ಷಗಳಿಂದ ಪಕ್ಷ ಸಂಘಟನೆಯ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಅಂತ ಇವರೆಲ್ಲ ಪದೇ ಪದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ರವಾನಿಸುತ್ತಲೇ ಇದ್ದಾರೆ.
ಹೀಗೆ ಕಂಪ್ಲೇಂಟುಗಳು ರವಾನೆಯಾಗುವುದರ ಜತೆಗೆ ಜೆಡಿಎಸ್ ಜತೆಗಿನ ಮೈತ್ರಿಯ ವಿಷಯದಲ್ಲಿ ವಿಜಯೇಂದ್ರ ಆಸಕ್ತಿ ತೋರುತ್ತಿಲ್ಲ.ಮತ್ತು ರಾಜ್ಯ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿಲ್ಲ ಎಂಬ ದೂರೂ ಸೇರಿಕೊಂಡು ಅಮಿತ್ ಶಾ ವಿಚಲಿತರಾಗುವಂತೆ ಮಾಡಿದೆ. ಹೀಗಾಗಿ ಖಾಸಗಿ ಕಾರ್ಯಕ್ರಮದ ಹೆಸರಿನಲ್ಲಿ ಕಳೆದ ಗುರುವಾರ ಕರ್ನಾಟಕಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವತ್ತು ರಾತ್ರಿಯಿಂದಲೇ ರಾಜ್ಯ ಬಿಜೆಪಿಗೆ ತಗಲಿದ ರೋಗದ ವಿವರ ಪಡೆಯತೊಡಗಿದ್ದಾರೆ.
ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಯಡಿಯೂರಪ್ಪ:’ಕರ್ನಾಟಕದಲ್ಲಿ ಪಕ್ಷ ಸಂಘಟನೆಗಾಗಿ ತಮ್ಮ ಪುತ್ರ ವಿಜಯೇಂದ್ರ ಪಡುತ್ತಿರುವ ಕಷ್ಟದ ವಿವರ ನೀಡಿದ್ದಲ್ಲದೆ,ಇಷ್ಟು ಕಷ್ಟ ಪಡುತ್ತಿರುವ ವಿಜಯೇಂದ್ರ ವಿರುದ್ದ ಅಪಪ್ರಚಾರ ನಡೆಯುತ್ತಿದೆ’ಎಂದು ದುಗುಡ ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ,’ಇಂತಹ ಅಪಪ್ರಚಾರಕ್ಕೆ ಇಳಿದಿರುವ ನಾಯಕರಿಗೆ ಸುಮ್ಮನಿರಲು ಹೇಳಿ.ಇಲ್ಲವೇ ವಿಜಯೇಂದ್ರ ಅಧಿಕಾರದಲ್ಲಿರಬೇಕೋ ಬೇಡವೋ ಎಂಬುದನ್ನಾದರೂ ಸ್ಪಷ್ಟವಾಗಿ ಹೇಳಿಬಿಡಿ’ ಎಂದಿದ್ದಾರೆ.
ಯಾವಾಗ ಯಡಿಯೂರಪ್ಪ ಬೇಸರದಿಂದ ಮಾತನಾಡಿದರೋ? ಆಗ ಅವರನ್ನು ಸಮಾಧಾನಿಸಿದ ಅಮಿತ್ ಶಾ:’ ಯಡೂರಪ್ಪಾಜೀ. ನಿಮ್ಮಮಗ ವಿಜಯೇಂದ್ರ ಪಕ್ಷಾಧ್ಯಕ್ಷರಾಗಿ ಕಂಟಿನ್ಯೂ ಆಗುತ್ತಾರೆ.ಆದರೆ ಅವರು ಸರ್ಕಾರದ ವಿರುದ್ದ ಪರಿಣಾಮಕಾರಿಯಾಗಿ ಹೋರಾಡುತ್ತಿಲ್ಲ.ಪಕ್ಷದಲ್ಲಿರುವ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳಿವೆ.ಹೀಗಾಗಿ ಅದನ್ನು ಸರಿಪಡಿಸಿಕೊಳ್ಳಬೇಕು ಅಂತ ಎಚ್ಚರಿಕೆಯ ಧಾಟಿಯಲ್ಲಿ ಮಾತನಾಡಿದ್ದಾರೆ. ಆಗ ಅಮಿತ್ ಷಾ ಅವರಿಗೆ ಒಂದು ಪ್ರಾಮಿಸ್ಸು ಮಾಡಿರುವ ಯಡಿಯೂರಪ್ಪ:’ಇನ್ನು ಮುಂದೆ ಇಂತಹ ಲೋಪಗಳಾಗದಂತೆ ನೋಡಿಕೊಳ್ಳುತ್ತೇವೆ.ಸರ್ಕಾರದ ವಿರುದ್ದ ಉಗ್ರ ಹೋರಾಟ ರೂಪಿಸುತ್ತೇವೆ’ಎಂದಿದ್ದಾರಲ್ಲದೆ ಪಕ್ಷದ ಕಚೇರಿ ಜಗನ್ನಾಥ ಭವನಕ್ಕೆ ಹೋಗಲು ಶುರು ಮಾಡಿದ್ದಾರೆ.
ಜೆಡಿಎಸ್ ಮೈತ್ರಿ ಏಕೆ ಬೇಕು? (Political analysis)
ಹೀಗೆ ಅಮಿತ್ ಷಾ ಅವರು ಯಡಿಯೂರಪ್ಪನವರನ್ನು ಸಮಾಧಾನಿಸಿ ಕಳಿಸಿದ ಅಮಿತ್ ಶಾ ಮತ್ತೊಂದೆಡೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಆರ್.ಅಶೋಕ್,ಅರವಿಂದ ಬೆಲ್ಲದ್ ಮತ್ತಿತರರ ಜತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಸಂದರ್ಭದಲ್ಲಿ ವಿಜಯೇಂದ್ರ ಅವರ ವಿರುದ್ಧ ಕಂಪ್ಲೇಂಟುಗಳ ಮಳೆ ಸುರಿಸಿದ ಈ ನಾಯಕರು:’ಪಕ್ಷದ ಹಿತದೃಷ್ಟಿಯಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು.ಇಲ್ಲದಿದ್ದರೆ ಸಂಘಟನೆ ಕುಸಿದೇ ಹೋಗುತ್ತದೆ’ಅಂತ ವಿವರಿಸಿದ್ದಾರೆ. ಮೂಲಗಳ ಪ್ರಕಾರ ಈ ಮಾತುಕತೆಯ ಸಂದರ್ಭದಲ್ಲಿ ಸದರಿ ನಾಯಕರು ಎರಡು ಮುಖ್ಯ ವಿಷಯಗಳನ್ನು ಅಮಿತ್ ಶಾ ಕಿವಿಗೆ ಹಾಕಿದ್ದಾರೆ.
ಮೊದಲನೆಯದಾಗಿ ಪಕ್ಷದ ಹಿರಿಯ ನಾಯಕರ ಬಗ್ಗೆ ವಿಜಯೇಂದ್ರ ತೋರುತ್ತಿರುವ ನಿರ್ಲಕ್ಷ್ಯ.ಎರಡನೆಯದಾಗಿ ಮಿತ್ರ ಪಕ್ಷ ಜೆಡಿಎಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ರೀತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇವತ್ತು ವಿಧಾನಸಭೆ ಚುನಾವಣೆಗೆ ಹೋದರೆ ಸ್ವಯಂಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ವಿಜಯೇಂದ್ರ ಹೇಳುತ್ತಿದ್ದಾರೆ.ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಚ ಅಹಿಂದ ವರ್ಗಗಳ ಮತಗಳನ್ನು ಹೇಗೆ ಕನ್ ಸಾಲಿಡೇಟ್ ಮಾಡಿದೆಯೆಂದರೆ ಅದನ್ನು ಎದುರಿಸಲು ನಾವು ಒಕ್ಕಲಿಗ,ಲಿಂಗಾಯತ ಮತಗಳನ್ನು ಒಗ್ಗೂಡಿಸಲೇಬೇಕು.
ಆಧರೆ ವಿಜಯೇಂದ್ರ ಅವರು ಹೇಳಿದಂತೆ ನಾವು ಜೆಡಿಎಸ್ ನಿಂದ ದೂರ ಉಳಿದರೆ ಒಕ್ಕಲಿಗ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಹಂಚಿಕೆಯಾಗುತ್ತವೆ.ಹಾಗೇನಾದರೂ ಆದರೆ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿ,ಬಿಜೆಪಿಗೆ ನಷ್ಟವಾಗುತ್ತದೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಕಣ್ಣ ಮುಂದಿಟ್ಟುಕೊಂಡು ನಾವು ಜೆಡಿಎಸ್ ಜತೆಗಿನ ಮೈತ್ರಿಯನ್ನು ಮುಂದುವರಿಸಬೇಕು ಅಂತ ಈ ನಾಯಕರು ವಿವರಿಸಿದ್ದಾರೆ. ಅವರು ಹೇಳಿದ್ದನ್ನೆಲ್ಲ ಕೇಳಿದ ಅಮಿತ್ ಶಾ ಹೌದು ಎನ್ನುವಂತೆ ತಲೆ ಆಡಿಸಿದ್ದಾರೆ.
ವಿಜಯೇಂದ್ರ ಅವರಿಗೆ ಸಿಕ್ಕ ಸಿಗ್ನಲ್ಲು (Political analysis)
ಈ ಮಧ್ಯೆ ವಿಜಯೇಂದ್ರ ಅವರ ಬಳಿಯೂ ಚರ್ಚೆ ನಡೆಸಿದ ಅಮಿತ್ ಶಾ ನೇರವಾಗಿ ಮೂರು ವಿಷಯಗಳನ್ನು ಪ್ರಸ್ತಾಪಿಸಿದರಂತೆ. ಮೊದಲನೆಯದಾಗಿ ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂಬುದು.ಎರಡನೆಯದಾಗಿ ಜೆಡಿಎಸ್ ಜತೆಗಿನ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂಬುದು. ಮೂರನೆಯದಾಗಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಪರಿಣಾಮಕಾರಿ ಹೋರಾಟಗಳನ್ನು ಸಂಘಟಿಸಿ ಎಂಬುದು.
ಹೀಗೆ ಮೂರು ವಿಷಯಗಳನ್ನು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ ಅಮಿತ್ ಶಾ ಉಳಿದಂತೆ ಬೇರೆ ಯಾವ ವಿಷಯಗಳ ಬಗ್ಗೆಯೂ ಹೆಚ್ಚು ಪ್ರಸ್ತಾಪಿಸಿಲ್ಲ. ಅರ್ಥಾತ್,ವಿಜಯೇಂದ್ರ ನಾಯಕತ್ವಕ್ಕೆ ಕಂಟಕವಾಗುವ ಯಾವುದೇ ಸಿಗ್ನಲ್ಲುಗಳನ್ನು ಅವರು ನೀಡಿಲ್ಲ.ಮೂಲಗಳ ಪ್ರಕಾರ,ವಿರೋಧಿ ಪಡೆಯ ಮಾತು ಕೇಳಿ ವಿಜಯೇಂದ್ರ ಅವರನ್ನು ತಕ್ಷಣ ಕೆಳಗಿಳಿಸಲು ಅವರು ಬಯಸುತ್ತಿಲ್ಲ.
ಕಾರಣ?ವಿಜಯೇಂದ್ರ ವಿರುದ್ಧ ಯಾರೇನೇ ದೂರು ನೀಡಿದರೂ ಯಡಿಯೂರಪ್ಪ ಪ್ರಭಾವಳಿ ಹೊಂದಿರುವ ವಿಜಯೇಂದ್ರ ಅವರಂತೆ ಲಿಂಗಾಯತ ಮತಗಳನ್ನು ಕನ್ ಸಾಲಿಡೇಟ್ ಮಾಡುವ ಶಕ್ತಿ ಉಳಿದ ನಾಯಕರಿಗಿಲ್ಲ ಎಂಬುದು. ಈ ಪೈಕಿ ತುಂಬ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಲಿಮಿಟ್ ಆದವರೇ ಹೊರತು ರಣಾಂಗಣಕ್ಕೆ ನುಗ್ಗಿ ಬೇರೆಯವರನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಹೊಂದಿದವರಲ್ಲ. ಇನ್ನು ಪಕ್ಷದ ರಾಜ್ಯಾಧ್ಯಕ್ಷರನ್ನು ಚುನಾಯಿಸುವ ಬಿಜೆಪಿ ಜಿಲ್ಲಾಧ್ಯಕ್ಷರ ಪೈಕಿ ಬಹುತೇಕರು ವಿಜಯೇಂದ್ರ ಅವರ ಜತೆಗಿದ್ದಾರೆ ಎಂಬುದು ಅಮಿತ್ ಶಾ ಅವರಿಗಿರುವ ಸಧ್ಯದ ರಿಪೋರ್ಟು.
ಹೀಗಾಗಿ ತಮ್ಮನ್ನು ಭೇಟಿಯಾದ ವಿಜಯೇಂದ್ರ ಅವರಿಗೆ ಮೂರೇ ಮೂರು ಸಂಗತಿಗಳನ್ನು ಅಮಿತ್ ಶಾ ವಿವರಿಸಿದ್ದಾರೆ. ಯಾವಾಗ ಅವರು ಈ ಸಿಗ್ನಲ್ ನೀಡಿದರೋ? ಇದಾದ ನಂತರ ಹೊರಬಂದ ವಿಜಯೇಂದ್ರ ಭವಿಷ್ಯದಲ್ಲಿ ಜೆಡಿಎಸ್ ಜತೆ ಹೊಂದಿಕೊಂಡು ಹೋಗುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಹಾಗೆಯೇ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹೋರಾಡಲು ರಣೋತ್ಸಾಹ ತೋರಿಸಿದ್ದಾರೆ.
ಅಲ್ಲಿಗೆ ಅಮಿತ್ ಶಾ ಅವರ ಕರ್ನಾಟಕ ಭೇಟಿ ಒಂದು ಮಟ್ಟದಲ್ಲಿ ಫಲ ನೀಡಿದಂತೆ ಕಾಣುತ್ತಿದೆಯಾದರೂ,ಆಳವಾಗಿ ಹೊಕ್ಕು ನೋಡಿದರೆ ವಿಜಯೇಂದ್ರ ಅವರನ್ನು ವಿರೋಧಿಸುತ್ತಿರುವ ಬಹುತೇಕ ನಾಯಕರು ವೈಯಕ್ತಿಕ ನೆಲೆಯಲ್ಲಿ ಘಾಸಿಗೊಂಡವರು.ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಜಯೇಂದ್ರ ಅವರ ಪ್ರಯತ್ನ ಎಷ್ಟು ಪ್ರಾಮಾಣಿಕವಾಗಿರಲಿದೆ ಎಂಬುದರ ಮೇಲೆ ಅವರ ಯಶಸ್ಸು ನಿಂತಿದೆ.
ಲಾಸ್ಟ್ ಸಿಪ್ (Political analysis)
ಅಂದ ಹಾಗೆ ಶುಕ್ರವಾರ ಅಮಿತ್ ಶಾ ಅವರೊಂದಿಗೆ ಅಶೋಕ್,ಬೊಮ್ಮಾಯಿ,ಬೆಲ್ಲದ್ ಮತ್ತಿತರ ನಾಯಕರು ಮಾತನಾಡುತ್ತಿದ್ದಾಗ ಅಲ್ಲಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ. ಹೀಗೆ ಎಂಟ್ರಿಯಾದವರು ಇತ್ತೀಚಿನ ಜನಾಕ್ರೋಶ ಯಾತ್ರೆ ಮತ್ತಿತರ ಹೋರಾಟಗಳು ತುಂಬ ಯಶಸ್ವಿಯಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ಮಾತು ಕೇಳಿದ ಅಮಿತ್ ಶಾ:’ಅವೆಲ್ಲ ಎಷ್ಟು ಯಶಸ್ವಿಯಾಗಿವೆ ಅಂತ ನನಗೆ ಗೊತ್ತು,ಸಂಘಟನೆಯ ಕತೆ ಏನಾಗಿದೆ ಅಂತ ಗೊತ್ತು’ ಅಂತ್ಹೇಳಿ ಮುಖ ಗಂಟು ಹಾಕಿಕೊಂಡರಂತೆ.
ಯಾವಾಗ ಅಮಿತ್ ಶಾ ಮುಖ ಗಂಟು ಹಾಕಿಕೊಂಡರೋ? ಇದಾದ ನಂತರ ವಿಜಯೇಂದ್ರ ಮಂಕಾಗಿದ್ದಾರೆ. ಮೂಲಗಳ ಪ್ರಕಾರ,ಇದು ನಿಮಗೆ ಲಾಸ್ಟ್ ಚಾನ್ಸು ಅಂತ ವಿಜಯೇಂದ್ರ ಅವರಿಗೆ ಅಮಿತ್ ಷಾ ಸಿಗ್ನಲ್ಲು ನೀಡಿದ್ದಾರೆ.ಈ ಸಿಗ್ನಲ್ಲು ಅರ್ಥವಾದರೆ ಓಕೆ.ಇಲ್ಲದಿದ್ದರೆ ಆರು ತಿಂಗಳಲ್ಲಿ ವಿಜಯೇಂದ್ರ ಕೆಳಗಿಳಿದು ವಿ.ಸೋಮಣ್ಷ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಲಿದ್ದಾರೆ.