ಇದು 1999 ರಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ರಾಜಶೇಖರ ಮೂರ್ತಿ ಅವರನ್ನು ತರಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ನಿರ್ಧರಿಸಿದ್ದರು.
ಹೀಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕರನ್ನು ತರಬೇಕು ಅಂತ ಸೋನಿಯಾಗಾಂಧಿ ನಿರ್ಧರಿಸಲು ಹಲವು ಕಾರಣಗಳಿದ್ದವು. ಈ ಪೈಕಿ ಮುಖ್ಯವಾದುದೆಂದರೆ ಜನತಾದಳದಲ್ಲಿ ನಡೆದ ಬೆಳವಣಿಗೆ.
ಅರ್ಥಾತ್, ಅ ಹೊತ್ತಿಗೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಜನತಾದಳ ಆಂತರಿಕ ಸಂಘರ್ಷದಿಂದ ಕಂಗಾಲಾಗಿತ್ತು. ಕರ್ನಾಟಕದಲ್ಲಿ ಅಧಿಕಾರ ಹಿಡಿದ ನಂತರ ಜನತಾ ಪರಿವಾರದ ಆಧಾರ ಸ್ತಂಭವೇ ಆಗಿದ್ದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಪಕ್ಷದಿಂದ ಉಚ್ಚಾಟಿತರಾಗಿದ್ದು ಈ ಸಂಘರ್ಷದ ಮೂಲವಾಗಿತ್ತು.
ಯಾವಾಗ ರಾಮಕೃಷ್ಣ ಹೆಗಡೆ ಜನತಾದಳದಿಂದ ಉಚ್ಚಾಟಿತರಾದರೋ? ಇದಾದ ನಂತರ ಲಿಂಗಾಯತ ವರ್ಗ ತಿರುಗಿಬಿತ್ತು. ಮತ್ತು ಹೆಗಡೆಯವರ ಉಚ್ಚಾಟನೆಗೆ ಕಾರಣರಾದ ದೇವೇಗೌಡರ ವಿರುದ್ಧ ಕುದಿಯುತ್ತಿತ್ತು.
ಹೀಗೆ ಜನತಾದಳದಲ್ಲಿ ಭುಗಿಲೆದ್ದಿದ್ದ ಆಂತರಿಕ ಸಂಘರ್ಷದ ಜಾಡು ಹಿಡಿದ ಕಾಂಗ್ರೆಸ್ ವರಿಷ್ಟರು 1999 ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಲಿಂಗಾಯತ ನಾಯಕರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲು ಯೋಚಿಸಿದರು.
ಈ ಸಂದರ್ಭದಲ್ಲಿ ಅವರ ಕಣ್ಣಿಗೆ ಕಂಡವರು ಲಿಂಗಾಯತ ಸಮುದಾಯದ ನಾಯಕ,ಮಾಜಿ ಹಣಕಾಸು ಸಚಿವರಾದ ಎಂ.ರಾಜಶೇಖರ ಮೂರ್ತಿ.ಎಷ್ಟೇ ಅದರೂ ರಾಜಶೇಖರಮೂರ್ತಿ ದಕ್ಷ ಆಡಳಿತಗಾರ ಅಂತ ಹೆಸರಾದವರು. ಅಂತವರು ಪಕ್ಷದ ಅಧ್ಯಕ್ಷರಾದರೆ ಸಹಜವಾಗಿಯೇ ಪಕ್ಷಕ್ಕೆ ಲಾಭ ಎಂಬುದು ಕಾಂಗ್ರೆಸ್ ವರಿಷ್ಟರ ಲೆಕ್ಕಾಚಾರ.
ಅವರ ಈ ಲೆಕ್ಕಾಚಾರ ಅನುಷ್ಟಾನಗೊಂಡಿದ್ದರೆ ಕರ್ನಾಟಕದ ರಾಜಕೀಯ ಚಿತ್ರ ಬೇರೆಯೇ ಆಗುತ್ತಿತ್ತು. ಆದರೆ ಕಾಂಗ್ರೆಸ್ ವರಿಷ್ಟರ ಈ ಲೆಕ್ಕಾಚಾರ ತಿಳಿಯುತ್ತಿದ್ದಂತೆಯೇ ಕರ್ನಾಟಕದ ಮದ್ಯದ ದೊರೆಗಳು ಕಂಗಾಲಾದರು.ಅಷ್ಟೇ ಅಲ್ಲ,ವಿಜಯಮಲ್ಯ ಅವರ ನೇತೃತ್ವದಲ್ಲಿ ದಿಲ್ಲಿಗೆ ಹೋಗಲು ಸಜ್ಜಾದರು.
ಅವರ ಈ ನಿರ್ಧಾರಕ್ಕೆ ಒಂದು ಕಾರಣವಿತ್ತು.ಅದೆಂದರೆ ಹತ್ತು ವರ್ಷಗಳ ಹಿಂದೆ ನಡೆದ ಒಂದು ಘಟನೆ.
ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.ಮತ್ತು ಅವರ ಸಚಿವ ಸಂಪುಟದಲ್ಲಿ ಎಂ.ರಾಜಶೇಖರ ಮೂರ್ತಿ ಹಣಕಾಸು ಮಂತ್ರಿಯಾಗಿದ್ದರು.
ಹೀಗೆ ಹಣಕಾಸು ಮಂತ್ರಿಯಾಗಿದ್ದ ರಾಜಶೇಖರಮೂರ್ತಿ ಅವರು ಮದ್ಯದ ಲಾಬಿಯ ವಿರುದ್ದ ಯಾವ ರೀತಿ ಮುಗಿಬಿದ್ದರು ಎಂದರೆ,ಕೆಲವೇ ದಿನಗಳಲ್ಲಿ ಮಧ್ಯದ ದೊರೆಗಳು ಕಂಗಾಲಾಗಿ ಹೋಗಿದ್ದರು.
ಈ ರೀತಿ ಮದ್ಯದ ದೊರೆಗಳ ಮೇಲೆ ಮುಗಿಬಿದ್ದ ರಾಜಶೇಖರಮೂರ್ತಿ ಅವತ್ತು 700 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹಣ ಸರ್ಕಾರದ ಬೊಕ್ಕಸದಲ್ಲಿ ಸ್ಟಾಕ್ ಇರುವಂತೆ ನೋಡಿಕೊಂಡಿದ್ದರು ಎಂದರೆ ಅವರ ಪವರ್ ಹೇಗೆ ಕೆಲಸ ಮಾಡಿತ್ತು ಎಂಬುದನ್ನು ಊಹಿಸಬಹುದು.
ಒಂದು ಹಂತದಲ್ಲಿ ಅವರ ಈ ಹೊಡೆತಕ್ಕೆ ಮದ್ಯದ ದೊರೆಗಳು ಯಾವ ಮಟ್ಟಿಗೆ ಕಂಗಾಲಾಗಿದ್ದರು ಎಂದರೆ,ಹಲವರು ತಮ್ಮ ಉದ್ಯಮವನ್ನೇ ಕರ್ನಾಟಕದಿಂದ ಒಕ್ಕಲೆಬ್ಬಿಸಲು ಮುಂದಾಗಿದ್ದರು.
ಹೀಗೆ ಹತ್ತು ವರ್ಷಗಳ ಹಿಂದೆ ತಮ್ಮನ್ನು ಈ ರೀತಿ ಬಡಿದಿದ್ದ ರಾಜಶೇಖರಮೂರ್ತಿ ಇವತ್ತು ಕೆಪಿಸಿಸಿ ಅಧ್ಯಕ್ಷರಾದರೆ ಸಿಎಂ ಹುದ್ದೆಗೆ ಹತ್ತಿರವಾಗುತ್ತಿದ್ದಾರೆ ಅಂತಲೇ ಅರ್ಥವಲ್ಲವೇ? ಹಾಗಂದುಕೊಂಡ ಮದ್ಯದ ದೊರೆಗಳು ವಿಜಯ್ ಮಲ್ಯ ಅವರ ನೇತೃತ್ವದಲ್ಲಿ ದಿಲ್ಲಿಗೆ ಹೋದರು.
ಅಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಸಂಕಟ ತೋಡಿಕೊಂಡರು.
ಎಷ್ಟೇ ಆದರೂ ಮದ್ಯದ ದೊರೆಗಳು ಪಾರ್ಟಿ ಫಂಡು ಕೊಡುವವರು.ಅಂತವರು ಬಂದು ರಾಜಶೇಖರ ಮೂರ್ತಿಯವರ ವಿರುದ್ದ ಮಾತನಾಡುತ್ತಿದ್ದಾರೆ ಎಂದರೆ ಸೋನಿಯಾಗಾಂಧಿ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ರಾಜಶೇಖರಮೂರ್ತಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಪೋಸಲ್ಲನ್ನು ಅವರು ಕೈ ಬಿಟ್ಟರು.
Read also : Political analysis|ವಿಜಯೇಂದ್ರ-ನಿಖಿಲ್ ಈಗ ಜೋಡೆತ್ತುಗಳು
ಪರಿಣಾಮ? ನೋಡ ನೋಡುತ್ತಿದ್ದಂತೆಯೇ ರಾಜಶೇಖರಮೂರ್ತಿ ಅವರ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕುಳಿತರು. ಹೀಗೆ ಅವತ್ತು ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಅವರು ಮುಂದೆ ಕರ್ನಾಟಕದ ಮುಖ್ಯಮಂತ್ತಿಯಾದರು.ಅಷ್ಟೇ ಅಲ್ಲ, ಮಹಾರಾಷ್ಟ್ರದ ರಾಜ್ಯಪಾಲರಾಗಿ,ಕೇಂದ್ರ ಸಚಿವರಾಗಿ ರಾಷ್ಟ್ರ ರಾಜಕಾರಣದ ಉತ್ತುಂಗಕ್ಕೇರಿದರು.
ಅಧಿಕಾರದ ಸನಿಹ ಬಂದಿದ್ದ ಅನಂತ್ (Political analysis)
ಇನ್ನು 2004 ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪಲಿತಾಂಶ ಬಂತಲ್ಲ? ಆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಮೈತ್ರಿ ಮಾತುಕತೆ ಶುರುವಾಗಿತ್ತು. ಹೀಗೆ ಉಭಯ ಪಕ್ಷಗಳ ಮಧ್ಯೆ ಮೈತ್ರಿ ಮಾತುಕತೆ ನಡೆಯುತ್ತಿದ್ದ ಕಾಲದಲ್ಲೇ ಬಿಜೆಪಿ ನಾಯಕ ಅನಂತಕುಮಾರ್ ಅವರು ಒಳಗಿಂದೊಳಗೇ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಮಾತುಕತೆ ಶುರುವಿಟ್ಟು ಕೊಂಡರು.
ಆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಜತೆಗೂಡಿ ಕುಮಾರಸ್ವಾಮಿಯವರ ಜತೆ ಸಂಧಾನಸಭೆ ನಡೆಸಿದ ಅನಂತಕುಮಾರ್ ಅವರು, ಸಿಎಂ ಹುದ್ದೆಗೆ ನೀವು, ಡಿಸಿಎಂ ಹುದ್ದೆಗೆ ನಾನು ಅಂತ ಹೇಳಿ ಒಪ್ಪಿಸಿದ್ದರು.
ಅವತ್ತು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿ ತಮಗೆ ನೀಡಿದ ಆಫರ್ ನಿಂದ ಕುಮಾರಸ್ವಾಮಿ ಖುಷಿಯಾಗಿದ್ದರು. ಆದರೆ ಅರುಣ್ ಜೇಟ್ಲಿ ಮತ್ತು ಅನಂತಕುಮಾರ್ ಅವರು ತಮ್ಮ ಮುಂದೆ ಮಂಡಿಸಿದ ಈ ಪ್ರಪೋಸಲ್ಲನ್ನು ದೇವೇಗೌಡರ ಬಳಿ ಕೊಂಡೊಯ್ದ ಕುಮಾರಸ್ವಾಮಿಯವರಿಗೆ ನಿರಾಸೆ ಕಾದಿತ್ತು.
ಯಾಕೆಂದರೆ ಅವತ್ತು ದೇವೇಗೌಡರು ಬಿಜೆಪಿ ಜತೆ ಕೈ ಜೋಡಿಸಲು ಬಿಲ್ ಕುಲ್ ಒಪ್ಪಲಿಲ್ಲ.ಕಾರಣ? ಅದುವರೆಗಿನ ತಮ್ಮ ರಾಜಕೀಯ ಬದುಕಿನಲ್ಲಿ ಸೆಕ್ಯುಲರ್ ಶಕ್ತಿಗಳ ಜತೆ ಹೆಜ್ಜೆ ಹಾಕಿದ್ದ ಗೌಡರು ಈಗ ಮಗನಿಗಾಗಿ ಬಿಜೆಪಿ ಜತೆ ಕೈ ಜೋಡಿಸಲು ಸಿದ್ದರಿರಲಿಲ್ಲ.
ಪರಿಣಾಮ? ಕುಮಾರಸ್ವಾಮಿ ಮಾತ್ರವಲ್ಲ, ಬಿಜೆಪಿ ನಾಯಕ ಅನಂತಕುಮಾರ್ ಕೂಡಾ ನಿರಾಸೆ ಅನುಭವಿಸಬೇಕಾಯಿತು. ಹಾಗೊಂದು ವೇಳೆ ಅವತ್ತು ಅನಂತಕುಮಾರ್ ಮಂಡಿಸಿದ ಪ್ರಪೋಸಲ್ಲು ಕ್ಲಿಕ್ ಆಗಿ ಕುಮಾರಸ್ವಾಮಿ ಸಿಎಂ ಆಗಿದ್ದರೆ,ಅನಂತಕುಮಾರ್ ಡಿಸಿಎಂ ಆಗಿದ್ದರೆ ಕರ್ನಾಟಕದ ರಾಜಕಾರಣ ಬೇರೆಯೇ ದಿಕ್ಕು ಹಿಡಿಯುತ್ತಿತ್ತು. ಆದರೆ ಇದು ಸಾಧ್ಯವಾಗದ ಕಾರಣ ಕರ್ನಾಟಕದ ರಾಜಕಾರಣ ಬೇರೆಯೇ ದಿಕ್ಕು ಹಿಡಿಯಿತು.
ಹೀಗಾಗಿ ಭವಿಷ್ಯದಲ್ಲಿ ಅನಂತಕುಮಾರ್ ದಿಲ್ಲಿಗೆ ಹೋಗಿ ಸೆಟ್ಲಾದರೆ ಯಡಿಯೂರಪ್ಪನವರು ಡಿಸಿಎಂ ಆಗಿ,ಸಿಎಂ ಆಗಿ ಕರ್ನಾಟಕದ ರಾಜಕಾರಣದಲ್ಲಿ ಹೆಮ್ಮರವಾಗಿ ಬೆಳೆದು ನಿಂತರು.
ಅರಸರು ಮೇಲೆದ್ದು ನಿಂತ ಕತೆ (Political analysis)
ಇನ್ನು 1969 ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ವಿಭಜನೆಯಾಯಿತಲ್ಲ? ಆ ಸಂದರ್ಭದಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ (ಓ) ಮತ್ತು ಕಾಂಗ್ರೆಸ್ (ಆರ್) ತಲೆ ಎತ್ತಿ ನಿಂತವು.
ಅವತ್ತು ತಮ್ಮ ನೇತೃತ್ವದ ಕಾಂಗ್ರೆಸ್ (ಆರ್) ಘಟಕಕ್ಕೆ ಕರ್ನಾಟಕದಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಯೋಚಿಸಿದ ಇಂದಿರಾಗಾಂಧಿ ಅವರಿಗೆ ಹೊಳೆದಿದ್ದು ಕೋಳೂರು ಮಲ್ಲಪ್ಪನವರ ಹೆಸರು. ಯಾಕೆಂದರೆ ಅಷ್ಟೊತ್ತಿಗಾಗಲೇ ಕೋಳೂರು ಮಲ್ಲಪ್ಪನವರು ರಾಜ್ಯದ ಪ್ರಬಲ ನಾಯಕರಾಗಿ ಬೆಳೆದು ನಿಂತಿದ್ದರು.
ಕೇವಲ ಮುಂಬಯಿ-ಕರ್ನಾಟಕ ಮಾತ್ರವಲ್ಲದೆ,ಹೈದ್ರಾಬಾದ್-ಕರ್ನಾಟಕ ಭಾಗದಲ್ಲೂ ಪ್ರಭಾವಿಯಾಗಿದ್ದ ಕೋಳೂರು ಮಲ್ಲಪ್ಪನವರು ತಮ್ಮ ನೇತೃತ್ವದ ಕಾಂಗ್ರೆಸ್ ಘಟಕಕ್ಕೆ ಸೂಟಬಲ್ಲು ಎಂಬುದು ಇಂದಿರಾಗಾಂಧಿ ಲೆಕ್ಕಾಚಾರ. ಹಾಗಂತಲೇ ಇಂದಿರಾಗಾಂಧಿ ಒಮ್ಮೆ ಕೋಳೂರು ಮಲ್ಲಪ್ಪ ನವರನ್ನು ಸಂಪರ್ಕಿಸಿದರು.
‘ಮಲ್ಲಪ್ಪಾಜೀ,ನೀವು ರಾಜ್ಯದಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ನಮ್ಮ ಬಯಕೆ.ಇವತ್ತು ನೀವು ಅಧ್ಯಕ್ಷರಾದರೆ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಸಿಎಂ ಆಗುತ್ತೀರಿ ಎಂದರು.
ಅವತ್ತು ಇಂದಿರಾಗಾಂಧಿ ಅವರು ನೀಡಿದ ಪ್ರಪೋಸಲ್ಲನ್ನು ಕೋಳೂರು ಮಲ್ಲಪ್ಪನವರು ಒಪ್ಪಿದ್ದರೆ ರಾಜ್ಯ ರಾಜಕಾರಣದ ಚಿತ್ರವೇ ಬೇರೆಯಾಗುತ್ತಿತ್ತು. ಆದರೆ ಅವತ್ತು ಇಂದಿರಾಗಾಂಧಿ ನೀಡಿದ ಪ್ರಪೋಸಲ್ಲನ್ನು ನಯವಾಗಿ ತಿರಸ್ಕರಿಸಿದ ಕೋಳೂರು ಮಲ್ಲಪ್ಪವರು. :’ಮೇಡಂ,ಇವತ್ತು ಪಕ್ಷದ ರಾಜ್ಯ ಘಟಕಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಬೇಕೆಂಬ ನಿಮ್ಮ ಇಚ್ಚೆಗೆ ನಾನು ಋಣಿ.
ಅದರೆ ಈ ಜಾಗಕ್ಕೆ ನನ್ನ ಬದಲು ಪ್ರಾಮಿಸಿಂಗ್ ಲೀಡರು ದೇವರಾಜ ಅರಸರನ್ನು ನೇಮಕ ಮಾಡಿ. ಯಾಕೆಂದರೆ ಅವರಿಗೆ ಶೋಷಿತ ವರ್ಗಗಳ ಬಗ್ಗೆ ತುಂಬ ಕನಸರ್ನ್ ಇದೆ.ಇದರಿಂದ ಪಕ್ಷಕ್ಕೂ ಅನುಕೂಲ.ರಾಜ್ಯಕ್ಕೂ ಅನುಕೂಲ’ ಎಂದರು.
ಕೋಳೂರು ಮಲ್ಲಪ್ಪನವರು ಈ ಮಾತು ಹೇಳಿದ ನಂತರವೂ ಇಂದಿರಾಗಾಂಧಿ ಪಟ್ಟು ಬಿಡಲಿಲ್ಲ.’ಇಲ್ಲ,ಮಲ್ಲಪ್ಪಾಜೀ ಮತ್ತೊಮ್ಮೆ ಯೋಚಿಸಿ’ ಎಂದರು. ಆದರೆ ತಮ್ಮ ಮಾತಿಗೆ ಅಂಟಿಕೊಂಡಿದ್ದ ಮಲ್ಲಪ್ಪನವರು:’ಮೇಡಂ,ನಾನು ಪಕ್ಷ ಮತ್ತು ರಾಜ್ಯಕ್ಕೆ ಅನುಕೂಲವಾಗುವ ಪ್ರಪೋಸಲ್ಲು ಕೊಟ್ಟಿದ್ದೇನೆ.ದಯವಿಟ್ಟು ಅದನ್ನು ಪರಿಗಣಿಸಿ’ ಎಂದರು.
ಯಾವಾಗ ಮಲ್ಲಪ್ಪನವರು ಈ ಮಾತು ಹೇಳಿದರೋ? ಆಗ ಇಂದಿರಾಗಾಂಧಿ ಅವರಿಗೆ ಬೇರೆ ದಾರಿ ಉಳಿಯಲಿಲ್ಲ. ಹೀಗಾಗಿ ಅವರು ದೇವರಾಜ ಅರಸರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರು.ಹೀಗೆ ಅವತ್ತು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ದೇವರಾಜ ಅರಸರು ಮುಂದೆ ಮುಖ್ಯಮಂತ್ರಿಯಾದರು.ಸಾಮಾಜಿಕ ಕ್ರಾಂತಿಯ ಹರಿಕಾರ ಅನ್ನಿಸಿಕೊಂಡರು.
ರಾಚಯ್ಯ ಅವರಿಗೆ ಆಫರ್ ಬಂದಿತ್ತು (Political analysis)
ಅಂದ ಹಾಗೆ ಕರ್ನಾಟಕದಲ್ಲೀಗ ದಲಿತ ಸಿಎಂ ಕೂಗು ಕೇಳಿಸುತ್ತಿದೆಯಲ್ಲ? ಇಂತಹ ಕೂಗು ಮೊದಲು ಕೇಳಿಸಿದ್ದು 1968 ರಲ್ಲಿ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.ಹೀಗೆ ನೇಮಕಗೊಂಡವರು ದಿಲ್ಲಿಗೆ ಹೋಗುವ ಮುನ್ನ ಹೊಸ ಮುಖ್ಯಮಂತ್ರಿಯ ಅನ್ವೇಷಣೆಗಿಳಿದರು.
ಇಂತಹ ಅನ್ವೇಷಣೆಯ ಸಂದರ್ಭದಲ್ಲಿ ಅವರ ಕಣ್ಣ ಮುಂದೆ ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಅವರ ಹೆಸರುಗಳಿದ್ದವಾದರೂ,ಮತ್ತೊಂದು ಹೆಸರು ಅವರನ್ನು ತೀವ್ರವಾಗಿ ಕಾಡತೊಡಗಿತ್ತು. ಆ ಹೆಸರು- ಬಿ.ರಾಚಯ್ಯ.
ಅಷ್ಟೊತ್ತಿಗಾಗಲೇ ದಲಿತ ಸಮುದಾಯದ ಪವರ್ ಫುಲ್ ನಾಯಕರಾಗಿ ಬೆಳೆದಿದ್ದ ರಾಚಯ್ಯನವರು ನಿಜಲಿಂಗಪ್ಪ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಇಂತಹ ರಾಚಯ್ಯನವರನ್ನು ಸಿಎಂ ಹುದ್ದೆಗೆ ತಂದು ಕೂರಿಸಿದರೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಇಮೇಜ್ ಹೆಚ್ಚುತ್ಯದೆ ಎಂಬುದು ನಿಜಲಿಂಗಪ್ಪನವರ ಲೆಕ್ಕಾಚಾರವಾಗಿತ್ತು.
ಹಾಗಂತಲೇ ಒಂದು ದಿನ ರಾಚಯ್ಯನವರನ್ನು ಕರೆಸಿಕೊಂಡ ನಿಜಲಿಂಗಪ್ಪನವರು ತಮ್ಮ ಮನದಿಂಗಿತವನ್ನು ತೋಡಿಕೊಂಡರು.
ಆದರೆ ಅಷ್ಟೊತ್ತಿಗಾಗಲೇ ಪರ್ಯಾಯ ನಾಯಕನ ಹುದ್ದೆಗೆ ತಮ್ಮ ಸಮುದಾಯದವರೇ ಬರಬೇಕು ಅಂತ ಲಿಂಗಾಯತ ಶಾಸಕರು ಎಬ್ಬಿಸಿದ್ದ ಕೂಗು ರಾಚಯ್ಯನವರಿಗೆ ಗೊತ್ತಿತ್ತಲ್ಲ? ಹೀಗಾಗಿ ತಾವು ನಿಜಲಿಂಗಪ್ಪನವರ ಪ್ರಪೋಸಲ್ಲು ಒಪ್ಪಿದರೆ ಪಕ್ಷದಲ್ಲಿ ಒಡಕು ಕಾಣಿಸಬಹುದು ಅಂತ ಆತಂಕಗೊಂಡ ರಾಚಯ್ಯನವರು : ಬೇಡ,ನನಗೆ ಸಿಎಂ ಹುದ್ದೆ ಬೇಡ ಎಂದುಬಿಟ್ಟರು.
ಆರ್.ಟಿ.ವಿಠ್ಠಲಮೂರ್ತಿ