ದಾವಣಗೆರೆ ಸೆ.23 : ಮಕ್ಕಳು ಆರೋಗ್ಯವಂತರಾಗಿರುವುದರ ಜೊತೆಗೆ ಸುರಕ್ಷಿತವಾಗಿರಬೇಕು, ಸಣ್ಣ ವಯಸ್ಸಿನಲ್ಲಿ ತಂದೆ, ತಾಯಿ ಹಾಗೂ ಪೋಷಕರ ಅಗತ್ಯವಿರುವ ಕಾರಣ ಕಾಣೆಯಾದ ಮಕ್ಕಳನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಸೂಚಿಸಿದರು.
ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಣೆಯಾದ ಮಕ್ಕಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2021 ರಿಂದ 2025 ರವರೆಗೆ 497 ಪ್ರಕರಣಗಳು ವರದಿಯಾಗಿದ್ದು, 478 ಪ್ರಕರಣಗಳು ಪತ್ತೆಯಾಗಿರುತ್ತದೆ. ಇನ್ನೂ 19 ಪ್ರಕರಣಗಳು ಬಾಕಿ ಉಳಿದಿರುತ್ತದೆ. ಪೋಕ್ಸೊ ಕಾಯ್ದೆಗೆ ಭಯಬೀತರಾಗಿ ಸಾರ್ವಜನಿಕರು ಪೊಲೀಸರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ, ನಾವು ಯಾವುದೇ ಕಾರಣಕ್ಕೂ ತೊಂದರೆಯಾಗದAತೆ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಚನ್ನಗಿರಿ, ಹೊನ್ನಾಳಿಯಲ್ಲಿ ಅತೀ ಹೆಚ್ಚು ಕಾಣೆಯಾದ ಪ್ರಕರಣಗಳು ಬಾಕಿ ಇರುವುದರಿಂದ ಅವರಿಗೆ ನೋಟೀಸ್ ನೀಡುವಂತೆ ತಿಳಿಸಿದರು.
ಮಕ್ಕಳು ದೇಶದ ಆಸ್ತಿ, ಮಕ್ಕಳ ಸಮಸ್ಯೆ ನ್ಯೂನ್ಯತೆಗಳನ್ನು ಪರಿಹರಿಸುವ ಮೂಲಕ ಎಲ್ಲ ಮಕ್ಕಳಿಗೆ ರಕ್ಷಣೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ, ಮಕ್ಕಳಿಗೆ ಅನ್ಯಾಯವಾಗುತ್ತಿದ್ದಲ್ಲಿ ನ್ಯಾಯ ಕೊಡಿಸುವ ಪ್ರವೃತ್ತಿಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕಾಣೆಯಾದ ಮಕ್ಕಳ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಯಾರು ಮಾಡಬಾರದು.
ಪ್ರತಿ ತಿಂಗಳು ಸಭೆ ಕರೆದು ಜಿಲ್ಲೆಯಲ್ಲಿ ದಾಖಲಾದ ಮಕ್ಕಳ ಅಪಹರಣ ಮತ್ತು ಕಾಣೆಯಾದ ಮಕ್ಕಳ ಪೋಷಕರನ್ನು ಕರೆದು ನೀಡಲಾದ ದೂರಿಗೆ ಹೆಚ್ಚಿನ ಮಾಹಿತಿ ನೀಡುವಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಬೇಕು ಎಂದರು.
Read also : ದಾವಣಗೆರೆ : ಒಡವೆಗಳನ್ನು ಮರಳಿ ಕೊಡಿಸುವಲ್ಲಿ 112 ಸಿಬ್ಬಂದಿ ಯಶಸ್ವಿ
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣನವರ ಮಾತನಾಡಿ, ಪೊಲೀಸ್ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿರುವ ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರ ಸಹಾಯ ಪಡೆದರೆ ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿ ಪಡೆಯಬಹುದು.
ಸಾರ್ವಜನಿಕರು ತಮ್ಮ ಮಕ್ಕಳು ಎಲ್ಲಿ ಹೋಗಿರಬಹುದೆಂಬ ಸ್ವಲ್ಪ ಅನುಮಾನದ ಮಾಹಿತಿಯನ್ನು ತಾವು ನಮಗೆ ತಿಳಿಸಿದರೆ ಸಾಕು, ನಾವು ಅವರು ಹೊರ ರಾಜ್ಯದಲ್ಲಿದ್ದರೂ ಕೂಡ ನಾವು ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ. ಪೊಲೀಸ್ ಇಲಾಖೆಯು ಮಕ್ಕಳ ಪತ್ತೆಗಾಗಿ ತಂಡಗಳನ್ನು ರಚಿಸಿ ಶೀಘ್ರವಾಗಿ ಪತ್ತೆ ಮಾಡಿ ಪೋಷಕರ ವಶಕ್ಕೆ ನೀಡಬೇಕು ಎಂದರು.
ಎಎಸ್ಪಿ ಪರಮೇಶ್ವರ್.ಹೆಚ್ ಹೆಗಡೆ, ಡಿವೈಎಸ್ಪಿ ಶರಣಬಸಪ್ಪ, ಮಕ್ಕಳ ರಕ್ಷಣಾಧಿಕಾರಿ ಕವಿತಾ ಉಪಸ್ಥಿತರಿದ್ದರು.
