ದಾವಣಗೆರೆ : ಮಹಾತ್ಮಗಾಂಧಿ ಹೆಸರನ್ನು ‘ಮನರೇಗಾ’ಯೋಜನೆಯಿಂದ ಅಳಿಸುವ ಕೆಲಸ ಬಿಜೆಪಿ ಮಾಡಿದೆ ಎಂದು ಸಂಸದೆ ಪ್ರಭಾಮಲ್ಲಿಕಾರ್ಜುನ್ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ತಾ. ಹೊನ್ನೂರು ಗ್ರಾಮದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೂಲಿಕಾರರ ಕುಂದುಕೊರತೆಗಳ ಪರಿಶೀಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನರೇಗಾದಿಂದ ದೇಶದಲ್ಲಿ 5 ರಿಂದ 6 ಕೋಟಿ ಜನ ಕೂಲಿಕಾರ್ಮಿಕರು ಆರ್ಥಿಕವಾಗಿ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು. ಈಗ ಇದನ್ನು ಕೇಂದ್ರ ಸರ್ಕಾರ ಬದಲಾಯಿಸಿ ವಿಕಸಿತ ಭಾರತ-ಗ್ಯಾರಂಟೀ ಫಾರ್ ರೋಜಗಾರ್ ಮತ್ತು ಆವೀಜಿಕ ಮಿಷನ್ ವಿಬಿ-ಜಿ.ರಾಮ್ ಜಿ ಕಾಯ್ದೆ-2005 ಎಂದು ಬದಲಿಸಿದ್ದು ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಪುರುಷರಿಗೆ ಸಮಾನವಾದ ಕೆಲಸ ಕೊಡುವ ಯೋಜನೆವೊಂದಿದ್ದರೆ ಅದು, ‘ಮನರೇಗಾ’ ಯೋಜನೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಪುರುಷನ ಹೆಸರಿಟ್ಟ ‘ಮನರೇಗಾ’ಯೋಜನೆಯ ಹೆಸರನ್ನೇ ಅಳಿಸುವ ಕೆಲಸ ಬಿಜೆಪಿ ಮಾಡಿದೆ ಎಂದರು.
Read also : ಕರ್ನಾಟಕ ಜಾನಪದ ಅಕಾಡೆಮಿ ಫೆಲೋಶಿಪ್ಗಾಗಿ ಅರ್ಜಿ ಆಹ್ವಾನ
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ‘ಮನರೇಗಾ’ ಯೋಜನೆಯಿಂದ ಈವರೆಗೂ ಹಳ್ಳಿಯ ಜನರು ಬದುಕು ಕಂಡುಕೊಂಡು ಆರ್ಥಿಕವಾಗಿ ಸಬಲರಾದರು. ಆದರೆ ಈಗ ಕೇಂದ್ರ ಸರ್ಕಾರ ‘ಮನರೇಗಾ’ ಹೆಸರು ಬದಲಾಯಿಸುವ ಮೂಲಕ ಗ್ರಾಮೀಣ ಜನರಿಗೆ ಬರೆ ಎಳೆದಿದೆ ಎಂದರು.
ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲ್ ರಾವ್, ತಾಪಂ ಇಓ ರಾಮಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
