ನಾಲ್ಕು ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದ ಘಟನೆಯಿಂದ ಇಂಡಿಯಾದಲ್ಲಿನ ಶಿಕ್ಷಣ ವ್ಯವಸ್ಥೆ ತನ್ನ ಪಥ ಬದಲಾಯಿಸಿದೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ. ಶಿಕ್ಷಣ ಜೀವನ ಕಟ್ಟಿಕೊಳ್ಳಲಿಕ್ಕೆ ಬೇಕಾದ ಬುನಾದಿ ಆದರೆ ಈಗ ಸಾವು ನೋವಿಗಳಿಗೆ ಮೆಟ್ಟಿಲು.
ಜೌನ್ ಪುರ ಜಿಲ್ಲೆಯ ಕಲೀಲ್ ಪುರದಲ್ಲಿ 20 ವರ್ಷದ ‘ಸೂರಜ್ ಭಾಸ್ಕರ್’ ಎಂಬ ನೀಟ್ ಆಕಾಂಕ್ಷಿ ಸ್ವತಹ ತಾನೇ ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ, ಕಾರಣ- ಈತ ಎರಡು ಬಾರಿ ನೀಟ್ ಪರೀಕ್ಷೆಗೆ ಪ್ರಯತ್ನಿಸಿದ್ದನು ಆದರೆ ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ನಾನು ಡಾಕ್ಟರ್ ಆಗಲೇ ಬೇಕೆಂಬ ಕನಸುಕಂಡಿದ್ದ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ, 2026ಕ್ಕೆ ನಾನು ಡಾಕ್ಟರ್ ಆಗುತ್ತೇನೆ ಎಂದು ಆತನ ಡೈರಿಯಲ್ಲಿ ಬರೆದುಕೊಂಡಿದ್ದು ಗೊತ್ತಾಗಿದೆ.
ವೈದ್ಯಕೀಯ ಅಧ್ಯಯನ ಮಾಡ್ಲಿಕ್ಕೆ ನೀಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ. ಅದನ್ನು ಬೇಧಿಸಲು ಆಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ, ಕೊನೆಗೆ ನೀಟ್ ಪರೀಕ್ಷೆ ಅಡಿಯಲ್ಲಿ ಬರುವ ಅಂಗವಿಕಲತೆಯ ಕೋಟ ಪಡೆದು ತಾನು ಡಾಕ್ಟರ್ ಆಗುವ ಕನಸನ್ನು ಈಡೇರಿಸಿಕೊಳ್ಳಲು ತನ್ನ ಕಾಲನ್ನು ಕತ್ತರಿಸಿಕೊಂಡಿದ್ದಾನೆ.
ನೀಟ್ ಎಂಬ ಕೆಟ್ಟ ಪೆಂಡಂಭೂತದಿಂದ ಇದಕ್ಕಿಂತಲೂ ದೊಡ್ಡ ಮಟ್ಟದ ದುರ್ಘಟನೆ ತಮಿಳುನಾಡಿನಲ್ಲಿ ಸಂಭವಿಸಿತ್ತು. ಅರಿಯಲೂರು ಜಿಲ್ಲೆಯ ಕೂಳುಮೂರ್ ಊರಿನ 17 ವರ್ಷದ ಷಣ್ಮುಗಂ ಅನಿತಾ ಎಂಬ ದಲಿತ ಸಮುದಾಯಕ್ಕೆ ಸೇರಿದ ಹುಡುಗಿ. ಈ ಹುಡುಗಿಯು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತನ್ನ ತಾಯಿ ತೀರಿಹೋಗಿದ್ದಳು, ಹಾಗಾಗಿ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದಳು, ತಂದೆಯ ದಿನಗೂಲಿ ಮಾಡುವ ಅಸಂಘಟಿತ ಕಾರ್ಮಿಕ.
ಈಕೆ ಬಡ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಳು, ಇವರ ಮನೆಯಲ್ಲಿ ಶೌಚಾಲಯದ ಸೌಲಭ್ಯವು ಇರಲಿಲ್ಲ ಅಂತಹ ಕಡುಬಡತನ. ಇಂತಹ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದಿದ್ದ ಹುಡುಗಿ ಎರಡನೇ ವರ್ಷದ ಪಿಯುಸಿ ಪರೀಕ್ಷೆಯಲ್ಲಿ 1200 ಕ್ಕೆ 1176 ಅಂಕ ಗಳಿಸಿದ್ದಳು (ಅದರಲ್ಲಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ್ದಳು). ಪಿಯುಸಿ ಪರೀಕ್ಷೆಯನ್ನು ‘ತಮಿಳುನಾಡು ಸ್ಟೇಟ್ ಬೋರ್ಡ್ ಎಕ್ಸಾಮಿನೇಷನ್’ ನಡೆಯುತ್ತದೆ.
ಅನಿತಾ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಕಾರಣ ‘ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ವತಿಯಿಂದ ಎರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಲು ಅವಕಾಶ ಬರುತ್ತದೆ. ಆದರೆ ಅನಿತಾ ಆ ಅವಕಾಶವನ್ನು ನಿರಾಕರಿಸುತ್ತಾಳೆ ಕಾರಣ ಆಕೆಗೆ ಡಾಕ್ಟರ್ ಆಗಬೇಕೆಂಬುದೇ ಆಕೆಗಿದ್ದ ಗುರಿ.
ಅನಿತಾ ಡಾಕ್ಟರ್ ಆಗಲೇಬೇಕು ಎಂಬ ಇಚ್ಛೆ ಹೊಂದಿದ್ದಳು, ಅದಕ್ಕಾಗಿ ಹಗಲಿರುಳು ಶ್ರಮಿಸಿದ್ದಳು. ನೀಟ್ ಎಂಬ ದರಿದ್ರ ಬಂದ ಕಾರಣ, ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಪಾಸ್ ಮಾಡುವುದು ಕಡ್ಡಾಯ. ವೈದ್ಯಕೀಯ ಅಧ್ಯಾಯಕ್ಕೆ ಅರ್ಹತೆ ಪಡೆಯಲು ನೀಟ್ ಯಾರ್ಂಕ್ ಮುಖ್ಯವಾಗುತ್ತದೆ ಪಿಯುಸಿಯಲ್ಲಿ ಗಳಿಸಿದ ಅಂಕಗಳು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಈಕೆ ನೀಟ್ ಪರೀಕ್ಷೆ ಬರೆಯುತ್ತಾಳೆ, ನೀಟ್ ಪರೀಕ್ಷೆಯಲ್ಲಿ 720 ಅಂಕಕ್ಕೆ 86 ಅಂಕ (12.33%) ಗಳಿಸಿ ಫೇಲಾಗುತ್ತಾಳೆ. ನೀಟ್ ಮೂಲಕ ತನಗಾದ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಅನಿತಾ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾಳೆ.
ಸುಪ್ರೀಂ ಕೋರ್ಟ್ ಮನವಿಯನ್ನು ವಜಾಗೊಳಿಸಿ, ನೀಟ್ ಆಧಾರದ ಮೇಲೆ ಮಾತ್ರ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತು. ಈ ತೀರ್ಪಿನಿಂದಾಗಿ ಅನಿತಳ ವೈದ್ಯಕೀಯ ಕನಸು ಛಿದ್ರಗೊಂಡಿತು, ಆಗ ತಮಿಳು ನಾಡು ಸರ್ಕಾರ ಏನು ಮಾಡಕೆ ಆಗಲಿಲ್ಲ, ಸುಪ್ರೀಂ ಕೋರ್ಟ್ ತೀರ್ಪು ಬಂದ 9ನೇ ದಿನಕ್ಕೆ ಅನಿತಾ ನೇಣಿಗೆ ಶರಣಾಗುತ್ತಾಳೆ.
ಇದೇ ರೀತಿ, 2022 ರಲ್ಲಿ ನೀಟ್ ಪರೀಕ್ಷೆಯ ಫಲಿತಾಂಶ ಬಂದಾಗ ತಮಿಳುನಾಡಿನಲ್ಲಿ ಲಕ್ಷಣ ಶ್ವೇತಾ ಎಂಬ ಹುಡುಗಿ ನೇಣು ಬಿಗಿದುಕೊಂಡು ಸಾಯುತ್ತಾಳೆ. ನೋಯಿಡಾದಲ್ಲಿ 22 ವರ್ಷದ ಸಂಪದ ಸಿಂಗ್ ಎಂಬ ಹುಡುಗಿ 19ನೇ ಮಹಡಿಯಿಂದ ಬಿದ್ದು ಸಾಯುತ್ತಾಳೆ. ಈ ಸಾವು ನೋವುಗಳಿಗೆಲ್ಲ ನೇರ ಕಾರಣ ಮತ್ತು ಹೊಣೆ ಮಾನಗೇಡಿ ಒಕ್ಕೂಟ ಸರ್ಕಾರ, ದರಿದ್ರ ನೀಟ್ ಪರೀಕ್ಷಾ ಪದ್ಧತಿ.
ಈ ಆತ್ಮಹತ್ಯೆ ಎಂಬುವುದು ಇಷ್ಟಕ್ಕೆ ನಿಂತಿಲ್ಲ, ‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ’ ನೀಡಿದ ಮಾಹಿತಿ ಪ್ರಕಾರ
- 2017ರಲ್ಲಿ – 9,905 ವಿದ್ಯಾರ್ಥಿಗಳು
- 2018ರಲ್ಲಿ 10,159 ವಿದ್ಯಾರ್ಥಿಗಳು
- 2019ರಲ್ಲಿ 10,335 ವಿದ್ಯಾರ್ಥಿಗಳು
- 2020ರಲ್ಲಿ 12,526 ವಿದ್ಯಾರ್ಥಿಗಳು
2021 ರಲ್ಲಿ 13,089 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಡಿಯಾದಲ್ಲಿ ಪ್ರಜಾಪ್ರಭುತ್ವ ಇದೆ, ಸಂವಿಧಾನ ಇದೆ, ಒಕ್ಕೂಟ ಸರ್ಕಾರ ಇದೆ, ರಾಜ್ಯ ಸರ್ಕಾರಗಳಿವೆ, ನಾಗರಿಕ ಹಕ್ಕುಗಳ ಆ ರಕ್ಷಣೆ ಮಾಡುವ ಸಮಿತಿಗಳಿವೆ, ನ್ಯಾಯಾಲಯಗಳಿವೆ. ಅದರೆ , ನ್ಯಾಯ ಮಾತ್ರ ಸಿಕ್ಕಿಲ್ಲ.
ನೀಟ್ ಪರೀಕ್ಷಾ ಪದ್ಧತಿ ಬರುವುದಕ್ಕಿಂತ ಮೊದಲು ಆಯಾ ರಾಜ್ಯದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಅವುಗಳದ್ದೆ ಸ್ವಂತ ಪ್ರವೇಶ ಪರೀಕ್ಷೆಗಳಿದ್ದವು, ಉದಾಹರಣೆಗೆ ಎಐಐಎಂಎಸ್, ಜೆಐಪಿಎಂಇಆರ್, ಐಎಂಎಸ್: ಬಿಎಚ್ ಯು, ಕೆಎಂಸಿ ಮಣಿಪಾಲ್ ಮತ್ತು ಮಂಗಳೂರು, ಸಿಎಂಸಿ ವೆಲ್ಲೂರ್ ಈ ತರಹದ ವೈದ್ಯಕೀಯ ಕಾಲೇಜುಗಳು ಸ್ವತಃ ತಾವೆ ಪ್ರವೇಶ ಪರೀಕ್ಷೆ ನಡೆಸಿ ಮತ್ತು ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು ಮತ್ತು ಈ ವ್ಯವಸ್ಥೆಯಿಂದ ಹಿಂದುಳಿದ ಸಮುದಾಯದವರಿಗೆ ಮತ್ತು ಆಯಾ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು. ಹಾಗಾಗಿ ಈ ವ್ಯವಸ್ಥೆಯೆ ಉತ್ತಮ.
ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಮಯ 2012ರಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಎಂಬ ಪರಿಕಲ್ಪನೆಯನ್ನು ಮೊದಲಿಗೆ ಪರಿಚಯಿಸಲಾಯಿತು.
ಆ ಸಮಯದಲ್ಲಿ ನೀಟ್ ಪರೀಕ್ಷೆ ಪದ್ಧತಿಯನ್ನು ಮೊದಲು ತೆಂಕಣ ಇಂಡಿಯಾದಲ್ಲಿ ಅದರಲ್ಲೂ ತಮಿಳುನಾಡು ತೀವ್ರವಾಗಿ ವಿರೋಧಿಸಿತ್ತು. ತಮಿಳುನಾಡು ನೀಟ್ ಪದ್ಧತಿಯನ್ನು ವಿರೋಧಿಸಲು ಕಾರಣ- ತೆಂಕಣ ಇಂಡಿಯಾದಲ್ಲಿ ಸಾಕಷ್ಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ, ಆಗ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸ್ವತಃ ಕಾಲೇಜುಗಳೆ ಮಾಡುವ ಪ್ರವೇಶ ಪರೀಕ್ಷೆ ಮತ್ತು ಪಿಯುಸಿ ಅಂಕಗಳ ಪರಿಗಣಿಸುವುದು ಮತ್ತು ಆ ರಾಜ್ಯದವರಿಗೆ ಮೀಸಲಾತಿ ಇದ್ದ ಕಾರಣ ಇವುಗಳಿಂದ ಸ್ಥಳೀಯರಿಗೆ ಮತ್ತು ಆ ರಾಜ್ಯದವರಿಗೆ ವೈದ್ಯಕೀಯ ಅಧ್ಯಯನ ಮಾಡಲು ಅವಕಾಶ ದೊರೆಯುತ್ತಿತ್ತು.
ಆದರೆ, ನಾರ್ತ್ ಇಂಡಿಯಾದಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಮಾಣ ಕಡಿಮೆ, ತೆಂಕಣ ಇಂಡಿಯಾದಲ್ಲಿ ಇರುವ ಕಾಲೇಜುಗಳಿಗೆ ನಾರ್ತ್ ಇಂಡಿಯಾದ ವಿದ್ಯಾರ್ಥಿ ಗಳು ಪ್ರವೇಶ ಮಾಡಿಸಲು ಮತ್ತು ಶ್ರೀಮಂತರ ಮಕ್ಕಳಿಗೆ ಮಾತ್ರ ವೈದ್ಯಕೀಯ ಅಧ್ಯಯನ ಮಾಡಲಿಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಈ ವ್ಯವಸ್ಥೆ ಬಂದಿದೆ, ಒಂದೇ ಮಾತಿನಲ್ಲಿ ಹೇಳುವುದಾದರೆ – ತೆಂಕಣ ಇಂಡಿಯಾದವರ ಮತ್ತು ಹಿಂದುಳಿದ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯವೆಲ್ಲ ಕಿತ್ತು ಹಣ ಇರುವವರಿಗೆ ಮತ್ತು ನಾರ್ತ್ ಇಂಡಿಯಾದವರಿಗೆ ಕೊಡುವ ಹುನ್ನಾರವೇ ಈ ನೀಟ್ ಪರೀಕ್ಷ ಪದ್ಧತಿ.
Read also : ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ
ವಂಚನೆಯ ಕಾರಣಕ್ಕಾಗಿ 2013 ರಲ್ಲಿ ಮೊದಲ ನೀಟ್ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಲಾಯಿತು, ಸುಪ್ರೀಂ ಕೋರ್ಟ್ ಈ ಪದ್ಧತಿಯನ್ನು ವಜಾಗೊಳಿಸಿತು ನಂತರ ಅದೇ ಸುಪ್ರೀಂ ಕೋರ್ಟ್ 2016ರಲ್ಲಿ ನೀಟ್ ಪರೀಕ್ಷೆಗೆ ಅವಕಾಶ ಕೊಟ್ಟಿತು.
ಕ್ರೂರಿ ನೀಟ್ ವ್ಯವಸ್ಥೆಯಿಂದ ತೆಂಕಣ ಇಂಡಿಯಾದ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ವೈದಕೀಯ ಅಧ್ಯಯನ ಕೈತಪ್ಪಿ ವಂಚನೆಯಾಯಿತು, ಈ ವಂಚನೆ ಅತಿರೇಕಕ್ಕೆ ಹೋದಾಗ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು.
ಹಿಂದುಳಿದ ಸಮುದಾಯದವರಿಗೆ ಮತ್ತು ತೆಂಕಣ ಇಂಡಿಯಾದವರಿಗೆ ಸಿಗಬೇಕಾದ ವೈದ್ಯಕೀಯ ಅಧ್ಯಯನದ ಅವಕಾಶ ನಾರ್ತ್ ಇಂಡಿಯಾದವರು ಮತ್ತು ಹಣ ವಂತರ ಪಾಲಾಯಿತು. ಈ ನೀಟ್ ಪರೀಕ್ಷೆ ಬಂದ ಕಾರಣ ಸಾವಿರಾರು-ಲಕ್ಷಾಂತರ ಕೋಚಿಂಗ್ ಸೆಂಟರ್ಗಳು ಹುಟ್ಟಿಕೊಂಡವು, ದುಬಾರಿ ಬೆಲೆತೆತ್ತು ಕೋಚಿಂಗ್ ಸೆಂಟರ್ಗ ಳಿಗೆ ಸೇರಿದರೆ ಮಾತ್ರ ನೀಟ್ ಪರೀಕ್ಷೆ ಪಾಸಾಗಲಿಕ್ಕೆ ಸಾಧ್ಯ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಲಾಯಿತು. ಕೋಚಿಂಗ್ ಸೆಂಟರ್ಗೆ ಸೇರಲು ಲಕ್ಷಾಂತರ ರೂಪಾಯಿಬೇಕು. ಈ ಹಣ ಹೊಂದಿಸಲು ಹಿಂದುಳಿದ ಸಮುದಾಯಗಳಿಗೆ ಆಗದು. ಎಲ್ಲಾ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮ ಒಂದೇ ರೀತಿ ಇರುವುದಿಲ್ಲ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದರು ನೀಟ್ ಪರೀಕ್ಷೆ ಪಾಸ್ ಆಗುವುದು ಕಷ್ಟ ಸಾಧ್ಯ -ಅಸಾಧ್ಯ.
ಆದರೆ ಈ ನೀಟ್ ಪರೀಕ್ಷೆ ಪದ್ಧತಿಯನ್ನು ಪ್ರಚಾರ ಮಾಡುವ ಕೆಟ್ಟ ಮನಸ್ಥಿತಿಯು ನಮ್ಮ ಸಮಾಜದಲ್ಲಿದೆ ಅದಕ್ಕೆ ಉದಾಹರಣೆ ಎಂಬಂತೆ 2023 ರಲ್ಲಿ ಕನ್ನಡದಲ್ಲಿ ತನುಜಾ ಎಂಬ ಚಿತ್ರ ಬಿಡುಗಡೆಯಾಗಿತ್ತು,
ಇದರ ಕಥಾವಸ್ತು ಮಲೆನಾಡು ಪ್ರದೇಶದಲ್ಲಿ ತನುಜಾ ಎಂಬ ವೈದ್ಯಕೀಯ ಆಕಾಂಕ್ಷಿಯ ಹುಡುಗಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾಳೆ, ಆಗ ಕರೋನ ಸಮ ಯ ಗೊತ್ತಿಲ್ಲದ 400 ಕಿಲೋಮೀಟರ್ ದೂರಕ್ಕೆ ಹೋಗಿ ಪರೀಕ್ಷೆ ಬರೆಯಬೇಕು ಅದಕ್ಕೆ ಆ ಹುಡುಗಿಗೆ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಆರೋ ಗ್ಯ ಮಂತ್ರಿ ಕೆ.ಸುಧಾಕರ್ ಸಹಾಯ ಮಾಡುತ್ತಾರೆ ಮತ್ತು ಆ ಹುಡುಗಿ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗುತ್ತಾಳೆ. ನಾನು ಇಲ್ಲಿ ಆ ಹುಡುಗಿಯನ್ನು ದ್ವೇಷಿಸುತ್ತಿಲ್ಲ ಅಥ ವಾ ಟೀಕೆ ಮಾಡುತ್ತಿಲ್ಲ. ನನ್ನ ಪ್ರಶ್ನೆ ಇರುವುದು ಈ ನೀಟ್ ಪರೀಕ್ಷಾ ಕ್ರಮವನ್ನು ಪ್ರಚಾರ ಮಾಡುತ್ತಿರುವ ಮತ್ತು ಅದರಿಂದ ಕೆಟ್ಟ ಜನಪ್ರಿಯತೆಯನ್ನು ಗಳಿಸುತ್ತಿ ರುವ ರಾಜಕಾರಣಿಗಳಿಗೆ. ಆಗುತ್ತಿರುವ ಅನಾಹುತಗಳು ವಂಚನೆಗಳು, ರಾಜಕಾರಣಿಗಳಿಗೆ ಗೊತ್ತು. ಆದರೆ ಅವರು ಅದರ ವಿರುದ್ಧವಾಗಿ ಹೋರಾಡುವುದಿಲ್ಲ ಅದಕ್ಕೆ ಪ್ರೋತ್ಸಾಹ ನೀಡುತ್ತಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಪ್ರದೀಪ್ ಈಶ್ವರ್ ಕೂಡ ಕೋಚಿಂಗ್ ಸೆಂಟರ್ ಮಾಲಿಕತ್ವ ಹೊಂದಿದ್ದಾರೆ ಮತ್ತು ‘ಪರಿಶ್ರಮ ನೀಟ್ ಅಕಾಡೆಮಿ’ ಎಂಬ ಕೋಚಿಂಗ್ ಸೆಂಟರ್ ನಿಂದ ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದಾರೆ. ಕೋಚಿಂಗ್ ಸೆಂಟರ್ಗಳನ್ನು ತೆರೆದು ಜನರಿಂದ ಹಣ ಲೂಟಿ ಮಾಡಲು ಬಹುತೇಕ ರಾಜಕಾರಣಿಗಳ ಬೆಂಬಲವಿದೆ.
ಒಂದು ನೀಟ್ ಪರೀಕ್ಷೆ ಹಲವು ಹಗರಣ- 2024ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಹಗರಣ ನಡೆದಿತ್ತು ಮತ್ತು ಇಂಡಿಯಾದಾದ್ಯಂತ ಟೀಕೆಗೆ ಗುರಿಯಾಗಿತ್ತು. ನೀಟ್ ಪರೀಕ್ಷೆ ನಡೆಯುವ ಹಿಂದಿನ ದಿನ ಪಾಟ್ನ್ ಮತ್ತು ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ದರೋಡೆಕೋರರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದಾಗ ಪ್ರತಿಯೊಬ್ಬ ಆಕಾಂಕ್ಷಿಯಿಂದ 30 ರಿಂದ 50 ಲಕ್ಷ ಹಣ ಪಡೆದಿದ್ದರು. ಸುಮಾರು ಆಕಾಂಕ್ಷಿಗಳು 718, 719 ಅಂಕಗಳನ್ನು ಗಳಿಸಿದ್ದರು, ಇದು ಗಣಿತಶಾಸ್ತ್ರದಲ್ಲಿ ಅಸಾಧ್ಯ. ಒಂದು ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 45 ಪ್ರಶ್ನೆಗಳಿರುತ್ತವೆ ಒಂದು ಪ್ರಶ್ನೆಗೆ ನಾಲ್ಕು ಅಂಕ, ಒಂದು ಪ್ರಶ್ನೆ ತಪ್ಪಾದರೆ ಋಣಾತ್ಮಕವಾಗಿ ಒಂದು ಅಂಕ ಕಡಿಮೆಯಾಗುತ್ತದೆ. ಹಾಗಾಗಿ 718, 719 ಅಂಕಗಳು ಗಳಿಸಲು ಸಾಧ್ಯವಿಲ್ಲ. 67 ವಿದ್ಯಾರ್ಥಿಗಳು 720 ಅಂಕಗಳನ್ನು ಗಳಿಸಿದ್ದರು.
2024 ರಲ್ಲಿ ಸೋರಿಕೆಯಾದ ನೀಟ್ ಪ್ರಶ್ನೆ ಪತ್ರಿಕೆಯಿಂದ 155 ವಿದ್ಯಾರ್ಥಿಗಳು ಉಪಯೋಗ ಪಡೆದಿದ್ದಾರೆಂದು ಇಂಡಿಯಾದ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆಗ 1563 ವಿದ್ಯಾರ್ಥಿಗಳಿಗೆ ಮಾತ್ರ ನೀಟ್ ಮರುಪರೀಕ್ಷೆ ಮಾಡಲಾಯಿತು. ಮತ್ತೆ ಎಲ್ಲಾ ವಿದ್ಯಾರ್ಥಿಗಳಿಗೂ ಮರುಪರೀಕ್ಷೆ ಮಾಡಿಲ್ಲ. ನೀಟ್ ಹಗರಣ ತನಿಖೆಯಾದಾಗ ಆ ಹಗರಣದ ಕಿಂಗ್ ಪಿನ್ ಮತ್ತು ಸ್ಕೂಲ್ ಪ್ರಿನ್ಸಿಪಲ್ರನ್ನು ಸೇರಿ 49 ಜನ ಆರೋಪಿಗಳನ್ನು ಬಂಧಿಸಲಾಯಿತು ಮತ್ತೆ 26 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು.
ನೀಟ್ ಕೋಚಿಂಗ್ ಸೆಂಟರ್ ಗಳು ಹುಟ್ಟಿಕೊಂಡು ಜನರಿಗೆ ನಮ್ಮಲ್ಲಿ ಕೋಚಿಂಗ್ ಪಡೆದರೆ ಡಾಕ್ಟರ್ ಆಗುವುದು ಶೇಕಡ ನೂರರಷ್ಟು ಖಚಿತ ಎಂದು, ಕೇವಲ ನೂರು ದಿನದಲ್ಲಿ ನೀಟ್ ಪರೀಕ್ಷೆ ಪಾಸ್ ಮಾಡಬಹುದೆಂದು ಸುಳ್ಳು ಹಬ್ಬಿಸುವುದು ಮತ್ತು ಎಲ್ಲರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡುವುದು, ಈ ಕೋಚಿಂಗ್ ಸೆಂಟರ್ ಗಳು ಜನರಿಗೆ ಮಂಕು ಬೂದಿ ಎರಸುತ್ತೀವೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಕಲೆ, ವಿನಯ, ಪ್ರಾಮಾಣಿಕತೆ, ಆಸಕ್ತಿ, ಕುತೂಹಲಕ್ಕೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೆಲೆಯಿಲ್ಲ. ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸಿ ಕೇವಲ ರೆಡಿಮೇಡ್ ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರಿಸುವ, ತಂತ್ರಗಾರಿಕೆಗμÉ್ಟೀ ಬೆಲೆ ಇಂತಹ ಅಪಮೌಲ್ಯಗಳನ್ನೇ ಕೋಚಿಂಗ್ ಸೆಂಟರ್ ಗಳು ಕಲಿಸಿಕೊಡುವುದು. ಇಂತಹವುಗಳನ್ನೇ ಕಲಿಯಲು ಲಕ್ಷಾಂತರ ರೂಪಾಯಿ ತೆತ್ತಬೇಕು.
1991ರಲ್ಲಿ ಖಾಸಗಿಕರಣ ಬಂದು ಸಂವಿಧಾನದಲ್ಲಿ ಅಧಿಕೃತವಾಗಿ ಖಾಸಗಿರಣಕ್ಕೆ ಅವಕಾಶ ಸಿಕ್ಕ ಕಾರಣ, ಈ ಖಾಸಗಿಕರಣ ಎಂಬುದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತ್ರಿವಿಕ್ರಮನ ಪಾಲು ಪಡೆದಿದೆ. ಇದೇ ರೀತಿ ಶಿಕ್ಷಣ ಮತ್ತು ಆರೋಗ್ಯ ಖಾಸಗಿಕರಣದ ದಾರಿಯಲ್ಲಿ ಮುಂದುವರೆದರೆ ಹಿಂದುಳಿದ ಸಮುದಾಯದವರ ಪಾಲಿಗೆ ಇವುಗಳೆಲ್ಲ ಮರೀಚಿಕೆ! ಅದಕ್ಕೆ ಉದಾಹರಣೆ:- ಒಂದು ಸರ್ಕಾರಿ ಕಾಲೇಜಿನಲ್ಲಿ ಸರ್ಕಾರಿ ಕೋಟದಲ್ಲಿ ಅಧ್ಯಯನ ಮಾಡಲು 6 ಸಾವಿರದಿಂದ 7 ಲಕ್ಷದವರೆಗೆ ಖರ್ಚಾಗುತ್ತದೆ, ಅದೇ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಕೋಟ್ಯಾಂತರ ರೂಪಾಯಿಬೇಕು.
ಖಾಸಗೀಕರಣದ ರೌರವ ಎಷ್ಟರಮಟ್ಟಿ ಇದೆ ಎಂಬುದಕ್ಕೆ ಈ ಉದಾಹರಣೆ ನೋಡಬಹುದು – ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 1700 ಮೆಡಿಕಲ್ ಸೀಟುಗಳು ಖಾಲಿ ಇವೆ ಕಾರಣ ಅಲ್ಲಿ ಅಧ್ಯಯನ ಮಾಡಲು ಕೋಟ್ಯಾಂತರ ರೂಪಾಯಿ ತೆತ್ತಬೇಕು, ಈ ಬೆಲೆ ಬಹುತೇಕ ಜನರ ಕೈಗೆಟಕುವುದಿಲ್ಲ.ಶಿಕ್ಷಣ ವ್ಯವಸ್ಥೆ ಖಾಸಗಿಕರಣಕ್ಕೆ ಒಳಪಟ್ಟು ದುಬಾರಿಯಾದ ಕಾರಣ ದಿನೇ ದಿನೇ ಶಿಕ್ಷಣ ಸಾಮಾನ್ಯ ಜನರಿಂದ ದೂರವಾಗುತ್ತಿದೆ.
ನೀಟ್ ಪರೀಕ್ಷೆ ಇರುವುದು ಹಗರಣ ಮಾಡಲು ಮತ್ತು ವಂಚನೆ ಮಾಡಲು, ನೀಟ್ ಕೋಚಿಂಗ್ ಸೆಂಟರ್ ಗಳು ಇರುವುದು ಲೂಟಿ ಮಾಡಲು. ತೆಂಕಣ ಇಂಡಿಯಾದವರ ಅವಕಾಶ ಮತ್ತು ವೈದ್ಯಕೀಯ ಆಕಾಂಕ್ಷಿಗಳ ಪ್ರಾಣಕ್ಕೆ ಕಂಟಕವಾದ ಈ ದರಿದ್ರ ವ್ಯವಸ್ಥೆಯನ್ನು ಕಿತ್ತೊಗಿದು ಮೊದಲಿದ್ದ ಪಿಯುಸಿ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಅಧ್ಯಯನಕ್ಕೆ ಪ್ರವೇಶ ಮಾಡಿಕೊಡುತ್ತಿದ್ದ ವ್ಯವಸ್ಥೆಯೇ ಜಾರಿಯಾಗಲಿ. ಈ ಸಾವು ನೋವುಗಳು ನಿಲ್ಲಲಿ, ಈಗ ಆಗಿರುವ ಸಾವು ನೋವಿಗಳಿಗೆ ನ್ಯಾಯ ಸಿಗಲಿ.
ದರ್ಶನ್ ಕುರುಬಾಸ್
ನಾವು Dravida ಕನ್ನಡಿಗರು ಚಳುವಳಿ
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ
ಕೇರಳ ವಿಶ್ವವಿದ್ಯಾಲಯ, ತಿರುವನಂತಪುರಂ.
