ಜಗಳೂರು : ಸಮಾಜ ಸೇವೆ ಮೊದಲಿನಷ್ಟು ಸುಲಭವಲ್ಲ.ಸ್ವಾರ್ಥ ಲಾಲಸೆಗಳೇ ತುಂಬಿದ ಇಂದಿನ ದಿನಮಾನಗಳಲ್ಲಿ ಮಠ ಮಾನ್ಯಗಳು, ರಾಜಕಾರಿಣಿಗಳು, ಯಾವುದೇ ಕ್ಷೇತ್ರದ ಪ್ರಮುಖರು ಪ್ರಾಮಾಣಿಕವಾಗಿ ಜನಸೇವೆ ಮಾಡಲು ಹತ್ತಾರು ಅಡ್ಡಿ ಆತಂಕ ಕಷ್ಟಗಳು ಎದುರಾಗುತ್ತವೆ ಅವುಗಳನ್ನು ಎದುರಿಸಿ ಸೇವೆಕೊಡ ಬೇಕು ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಮುಸ್ಟೂರು ಗ್ರಾಮದ ಶ್ರೀ ಮಠದಲ್ಲಿ ದಕ್ಷಿಣ ಕಾಶಿ ಎನಿಸಿರುವ ತಪೋ ಕ್ಷೇತ್ರದ ಶ್ರೀಮದ್ ಸಾಕ್ಷಾತ್ ಶಿವನ ಅವತಾರಿ ಸದ್ಗುರು ಓಂಕಾರ ಹುಚ್ಚನಾಗಲಿಂಗ ಶಿವಾಚಾರ್ಯ ಶಿವಯೋಗಿಗಳ 66ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಓಂಕಾರ ಹುಚ್ಚನಾಗಲಿಂಗ ಮಹಾ ಸ್ವಾಮಿ ಚರಿತೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹುಚ್ಚಪ್ಪಗಳ ಪರಂಪರೆಯನ್ನು ಹೊಂದಿರುವ ಮುಸ್ಟೂರು ಶ್ರೀ ಓಂಕಾರ ಹುಚ್ಚ ನಾಗಲಿಂಗಸ್ವಾಮಿಗಳ ಆಧ್ಯಾತ್ಮ ಶಕ್ತಿಯಿಂದ ತಪೋಕ್ಷೇತ್ರವಾಗಿದೆ.ನಾನು ಹೈಸ್ಕೂಲು ಓದಿದ್ದು ಮುಸ್ಟೂರಿನ ಶ್ರೀ ಮಠದ ಶಾಲೆಯಲ್ಲಿಯೇ.ಪಕ್ಕದ ಹಳ್ಳಿಯವರಾದ ಎನ್.ಟಿ. ಎರ್ರಿಸ್ವಾಮಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ನನಗೆ ಮಾದರಿ ವ್ಯಕ್ತಿಯಾಗಿದ್ದರು. ಬ್ಯಾಂಕಿಂಗ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆ ಹಿರಿದಾದುದು.ಇಂತಹವರು ರಚಿಸಿರುವ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ ಕುರಿತಾದ ಕೃತಿ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದರು.
ಇಂದಿನ ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವಾಗ ಹಲವಾರು ಅಡೆತಡೆಗಳು ಬರುತ್ತಿದ್ದು. ಅವೆಲ್ಲವನ್ನು ಬದಿಗೆ ಸರಿಸಿ ನಾವು ಸಮಾಜಮುಖಿಗಳಾದಾಗಲೇ ಬದುಕು ಸಾರ್ಥಕ ವಾಗಲಿದೆ ಎಂದು ಹೇಳಿದರು.
ರೇಖಲಗೆರೆಯ ದೇನಾಭಗತ್ ಗುರೂಜಿಯವರು ಮಾತನಾಡಿ ಧಾರ್ಮಿಕ ಕೃತಿಗಳು ಇಂದಿನ ಅಗತ್ಯವಾಗಿದೆ. ಎರ್ರಿ ಸ್ವಾಮಿಯವರು ಶ್ರೀಗಳ ಬಗ್ಗೆ ಬರೆದಿರುವ ಕೃತಿ ಸಾರ್ಥಕವಾದುದು. ಮುಸ್ಟೂರು ಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಅದು ಮತ್ತೆ ಪ್ರಜ್ವಲಿಸುವಂತಾಗಲಿ ಎಂದು ಆಶಿಸಿದರು.
ಇದನ್ನೂ ಓದಿ : ಜಗಳೂರು|ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ 66ನೇ ಸಂಸ್ಮರಣೆ ಕಾರ್ಯಕ್ರಮವು ಹೌದು. ಇಂತಹ ಶುಭಸಂದರ್ಭದಲ್ಲಿ ಏರ್ರಿಸ್ವಾಮಿಯವರು ರಚಿಸಿರುವ ಕೃತಿ ಶ್ರೀ ಮಠದಲ್ಲಿಯೇ ಲೋಕಾರ್ಪಣೆಗೊಳ್ಳುತ್ತಿರುವುದು ಮಠದ ಗುರುಪರಂಪರೆಗೆ ಸಲ್ಲಿಸಿದ ಭಕ್ತಿಯಾಗಿದ್ದು ಇದು ಶ್ರೀ ಮಠಕ್ಕೆ ಮತ್ತು ಭಕ್ತರಿಗೆ ಸಂತೋಷವನ್ನುಂಟುಮಾಡಿದೆ ಎಂದರು.
ಕರಿಬಸವೇಶ್ವರ ಗದ್ದುಗೆ ಮಠದ ಪೂಜ್ಯ ಪರಮೇಶ್ವರ ಸ್ವಾಮಿಗಳು, ಹಿರೇಮಠದ ಶ್ರೀ ಷ.ಬ್ರ. ವೀರೇಶ್ವರ ಶಿವಾಚಾರ್ಯರು, ನಿವೃತ್ತ ಉಪನ್ಯಾಸಕರು ಹಾಗೂ ಗ್ರಂಥ ದಾಸೋಹಿಗಳಾದ ಶ್ರೀ ಡಿ.ಸಿ. ಮಲ್ಲಿಕಾರ್ಜುನ ರವರು, ನಿವೃತ್ತ ಪ್ರಾಚಾರ್ಯರಾದ ಕೆ. ಮಂಜು ಲಿಂಗಪ್ಪ, ಮಾಜಿ ಶಾಸಕರಾದ ಹೆಚ್ .ಪಿ.ರಾಜೇಶ್ , ಎಸ್ .ವಿ. ರಾಮಚಂದ್ರ , ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಅಜ್ಜಯ್ಯ ನಾಡಿಗರ್, ರಾಜ್ಯ ಕುಕ್ಕುಟ ಮಹಾ ಮಂಡಳದ ನಿರ್ದೇಶಕ ವೈ.ಎನ್. ಮಂಜುನಾಥ, ಜಿ.ಪಂ ಮಾಜಿ ಅಧ್ಯಕ್ಷ ತುರುವನೂರು ಬಾಬುರೆಡ್ಡಿ ಮತ್ತಿತರರು ಹಾಜರಿದ್ದರು.
