ದಾವಣಗೆರೆ : ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪರವಾನಗಿ ಭೂಮಾಪಕರನ್ನು ಸರ್ಕಾರಿ ಸೇವೆಯಲ್ಲಿ ಖಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಾಪಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಡಳಿತ ಮುಂಭಾಗ ಜಾಮಾಯಿಸಿದ ಭೂಮಾಪಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರಿಗೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ 2025ರ ಏಪ್ರಿಲ್ 10ರಂದು ನಡೆದ ರಾಷ್ಟ್ರೀಯ ಭೂಮಾಪಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪರವಾನಗಿ ಭೂಮಾಪಕರನ್ನು ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಈವರೆಗೆ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ. ಈ ವಿಳಂಬ ಧೋರಣೆಯನ್ನು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಜೀವ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ. ಪ್ರಸ್ತುತ ಪ್ರತಿ ಪ್ರಕರಣಕ್ಕೆ ನೀಡಲಾಗುತ್ತಿರುವ 1200 ರೂ.ಗಳ ಸಂಭಾವನೆಯು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ, ಆದ್ದರಿಂದ ಇದನ್ನು 3000 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಸೇವಾ ಶುಲ್ಕವನ್ನು ಬಿಡುಗಡೆ ಮಾಡದಿರುವುದು, ತತ್ಕಾಲ್ ಪೋಡಿ ಪ್ರಕರಣಗಳಲ್ಲಿ ಕನಿಷ್ಠ ಸಂಭಾವನೆ ನೀಡುತ್ತಿರುವುದು ಹಾಗೂ ಅಂತರ ಜಿಲ್ಲೆಗಳ ನಿಯೋಜನೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಚೇರಿ ಕೆಲಸಗಳಿಗೆ ಸ್ವಂತ ಕಂಪ್ಯೂಟರ್, ಪ್ರಿಂಟರ್ ಹಾಗೂ ಅಂತರ್ಜಾಲ ಬಳಸುತ್ತಿದ್ದರೂ ಸೂಕ್ತ ಸಂಭಾವನೆ ದೊರೆಯುತ್ತಿಲ್ಲ ಎಂದು ಕಿಡಿಕಾರಿದರು
ಬೇಡಿಕೆಗಳು ಈಡೇರುವವರೆಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಲಾಗಿನ್ನಲ್ಲಿರುವ ಎಲ್ಲಾ ಕಡತಗಳನ್ನು ಹಿಂಪಡೆದು, ಅನಿರ್ದಿಷ್ಟಾವಧಿಯವರೆಗೆ ಕೆಲಸ ಸ್ಥಗಿತಗೊಳಿಸುತ್ತಿರುವುದಾಗಿ ಇದೇ ವೇಳೆ ಎಚ್ಚರಿಸಿದರು.
Read also : ಹೊಂದಾಣಿಕೆಯಿಂದ ನೆಮ್ಮದಿಯಿಂದ ಜೀವನ ಸಾಧ್ಯ:ವೇದಾಂತಚಾರ್ಯರಾದ ದಯಾನಂದ ಸರಸ್ವತಿ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಟಿ.ಎಸ್. ಗುರುಮೂರ್ತಿ, ಯು. ನಾಗರಾಜು, ಡಿ.ಆರ್. ಬಾಸ್ಕರ್, ಎಸ್.ಕೆ. ಶಿವರಾಜ್, ಕೆ. ರಾಜಪ್ಪ, ಜಗದೀಶ್, ವಿನಯ್ ಕುಮಾರ್ .ಕೆ, ಅಭಿಷೇಕ್, ಎಚ್.ಎಂ. ವೃಷಬೇಂದ್ರಯ್ಯ ಹಾಗೂ ಸಂತೋಷ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪರವಾನಗಿ ಭೂಮಾಪಕರು ಉಪಸ್ಥಿತರಿದ್ದರು.
