ದಾವಣಗೆರೆ : ಒಳ ಮೀಸಲಾತಿ ಆಧಾರದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮಾ.6ರಂದು ದಾವಣಗೆರೆ ಬಂದ್ ಮಾಡಲಾಗುವುದು ಎಂದು ಸಮಾಜದ ಮುಖಂಡ ಆಲೂರು ಲಿಂಗರಾಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 3 ದಶಕಗಳ ಹೋರಾಟದ ಫಲವಾಗಿ ಸುಪ್ರೀಂ ಕೊರ್ಟ್ ತೀರ್ಪಿನಂತೆ ಸರ್ಕಾರವೇ ನೇಮಿಸಿದ್ದ ನಾಗಮೋಹನದಾಸ್ ಆಯೋಗವು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.6 ಹಾಗೂ ಇತರೆ ಸಮುದಾಯದ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿ ವರದಿ ಸಲ್ಲಿಸಿತ್ತು. ಆದರೆ ಸರ್ಕಾರವು ಆಯೋಗದ ವರದಿಯಂತೆ ಸರ್ಕಾರಿ ಹುದ್ದೆ ನೇಮಕ ಮಾಡಿಕೊಳ್ಳದೆ, ಹಳೆಯ ಮೀಸಲಾತಿ ಪ್ರಕಾರವೇ 56,432 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಆಧಾರದಲ್ಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಇದಕ್ಕಾಗಿ ಮಾ.6ರಂದು ದಾವಣಗೆರೆ ನಗರ ಬಂದ್ ನಡೆಸಲು ಉದ್ದೇಶಿಸಿದ್ದು, ಸಾರ್ವಜನಿಕರು ಬೆಂಬಲಿಸುವ ಮೂಲಕ ಬಂದ್ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯವು ಶಿಕ್ಷಣ, ಉದ್ಯೋಗ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದೆ. ಸಾವಿರಾರು ವರ್ಷಗಳಿಂದ ಅನೇಕ ದೌರ್ಜನ್ಯಗಳಿಗೆ ತುತ್ತಾಗುತ್ತಾ ಬಂದಿದೆ. ಇಂತಹ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗಿಕರಣ ಆಗಲೇಬೇಕು ಎಂದು ಅವರು ಆಗ್ರಹಿಸಿದರು.
Read also : ಡಾ.ಬಾಬುಜಗಜೀವನ್ ರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ.ಹೆಚ್.ವಿಶ್ವನಾಥ, ಎಂ.ಹಾಲೇಶ, ಹೆಚ್.ಮಲ್ಲೇಶ, ಹೆಚ್.ಸಿ.ಗುಡ್ಡಪ್ಪ, ರಾಘವೇಂದ್ರ ಕಡೇಮನಿ, ಅಂಜಿನಪ್ಪ ಕಡತಿ, ಪಿ.ಜೆ.ಮಹಾಂತೇಶ, ಟಿ.ರವಿಕುಮಾರ, ರಾಮಚಂದ್ರಪ್ಪ ನರಗನಹಳ್ಳಿ, ಎಂ.ಲಿಂಗರಾಜ ಸೇರಿದಂತೆ ಇತರರು ಇದ್ದರು.
