Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಬಯಲುಸೀಮೆ ‘ಯುಗಾದಿ ಸಂಭ್ರಮ’
Blog

ಬಯಲುಸೀಮೆ ‘ಯುಗಾದಿ ಸಂಭ್ರಮ’

Dinamaana Kannada News
Last updated: April 10, 2024 4:49 am
Dinamaana Kannada News
Share
davanagere
ಬಯಲುಸೀಮೆ ‘ಯುಗಾದಿ ಸಂಭ್ರಮ’
SHARE
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ 
ಮರಳಿ ಮರಳಿ ತರುತಿದೆ.
– ವರಕವಿ ದ.ರಾ ಬೇಂದ್ರೇ
ಹೌದು ನಾನೀಗ ಹೇಳಲೊರಟಿರುವುದು ನಮ್ಮ ಮನೆಮಂದಿಯನ್ನೆಲ್ಲ ವರುಷವೆಲ್ಲ ಹರುಷದಿಂದ ಇರುವಂತೆ ಮಾಡುತ್ತಿದ್ದ ಆ ಸಂಭ್ರಮದ ‘ಯುಗಾದಿ’ ಬಗ್ಗೆ. ಚೈತ್ರ ವೈಶಾಖಗಳ ಬಳಿಕ ವಸಂತಋತುವಿನಲ್ಲಿ ಬರುವ ‘ಚಂದ್ರಮಾನ ಯುಗಾದಿ’ಯ ಬಗೆಗೆ. ಹಣ್ಣೆಲೆಗಳು ಉದುರಿ ಹಸಿರೆಲೆಗಳು ಚಿಗುರಿ ಮೈ ಮನವನ್ನೆಲ್ಲ ಹಸಿರಾಗಿಸುವ  ಹಾಗೂ ‘ಬೇವು ಬೆಲ್ಲದ’ ಸವಿರುಚಿಯ ಬಗ್ಗೆ. ಮಧ್ಯ ಕರ್ನಾಟಕದ ‘ಬೆಣ್ಣೆ ನಗರಿ’ ಎಂದೆ ಖ್ಯಾತಿವೆತ್ತ ದಾವಣಗೆರೆಯ ನನ್ನ ಬಾಲ್ಯದಲ್ಲಿ ಆಚರಿಸುತ್ತಿದ್ದ ‘ಯುಗಾದಿ’ ಸಂಭ್ರಮವೆಂದರೆ ಅದೊಂದು ಮಾಸಲಾಗದ ನೆನಪು ನನಗೆ.
ದಾವಣಗೆರೆ ಸೇರಿ ಉತ್ತರ ಕರ್ನಾಟಕದಾದ್ಯಂತ ಆಚರಿಸಲ್ಪಡುವ ‘ಯುಗಾದಿ’ ಅರ್ಥಾತ್ ಚಂದ್ರಮಾನ ಯುಗಾದಿ ಎನ್ನುವುದು ಎರಡು ದಿನಗಳ ಹಬ್ಬವಾದರೂ ನನ್ನೂರಿನಲ್ಲಿ ಯುಗಾದಿ ಹಬ್ಬದ ಸಡಗರಗಳು, ಸಿದ್ದತೆಗಳು ಆರಂಭಗೊಳ್ಳುತ್ತಿದ್ದುದ್ದು ಹೆಚ್ಚುಕಡಿಮೆ ಒಂದು ತಿಂಗಳ ಮುಂಚೆಯೇ.! ಯುಗಾದಿಗಾಗಿ ಊರಲ್ಲಿದ್ದ ನಮ್ಮಯ ಎರಡು ಮನೆಗಳು ಪ್ರತಿ ವರ್ಷ ಸುಣ್ಣ ಬಣ್ಣಗಳಿಂದ ಶೃಂಗಾರಗೊಳ್ಳುತ್ತಿದ್ದವು.

ಪಕ್ಕಾ ಉತ್ತರ ಕರ್ನಾಟಕ ಶೈಲಿಗಳದ್ದೇ

ದಾವಣಗೆರೆಯಲ್ಲಿ ಆಚರಿಸುವ ಬಹುತೇಕ ಹಬ್ಬಗಳ ವಿಶೇಷವೆಂದರೆ  ಭೌಗೋಳಿಕವಾಗಿ ನಮ್ಮೆಲ್ಲರ ದೇಹ -ಮನಸ್ಸುಗಳು ಸದಾ ದಕ್ಷಿಣ ಕರ್ನಾಟಕದತ್ತ ಇದ್ದರೂ ಇಲ್ಲಿ ನಡೆಯುವ ಪ್ರತಿ ಹಬ್ಬ, ಮದುವೆ, ತಿಥಿ, ನಾಮಕರಣ ಇತ್ಯಾಧಿ ಆಚರಣೆಗಳೆಲವೂ ಪಕ್ಕಾ ಉತ್ತರ ಕರ್ನಾಟಕ ಶೈಲಿಗಳದ್ದೇ.

ಕಳೆಕಟ್ಟುವುದೇ ‘ಶ್ಯಾವೀಗೆ’ಯಿಂದ

ಇಲ್ಲಿನ ‘ಯುಗಾದಿ ಸಂಭ್ರಮ’ ಅದು ಕಳೆಕಟ್ಟುವುದೇ ‘ಶ್ಯಾವೀಗೆ’ಯಿಂದ. ಹಬ್ಬ ಇನ್ನೂ ಎರಡು ತಿಂಗಳು ಇರುವಾಗಲೇ ಮನೆ ಮನೆಮನೆಗೆ ಹತ್ತಿಪ್ಪತ್ತು ಕೆಜಿಗಟ್ಟಲೇ ಮಿಷನ್ ಗಳಿಂದ ತಯಾರಾದ ‘ಶ್ಯಾವೀಗೆ’ ಮನೆ ಮನೆಗಳಲ್ಲಿ ಶೇಖರಣೆಯಾಗುತ್ತದೆ. ಹಿಂದೆ ಈ ಶ್ಯಾವೀಗೆಯನ್ನು ಮನೆಯಲ್ಲಿ ಇರೋ ಹೆಣ್ಣು ಮಕ್ಕಳೇ ನಿತ್ಯ ಮನೆ ಕೆಲಸಗಳೆಲ್ಲ ಮುಗಿದ ಮ್ಯಾಲೆ ನೆರೆಹೊರೆಯ ಹೆಂಗಸರ ಜತೆಗೂಡಿ ಶ್ಯಾವೀಗೆ ಹೊಸಿಯಲೆಂದೇ ವಿಶೇಷವಾಗಿ ತಯಾರಾಗುತ್ತಿದ್ದ ‘ಶ್ಯಾವೀಗೆ ಮಣೆ’ ಮೇಲೆ ಕುಳಿತೇ ಗೋಧಿ ಮತ್ತು ರವೆಯ ಹಸಿ ಹಿಟ್ಟಿನಿಂದ ವಾರಗಟ್ಟಲೇ ಸೋಬಾನ ಹಾಗೂ ವಿವಿಧ ಜಾನಪದ ಹಾಡುಗಳನ್ನು ಗುನುಗುತ್ತಾ ಶ್ಯಾವೀಗೆ ಹೊಸೆದು ಹೊಸೆದು… ಅದನ್ನು ನಾಜೂಕಾಗಿ ತೆಳ್ಳನೆಯ ಬಿದಿರಿನ ಕೋಲುಗಳ ಮೇಲೆ ಇಳಿಬಿಟ್ಟು ಬಿಸಿಲಿಗೆ ಒಣ ಹಾಕುತ್ತಿದ್ದ ಚಿತ್ರಣ ನನಗೀಗಲೂ ಅದೊಂದು ಒಂದು ದೃಶ್ಯಕಾವ್ಯವೇ.
ದಾವಣಗೆರೆ ಎನ್ನುವ ‘ಬಯಲುಸೀಮೆ’ಯಿಂದ ಆರಂಭಗೊಳ್ಳುವ ಈ ದೃಶ್ಯಕಾವ್ಯ ನಿಮಗೆ ಅರ್ಥವಾಗಬೇಕಾದರೆ ಹಾವೇರಿ ಜಿಲ್ಲೆ ಶಿಗ್ಗಾವಿ ಸಮೀಪದಲ್ಲಿ ಹಿರಿಯ ರಂಗಕರ್ಮಿ ದಿವಗಂತ ಶ್ರೀ ಸೋಲಬಕ್ಕನವರು ರೂಪಿಸಿದ’ರಾಕ್ ಗಾರ್ಡನ್’ನಲ್ಲಿ ಈ ಶ್ಯಾವೀಗೆ ಹೊಸೆಯುವ ಚಿತ್ರಣವನ್ನು ಕಲೆಯಲ್ಲಿ ಸೆರೆಹಿಡಿದಿರುವುದ ನೋಡಿ ಈಗಿನವರು ಕಣ್ತುಂಬಿಕೊಳ್ಳಬಹುದು.
ಉತ್ತರ ಕರ್ನಾಟಕದ ಬಹುತೇಕ ಹಳ್ಳಿ ಮತ್ತು ನಗರಗಳಲ್ಲಿ ‘ಯುಗಾದಿ’ ದಿನಮಾನಗಳಲ್ಲಿ ಈ ಚಿತ್ರಣ ಒಂದು ಕಾಲದ ಸಾಮಾನ್ಯ ಸಂಗತಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಶ್ಯಾವೀಗೆ ತಯಾರಿಕೆ’ ಎಂಬುದು ಒಂದು ಗೃಹೋಧ್ಯಮ-ಯಂತ್ರೋಧ್ಯಮವಾಗಿ ಬೆಳೆದಿದೆ.
ಪ್ರತಿ ವರ್ಷದ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಈ ಉದ್ಯಮ ನಡೆಸುವ ಮನೆ ಮಂದಿಗೆಲ್ಲ ಮೈ ತುಂಬಾ ಕೆಲಸ. ಜತೆಗೆ ನೂರಾರು ಹೆಣ್ಣು ಮಕ್ಕಳಿಗೂ ಇದರಿಂದ ಉದ್ಯೋಗ ಭಾಗ್ಯ ಸಿಗಲಿದೆ. ದಾವಣಗೆರೆ ಸೇರಿದಂತೆ ಸುತ್ತ ಮುತ್ತಲಿನಲ್ಲಿ ಯುಗಾದಿ ಕಳೆದು ಮತ್ತೆ ಯುಗಾದಿ ಮರಳುವವರೆಗೂ ಮನೆ ಮನೆಗಳಲ್ಲಿ ಈ ‘ಶ್ಯಾವೀಗೆ ಸಂಭ್ರಮವೇ’.! ಮಾತ್ರವಲ್ಲ ಮನೆಯಿಂದ ಲಗ್ನವಾಗಿ ಹೊರ ಹೋದ ಪ್ರತಿ ಹೆಣ್ಣು ಮಕ್ಕಳ ಮನೆಗೂ ‘ತೌರ ಮನೆಯ ಉಡುಗೊರೆಯಾಗಿ ಶ್ಯಾವೀಗೆ ತಲುಪುತ್ತೆ.
 ‘ಯುಗಾದಿ’ಗೆ ಶ್ಯಾವೀಗೆ ಜತೆ ಕಡ್ಡಾಯವಾಗಿ ಇರಲೇಬೇಕಾದುದ್ದು ಚೆಕ್ಕುಲಿ, ಸೆಂಡಿಗೆ, ಹಪ್ಪಳ ಮತ್ತು ಹಲವು ರೀತಿಯ ಉಪ್ಪಿನ ಕಾಯಿಗಳು. ಇವುಗಳ ತಯಾರಿ ಕೂಡ ತಿಂಗಳ ಮುಂಚೆಯೇ ಶುರುವಾಗುತ್ತಿತ್ತು. ಇದ್ದಂತಹವರು ಮನೆಯ ತಾರಸಿ ಮೇಲೆ, ಇಲ್ಲದವರು ಎದುರಿಗಿರುವ ಮನೆಯಂಗಳ ಪಕ್ಕದ ಮನೆ ಬಿಸಿಲು ಬೀಳೋ ಕಟ್ಟೆ ಮೇಲೆ, ಹಳೆ ಪಾಲಿಸ್ಟಾರ್,ಕಾಟನ್ ಸೀರೆ, ಪಂಚೆ ಹರಡಿ ಮನೆಯಲ್ಲಿರೋ ಹೆಂಗಸರೆಲ್ಲ ಅವುಗಳ ಮೇಲೆ ಬಣ್ಣ ಬಣ್ಣದ ಹಪ್ಪಳ ಸೆಂಡಿಗೆಯ ಚಿತ್ತಾರಗಳ ಬಿಡಿಸುತ್ತಾರೆ. ಬಳಿಕ ಅದರ ಸುತ್ತ ಸಣ್ಣ ಸಣ್ಣ ಕಲ್ಲುಗಳನ್ನ ಇಟ್ಟು ಮನೆಯ ಸಣ್ಣ ಮಕ್ಕಳಿಗೆ ಏನಾದರೂ ತಿನ್ನೋಕ್ಕೆ ಕೊಟ್ಟು ಇಲ್ಲ, ಮನೆಯ ಅಥ್ವಾ ಪಕ್ಕದ ಮನೆಯ ವಯಸ್ಸಾದ ಅಜ್ಜ ಅಜ್ಜಿಯನ್ನೋ ಕಾಯಲು ಹಚ್ಚಿ ಮನೆ ಹೆಂಗಸ್ರು ಇನ್ನೂ ಮಾಡಬೇಕಾದ ಹಬ್ಬದ ತಯಾರಿ ಕಡೆ ಗಮನ ಹರಿಸುತ್ತಾರೆ.
ಹೀಗೆ ‘ಯುಗಾದಿ’ ದಿನಮಾನಗಳಲ್ಲಿ ಅಂದು ಮನೆ ಮನೆಯಲ್ಲಿ ತಯಾರಾಗುತ್ತಿದ್ದ ಹಪ್ಪಳದ ಉಂಡೇಗಳಂತೂ ಆಹಾ ಏನ್ ರುಚಿ ಅಂತೀರಾ? ನೆನೆಸಿಕೊಂಡ್ರೇ ಈಗಲೂ ಬಾಯಲ್ಲಿ ನೀರೂರುತ್ತೆ. ಹೀಗೆ ಒಂದು ಕಡೆ ಶ್ಯಾವೀಗೆ ಮತ್ತೊಂದೆಡೆ ಸೆಂಡಿಗೆ , ಹಪ್ಪಳ, ಚೆಕ್ಕುಲು ಮತ್ತು ಹಲವು ಬಗೆಯ ಉಪ್ಪಿನಕಾಯಿಗಳ ಮಿಳಿತಗಳೊಂದಿಗೆ ‘ಯುಗಾದಿ’ ಹಬ್ಬದ ಕೆಲಸಗಳು ನಮ್ಮ ಕಡೆ ಹೆಚ್ಚು ಕಡಿಮೆ ಫೆಬ್ರವರಿಯ ‘ಶಿವರಾತ್ರಿ’ ಬಳಿಕ ವೇಗಪಡೆದುಕೊಳ್ಳುತ್ತವೆ. ವರುಷಕ್ಕೊಮ್ಮೆ ಬರುತ್ತಿದ್ದ ‘ಯುಗಾದಿ’ಯು ಮನೆಮಂದಿಯನ್ನೆಲ್ಲ ದೈಹಿಕವಾಗಿ ಆಯಾಸ ಮಾಡಿದರೂ ಅವರಲ್ಲೊಂದು ಜೀವಕಳೆಯ ತುಂಬುತ್ತಿತ್ತು.
 ‘ಯುಗಾದಿ’ಯ ಮೊದಲ ದಿನವು ಮನೆಯ ಗಂಡಸರೆಲ್ಲ ಮೈಗೆಲ್ಲ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕವೇ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಮುಂಜಾನೆಯೇ ಮೈತುಂಬಾ ಕಾಸಿದ ಎಣ್ಣೆ ಹಚ್ಚಿಸಿಕೊಂಡು ಮನೆಯ ಹೊರಗಡೆ ಎಳೆಯ ಬಿಸಿಲಿನಲ್ಲಿ ಮೈಯೊಡ್ಡಿ ನಿಲ್ಲುವ ದೃಶ್ಯ ಬಾಲ್ಯದಲ್ಲಿ ಸಾಮಾನ್ಯವಾಗಿತ್ತು. ಬಳಿಕ ಊರಲ್ಲಿ ಯಾರದೋ ತೋಟದಲ್ಲಿ, ಹೊಲದಲ್ಲಿ ಬೆಳೆದಿದ್ದ ಬೇವು-ಮಾವಿನ ಮರಗಳನ್ನು ಸಹಾಸ ಮಾಡಿ ಏರಿ ಬೇವಿನ, ಎಲೆ ಮತ್ತು ಹೂವು ಮತ್ತು ಮಾವಿನ ಎಲೆಗಳನ್ನು ತಂದು, ಆ ಮಾವಿನ ಎಲೆಗಳನ್ನು ಬಿಡಿಸಿ ಬಾಗಿಲುಗಳಿಗೆ ಅಂದವಾದ ತಳಿರು-ತೋರಣ ಮಾಡುವುದು, ಬೇವಿನ ಎಲೆಗಳನ್ನು ಸ್ನಾನ ಮಾಡುವ ಬೀಸಿ ನೀರಿಗೆ  ಹಾಕಿ ಸ್ನಾನ ಮಾಡುವುದು ಹಾಗೂ ಅದರ ಹೂಗಳನ್ನು ಬಿಡಿಸಿ ‘ಬೇವು ಬೆಲ್ಲ’ಕ್ಕೆ ಸೇರಿಸುವುದು ಪ್ರತಿ ಮನೆಯಲ್ಲೂ ತಪ್ಪದೆ ನಡೆಯುತ್ತಿದ್ದ ಕಾಯಕ.

ನಮ್ಮಯ ‘ಯುಗಾದಿ’ ವಿಶೇಷ

ದಾವಣಗೆರೆ ಸುತ್ತಮುತ್ತಲಿನ ‘ಬೇವುಬೆಲ್ಲವೆಂದರೆ  ಮೈಸೂರು ಹಾಗೂ ಬೆಂಗಳೂರಿನ ಕಡೆಯ ರೀತಿಯದ್ದಲ್ಲ. ಮೊದಲು ಉರಿಗಡಲೆಗಳನ್ನು ಒಳ್ಳು ಕಲ್ಲಿನಲ್ಲಿ ಕುಟ್ಟಿ ನುಣ್ಣಗೆ ಪುಡಿ ಅದಕ್ಕೆ ಒಣಕೊಬ್ಬರಿ ತುರಿ ಹಾಕಿ ಜತೆಗೆ ಬೆಲ್ಲದಪುಡಿ ಬಳಿಕಾ ಬೇವಿನ ಹೂಗಳನ್ನು ಸೇರಿಸಿ ಅಂತಿಮವಾಗಿ ಬಾಯಿಗೆ ಕಂಪಿರಲಿ ಎಂದು ಎಲಕ್ಕಿ ಪುಡಿ ಹಾಕಿ ಒಂದು ರೀತಿಯ ವಿಶಿಷ್ಟವಾಗಿ ’ಬೇವುಬೆಲ್ಲ ತಯಾರಿಸುತ್ತಾರೆ ಮನೆಯ ಹೆಂಗಸರು. ಹಾಗೆ ತಯಾರಾಗುವ ‘ಬೇವು ಬೆಲ್ಲ’ವನ್ನು ಮನೆ ಮಂದಿಯಲ್ಲ ಊಟಕ್ಕಿಂತ ಮೊದಲು ತಿಂದು ನಂತರ ಮನೆಗೆ ಬಂದವರಿಗೆಲ್ಲ ನೀಡುತ್ತಾ ಹಿಂದಿನ ವರ್ಷದಲ್ಲಿ ಆಗಿ ಹೋದ ಕಹಿ ಘಟನೆಗಳನ್ನು, ಮುನಿಸುಗಳನ್ನು ಮರೆತು ಸವಿಯಾಗಿ ಉಣ್ಣುತ್ತಾ ಸಿಹಿಯಾಗಿ ಮಾತನಾಡುತ್ತ ಆಚರಿಸುವುದೇ ನಮ್ಮಯ ‘ಯುಗಾದಿ’ ವಿಶೇಷ.
ಯುಗಾದಿ ಅಂದಿನ ದಿನಗಳಲ್ಲಿ ಇಲ್ಲಿನ ಬಹುತೇಕ ಮನೆಗಳಲ್ಲಿ ಸ್ಥಾನ ಪಡೆಯುತ್ತಿದ್ದುದ್ದು ಸುವಾಸನೆಭರಿತ ‘ಮೈಸೂರು ಸ್ಯಾಂಡಲ್’. ಇದಾದ ಬಳಿಕ ಕಳೆದ ಒಂದು ವರ್ಷದಿಂದ ಸೊಂಟ ಸುತ್ತಿಕೊಂಡಿರುತ್ತಿದ್ದ ಹಳೆಯ ‘ಉಡುದಾರ’ ಕಳಚಿ, ‘ಕೆಂಪು-ಹಳದಿ ಉಡುದಾರ’ಗಳು ಗಂಡುಮಕ್ಕಳ ಸೊಂಟಕ್ಕೇರುತ್ತಿದ್ದವು. ಜತೆಗೆ ಮನೆ ಮಂದಿಯಲ್ಲ ಹೊಸ ಬಟ್ಟೆಗಳನ್ನು ಧರಿಸಿದ ಕೂಡಲೇ ಯುಗಾದಿ ಸಂಭ್ರಮ ಮತ್ತಷ್ಟು ರಂಗೇರುತ್ತಿತ್ತು.
ಹಬ್ಬದ ದಿನ ಮದ್ಯಾನ್ಹ ಮನೆ ಮಂದಿಯಲ್ಲ ಎಣ್ಣೆ ಸ್ನಾನಮುಗಿಸೋ ಹೊತ್ತಿಗೆ ಪ್ರತಿ ಮನೆಯಲ್ಲೂ ‘ಬೇವುಬೆಲ್ಲ’ ತಯಾರಾಗುತ್ತೆ. ನಂತರ ಅನ್ನ ಸಾಂಬಾರು, ಮುಳುಗಾಯಿ(ಬದನೆಕಾಯಿ)ಪಲ್ಯ, ಕೋಸಂಬರಿ, ಹಪ್ಪಳ, ಚೆಕ್ಕುಲಿ ಸೆಂಡಿಗೆಗಳನ್ನು ಎಣ್ಣೆಯಲ್ಲಿ ಕರಿದು, ಕೊನೆಗೆ ಅವತ್ತಿನ ಊಟಕ್ಕೆ ಸವಿಸವಿಯಾದ ಶ್ಯಾವೀಗೆ ಸಿದ್ದವಾಗುತ್ತೆ. ಈ ಶ್ಯಾವೀಗೆ ಬಸಿಯೋದ್ರಲ್ಲೂ ಒಂದು ಕುಶಲತೆ ಬೇಕೆ ಬೇಕು.
ಇಲ್ಲದಿದ್ದರೆ ಬಸಿದ ಉದ್ದನೆಯ ಶ್ಯಾವೀಗೆ ‘ಮುದ್ದೆ’ಥರ ಆಗಿ ಅದರ ಗಮ್ಮತ್ತೆ ಹೋಗುತ್ತೆ. ಒಲೆ ಮೇಲೆ ನೀರು ಇಟ್ಟು ಅದು ಚೆನ್ನಾಗಿ ಕುದಿಯುವಾಗ ಉದ್ದನೆಯ ಶ್ಯಾವಿಗೆಯನ್ನು ಕೈಯಿಂದ ತುಂಡಾಗಿ ಮುರಿದು ಕುದಿಯುವ ನೀರಿಗೆ ಹಾಕಿ ತಕ್ಷಣವೇ ಒಂದು ಚಿಕ್ಕ ಬಿದರಿನ ಪುಟ್ಟಿಯಲ್ಲಿ ಬೆಂದಿರುವ ಶ್ಯಾವೀಗೆಯ ಬಸಿಯಬೇಕು ಆ ಬಳಿಕ ಕೂಡಲೇ ಬಸಿದ ಶ್ಯಾವೀಗೆ ಮೇಲೆ ಒಂದು ತಂಬಿಗೆ ತಣ್ಣನೆಯ ನೀರನ್ನು ಹಾಕಬೇಕು ಹಾಗಾದಾಗ ಮಾತ್ರನೆ ಅದು ‘ಮಲ್ಲಿಗೆ’ಯಂತೆ ಬಿಡಿಬಿಡಿಯಾಗಿ ಕೈಗೆ ಅಂಟದಂತೆ ರೆಡಿಯಾಗುತ್ತೆ. ಹೀಗೆ ಬಿಸಿಬಿಸಿಯಾಗಿ ಬಸಿದ ಶ್ಯಾವೀಗೆಯನ್ನು ತಟ್ಟಿಗೆ ಬಡಿಸಿ ಅದಕ್ಕೆ ಬಿಸಿಬಿಸಿಯಾದ ಬೆಲ್ಲದಹಾಲು,ತುಪ್ಪ ಅದರ ಮೇಲೊಂದಿಷ್ಟು ಕಡ್ಲೇಪುಡಿ ಹಾಕಿ ಕಲಸಿ ತಿನ್ನುವುದೆಂದರೆ ಆಹಾ…ಅದೊಂದು ಸ್ವರ್ಗ ಸುಖದ ಅನುಭವ..!
‘ಯುಗಾದಿ’ ಈ ಮೊದಲ ಹಬ್ಬದ ಊಟದ ಮುನ್ನ ‘ದಾಸಪ್ಪ’(ದೇವರು)ನ್ನ ಕರೆದು ಪೂಜೆ ಮಾಡಿ ಅವನಿಗೆ ಮೊದಲು ‘ಎಡೆ’ ಇಟ್ಟನಂತರವೇ ನಮ್ಮೆಲ್ಲರ ಊಟ ಶುರುವಾಗುತ್ತಿತ್ತು. ಇದು ನಮ್ಮ ಮನೆಯಲ್ಲಿ ಹಿಂದಿನಿಂದ ನಡೆದು ಬಂದ ಪದ್ದತಿ. ನಮ್ಮ ‘ಮನೆದೇವರು’ ಜಗಳೂರು ಸಮೀಪದ ಕೊಣಚುಗಲ್ಲು ಗುಡ್ಡದ ಮೇಲಿರುವ ‘ರಂಗನಾಥ ಸ್ವಾಮಿ’. ಹೀಗಾಗಿ ಅದೇ ದೇವರು ಹೊತ್ತವರನ್ನು ಕರೆದು ಮೊದಲ ಎಡೆ ಇಟ್ಟು ಪೂಜೆ ಮಾಡಿ ‘ಗೋವಿಂದಾ…ಗೋವಿಂದಾ… ಎಂದು ಆ ದೇವರನ್ನು ಕಳಿಸುವುದು ಯುಗಾದಿ ಆಚರಣೆಗಳಲ್ಲೊಂದಾಗಿತ್ತು.
 ‘ಯುಗಾದಿ’ಹಬ್ಬದ ಮತ್ತೊಂದು ಆಕರ್ಷಣೆ ಎಂದರೆ ಅದು ಜೂಜಾಟ. ಇದನ್ನು ಆಡುಭಾಷೆಯಲ್ಲಿ ‘ತೂರಾಮುಚ್ಚೆ ಆಟ’. ಎನ್ನುತ್ತಿದ್ದೆವು. ನಮ್ಮ ಮನೆಗಳ ಸುತ್ತ ಮುತ್ತ ಇರೋ ಹತ್ತಿಪ್ಪತ್ತು ಅಡಿಗಳ ಸಂಧಿ-ಗೊಂಧಿಗಳಲ್ಲೇ ಈ’ತೂರಾ ಮುಚ್ಚೆ’ ಆಟಕ್ಕೆಂದು ನೂರಾರು ಸಂಖ್ಯೆಯಲ್ಲಿ ಜನ ಸೇರೋದು. ಹೀಗಾಗಿ ನಮ್ಮ ಮನೆ ಸುತ್ತ ಮುತ್ತಲು ಎರಡು ಮೂರು ದಿನಗಳ ‘ಯುಗಾದಿ ಗದ್ದಲ’ ನಮಗೆಲ್ಲ ಮಾಮೂಲಾಗಿತ್ತು. ಈ ಆಟದಿಂದ ಬಹುತೇಕರಿಗೆ ಲಾಭ ಆಗಿದ್ದಕ್ಕಿಂತ ಹಣ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದೇ ಜಾಸ್ತೀ ಎನ್ನುಬೇಕು.
ಇನ್ನೂ ‘ಹಬ್ಬ’ದ ಎರಡನೇ ದಿನ ಅದು ಚಂದ್ರಮಾನ ಯುಗಾದಿ. ಈ ದಿನ ಬಹುತೇಕ ಮನೆಗಳಲ್ಲಿ ‘ಹೋಳಿಗೆ ಊಟ. ಸಾಮನ್ಯವಾಗಿ ಪ್ರತಿ ಮನೆಯ ಹೆಣ್ಣುಮಕ್ಕಳು ಬೆಳೆಗ್ಗೆಯೇ ತೊಗರಿ ಬೇಳೆಯನ್ನು ದೊಡ್ಡದಾದ ಪಾತ್ರೆಯಲ್ಲಿ ಬೇಯಿಸಿ ಅದು ಬೆಂದ ಬಳಿಕಾ ಅದರ ಬೇಳೆಕಟ್ಟನ್ನು ಸೋಸಿ ಬಳಿಕ ಬೆಲ್ಲವನ್ನು ಬೇಳೆಗೆ ಬೆರೆಸಿ ಅದರಲ್ಲಿ ಕರಗಿಸಿ ಅದು ತಣ್ಣಗಾದ ನಂತರ ‘ದುಂಡಿ’(ಚೆಪ್ಪಟೆಯಾದ ಕಲ್ಲಿನಲ್ಲಿ ದುಂಡನಾದ ಕಲ್ಲು ಮೂಲಕ ರುಬ್ಬುವುದು) ಯಲ್ಲಿ ರುಬ್ಬಿ ಹೋಳಿಗೆ ಹೂರಣ ತಯಾರಿಸುತ್ತಾರೆ. ಬೇಳೆಯಿಂದ ಬೇರ್ಪಡಿಸಿದ ಕಟ್ಟನ್ನು(ತಿಳಿ) ಬಳಸಿ ‘ಕಟ್ಟು ಸಾರು’ ಮಾಡೋರು. ಇದು ದಾವಣಗೆರೆಯಿಂದ ಉತ್ತರ ಕರ್ನಾಟಕ ಮತ್ತು ಬಾಂಬೆ ಕರ್ನಾಟಕದವರೆಗೂ ಅತಿ ಪ್ರಸಿದ್ದವಾದ ಹಬ್ಬದ ಸಾರು. ಇದನ್ನು ಎರಡು ಮೂರುದಿನ ಇಲ್ಲವೇ ವಾರಗಟ್ಟಲೇ ಇಟ್ಟುಕೊಂಡು ಊಟ ಮಾಡೋದು ರೂಢಿಯಲ್ಲಿದೆ.
‘ಯುಗಾದಿ’ಈ ಹೊತ್ತಿಗೆ ‘ಮಾವಿನ ಹಣ್ಣು’ ಮಾರುಕಟ್ಟೆಗೆ ಬಂದಿರುತ್ತೆ. ಹೀಗಾಗಿ ಹೋಳಿಗೆಗೆ ‘ಮಾವಿನ ಹಣ್ಣಿನ ಸಿಕರಣೆ’ ಒಳ್ಳೆ ಕಾಂಭೀನೇಷನ್. ಒಳ್ಳೆಯ ರಸಪುರಿ-ಕಸಿ ಹಣ್ಣುಗಳನ್ನು ತಂದು ಅದರ ಸಿಪ್ಪೆ ಸುಳಿದು ಅದಕ್ಕೆ ಸ್ವಲ್ಪ ನೀರು, ಬೆಲ್ಲ ಹಾಗೂ ಎಲಕ್ಕಿ ಪುಡಿ ಬೆರೆಸಿ ಬಿಸಿಬಿಸಿ ಹೋಳಿಗೆಗೆ ಬಿಸಿಯಾದ ತುಪ್ಪ ಬೆರೆಸಿದರೆ ಅದುವೇ ‘ಹೋಳಿಗೆ ಸಿಕರಣೆ’. ಇದು ನಮ್ಮೆಲ್ಲರ ಯುಗಾದಿಯ ಕೊನೆಯ ಸ್ಪೆಷಲ್ ಭೋಜನ. ಊಟದ ಕೊನೆಯಲ್ಲಿ ಜೀರ್ಣವಾಗುವಂತೆ ಬಿಸಿಯಾದ ಅನ್ನ ಮತ್ತು ಸವಿಯಾದ ಬೇಳೆ ಕಟ್ಟು ಉಂಡ ಮೇಲಂತೂ…ಅದರ ವರ್ಣನೇಯೇ ಬೇಡ, ಅದೊಂದು ಪರಿಪೂರ್ಣ ಹಬ್ಬದೂಟ.
ಹೀಗೆ ಹೊಟ್ಟೆ ಬಿರಿಯುವಂತೆ ಉಂಡು, ತುಂಬಿದ ಹೊಟ್ಟೆಯ ಹಗುರ ಮಾಡಿಕೊಳ್ಳಲು ಊರ ಹೊರಗೆ ಸ್ವಲ್ಪ ಸುತ್ತಾಡಿ ಮನೆಗೆ ಬಂದ ನೆಂಟರಿಸ್ಟರ ಜತೆ ಕಷ್ಟ ಸುಖವ ಹಂಚಿಕೊಳ್ಳುವ ಹೊತ್ತಿಗೆಲ್ಲ… ಪೂರ್ವದಲ್ಲಿ ಬಿರುಬಿಸಿಲಿನಿಂದ ಭೂಮಿಯನ್ನು ಕೆಂಡವಾಗಿಸಿದ್ದ ಸೂರ್ಯ, ಸಂಜೆ ಪಶ್ಚಿಮದತ್ತ ಇಳಿಮುಖನಾಗುತ್ತಾನೆ. ಆ ಹೊತ್ತಿಗೆಲ್ಲ ಲಕ್ಷಾಂತರ ಜನರ ಚಿತ್ತ ಆಗಷ್ಟೇ ಮರೆಯಾದ ರವಿಯ ಬೆಳಕಿನ ಪ್ರಭಾವಳಿ ಹಾಗೂ ಮೋಡದೊಳಗಿನಿಂದಲೇ ಉದಯಿಸುವ ‘ಚಂದ್ರನ ಬೆಳ್ಳಿಯ ಕಿರಣ’ದತ್ತ ನೆಟ್ಟಿರುತ್ತೆ.
ಈ ‘ಚಂದ್ರದರ್ಶನ’ಎನ್ನುವುದು ‘ಚಂದ್ರಮಾನ ಯುಗಾದಿ’ ಕೊನೆಯ ಹಾಗೂ ಕೂತೂಹಲ ಘಟ್ಟವಾಗಿರುತ್ತೆ.
ಒಂದು ಕಡೆ ಮನೆಯ ಕಿರಿಯರು ಆಗಸದಲ್ಲಿ ಅತಿ ಸಣ್ಣದಾಗಿ ಕಿರಣದರೂಪದಲ್ಲಿ ಪ್ರತ್ಯಕ್ಷವಾಗುವ ಚಂದಮಾಮನಿಗಾಗಿ ಹುಡುಗಾಟಿಕೆ ಮಾಡಿಕೊಂಡು ಹುಡುಕಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಮುಂದಿನ ವರ್ಷ ‘ದರ್ಶನಭಾಗ್ಯ’ ಸಿಗುತ್ತೋ ಇಲ್ಲವೋ ಎನ್ನುವ ‘ದುಗುಡ ದುಮ್ಮಾನ’ಗಳಿಂದ ಯುಗಾದಿಯ ಆ ಕೊನೆಯ ದರ್ಶನಕ್ಕಾಗಿ ಹಂಬಲಿಸುತ್ತವೆ ಕೊನೆಯ ದಿನಗಳನ್ನು ದೂಡುತ್ತಿರುವ ‘ಹಿರಿಯ ಜೀವ’ಗಳು. ಕೆಲವರು ಮನೆಗಳ ಮುಂದೆ, ಹಲವರು ಮಹಡಿಗಳ ಮೇಲೆ ಇನ್ನೂ ಕೆಲವರು ಊರ ಹೊರಗಿನ ರಸ್ತೆಯಲ್ಲಿ ಹೀಗೆ ಎಲ್ಲಾದರೂ…ಸರಿ ಅವರ ಹುಡುಕಾಟವೆಲ್ಲ ದಿಗಂತದಲ್ಲಿ ಉದಯಿಸುವ ‘ಆ ಬೆಳ್ಳಿ ಕಿರಣಕ್ಕಾಗಿಯೇ… ಆಗೋ..ಯಾರೋ ಕೊಗಿದರು ಅದು ಅಲ್ಲಿ ಕಾಣುತ್ತಿದೆ.
ಕೂಡಲೇ ನೂರಾರು ಕಣ್ಣುಗಳು ಮತ್ತಷ್ಟು ರೆಪ್ಪೆ ಅಗಲಿಸಿ..ಎಲ್ಲಿ? ಎಲ್ಲಿ..? ನನಗೆ ಕಾಣುವಲ್ದು ಎನ್ನುವ ಅಸಹಾಯಕತೆಯಿಂದ ಆಕಾಶವ ದಿಟ್ಟಿಸುತ್ತವೆ. ಅದೋ ಅಲ್ಲೇ ಆ ತೆಂಗಿನ ಮರದ ಕೆಳಗೆ… ಆ ಹಕ್ಕಿ ಹಾರುತ್ತಿವೆ ನೋಡಿ ಅದರ ಮೇಲೆ… ಎಂದು ಆಕಾಶದಲ್ಲಿ ಸಣ್ಣನೇ ಬೆಳ್ಳಿಯ ಗೆರೆಯಂತೆ ಕಾಣುವ ಚಂದ್ರನತ್ತ ಬೆರಳ ತೋರಿಸುತ್ತಾರೆ. ಅಂತೂ ಇಂತೂ ಹೇಗೋ ‘ಚಂದ್ರ’ನನ್ನು ನೋಡಿದ ಹಿರಿಜೀವಗಳಿಗಂತೂ ಇದುವೇ ನಮ್ಮಯ ಕೊನೆಯಭಾಗ್ಯ ಎಂದು ಅಸಹಾಯಕತೆಯ ನಮಸ್ಕಾರ ಮಾಡಿದರೆ, ಉಳಿದವರು ‘ಚಂದ್ರದರ್ಶನ’ ಮಾಡಿದ ಖುಷಿಯಲ್ಲಿ ಸಿಕ್ಕ ಸಿಕ್ಕವರ ಕೈ ಕುಲುಕುತ್ತಾ ಸಂಭ್ರಮಿಸುತ್ತಾರೆ. ಇದನ್ನೇ ಬೇಂದ್ರೆಯವರು
ವರುಷಕ್ಕೊಂದು ಹೊಸತು ಜನ್ಮ
ಹರುಷಕ್ಕೊಂದು ಹೊಸತು ನೆನಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೋ..
ಎಂದು ಕಳೆದೋದ ಬಾಲ್ಯ ಹಾಗೂ ಹರಯಗಳು ಈ ಮನುಷ್ಯ ಜೀವಕೆ ಮರಳಬಾರದೇಕೆ ಎಂಬ ಪ್ರಶ್ನೆಯನ್ನು ಮುಂದು ಮಾಡಿ ಮತ್ತು ಮಗುವಾಗಿ ಯುಗಾದಿಯ ಈ ಸಂಭ್ರಮವ ಸವಿಯಲು ಬಯಸುತ್ತಾರೆ.

ಚಂದ್ರದರ್ಶನ ಭಾವನಾತ್ಮಕ ಬೇಸುಗೆ

ನಮಗೆಲ್ಲ ತಿಳಿದಂತೆ ‘ಯುಗಾದಿ’ಯ ಈ ಕೊನೆಯ ಈ ‘ಚಂದ್ರದರ್ಶನ’ ಎನ್ನುವುದು ಯಕಶ್ಚಿತ್ ಒಂದು ಬಾಹ್ಯಕಾಶದಲ್ಲಿ ಕೋಟ್ಯಂತರ ವರ್ಷಗಳಿಂದ ಘಟಿಸುವ ಒಂದು ನೈಸರ್ಗಿಕ ಘಟನಾವಳಿಯಷ್ಟೇಯದರೂ ಅದು ಹಳಸಿದ ಮನುಷ್ಯ ಸಂಬಂಧಗಳು ಮತ್ತೆ ಬೆಸೆಯಲು, ದ್ವೇಷ ತುಂಬಿದ ಮನಸ್ಸಿನಲ್ಲಿ ಶಾಂತಿಯ ಬೀಜಗಳು ಮೊಳಕೆಯೊಡೆಯಲು ಇರುವ ಭಾವನಾತ್ಮಕ ಬೇಸುಗೆಯಾಗಿದೆ.
ಆಧುನಿಕರಣ-ನಗರೀಕರಣದ ಭರಾಟೆಯಲ್ಲಿ ಈಗ ಯುಗಾದಿ ಎಂಬುದು ಒಂದು ಯಾಂತ್ರಿಕ ಆಚರಣೆಯಾಗಿದೆ ನಿಜ. ಕಳೆದ ಎರಡು ದಶಕಗಳಿಂದ ಬೆಂಗಳೂರು ಎನ್ನುವ ಯಾಂತ್ರಿಕೃತ ಜಂಜಾಟದ ಬದುಕಿನಲ್ಲಿ ಬದುಕು ಸಾಗಿಸುತ್ತಿದ್ದರೂ ನಮ್ಮಂತ ಅದೆಷ್ಟೋ ಒಂಟಿ ಕುಟುಂಬಗಳು ಈ ಮೊದಲಿನ ಯುಗಾದಿ ಸಂಭ್ರಮದಿಂದ ವಂಚಿತರಾಗಿ ಮನಸ್ಸುಗಳು ಕೊಂಚ ನಿರಾಶೆಗೊಂಡಿವೆ…ಆದರೂ…ಈಗಲೂ ನೂರಾರು …ಕೀಮೀ ದೂರದ ದಾವಣಗೆರೆಯಿಂದ ಚಂದ್ರದರ್ಶನದ ಬಳಿಕ ಬರುವ ‘ಚಂದ್ರ’ನ ನೋಡಿದ್ರಾ..? ಎನ್ನುವ ಅಣ್ಣಂದಿರ, ಅತ್ತಿಗೆಯರ, ಮಕ್ಕಳ ಪೋನ್ ಕರೆಗಳು ಬಂದ ಕೂಡಲೇ…‘ನಮ್ಮಯ ಬದುಕಿನಲ್ಲಿ ಮರೆಯಾಗುತ್ತಿರುವ… ಆ ದಾವಣಗೆರೆಯ ಚಂದ್ರಮಾನ ‘ಯುಗಾದಿ’ಯು ಮತ್ತೆ ಮತ್ತೆ ಕಣ್ಣೆದುರೆ ಬಂದತಾಗಿ…ಹೊಸದಾದ ‘ಜೀವನೋತ್ಸಹ’ ಈಗಲೂ ಉಕ್ಕಿ ಬರುತ್ತಿವೆ.
ಆದರೆ ಯುಗಾದಿ ಮತ್ತೆ ಮತ್ತೆ ಮರಳಿ ಬರುತಲಿದೆಯಾದರೂ ನಮ್ಮಯ ಬದುಕಿನಲಿ ಕಳೆದು ಹೋದ ಆ ಬಾಲ್ಯ, ಆ ಹರಯ ಮತ್ತೆ ಮರಳಿ ಬಾರದು ಎನ್ನುವುದಂತೂ ಅಷ್ಟೇ ಸತ್ಯವಲ್ಲವೇ?
ಕೆ. ಮಹಾಂತೇಶ
40/5, 2ನೇ ‘ಬಿ’ ಮೈನ್, 16ನೇ ಅಡ್ಡರಸ್ತೆ, 
ಸಂಪಂಗಿರಾಮನಗರ ಬೆಂಗಳೂರು – 560027
9448415167 
TAGGED:Bayaluseema 'Yugadi.dinamaana.comKannada Newsಕನ್ನಡ ನ್ಯೂಸ್‌ದಿನಮಾನ.ಕಾಂಬಯಲುಸೀಮೆ.
Share This Article
Twitter Email Copy Link Print
Previous Article Dingaleshwar Swami ಕೇಂದ್ರ  ಸಚಿವ ಜೋಷಿ ಅವರಿಂದ ಲಿಂಗಾಯತ ಸಮುದಾಯದ ವಿರುದ್ದ ಕುತಂತ್ರ
Next Article Chegewara of Bellary! ಬಳ್ಳಾರಿಯ ಚೆಗೆವಾರ!

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದರೆ ಕಠಿಣ ಕ್ರಮ : ಎಸ್ಪಿ ಉಮಾಪ್ರಶಾಂತ್

ದಾವಣಗೆರೆ (Davanagere) : ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ಮೀಸಲಾತಿ ದುರುಪಯೋಗ ಪಡಿಸಿಕೊಂಡರೆ, ಅಂತಹವರ ವಿರುದ್ಧ ಕಾನೂನು ಕ್ರಮ…

By Dinamaana Kannada News

ಮಹಿಳೆಯರು ಭಾಗವಹಿಸದೆ ಕ್ರಾಂತಿ ಇಲ್ಲ, ಕ್ರಾಂತಿ ಇಲ್ಲದೆ ಮಹಿಳಾ ವಿಮೋಚನೆಯಿಲ್ಲ

ಮಹಿಳೆಯರು ಭಾಗವಹಿಸದೆ ಕ್ರಾಂತಿ ಇಲ್ಲ, ಕ್ರಾಂತಿ ಇಲ್ಲದೆ ಮಹಿಳಾ ವಿಮೋಚನೆಯಿಲ್ಲ. -ಲೆನಿನ್ ಶಿಕ್ಷಣ, ಆರೋಗ್ಯ, ಉದ್ಯೋಗ ರಾಜಕೀಯ ಸೇರಿದಂತೆ ಎಲ್ಲ…

By Dinamaana Kannada News

Davanagere | ಶ್ರೀಗಂಧದ ಮರ ಕಳವು : ಆರೋಪಿ ಬಂಧನ

ದಾವಣಗೆರೆ.ಅ.24 (Davanagere):  ಶ್ರೀಗಂಧದ ಮರಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ 3 ಲಕ್ಷಕ್ಕೂ ಅಧಿಕ ಮೌಲ್ಯದ ಗಂಧದ ತುಂಡುಗಳನ್ನು ಪೊಲೀಸರು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ: ಸಕ್ಷಮ ಅಧ್ಯಕ್ಷ ಕೇಶವ್

By Dinamaana Kannada News
Davanagere
ತಾಜಾ ಸುದ್ದಿ

ಆದಾಯವಿಲ್ಲ. ಆಹಾರವಿಲ್ಲ, ಭವಿಷ್ಯವಿಲ್ಲ: ದಾವಣಗೆರೆಯಿಂದ  ಬೈಕ್ ಟ್ಯಾಕ್ಸಿ ರೈಡರ್ ಗಳು  ಸರ್ಕಾರದ ಬೆಂಬಲಕ್ಕಾಗಿ ವಿಧಾನಸೌಧಕ್ಕೆ  

By Dinamaana Kannada News
Davanagere
ತಾಜಾ ಸುದ್ದಿ

ವಸತಿ ಶಾಲೆ : ಖಾಲಿ ಇರುವ 7,8 ಮತ್ತು 9ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?