ಬದುಕಿನ ಸಂಕೀರ್ಣತೆಯನ್ನು ಶೋಧಿಸುತ್ತಲೇ,ಬದುಕಿನ ತಣ್ಣನೆಯ ಕ್ರೌರ್ಯವನ್ನು, ಮನುಷ್ಯನ ಸಿಟ್ಟು, ಆಕ್ರೋಶವನ್ನು ವಿಷಾದಕ್ಕೆ ಇಳಿಸಿಬಿಡುವಂತೆ ಬರೆಯಬಲ್ಲ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್ ರ ಎರಡನೆಯ ಕಥಾಸಂಕಲನ ”ಚೂರು ಬಿಂಬ“ತನ್ನ ಭಾವ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಗಮನಸೆಳೆಯುತ್ತದೆ.
ಕಥೆಗಳಲ್ಲಿನ ಭಾವತೀವ್ರತೆ ಮತ್ತು ಸಂಕೀರ್ಣವೆನ್ನಿಸಿದ ನಿರೂಪಣಾ ತಂತ್ರದಿಂದಾಗಿ ಓದುಗನನ್ನು ಅಷ್ಟು ಸುಲಭವಾಗಿ ಹೊರಬಿಡಲಾರದ ಗಟ್ಟಿಬಂಧವನ್ನು ಕಥನದಲ್ಲಿ ಕಟ್ಟಿಕೊಡುವಲ್ಲಿ ಜೈಮನ್ ಯಶ ಸಾಧಿಸಿದ್ದಾರೆ.
ಸಂಕಲನದ ‘ನದಿ’ ಎಂಬ ಕಥೆಯಲ್ಲಿ “ನೋಡು,ನೀನು ಈಜು ಕಲಿಬೇಕು ಅಂದ್ರೆ ನೀರನ್ನು ಮೊದ್ಲು ಪ್ರೀತಿಸ್ಬೇಕು.ಹಾಗಾಗಬೇಕಾದರೆ ಮೊದಲು ನೀರನ್ನು ನಂಬಬೇಕು” ಎಂದು ನಡುಹರೆಯದ ಮನುಷ್ಯ ನೊಬ್ಬ ಹುಡುಗನಿಗೆ ಹೇಳಿದ ಮಾತು ಬದುಕಿಗೂ ಹೇಳಿದಂತೆ ಮಾರ್ದನಿಸುತ್ತದೆ.
ಈಜುಗೊಳದಲ್ಲಿ ಅಂಗಾತವಾಗಿ ಈಜುವಾಗ ಅನಂತ ಆಕಾಶವನ್ನೊಮ್ಮೆ ದಿಟ್ಟಿಸುತ್ತಾನೆ.ಆಕಾಶ ಅನಂತ ವೆನಿಸುತ್ತದೆ.ಚಲಿಸುವ ಮೋಡದ ಪ್ರತಿಬಿಂಬಗಳು ತನ್ನ ಈಜು ಗೊಳದಲ್ಲೂ ಬಿದ್ದಿರುವುದು ಅವನ ಅರಿ ವಿಗೆ ಬರುತ್ತದೆ.ತಾನೀಗ ಆಕಾಶದಲ್ಲಿ ತೇಲುತ್ತಿರುವೆನೋ… ಅಥವಾ ನೀರಿನಲ್ಲೋ…? ಎಂಬ ಯೋಚನೆಗೆ ಪುಳಕಗೊಳ್ಳುತ್ತಾನೆ.
ಮರುಕ್ಷಣವೇ ತಾನು ಯಾರೆಂದು ಗೊತ್ತಿರದ ಅಥವಾ ಜೀವವೇ ಇಲ್ಲದೆ ತೇಲಿ ಹೋಗುತ್ತಿರುವ ಒಂಟಿ ಹೆಣ ಎನಿಸಿಬಿಡುತ್ತದೆ….ಆಕಾಶದಲ್ಲಿ ಒಂಟಿಯಾಗಿ ಹಾರುವ ಹಕ್ಕಿ ಕಾಣುತ್ತದೆ.ತಾನು ಆ ಹಕ್ಕಿಯ ಪ್ರತಿಬಿಂಬವೇನೋ…
Read also : ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು
ಹೀಗೆ,ಕಥನ ಕಟ್ಟುವ ಶೈಲಿ,ತಂತ್ರಗಾರಿಕೆ ಮತ್ತು ಬಳಸಿದ ಭಾಷೆಯಿಂದಾಗಿ ಕಥೆಗಳು ನಿಧಾನಕ್ಕೆ ಒಳ ಕ್ಕಿಳಿಯುತ್ತವೆ. ‘ತಾಹಾನ ಪತ್ರ’ದಲ್ಲಿಯಂತೂ ಪಾತ್ರಗಳು ಮಾನವೀಯ ಬಂಧಗಳ ಹಂತಗಳನ್ನು ಶೋಧಿಸುತ್ತವೆ.
‘ಅಪ್ಪನ ಕತ್ತರಿ’ಯಲ್ಲಿನ ತಣ್ಣನೆಯ ಹಿಂಸೆ,ಕ್ರೌರ್ಯ,ಖಾಲಿತನಗಳ ಒಂದೊಂದು ಘಟನೆಗಳನ್ನೂ ಒಂದೇ ಬಿಂದುವಿನಲ್ಲಿ ಸಂಧಿಸುವ ಹಾಗೆ ಸಂಕೀರ್ಣವಾಗಿ ಸಾಗುವ ಕಥೆವಿಷಾದ ಮಡುಗಟ್ಟುವಂತೆ ಮಾಡುತ್ತದೆ.
ಈ ಕಥಾ ಸಂಕಲನದ ಪ್ರತಿ ಪಾತ್ರಗಳು ನಮ್ಮ ಮತ್ತು ನಿಮ್ಮದೇ ಬಿಂಬದೊಂದಿಗಿನ ತಾಕಲಾಟಗಳಂತೆ ಮೂಡಿಬಂದಿವೆ.ಕಥೆಗಳಲ್ಲಿರುವ ಕಲ್ಪನೆಗಳು ವಾಸ್ತವವೂ ಆಗಿ ಮೈದೆಳೆಯುವ ಪರಿ ಬೆರಗು ಮೂಡಿ ಸುತ್ತವೆ.
ಚೂರುಬಿಂಬ-ಕಥಾಸಂಕಲನ
ಲೇಖಕ:ದಾದಾಪೀರ್ ಜೈಮನ್
ಕಾವ್ಯ ಮನೆ ಪ್ರಕಾಶನ,ಕಲಬುರ್ಗಿ
