ದಾವಣಗೆರೆ :
ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ ಮಾಡುತ್ತಾ, ಪೋಷಿಸುತ್ತಿರುವ ಅಂಗವಿಕಲ ಆಶಾಕಿರಣ ಟ್ರಸ್ಟ್ನಂತಹ ಸಂಸ್ಥೆಗಳ ಸೇವೆ ಮಾದರಿ ಕಾರ್ಯವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ ಶ್ಲಾಘಿಸಿದರು.
ನಗರದ ಎಸ್ಸೆಸ್ ಲೇಔಟ್ನ ಅಂಗವಿಕಲ ಆಶಾಕಿರಣ ಟ್ರಸ್ಟ್ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಂಗವಿಕರ ಮಕ್ಕಳಿಗೆ 28 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಕಿ ಯಶೋಧಮ್ಮನವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವಿಶೇಷ ಮಕ್ಕಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಇಲ್ಲಿನ ಸಂಸ್ಥೆಯಲ್ಲಿ ಆರೈಕೆ ಮಾಡಿ, ಪೋಷಿಸುತ್ತಾ ಬಂದವರ ಸೇವೆ ಇತರ ರಿಗೂ ಪ್ರೇರಣೆಯಾಗಿದೆ ಎಂದರು.
ಬುದ್ಧಿಮಾಂದ್ಯ ಮಕ್ಕಳು, ವಿಕಲಚೇತನ ಮಕ್ಕಳು ಹೀಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯಶೋಧಮ್ಮ ಸೇರಿದಂತೆ ಇಲ್ಲಿನ ಸಿಬ್ಬಂದಿ ಸಾಮಾನ್ಯ ಮಕ್ಕಳಂತೆ ಈ ಮಕ್ಕಳನ್ನು ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ಸಿಬ್ಬಂದಿ ಮಕ್ಕಳು ಸಹ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ ಮುಗಿಸಿರುವುದು ಗಮನಾರ್ಹ. ತಾವು ಕಳೆದ 3 ದಶಕಗಳಿಂದಲೂ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದು, ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ಪತ್ರಕರ್ತ ನಾಗರಾಜ ಎಸ್.ಬಡದಾಳ್ ಮಾತನಾಡಿ, ಅಂಗವಿಕಲರ ಆಶಾಕಿರಣ ಟ್ರಸ್ಟ್, ವೀರೇಶ್ವರ ಪುಣ್ಯಾಶ್ರಮದಂತಹ ಸಂಸ್ಥೆಗಳಲ್ಲಿ ದೇವರ ಮಕ್ಕಳ ಆರೈಕೆ, ಪೋಷಣೆಯಾಗುತ್ತದೆ. ಜನ ಪ್ರತಿನಿಧಿಗಳು, ಉಳ್ಳವರು, ಆರ್ಥಿಕವಾಗಿ ಸ್ಥಿತಿವಂತರು ತಮ್ಮ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ, ತಮ್ಮ ಹಿರಿಯರ ಸ್ಮರಣೆಯಲ್ಲಿ ಇಂತಹ ಮಕ್ಕಳಿಗೆ ಪೂರಕವಾಗಿ ಬಟ್ಟೆ, ಬರೆ, ಕಲಿಕಾ ಸಾಮಗ್ರಿ, ಸಂಗೀತ ಪರಿಕರ ಒದಗಿಸುವ ಮೂಲಕ ಮಕ್ಕಳು ಸ್ವಾವಲಂಬಿಯಾಗಲು ಪ್ರೇರಣೆಯಾಗಬೇಕು ಎಂದು ಮನವಿ ಮಾಡಿದರು.
ಪತ್ರಕರ್ತ ಮಂಜುನಾಥ ಗೌರಕ್ಕಳವರ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸಾಮಾನ್ಯ ಶಾಲೆಗಳನ್ನು ನಡೆಸುವುದೇ ಕಷ್ಟ. ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ತ್ರಾಸದ ಕೆಲಸ. ಆ ಮಕ್ಕಳ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಅರಿತು, ಆ ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಈ ಸಂಸ್ಥೆ ಹಾಗೂ ಶಿಕ್ಷಕರು ಮಾಡುತ್ತಿರುವುದು ಶ್ಲಾಘನೀಯ. ನೂರಾರು ವಿಶೇಷ ಚೇತನಮಕ್ಕಳಿಗೆ ಪೆÇೀಷಣೆ ಅಷ್ಟೊಂದು ಸುಲಭವೂ ಆಲ್ಲ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎ.ಜೆ.ರವಿಕುಮಾರ ಮಾತನಾಡಿ, ವಿಶೇಷ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಮನೆಯಲ್ಲಿ ಒಂದು ವಿಶೇಷ ಚೇತನ ಮಗುವಿದ್ದರೇ ನೋಡಿಕೊಳ್ಳುವುದು ಕಷ್ಟ. ಆದರೆ ಈ ಸಂಸ್ಥೆ ನೂರಾರು ಮಕ್ಕಳ ಪೋಷಣೆ ಮಾಡುತ್ತಿದೆ. ಇದು ನಿಜಕ್ಕೂ ದೇವರ ಸೇವೆ ಮಾಡಿದಂತೆಯೇ, ಇಲ್ಲಿ ಕೆಲಸ ಮಾಡುವ ಶಿಕ್ಷಕಿಯರು ತಮ್ಮ ಮಕ್ಕಳನ್ನು ಕಾಳಜಿ ವಹಿಸುವಂತೆ ಈ ವಿಶೇಷ ಚೇತನ ಮಕ್ಕಳ ಪಾಲನೆ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಸನ್ಮಾನಿತರಾದ ದೈಹಿಕ ಶಿಕ್ಷಕಿ ಯಶೋಧಮ್ಮ ಮಾತನಾಡಿ, ಈ ಸನ್ಮಾನ ನನ್ನ ಜೊತೆ ಅಂಗವಿಕಲ ಮಕ್ಕಳ ಸೇವೆ ಮಾಡುತ್ತಿರುವ ಎಲ್ಲಾ ಶಿಕ್ಷಕ ವೃಂದ, ಆಡಳಿತ ವರ್ಗಕ್ಕೆ ಸಲ್ಲುತ್ತದೆ. 28 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿನ ಮಕ್ಕಳು ಕೆಲ ಕ್ರೀಡಾಕೂಟಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ, ಚಿನ್ನದ ಪದಕ ತಂದಿದ್ದಾರೆ. ಇದೇ ನನ್ನ ಜೀವಮಾನದ ಸಾಧನೆ ಎಂದು ಭಾವುಕರಾದರು.
ಆಶಾಕಿರಣ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ರಮಣ್ಲಾಲ್ ಸಾಂಘವಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಪೋಪಟ್ ಲಾಲ್ ಜೈನ್, ಪದಾಧಿಕಾರಿಗಳು ಹಾಗೂ ವಿಶೇಷ ಚೇತನ ಮಕ್ಕಳು, ಪೋಷಕರು ಕಾರ್ಯಕ್ರಮದಲ್ಲಿದ್ದರು.