ದಾವಣಗೆರೆ (Davanagere) : ಜಾತಿ ಗಣತಿ ಅಂತ ಬಂದಾಗ ವೀರಶೈವ ಲಿಂಗಾಯತರು ಇನ್ನಾದರೂ ಜಾಗೃತರಾಗಿ ಒಗ್ಗಟ್ಟಿನಿಂದ ನಡೆಯುವುದು ಅವಶ್ಯವಾಗಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿವಿಮಾತು ಹೇಳಿದರು.
ಭಾನುವಾರ ನಗರದ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದ 25ನೇ ವರ್ಷದ ರಜತ ಮಹೋತ್ಸವದ ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಇದನ್ನು ಪ್ರಮುಖ ಕಾಲಂನಲ್ಲಿ ಮತ್ತು ಉಪಜಾತಿಗಳನ್ನು ನಂತರದ ಕಾಲಂಗಳಲ್ಲಿ ಬರೆಯಿಸಬೇಕು. ಸಮಾಜ ಒಗ್ಗಟ್ಟಿನಿಂದ ಮುನ್ನಡೆದಾಗ ಮಾತ್ರ ಭವಿಷ್ಯತ್ತಿನಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವೆಂದರು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಶಾಂತಿಯ ಮೂಲ ಧರ್ಮಾಚರಣೆಯಲ್ಲಿದೆ. ಭೌತಿಕ ಬದುಕಿಗೆ ಸಂಸ್ಕಾರ ಮತ್ತು ಸಮೃದ್ಧಿ ಎರಡರ ಅವಶ್ಯಕತೆ ಇದೆಯೆಂದು ಅಭಿಪ್ರಾಯಪಟ್ಟರು.
ಹೆತ್ತ ತಾಯ್ತಂದೆ ಋಣ ಮತ್ತೆ ಶ್ರೀ ಗುರುವಿನ ಋಣ ಎಷ್ಟು ತೀರಿಸಿದರೂ ಸಾಲದು : ಶ್ರೀ ರಂಭಾಪುರಿ
ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮ ನಿಬಂಧನೆಗಳು ಬದಲಾಗುವುದಿಲ್ಲ. ನಾಗರೀಕತೆಯ ಹೆಸರಿನಲ್ಲಿ ಪರಂಪರೆ ಸಂಸ್ಕøತಿ ನಾಶವಾಗಬಾರದು. ಮನುಷ್ಯನಲ್ಲಿ ವಿಧೇಯತೆ ಕರ್ತವ್ಯಶೀಲತೆ ಮತ್ತು ಪ್ರಾಮಾಣಿಕತೆ ಬೆಳೆದು ಬರಬೇಕಾಗಿದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಗುರು ಕಾರುಣ್ಯ ಬೇಕು. ಹೆತ್ತ ತಾಯ್ತಂದೆ ಋಣ ಮತ್ತೆ ಶ್ರೀ ಗುರುವಿನ ಋಣ ಎಷ್ಟು ತೀರಿಸಿದರೂ ಸಾಲದು. ವೀರಶೈವ ಧರ್ಮ ಸಂವಿಧಾನದಲ್ಲಿ ಮಾನವ ಜೀವನದ ಆದರ್ಶ ಮೌಲ್ಯಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿ ಉದ್ಧರಿಸಿದ್ದಾರೆ ಎಂದರು.
ದಾವಣಗೆರೆ ನಗರದ ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಪ್ರಾರಂಭಗೊಂಡು 25 ವರುಷ ಪೂರ್ಣಗೊಂಡ ಸಂದರ್ಭದಲ್ಲಿ ರಜತ ಮಹೋತ್ಸವ ಸಮಾರಂಭ ಏರ್ಪಡಿಸಿರುವುದು ತಮಗೆ ಅಪಾರ ಸಂತೋಷ ತಂದಿದೆ. ಸರ್ವ ಕಾರ್ಯಗಳಿಗೂ ಮೊದಲು ಪೂಜೆಗೊಳ್ಳುವ ಮಹಾಗಣಪತಿ ದುಷ್ಟರ ದುರಹಂಕಾರ ನಾಶಗೊಳಿಸಿ ಶಿವ ಸಂಸ್ಕøತಿ ಉಳಿಸಿದ ಕೀರ್ತಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಸಲ್ಲುತ್ತದೆ. ಅಂಥ ಶ್ರೀ ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರ ಪುರುಷನಾಗಿ ಎಲ್ಲೆಡೆ ಪೂಜೆಗೊಳ್ಳುತ್ತಿದ್ದಾನೆ. ಬದುಕಿನಲ್ಲಿ ಆತ್ಮಬಲ ಸ್ಥೈರ್ಯ ತುಂಬುವ ಉಭಯ ದೈವಗಳ ಸ್ಮರಣೆ ಪೂಜೆ ಅವಶ್ಯಕವೆಂದರು.
ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ ಅಧ್ಯಕ್ಷ ಎನ್.ಎ.ಮುರುಗೇಶ್ ಮಾತನಾಡಿ, ಸಮಾಜದಲ್ಲಿ ಸಂಘಟನೆಗಳು ನಡೆಯಬೇಕಲ್ಲದೇ ಸಂಘರ್ಷಗಳು ನಡೆಯಬಾರದು. ವ್ಯಕ್ತಿ ಹಿತಕ್ಕಿಂತ ಸಾಮಾಜಿಕ ಹಿತ ದೊಡ್ಡದು. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಬಾಗಬೇಕಲ್ಲದೇ ಮಾರಕವಾಗಬಾರದು. ಶ್ರೀ ವೀರಭದ್ರಸ್ವಾಮಿ ಲೀಲಾ ಪವಾಡಗಳು ಅನಂತ. ನಂಬಿದವರ ಬಾಳಿನಲ್ಲಿ ಬೆಳಕು ಮೂಡಿಸುವ ಮಹಾದೈವ ಎಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಜೀ ಮಾತನಾಡಿ, ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಮಾನವ ಜೀವನದಲ್ಲಿ ಬುದ್ಧಿ ಬೆಳೆದಂತೆ ಭಾವನೆಗಳು ಬೆಳೆಯುತ್ತಿಲ್ಲ. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ನಡೆದರೆ ಬಾಳಿಗೆ ಬಲ ಪ್ರಾಪ್ತವಾಗುವುದು. ಶ್ರೀ ಮಹಾಗಣಪತಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಸೇವಾ ಟ್ರಸ್ಟ್(ರಿ)ನವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
Read also : ಅತ್ಯಾಚಾರ ಪ್ರಕರಣ | ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ದೇವಸ್ಥಾನದ ಪ್ರಧಾನ ಅರ್ಚಕ ಎಂ.ಆರ್.ವೀರಯ್ಯಸ್ವಾಮಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹರಿಹರ ಕಾಲಜ್ಞಾನ ಮಠದ ಸಿದ್ಧಲಿಂಗ ಸ್ವಾಮಿಗಳು ಪಾಲ್ಗೊಂಡಿದ್ದರು.
ಉಳವಯ್ಯ, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ ಪಾಲ್ಗೊಂಡಿದ್ದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಇದೇ ಸಂದರ್ಭದಲ್ಲಿ 8 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷೆ ಹಾಗೂ ಒಂದು ಜೋಡಿ ಸಾಮೂಹಿಕ ವಿವಾಹ ಜರುಗಿತು. ಸಮಾರಂಭಕ್ಕೂ ಮುನ್ನ ಗುಗ್ಗಳ ಕಾರ್ಯ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾದರು.