ದಾವಣಗೆರೆ: ಜಿಲ್ಲೆಯ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಾರ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ದಿನಾಂಕ 26-01-2026 ರಂದು ಹದಡಿ ಗ್ರಾಮದ ಮಂಜಪ್ಪ ಎಂಬುವವರ ಬಾರ್ನಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಫೆಬ್ರವರಿ 1ರಂದು ಕಾರ್ಯಾಚರಣೆ ನಡೆಸಿ ಏಳು ಮಂದಿ ಖತರ್ನಾಕ್ ಕಳ್ಳರನ್ನು ಸೆರೆಹಿಡಿದಿದ್ದಾರೆ.
ಬಂಧಿತರನ್ನು ಅಜ್ಜಯ್ಯ, ಪರಶುರಾಮ, ಅರುಣ, ಅಣ್ಣಪ್ಪ, ರಾಕೇಶನಾಯ್ಕ, ಪ್ರದೀಪ ಮತ್ತು ಸುದೀಪ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾವಣಗೆರೆ ಮತ್ತು ಹರಿಹರ ಭಾಗದವರಾಗಿದ್ದು, ಹೊಟೇಲ್ ಕೆಲಸ, ಡ್ರೈವಿಂಗ್ ಹಾಗೂ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡಿದ್ದರು.
ವಶಪಡಿಸಿಕೊಂಡ ವಸ್ತುಗಳು: 1.35 ಲಕ್ಷ ರೂ. ಮೌಲ್ಯದ ಮದ್ಯದ ಬಾಟಲಿಗಳು. ಕಳ್ಳತನಕ್ಕೆ ಬಳಸುತ್ತಿದ್ದ 2 ಲಕ್ಷ ರೂ. ಮೌಲ್ಯದ ಬಜಾಜ್ ಮ್ಯಾಕ್ಸಿಮ ಪ್ಯಾಸೆಂಜರ್ ಆಟೋ. ಒಟ್ಟು ಸುಮಾರು 3.35 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪೊಲೀಸ್ ತಂಡಕ್ಕೆ ಶ್ಲಾಘನೆ: ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ, ಹದಡಿ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಉತ್ತಮ ಕೆಲಸ ಮಾಡಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
