ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಯಕೊಂಡ ಗ್ರಾಮದ ಗುಡ್ಡದ ಮಧ್ಯೆದಲ್ಲಿರುವ ಬುಳ್ಳಾಪುರ ಕೆರೆ ಜೀರ್ಣೋದ್ಧಾರ ಕುರಿತು ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ, ಜಿಪಂ ಸಿಇಒ ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದರು.
ನಗರದ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾಯಕೊಂಡ ಗ್ರಾಮದ ಗುಡ್ಡದ ಮಧ್ಯ ಭಾಗದಲ್ಲಿರುವ ಬುಳ್ಳಾಪುರ ಕೆರೆ ದುಸ್ಥಿತಿಯಲ್ಲಿದ್ದು, ಜೀರ್ಣೋದ್ಧಾರ ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಬ್ರಿಟಿಷರು ನಿರ್ಮಿಸಿದ ಹಾಗೂ ಮದಕರಿ ನಾಯಕ ಓಡಾಡಿದ ಈ ಕೆರೆಯು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ. ಈ ಕೆರೆಯು ಸುಮಾರು ನೂರಾರು ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ಕೋಡಿ ಹೊಡೆದಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಈ ಕೆರೆಯನ್ನು ಜೀರ್ಣೋದ್ಧಾರ ಮಾಡಿದರೆ ಈ ಭಾಗದ ಸುಮಾರು ೫೦ಕ್ಕೂ ಹಳ್ಳಿಗಳಿಗೆ ನೀರು ಒದಗಿಸಬಹುದು. ಅಲ್ಲದೇ ಕಾಡು ಪ್ರಾಣಿಗಳು, ಪಕ್ಷಿಗಳ ಕುಡಿಯುವ ನೀರು, ರೈತರಿಗೂ ಅನುಕೂಲವಾಗಲಿದೆ ಎಂದರು.
ಅಲ್ಲದೇ ಮಾಯಕೊಂಡ ಕ್ಷೇತ್ರದ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಬಸವಾಪಟ್ಟಣ, ಹುಣಸೆಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸಲು ವಿಶಾಲವಾದ ಜಾಗ ಹೊಂದಿರುವ ಭೂಮಿ ಇದೆ. ಈ ಭಾಗದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡೆಸಿದರೆ, ಅಂತರ್ಜಲ ಮಟ್ಟ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಾಡು ಪ್ರಾಣಿಗಳು, ಜನಜಾನುವಾರುಗಳು, ರೈತರಿಗೆ ನೀರಿನ ಸಮಸ್ಯೆ ನೀಗಿಸಬಹುದು. ಈ ಬಗ್ಗೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಯಕೊಂಡ ಗ್ರಾಮದ ಬುಳ್ಳಾಪುರ ಕೆರೆ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತು ಶಾಸಕ ಕೆ.ಎಸ್.ಬಸವಂತಪ್ಪ ಅವರೊಂದಿಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ವಲಯ ಅರಣ್ಯ ಅಧಿಕಾರಿಗಳು ಇದೇ ನ.17 ರಂದು ಸ್ಥಳ ಪರಿಶೀಲನೆಗೆ ಸಭೆ ನಿರ್ಧಾರ ಮಾಡಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತಿ ಮಾಧವ ವಿಠಲ ರಾವ್, ವಲಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.
–ಕೆರೆಗಳು ಅಭಿವೃದ್ಧಿಗೊಂಡು ನೀರು ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬರುವುದಿಲ್ಲ. ಬೇಸಿಗೆ ಕಾಲದಲ್ಲೂ ಕೂಡ ಕುಡಿಯುವ ನೀರಿನ ಭವಣೆ ತಪ್ಪಿಸಬಹುದು.-ಕೆ.ಎಸ್.ಬಸವಂತಪ್ಪ,ಶಾಸಕರು, ಮಾಯಕೊಂಡ.
